ETV Bharat / bharat

ರಕ್ಷಾಬಂಧನಕ್ಕೆ ಸಹೋದರಿಯಿಂದ ವಿಶೇಷ ಉಡುಗೊರೆ : ಆಸ್ಪತ್ರೆ ಸೇರಿದ ಅಣ್ಣನಿಗೆ ಕಿಡ್ನಿ ದಾನ ಮಾಡಿದ್ಲು ತಂಗಿ

author img

By ETV Bharat Karnataka Team

Published : Aug 29, 2023, 11:08 PM IST

raksha-bandhan-gift-sister-donates-kidney-to-brother
ರಕ್ಷಾಬಂಧನಕ್ಕೆ ಸಹೋದರಿಯಿಂದ ವಿಶೇಷ ಉಡುಗೊರೆ : ಅಣ್ಣನಿಗೆ ಕಿಡ್ನಿ ದಾನ ಮಾಡಿದ ಸಹೋದರಿ

ಕಿಡ್ನಿ ವೈಫಲ್ಯಗೊಂಡು ಜೀವನ್ಮರಣದಲ್ಲಿ ಹೋರಾಟ ನಡೆಸುತ್ತಿದ್ದ ಅಣ್ಣನಿಗೆ ಸಹೋದರಿಯೊಬ್ಬಳು ಕಿಡ್ನಿ ದಾನ ಮಾಡಿ ರಕ್ಷಾಬಂಧನಕ್ಕೆ ವಿಶೇಷ ಉಡುಗೊರೆ ನೀಡಿದ್ದಾಳೆ.

ನವದೆಹಲಿ : ರಕ್ಷಾಬಂಧನವು ನಮ್ಮ ಪ್ರಮುಖ ಹಬ್ಬಗಳಲ್ಲಿ ಒಂದು. ರಕ್ಷಾಬಂಧನವನ್ನು ಅಣ್ಣ ತಂಗಿಯರ ಹಬ್ಬ ಎಂದೂ ಕರೆಯುತ್ತಾರೆ. ದೇಶಾದ್ಯಂತ ಈ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ರಕ್ಷಾಬಂಧನದಂದು ಸಹೋದರಿಯರು ಅಣ್ಣಂದಿರಿಗೆ ರಾಖಿಯನ್ನು ಕಟ್ಟಿ ಆಶೀರ್ವಾದ ಪಡೆಯುತ್ತಾರೆ. ಈ ವೇಳೆ ಅಣ್ಣನು ತನ್ನ ಸಹೋದರಿಯ ರಕ್ಷಣೆ ಮಾಡುವುದಾಗಿ ವಾಗ್ದಾನ ಮಾಡುತ್ತಾನೆ. ರಕ್ಷಾ ಬಂಧನಕ್ಕೆ ಸಹೋದರಿಯೊಬ್ಬಳು ತನ್ನ ಅಣ್ಣನಿಗೆ ಕಿಡ್ನಿ ದಾನ ಮಾಡಿ ವಿಶೇಷ ಉಡುಗೊರೆ ನೀಡಿದ್ದಾರೆ. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಹರ್ಷೇಂದ್ರ ಎಂಬವರಿಗೆ ಸಹೋದರಿ ಪ್ರಿಯಾಂಕಾ ಈ ರಕ್ಷಾಬಂಧನಕ್ಕೆ ಎಂದೂ ಮರೆಯಲಾಗದ ಉಡುಗೊರೆಯನ್ನು ನೀಡಿದ್ದಾರೆ.

ಹರ್ಷೇಂದ್ರ ಹಾಗೂ ಸಹೋದರಿ ಪ್ರಿಯಾಂಕ ಅವರು ದೆಹಲಿಯ ನಿವಾಸಿಗಳಾಗಿದ್ದಾರೆ. ಹರ್ಷೆಂದ್ರ ಅವರು ಸೇಲ್ಸ್​ಮ್ಯಾನ್​ ಆಗಿ ಕೆಲಸ ಮಾಡುತ್ತಿದ್ದರು. 2022ರಲ್ಲಿ ಹರ್ಷೇಂದ್ರಗೆ ಆಯಾಸ ಮತ್ತು ವಿವಿಧ ರೀತಿಯ ಅನಾರೋಗ್ಯ ಕಾಡಿದಾಗ ವೈದ್ಯಕೀಯ ತಪಾಸಣೆಗೆ ಒಳಪಟ್ಟಿದ್ದರು. ಈ ವೇಳೆ ವೈದ್ಯರು ಕಿಡ್ನಿ ವೈಫಲ್ಯವಾಗಿದ್ದು ಕೊನೆಯ ಹಂತದಲ್ಲಿ ಇರುವುದಾಗಿ ಹೇಳಿದ್ದಾರೆ.

