ETV Bharat / bharat

ಕೂದಲೆಳೆ ಅಂತರದಲ್ಲಿ ರೈಲು ಡಿಕ್ಕಿಯಿಂದ ಆನೆ ಪಾರು.. ವಿಡಿಯೋ

author img

By

Published : Mar 1, 2023, 7:50 PM IST

Magna elephant survived from rail accident in tamil nadu
ಕೂದಲೆಳೆ ಅಂತರದಲ್ಲಿ ರೈಲು ಡಿಕ್ಕಿಯಿಂದ ಆನೆ ಪಾರು... ವಿಡಿಯೋ

ತಮಿಳುನಾಡಿನಲ್ಲಿ ಆನೆಯೊಂದು ಸಾವಿನ ದವಡೆಯಿಂದ ಪಾರಾಗಿದೆ. ಆನೆ ಹಳಿ ಮೇಲೆ ನಿಂತಿದ್ದಾಗ ರೈಲು ಬರುತ್ತಿರುವುದನ್ನು ಗಮನಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ ತಕ್ಷಣವೇ ಓಡಿಸಿ ಪ್ರಾಣ ಉಳಿಸಿದ್ದಾರೆ.

ಕೂದಲೆಳೆ ಅಂತರದಲ್ಲಿ ರೈಲು ಡಿಕ್ಕಿಯಿಂದ ಆನೆ ಪಾರು

ಕೊಯಮತ್ತೂರು (ತಮಿಳುನಾಡು): ರೈಲು ಡಿಕ್ಕಿಯಿಂದ ಆನೆಯೊಂದು ಕೂದಲೆಳೆ ಅಂತರದಲ್ಲಿ ಪಾರಾದ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ. ಹಳಿ ಮೇಲೆ ನಿಂತಿದ್ದ ಆನೆಯನ್ನು ಸಮಯ ಪ್ರಜ್ಞೆಯಿಂದ ಅರಣ್ಯಾಧಿಕಾರಿಗಳು ಓಡಿಸಿದ್ದಾರೆ. ಇದರಿಂದ ಗಜರಾಜ ಪ್ರಾಣಾಪಾಯದಿಂದ ಬಚಾವ್​ ಆಗಿದೆ. ಇದರ ವಿಡಿಯೋವೊಂದು ವೈರಲ್​ ಆಗಿದೆ.

ಈ ಆನೆಯು ಕೃಷಿ ಬೆಳೆಗಳನ್ನು ನಾಶ ಮಾಡುತ್ತಿತ್ತು. ಹೀಗಾಗಿ ಈ ಹಿಂದೆ ಧರ್ಮಪುರಿ ಪ್ರದೇಶದಲ್ಲಿ ಇದನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಸೆರೆ ಹಿಡಿದಿದ್ದರು. ಫೆ.5ರಂದು ಅನೈಮಲೈ ಹುಲಿ ಸಂರಕ್ಷಿತ ಪ್ರದೇಶದ ತಪ್ಸಿಲಿಪ್ ಅರಣ್ಯ ಪ್ರದೇಶದಲ್ಲಿ ಈ ಆನೆಯನ್ನು ಬಿಡಲಾಗಿತ್ತು. ಆದರೆ, ಇದರ ಮರು ದಿನವೇ ಕಾಡಿನಿಂದ ಹೊರ ಬಂದ ಆನೆ, ಅಲ್ಲಿಂದ ಕೆಳಗಿಳಿದು ಚೇತುಮಡೈ ಸೇರಿದಂತೆ ಭಾಗದಲ್ಲಿ ಸುತ್ತಾಡಿದೆ.

ಇದನ್ನೂ ಓದಿ: ಧಾರ್ಮಿಕ ಕಾರ್ಯಗಳಿಗೆ ರೋಬೋಟ್ ಆನೆ ಬಳಕೆ: ಕೇರಳದ ದೇಗುಲದಲ್ಲಿ ಹೊಸ ನಡೆ

ಕೊಯಮತ್ತೂರಿನಲ್ಲಿ ಗಜರಾಜ ಪ್ರತ್ಯಕ್ಷ: ಇದರ ನಡುವೆ ಪೇರೂರು ಪ್ರದೇಶದಲ್ಲಿ ಓಡಾಡುತ್ತಿರುವ ವಿಷಯ ತಿಳಿದು ಆನೆಯನ್ನು ಅರಿವಳಿಕೆ ಇಂಜೆಕ್ಷನ್ ನೀಡಿ ಸೆರೆ ಹಿಡಿಯಲಾಗಿತ್ತು. ಅಲ್ಲಿಂದ ನಂತರ ಮತ್ತೆ ಈ ಆನೆಯನ್ನು ವಾಲ್ಪಾರೈ ಪಕ್ಕದಲ್ಲಿರುವ ಮಾನಂಪಲ್ಲಿ ಮಂತ್ರಿ ಮಟ್ಟಂ ಎಂಬ ಅರಣ್ಯ ಪ್ರದೇಶಕ್ಕೆ ಅರಣ್ಯಾಧಿಕಾರಿಗಳು ಸಾಗಿದ್ದರು. ಆದರೆ, ಇದಾದ ನಂತರವೂ ಮರಳಿ ಕೊಯಮತ್ತೂರಿನಲ್ಲಿ ಗಜರಾಜ ಪ್ರತ್ಯಕ್ಷವಾಗಿದೆ.

