ETV Bharat / bharat

ಮರಾಠ ಮೀಸಲಾತಿ ಹೋರಾಟ ತೀವ್ರ: ಇಬ್ಬರು ಶಿವಸೇನೆ ಸಂಸದರ ರಾಜೀನಾಮೆ, ಸರ್ಕಾರದಿಂದ ಸುಗ್ರೀವಾಜ್ಞೆ ಸಾಧ್ಯತೆ

author img

By ETV Bharat Karnataka Team

Published : Oct 31, 2023, 10:10 AM IST

ಮರಾಠ ಮೀಸಲಾತಿ ಹೋರಾಟ ತೀವ್ರ
ಮರಾಠ ಮೀಸಲಾತಿ ಹೋರಾಟ ತೀವ್ರ

ಮಹಾರಾಷ್ಟ್ರದಲ್ಲಿ ಮರಾಠ ಮೀಸಲಾತಿ ಹೋರಾಟ ತೀವ್ರವಾಗಿದ್ದು, ಸರ್ಕಾರ ಇದರ ಶಮನಕ್ಕೆ ಸುಗ್ರೀವಾಜ್ಞೆ ತರುವ ಸಾಧ್ಯತೆ ಇದೆ.

ಮುಂಬೈ (ಮಹಾರಾಷ್ಟ್ರ) : ಮರಾಠ ಸಮುದಾಯದ ಮೀಸಲಾತಿಗಾಗಿ ನಡೆಯುತ್ತಿರುವ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಹೋರಾಟಗಾರರು ಶಾಸಕರ ಮನೆಗಳಿಗೆ ಬೆಂಕಿ ಹಚ್ಚಿದ್ದರು. ಇದೀಗ ಮಜಲ್​ಗಾಂವ್​​ ನಗರಸಭೆ ಕಟ್ಟಡಕ್ಕೆ ಬೆಂಕಿ ಇಟ್ಟಿದ್ದಾರೆ. ಅಲ್ಲದೇ, ಇಬ್ಬರು ಶಿವಸೇನೆ ಸಂಸದರು (ಶಿಂಧೆ ಬಣ) ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಹೋರಾಟದಿಂದ ಬೆಚ್ಚಿರುವ ಸರ್ಕಾರ ಇಂದಿನ ಸಚಿವ ಸಂಪುಟ ಸಭೆಯಲ್ಲಿ ಸುಗ್ರೀವಾಜ್ಞೆ ಮಂಡಿಸುವ ಸಾಧ್ಯತೆ ಇದೆ.

ಜಾರಂಗೆ ಪಾಟೀಲ ಅವರು ಕರೆ ನೀಡಿರುವ ಆಂದೋಲನಕ್ಕೆ ರಾಜ್ಯಾದ್ಯಂತ ಮರಾಠ ಸಮುದಾಯದಿಂದ ಭರ್ಜರಿ ಬೆಂಬಲ ವ್ಯಕ್ತವಾಗಿದೆ. ಸೋಮವಾರ ನಡೆದ ಸಚಿವ ಸಂಪುಟ ಉಪಸಮಿತಿ ಸಭೆಯಲ್ಲಿ ಮರಾಠಾ ಸಮುದಾಯಕ್ಕೆ ಯಾವುದೇ ಪರಿಹಾರ ಸಿಕ್ಕಿಲ್ಲ ಎಂದು ಕೋಪಗೊಂಡ ಹೋರಾಟಗರರು ಎನ್‌ಸಿಪಿ ಶಾಸಕರಾದ ಪ್ರಕಾಶ್ ಸೋಲಂಕೆ ಮತ್ತು ಸಂದೀಪ್ ಕ್ಷೀರಸಾಗರ್ ಅವರ ಮನೆಗಳಿಗೆ ಬೆಂಕಿ ಹಚ್ಚಿ, ವಾಹನಗಳನ್ನು ಸುಟ್ಟು ಹಾಕಿದ್ದರು.

ಇದನ್ನು ಖಂಡಿಸಿದ ಎನ್‌ಸಿಪಿ ಸರ್ಕಾರದ ವಿರುದ್ಧ ಕಿಡಿಕಾರಿತ್ತು. ಕೂಡಲೇ ಮೀಸಲಾತಿ ನೀಡುವಂತೆ ಸರ್ಕಾರದ ಮೇಲೆ ಒತ್ತಡ ಹೇರಿತ್ತು. ಇದರ ಬೆನ್ನಲ್ಲೇ ಎನ್‌ಸಿಪಿ ಸಚಿವ ಛಗನ್ ಭುಜಬಲ್ ನಿನ್ನೆ ರಾತ್ರಿಯೇ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿ ಮಾಡಿದ್ದರು. ಮುಖ್ಯಮಂತ್ರಿ ಏಕನಾಥ್ ಶಿಂಧೆ ರಾತ್ರಿಯೇ ರಾಜ್ಯಪಾಲರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ನಂತರ ದೇವೇಂದ್ರ ಫಡ್ವವೀಸ್​ರ ಜೊತೆಗೂ ಮುಖ್ಯಮಂತ್ರಿ ಶಿಂಧೆ ಮಾತುಕತೆ ನಡೆಸಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮರಾಠಾ ಮೀಸಲಾತಿಗೆ ಸಂಬಂಧಿಸಿದಂತೆ ಇಂದಿನ ಸಚಿವ ಸಂಪುಟ ಸಭೆಯಲ್ಲಿ ಸುಗ್ರೀವಾಜ್ಞೆ ಹೊರಡಿಸುವ ಸಾಧ್ಯತೆಯೂ ಇದೆ.