ತೀವ್ರ ಅನಾರೋಗ್ಯಕ್ಕೆ ಒಳಗಾದ ಹರ್ಷೇಂದ್ರ ಅವರು ನಿಯಮಿತವಾಗಿ ಡಯಾಲಿಸಿಸ್​ಗೆ ಚಿಕಿತ್ಸೆ ಪಡೆಯುತ್ತಿದ್ದರು. ಆರೋಗ್ಯ ತೀವ್ರ ಹದಗೆಟ್ಟ ಸಂದರ್ಭದಲ್ಲಿ, ವಾರಕ್ಕೆ ಮೂರು ಬಾರಿ ಡಯಾಲಿಸಿಸ್​ಗೆ ಒಳಬೇಕಾದ ಪರಿಸ್ಥಿತಿ ಒದಗಿಬಂತು. ಇದರಿಂದಾಗಿ ಹರ್ಷೇಂದ್ರ ಅವರಿಗೆ ಕೆಲಸಕ್ಕೆ ಹೋಗಲು ಸಾಧ್ಯವಾಗಲಿಲ್ಲ. ಅಲ್ಲದೆ ಇವರು ಉದ್ಯೋಗ ಮಾಡುತ್ತಿದ್ದ ಕಂಪೆನಿ ಅವರು ಅವರಿಗೆ ರಜೆಗಳನ್ನು ನೀಡಿ ಸಂಬಳ ಪಾವತಿಸಲು ಮುಂದಾಗಲಿಲ್ಲ. ಇದರಿಂದ ಹರ್ಷೇಂದ್ರ ಅವರ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವೂ ಹದಗೆಟ್ಟಿತು.

ಇದರಿಂದ ನೊಂದ ಹರ್ಷೇಂದ್ರ ಅವರ ಸಹೋದರಿ ಪ್ರಿಯಾಂಕ ಅಣ್ಣನಿಗೆ ಒಂದು ಕಿಡ್ನಿಯನ್ನು ನೀಡಲು ನಿರ್ಧರಿಸಿದರು. ಮಗಳ ನಿರ್ಧಾರದಿಂದ ಕುಟುಂಬಸ್ಥರಿಗೆ ತುಂಬಾ ಸಂತೋಷವಾಯಿತು. ಇದರ ಜೊತೆಗೆ ಕೆಲವರು ಈಕೆಗೆ ಕಿಡ್ನಿ ದಾನ ಮಾಡುವುದರಿಂದ ಆರೋಗ್ಯ ಸಮಸ್ಯೆ ಎದುರಾಗುತ್ತದೆ ಎಂದೆಲ್ಲ ಹೇಳಿದರು. ಆದರೆ ಇದ್ಯಾವುದನ್ನು ಲೆಕ್ಕಿಸದ ಪ್ರಿಯಾಂಕಾ ಕಿಡ್ನಿ ದಾನ ಮಾಡಿ ಅಣ್ಣನನ್ನು ಉಳಿಸಿಕೊಳ್ಳಲು ದೃಢ ನಿರ್ಧಾರ ಮಾಡಿದ್ದಳು.

ಅದರಂತೆಯೇ ಹರ್ಷೇಂದ್ರ ಅವರಿಗೆ ಸಹೋದರಿ ಪ್ರಿಯಾಂಕಾಳ ಕಿಡ್ನಿಯನ್ನು ಅಳವಡಿಸಲಾಯಿತು. ನವದೆಹಲಿಯ ಪ್ರಿಮಸ್​ ಆಸ್ಪತ್ರೆಯಲ್ಲಿ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಲಾಯಿತು. ಸದ್ಯ ಹರ್ಷೇಂದ್ರ ಅವರು ಸಂಪೂರ್ಣ ಗುಣಮುಖರಾಗಿದ್ದು, ಉದ್ಯೋಗಕ್ಕೆ ಎಂದಿನಂತೆ ತೆರಳುತ್ತಿದ್ದಾರೆ. ಕುಟುಂಬವೂ ಗಟ್ಟಿಗಿತ್ತಿ ಸಹೋದರಿ ಪ್ರಿಯಾಂಕಳನ್ನು ಕೊಂಡಾಡುತ್ತಿದೆ. ಓರ್ವ ಅಣ್ಣ ಜೀವನಪರ್ಯಂತ ನೆನಪಿಟ್ಟುಕೊಳ್ಳಬೇಕಾದ ಉಡುಗೊರೆಯನ್ನು ಸಹೋದರಿ ನೀಡಿದ್ದಾಳೆ. ಅಣ್ಣನಿಗೆ ಇದಕ್ಕಿಂತ, ಇವಳಿಗಿಂತ ದೊಡ್ಡ ಉಡುಗೊರೆ ಮತ್ತೊಂದಿಲ್ಲ.

ಇದನ್ನೂ ಓದಿ : ಕೇರಳಿಗರಿಗೆ ಓಣಂ ಸಂಭ್ರಮ.. 10 ದಿನ ನಡೆಯುವ ಮಲಯಾಳಿಗಳ ಹಬ್ಬ -ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.