ಈ ಸಂದರ್ಭದಲ್ಲಿ ಈ ಆನೆಯು ಮಧುಕರೈ ಬಳಿ ರೈಲ್ವೆ ಹಳಿ ಮೇಲೆ ಏಕಾಏಕಿ ಕಾಣಿಸಿಕೊಂಡಿದೆ. ರೈಲ್ವೆ ಹಳಿಯ ಮಧ್ಯೆದಲ್ಲೇ ನಿಂತಿತ್ತು. ಆಗ ಕೇರಳಕ್ಕೆ ತೆರಳುತ್ತಿದ್ದ ಹೈಸ್ಪೀಡ್​ ಎಕ್ಸ್​ಪ್ರೆಸ್​ ರೈಲು ಬಂದಿದೆ. ಇದನ್ನು ಗಮನಿಸಿದ ಮಧುಕರೈ ಅರಣ್ಯ ಇಲಾಖೆಯ ಸಿಬ್ಬಂದಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಆನೆಯನ್ನು ರೈಲು ಹಳಿಯಿದ ಓಡಿಸಿದ್ದಾರೆ. ಈ ಮೂಲಕ ಆನೆಯ ಪ್ರಾಣವನ್ನು ಸೆಕೆಂಡುಗಳಲ್ಲಿ ಉಳಿಸಲಾಗಿದೆ. ಇದೀಗ ವಿಡಿಯೋ ದೃಶ್ಯಾವಳಿ ಬಿಡುಗಡೆಯಾಗಿದೆ.

ದಂತವಿಲ್ಲದ ಗಂಡು ಆನೆ: ಈ ವಿಡಿಯೋದಲ್ಲಿ ಹಳಿಗಳ ಮೇಲೆ ನಿಂತಿದ್ದ ಆನೆಯನ್ನು ಇನ್ನೊಂದು ಬದಿಗೆ ಓಡಿಸಲು ಅರಣ್ಯ ಇಲಾಖೆ ಹರಸಾಹಸ ಪಡುತ್ತಿದ್ದು, ರೈಲು ಬರುತ್ತಿದ್ದಂತೆಯೇ ಆನೆ ಹಳಿಯಿಂದ ಕೆಳಗೆ ಹಾರಿ ಪ್ರಾಣಾಪಾಯದಿಂದ ಪಾರಾಗುವ ದೃಶ್ಯ ಸೆರೆಯಾಗಿದೆ. ಇದು ಸಿನಿಮೀಯ ದೃಶ್ಯಗಳನ್ನು ನೆನಪಿಸುವಂತಿದೆ. ಇನ್ನು, ಈ ಆನೆಯು ದಂತವಿಲ್ಲದ ಗಂಡು ಆನೆಯಾಗಿದೆ. ಇದುವರೆಗೆ ಧರ್ಮಪುರಿ, ಕೃಷ್ಣಗಿರಿ ಮತ್ತು ಕೊಯಮತ್ತೂರು ಜಿಲ್ಲೆಯ ನಾನಾ ಭಾಗದಲ್ಲಿ ಸುತ್ತಾಡಿದೆ.

ಕಳೆದ ಕೆಲ ದಿನಗಳಿಂದ ಆನೆಯ ಸಂಚಾರದಿಂದ ಅನೇಕ ಗ್ರಾಮಗಳ ಜನರು ಭಯ ಭೀತರಾಗುತ್ತಿದ್ದಾರೆ. ಜೊತೆಗೆ ಹೊಲಗಳಲ್ಲಿ ಬೆಳೆಗಳ ನಾಶದಿಂದ ರೈತರು ಚಿಂತೆಗೀಡಾಗಿದ್ದಾರೆ. ಆದರೆ, ಜನರಿಗೆ ಎಲ್ಲಿಯೂ ಅಪಾಯ ಉಂಟು ಮಾಡುವ ಪರಿಸ್ಥಿತಿಯನ್ನು ಸೃಷ್ಟಿಸಿಲ್ಲ. ಆಹಾರ ಅರಸಿ ಗ್ರಾಮಗಳತ್ತ ಬರುತ್ತಿದೆ. ಇದೀಗ ಅನೇಕ ಕಡೆಗಳಲ್ಲಿ ಸುಮಾರು ನೂರು ಕಿಲೋ ಮೀಟರ್​ನಷ್ಟು ಸುತ್ತಾಡಿ ರೈಲ್ವೆ ಹಳಿ ಕಡೆ ಬಂದಿತ್ತು ಎಂದು ಹೇಳಲಾಗಿದೆ.

ಇದನ್ನೂ ಓದಿ: ಶ್ರೀರಂಗಂ ರಂಗನಾಥ ದೇವಾಲಯದಲ್ಲಿನ ಭಕ್ತರಿಂದ ಆನೆಗೆ ಹುಟ್ಟುಹಬ್ಬ ಆಚರಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.