ETV Bharat / bharat

'ನನ್ನ ಬ್ಯಾಗ್​ನಲ್ಲಿ ಬಾಂಬ್​ ಇದೆ': ಪ್ರಯಾಣಿಕನ ಬೆದರಿಕೆಗೆ ವಿಮಾನ ತುರ್ತು ಭೂಸ್ಪರ್ಶ

author img

By ETV Bharat Karnataka Team

Published : Oct 21, 2023, 4:50 PM IST

Pune Delhi Flight Emergency Landing On Mumbai Airport
'ನನ್ನ ಬ್ಯಾಗ್​ನಲ್ಲಿ ಬಾಂಬ್​ ಇದೆ': ಪ್ರಯಾಣಿಕನ ಬೆದರಿಕೆಗೆ ವಿಮಾನ ತುರ್ತು ಭೂಸ್ಪರ್ಶ

ನನ್ನ ಬ್ಯಾಗ್‌ನಲ್ಲಿ ಬಾಂಬ್ ಇದೆ ಎಂದು ಪ್ರಯಾಣಿಕರೊಬ್ಬರು ಬೆದರಿಕೆ ಹಾಕಿದ ಬೆನ್ನಲ್ಲೇ ಪುಣೆಯಿಂದ ದೆಹಲಿಗೆ ತೆರಳುತ್ತಿದ್ದ ಆಕಾಶ ಏರ್‌ಲೈನ್ಸ್ ವಿಮಾನ ಮುಂಬೈನಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.

ಮುಂಬೈ(ಮಹಾರಾಷ್ಟ್ರ): ಪ್ರಯಾಣಿಕನೊಬ್ಬ ತನ್ನ ಬ್ಯಾಗ್​ನಲ್ಲಿ ಬಾಂಬ್ ಇದೆ ಎಂದು ​ಬೆದರಿಕೆ ಹಾಕಿದ ಹಿನ್ನೆಲೆ ಪುಣೆಯಿಂದ ದೆಹಲಿಗೆ ತೆರಳುತ್ತಿದ್ದ ವಿಮಾನ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಬೆಳಗಿನ ಜಾವ ತುರ್ತು ಭೂಸ್ಪರ್ಶ ಮಾಡಿದ ಘಟನೆ ನಡೆದಿದೆ. ಆಕಾಶ ಏರ್‌ಲೈನ್ಸ್​ನ ಸಂಖ್ಯೆ ಕ್ಯೂಪಿ 1148 ವಿಮಾನ ಶನಿವಾರ ರಾತ್ರಿ ಪುಣೆಯಿಂದ ದೆಹಲಿಗೆ ಹೊರಟಿತ್ತು. ಈ ವಿಮಾನದಲ್ಲಿ 185 ಪ್ರಯಾಣಿಕರು ಮತ್ತು ಆರು ಮಂದಿ ಸಿಬ್ಬಂದಿ ಪ್ರಯಾಣಿಸುತ್ತಿದ್ದರು.

ಭದ್ರತಾ ಕಾರಣಗಳಿಂದಾಗಿ ವಿಮಾನವನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಸಲಾಗಿದೆ. ಪೊಲೀಸರು ಬಾಂಬ್​ ಬೆದರಿಕೆ ಹಾಕಿದ ಪ್ರಯಾಣಿಕನನ್ನು ಬಂಧಿಸಿದ್ದಾರೆ. ಮುಂಬೈ ವಿಮಾನ ನಿಲ್ದಾಣದಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ಮುಂಬೈ ಪೊಲೀಸರು ಮಾಹಿತಿಯನ್ನು ಪಡೆಯುತ್ತಿದ್ದಾರೆ. ಮುಂಬೈ ಪೊಲೀಸರು ಪ್ರಯಾಣಿಕನನ್ನು ಬಂಧಿಸಿದ್ದು, ಆತನ ಹೆಸರು ಇನ್ನೂ ಬಹಿರಂಗವಾಗಿಲ್ಲ.