ಸಂಸದರಿಬ್ಬರ ರಾಜೀನಾಮೆ: ಮರಾಠ ಮೀಸಲಾತಿ ಬೇಡಿಕೆಗೆ ಬೆಂಬಲಿಸಿ ಮುಖ್ಯಮಂತ್ರಿ ಏಕನಾಥ್​ ಶಿಂಧೆ ಅವರಿಗೆ ನಿಷ್ಠರಾದ, ಶಿವಸೇನೆಯ ಇಬ್ಬರು ಸಂಸದರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಹಿಂಗೋಳಿ ಸಂಸದ ಹೇಮಂತ ಪಾಟೀಲ್ ನವದೆಹಲಿಯಲ್ಲಿ ಲೋಕಸಭೆಯ ಸಚಿವಾಲಯಕ್ಕೆ ರಾಜೀನಾಮೆ ಪತ್ರ ಸಲ್ಲಿಸಿದ್ದರೆ, ನಾಸಿಕ್ ಕ್ಷೇತ್ರದ ಸಂಸದ ಹೇಮಂತ್ ಗೋಡ್ಸೆ ಶಿಂಧೆ ಅವರಿಗೆ ರಾಜೀನಾಮೆ ಪತ್ರ ಕಳುಹಿಸಿದ್ದಾರೆ.

ಯಾವತ್ಮಲ್‌ನಲ್ಲಿ ಪ್ರತಿಭಟನಕಾರರು ಸಂಸದರ ತಡೆದು ಹೋರಾಟ ಕುರಿತು ತಮ್ಮ ನಿಲುವು ಸ್ಪಷ್ಟಪಡಿಸಲು ಪಟ್ಟುಹಿಡಿದಿದ್ದರು. ಆಗ ಸ್ಥಳದಲ್ಲಿಯೇ ರಾಜೀನಾಮೆ ಪತ್ರವನ್ನು ಸಿದ್ಧಪಡಿಸಿ ಪ್ರತಿಭಟನಕಾರರಿಗೆ ನೀಡಿದ್ದರು. ರಾಜೀನಾಮೆಯು ಕೇವಲ ನಾಟಕ ಎಂಬ ಎನ್‌ಸಿಪಿ ನಾಯಕಿ ಸುಪ್ರಿಯಾ ಸುಳೆ ಅವರ ಹೇಳಿಕೆಗೆ ಅವರು, ಮರಾಠರ ಬಗ್ಗೆ ಕಳಕಳಿಯುಳ್ಳ ನಾಯಕರು ರಾಜೀನಾಮೆ ನೀಡಬೇಕು ಎಂದು ‌ಕರೆ ನೀಡಿದ್ದಾರೆ.

ಸರ್ಕಾರದಿಂದ ಸುಗ್ರೀವಾಜ್ಞೆ ಸಾಧ್ಯತೆ: ಮರಾಠ ಮೀಸಲಾತಿಗಾಗಿ ರಾಜ್ಯ ಸರ್ಕಾರ ಎಲ್ಲ ಪ್ರಯತ್ನಗಳು ನಡೆಸುತ್ತಿದ್ದರೂ ಸಮುದಾಯದ ಆಕ್ರಮಣಕಾರಿ ಧೋರಣೆಯಿಂದ ರಾಜ್ಯದಲ್ಲಿ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಮೀಸಲಾತಿ ಕುರಿತು ಸುಗ್ರೀವಾಜ್ಞೆ ಹೊರಡಿಸುವ ಸಾಧ್ಯತೆಯಿದೆ. ಇಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಬಹುದು.

ಇದನ್ನೂ ಓದಿ: ಅಜಿತ್ ಪವಾರ್ ಬಣದ ಎನ್‌ಸಿಪಿ ಶಾಸಕನ ಮನೆ ಮೇಲೆ ಮರಾಠ ಮೀಸಲಾತಿ ಹೋರಾಟಗಾರರ ಕಲ್ಲು ತೂರಾಟ, ವಾಹನಗಳಿಗೆ ಬೆಂಕಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.