ETV Bharat / bharat

'ಸತ್ಯ ಹೊರಬರಲಿ..': ಕಟಕ್‌ನಲ್ಲಿ ರೈಲು ದುರಂತದ ಗಾಯಾಳುಗಳನ್ನು ಭೇಟಿಯಾದ ಮಮತಾ ಬ್ಯಾನರ್ಜಿ

author img

By

Published : Jun 6, 2023, 7:04 PM IST

ಒಡಿಶಾ ರೈಲು ದುರಂತದಲ್ಲಿ ಗಾಯಗೊಂಡು ಕಟಕ್​ ಆಸ್ಪತ್ರೆಯಲ್ಲಿ ದಾಖಲಾಗಿರುವ ಗಾಯಾಳುಗಳನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭೇಟಿಯಾದರು.

odisha-train-accident-mamata-meets-injured-patients-in-cuttack
ಒಡಿಶಾ ರೈಲು ದುರಂತ : ಗಾಯಾಳುಗಳನ್ನು ಭೇಟಿಯಾದ ಮಮತಾ ಬ್ಯಾನರ್ಜಿ

ಕಟಕ್ (ಒಡಿಶಾ) : ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ರೈಲು ದುರಂತದಲ್ಲಿ ಗಾಯಗೊಂಡು ಕಟಕ್​ನ ಆಸ್ಪತ್ರೆಯಲ್ಲಿ ದಾಖಲಾದ ಗಾಯಾಳುಗಳನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಂದು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಇದಕ್ಕೂ ಮೊದಲು ಶನಿವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಅವರು ರಕ್ಷಣಾ ಕಾರ್ಯಾಚರಣೆಯನ್ನು ಪರಿಶೀಲಿಸಿದ್ದರು. ಕಟಕ್​ನ ಎಸ್​ಸಿಬಿ ಮೆಡಿಕಲ್​ ಕಾಲೇಜು ಮತ್ತು ಆಸ್ಪತ್ರೆಗೆ ಭೇಟಿ ನೀಡಿದ ಅವರು ರೈಲು ದುರಂತದ ಗಾಯಾಳುಗಳನ್ನು ಭೇಟಿ ಮಾಡಿ ಪರಿಹಾರದ ಭರವಸೆ ನೀಡಿದರು.

ಬಳಿಕ ಮಾತನಾಡಿ, ನಾವು ರೈಲು ದುರಂತದಲ್ಲಿ ಗಾಯಗೊಂಡವರಿಗೆ ಎಲ್ಲ ರೀತಿಯ ಸಹಕಾರ ನೀಡುತ್ತೇವೆ. ಈಗಾಗಲೇ ಹೆಚ್ಚಿನ ವೈದ್ಯರು, ನರ್ಸ್​, ಮತ್ತು ಅಧಿಕಾರಿಗಳ ತಂಡವನ್ನು ಗಾಯಾಳುಗಳ ಚಿಕಿತ್ಸೆಗೆ ನಿಯೋಜಿಸಲಾಗಿದೆ. ಪಶ್ಚಿಮ ಬಂಗಾಳದ ಸುಮಾರು 57 ಜನ ರೈಲು ದುರಂತದಲ್ಲಿ ಗಾಯಗೊಂಡು ಎಸ್​​ಸಿಬಿ ಮೆಡಿಕಲ್​ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.

ಅಪಘಾತದಲ್ಲಿ ಹಲವರು ಗಂಭೀರ ಗಾಯಗೊಂಡಿದ್ದಾರೆ. ಕೆಲವರು ಕೈ ಕಾಲು ಕಳೆದುಕೊಂಡಿದ್ದಾರೆ. ಇನ್ನು ಕೆಲವರು ದೃಷ್ಟಿಯನ್ನು ಕಳೆದುಕೊಂಡಿದ್ದಾರೆ. ದುರಂತವನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಪಶ್ಚಿಮ ಬಂಗಾಳದ ಸುಮಾರು 103 ಪ್ರಯಾಣಿಕರ ಮೃತದೇಹವನ್ನು ಪತ್ತೆ ಹಚ್ಚಲಾಗಿದ್ದು, ಇನ್ನೂ 30 ಪ್ರಯಾಣಿಕರು ಪತ್ತೆಯಾಗಿಲ್ಲ ಎಂದು ಮಾಹಿತಿ ನೀಡಿದರು.