ಘಟನೆಯ ಕುರಿತು ಸಿಐಎಸ್ಎಫ್ ಅಧಿಕಾರಿ ವೀರೇಂದ್ರ ಸಿಂಗ್ ಮುಂಬೈ ಪೊಲೀಸ್ ಕಂಟ್ರೋಲ್ ರೂಂಗೆ ಮಾಹಿತಿ ನೀಡಿದ್ದಾರೆ. ನಂತರ ಬಿಡಿಡಿಎಸ್ ತಂಡ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ. ಬ್ಯಾಗ್​ನಲ್ಲಿ ಬಾಂಬ್ ಇರುವುದಾಗಿ ತಿಳಿಸಿದ​ ಪ್ರಯಾಣಿಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದೆ. ಆದರೆ ಆತನ ಬಳಿ ಅನುಮಾನಾಸ್ಪದವಾಗಿ ಏನೂ ಪತ್ತೆಯಾಗಿಲ್ಲ. ಬಾಂಬ್​ ಬೆದರಿಕೆ ಹಾಕಿದ ಪ್ರಯಾಣಿಕನಿಗೆ ಎದೆಯಲ್ಲಿ ನೋವು ಕಾಣಿಸಿಕೊಂಡಿತ್ತು, ಹೀಗಾಗಿ ಶೀಘ್ರ ಚಿಕಿತ್ಸೆ ಪಡೆಯಲು ತನ್ನ ಬ್ಯಾಗ್‌ನಲ್ಲಿ ಬಾಂಬ್ ಇದೆ ಎಂದು ಹೇಳಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಆಕಾಶ ಏರ್ ಫ್ಲೈಟ್ QP 1148, ಅಕ್ಟೋಬರ್ 21, 2023 ರಂದು ಬೆಳಗ್ಗೆ ಪುಣೆಯಿಂದ ದೆಹಲಿಗೆ ತೆರಳುತ್ತಿತ್ತು. 185 ಪ್ರಯಾಣಿಕರು ಮತ್ತು ಆರು ಸಿಬ್ಬಂದಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ವಿಮಾನ ಟೇಕ್ ಆಫ್ ಆದ ಸ್ವಲ್ಪ ಸಮಯದಲ್ಲೇ ಭದ್ರತಾ ಎಚ್ಚರಿಕೆ ಬಂದಿದೆ. ಇದರಿಂದ ಸುರಕ್ಷತೆ ಮತ್ತು ಭದ್ರತಾ ಕಾರ್ಯವಿಧಾನಗಳ ಪ್ರಕಾರ, ವಿಮಾನವನ್ನು ಮುಂಬೈಗೆ ತಿರುಗಿಸಲಾಗಿದೆ. ಕ್ಯಾಪ್ಟನ್ ಅಗತ್ಯವಿರುವ ಎಲ್ಲ ತುರ್ತು ಕ್ರಮಗಳನ್ನು ಅನುಸರಿಸಿ ಇಂದು ಬೆಳಗಿನ ಜಾವ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಸಿದ್ದಾರೆ ಎಂದು ವಿಮಾನಯಾನದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಹಿಂದಿನ ಘಟನೆ(ಉತ್ತರ ಪ್ರದೇಶ): ಇತ್ತೀಚಿಗೆ, ಹುಸಿ ಬಾಂಬ್ ಬೆದರಿಕೆಯಿಂದ ವಿಮಾನವೊಂದು ತುರ್ತಾಗಿ ಬೇರೆ ರನ್​ವೇ ಅಲ್ಲಿ ಲ್ಯಾಂಡ್​ ಆಗಿದ್ದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿತ್ತು. ಮುಂಬೈನಿಂದ ವಾರಾಣಸಿಗೆ ಹೊರಟಿದ್ದ ಆಕಾಶ ಏರ್‌ಲೈನ್ಸ್ ವಿಮಾನಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಬಾಂಬ್ ಬೆದರಿಕೆಯ ಸಂದೇಶ ಬಂದಿತ್ತು. ತಕ್ಷಣವೇ ಏರ್ ಟ್ರಾಫಿಕ್ ಕಂಟ್ರೋಲ್ ಬಾಂಬ್ ಬೆದರಿಕೆಯ ಬಗ್ಗೆ ವಿಮಾನದ ಕ್ಯಾಪ್ಟನ್‌ಗೆ ಮಾಹಿತಿ ನೀಡಿ, ಬಳಿಕ ಸಾಧ್ಯವಿರುವ ಎಲ್ಲ ತುರ್ತು ಕ್ರಮಗಳನ್ನು ಕೈಗೊಂಡು ವಿಮಾನವನ್ನು ವಾರಾಣಸಿಯಲ್ಲಿ ಪ್ರತ್ಯೇಕ ರನ್‌ವೇಯಲ್ಲಿ ಇಳಿಸಲಾಗಿತ್ತು. ಜತೆಗೆ ಕೂಡಲೇ ಪ್ರಯಾಣಿಕರನ್ನು ವಿಮಾನದಿಂದ ಇಳಿಸಲಾಗಿತ್ತು.

ಇದನ್ನೂ ಓದಿ: ಇಂಜಿನ್​ನಲ್ಲಿ ಕಾಣಿಸಿಕೊಂಡ ಬೆಂಕಿ: ಸಿಂಗಾಪುರದಲ್ಲಿ ಚೀನಾದ ವಿಮಾನ ತುರ್ತು ಭೂಸ್ಪರ್ಶ, 9 ಜನರು ಅಸ್ವಸ್ಥ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.