ನಾನು ಈಗಾಗಲೇ ಮೃತರ ಕುಟುಂಬಗಳಿಗೆ 5 ಲಕ್ಷ ರೂಪಾಯಿ ಹಾಗೂ ಗಂಭೀರ ಗಾಯಗೊಂಡವರಿಗೆ ತಲಾ 1 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದೇನೆ. ಅಲ್ಲದೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸುಮಾರು 900 ಜನರಿಗೆ 10,000 ರೂ ನೀಡಲಾಗುವುದು ಎಂದು ಅವರು ಇದೇ ವೇಳೆ ಹೇಳಿದರು.

  • #WATCH | "...We must work for the people. We must be with the people. We want that truth must come out. Truth must not be suppressed," says West Bengal CM and former Railways Minister Mamata Banerjee after meeting the injured of #BalasoreTrainAccident at SCB Medical College and… pic.twitter.com/MfjlfHMfEh

    — ANI (@ANI) June 6, 2023 " class="align-text-top noRightClick twitterSection" data=" ">

'ಸತ್ಯ ಹೊರ ಬರಲಿ': ಈ ದುರಂತದ ಹಿಂದಿನ ಸತ್ಯ ಹೊರಬರಬೇಕು. ಅನೇಕ ಜೀವಗಳು ಬಲಿಯಾಗಿದ್ದು, ನಾನು ಜನರೊಂದಿಗೆ ಇರಲು ಬಯಸುತ್ತೇನೆ. ಬ್ಯಾನರ್ಜಿ ಅವರೊಂದಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಶಶಿ ಪಂಜಾ ಮತ್ತು ಹಣಕಾಸು ಸಚಿವೆ ಚಂದ್ರಿಮಾ ಭಟ್ಟಚಾರ್ಜಿ ಕೂಡ ಆಸ್ಪತ್ರೆಗೆ ಭೇಟಿ ನೀಡಿದರು. ಬಳಿಕ ಇಬ್ಬರೂ ಸಚಿವರು ಭುವನೇಶ್ವರದ ಏಮ್ಸ್‌ನಲ್ಲಿ ದಾಖಲಾಗಿರುವ ಪ್ರಯಾಣಿಕರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.

ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ. ಆನಂದ ಬೋಸ್ ಅವರು ಬಸಂತಿಗೆ ಭೇಟಿ ನೀಡಿ ರೈಲು ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಗಳ ಕುಟುಂಬಸ್ಥರೊಂದಿಗೆ ಮಾತುಕತೆ ನಡೆಸಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇದು ಅತ್ಯಂತ ದುಃಖದ ಸಂಗತಿ. ಎಲ್ಲರಿಗಾಗಿ ಎಲ್ಲರೂ ಒಂದಾಗಿ ನಿಲ್ಲಬೇಕಾದ ಸಮಯ. ರೈಲು ದುರಂತದ ಸಂತ್ರಸ್ತರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಪರಿಹಾರ ಘೋಷಣೆ ಮಾಡಲಾಗಿದೆ ಎಂದು ಹೇಳಿದರು.

ಒಡಿಶಾದ ಬಾಲಸೋರ್​ ಜಿಲ್ಲೆಯಲ್ಲಿ ನಡೆದ ತ್ರಿವಳಿ ರೈಲು ದುರಂತದಲ್ಲಿ ಒಟ್ಟು 288 ಮಂದಿ ಸಾವನ್ನಪ್ಪಿದ್ದು, 1,200ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲಾಗಿದ್ದು, ತನಿಖಾಧಿಕಾರಿಗಳು ಮಾನವ ದೋಷ, ಸಿಗ್ನಲ್ ವೈಫಲ್ಯ ಮತ್ತು ರೈಲು ಅಪಘಾತದ ಹಿಂದಿನ ಸಂಭವನೀಯ ಕಾರಣಗಳನ್ನು ಪರಿಶೀಲಿಸುತ್ತಿದ್ದಾರೆ.

ಇದನ್ನೂ ಓದಿ : ಒಡಿಶಾ ರೈಲು ದುರಂತ: ಸ್ಥಳಕ್ಕೆ ತಲುಪಿದ ಸಿಬಿಐ ತಂಡ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.