ETV Bharat / bharat

ಮಧ್ಯಪ್ರದೇಶ ಸರ್ಕಾರಿ ನೌಕರರಿಗೆ 6 ತಿಂಗಳು ಮಾತ್ರ ಕೆಲಸ, ಉಳಿದ 6 ತಿಂಗಳು ರಜೆ; ಸಂಬಳಕ್ಕಿಲ್ಲ ಧಕ್ಕೆ

author img

By ETV Bharat Karnataka Team

Published : Aug 30, 2023, 11:00 PM IST

madhya pradesh  State government employees stay on leave around 6 months
ಮಧ್ಯಪ್ರದೇಶ ಸರ್ಕಾರಿ ನೌಕರರಿಗೆ ಆರು ತಿಂಗಳು ಮಾತ್ರ ಕೆಲಸ.. ಉಳಿದ ಆರು ತಿಂಗಳು ರಜೆ... ಸಂಬಳಕ್ಕಿಲ್ಲ ಧಕ್ಕೆ

ಮಧ್ಯಪ್ರದೇಶದಲ್ಲಿ ಸಾಲು-ಸಾಲು ರಜೆಗಳನ್ನು ಸರ್ಕಾರಿ ನೌಕರರು ಅನುಭವಿಸುತ್ತಿದ್ದಾರೆ. ಒಂದು ವರ್ಷದಲ್ಲಿ ಆರು ತಿಂಗಳಷ್ಟೇ ಕೆಲಸ ಮಾಡಿದರೂ, ವರ್ಷಪೂರ್ತಿ ಸಂಬಳ ಪಡೆಯುತ್ತಾರೆ.

ಭೋಪಾಲ್ (ಮಧ್ಯಪ್ರದೇಶ): ಸರ್ಕಾರಿ ಕೆಲಸ ಎಂದರೆ ದೇವರ ಕೆಲಸ ಎಂಬ ಮಾತಿದೆ. ಅಂದರೆ ಜನತೆ ದೇವರಿಗೆ ಎಷ್ಟು ನಿಷ್ಠೆಯಿಂದ ನಡೆದುಕೊಳ್ಳುತ್ತಾರೋ, ಅಷ್ಟೇ ನಿಷ್ಠೆಯಿಂದ ಸರ್ಕಾರಿ ನೌಕರರು ತಮ್ಮ ಕೆಲಸ ನಿರ್ವಹಿಸಬೇಕೆಂಬುದು ಇದರರ್ಥ. ಆದರೆ, ಸರ್ಕಾರಿ ಕೆಲಸಕ್ಕೆ ಸೇರಿದರೆ ಜೀವನಕ್ಕೆ ಭದ್ರತೆ ಸಿಗುತ್ತದೆ, ಕೈತುಂಬ ಸಂಬಳ ದೊರೆಯುತ್ತದೆ ಎಂದು ಸರ್ಕಾರಿ ಕೆಲಸಕ್ಕೆ ಸೇರುವವರೇ ಅಧಿಕ.

ಇದರ ಜೊತೆಗೆ ಕಾಲಕಾಲಕ್ಕೆ ರಜೆಗಳಿಗೂ ಬರವಿಲ್ಲ. ವಿಪರ್ಯಾಸವೆಂದರೆ ಆಡಳಿತ ನಡೆಸುವ ಸರ್ಕಾರಗಳು ಸಹ ಜಾತಿ ಲೆಕ್ಕಾಚಾರದ ಮೇಲೆ ತಮ್ಮ ಮತಬ್ಯಾಂಕ್​ಗಾಗಿ ರಜೆಗಳ ಸಾಲಿಗೆ ಮತ್ತಷ್ಟು ಸೇರಿಸುತ್ತಲೇ ಹೋಗುತ್ತವೆ. ಇದಕ್ಕೆ ತಾಜಾ ಉದಾಹರಣೆ ಮಧ್ಯಪ್ರದೇಶ. ಇಲ್ಲಿ ಸರ್ಕಾರಿ ನೌಕರರು ವರ್ಷದಲ್ಲಿ 6 ತಿಂಗಳಿಗಿಂತ ಹೆಚ್ಚು ಅಧಿಕೃತ ರಜೆಗಳ ಮೇಲೆಯೇ ಇರಬಹುದು. ಅದಕ್ಕೆ ಸಂಬಳವನ್ನೂ ಪಡೆಯಬಹುದು!.

ಈ ವರ್ಷಾಂತ್ಯದಲ್ಲಿ ವಿಧಾನಸಭೆ ಚುನಾವಣೆಯನ್ನು ಮಧ್ಯಪ್ರದೇಶ ಎದುರಿಸುತ್ತಿದೆ. ಆದರೆ, ಇದುವರೆಗೆ ರಕ್ಷಾಬಂಧನದಂದು ಸರ್ಕಾರಿ ರಜೆ ಘೋಷಿಸಿರಲಿಲ್ಲ. ಈಗ ಚುನಾವಣಾ ವರ್ಷದಲ್ಲೂ ಸರ್ಕಾರಿ ನೌಕರರಿಗೆ ರಕ್ಷಾಬಂಧನದ ಉಡುಗೊರೆಯಾಗಿ ಸರ್ಕಾರವು ಒಂದು ದಿನ ರಜೆ ಘೋಷಿಸಿದೆ. ಕಳೆದ 10 ವರ್ಷಗಳಲ್ಲಿ ಇಲ್ಲಿನ ರಾಜ್ಯ ಸರ್ಕಾರ ಚುನಾವಣಾ ಲಾಭಕ್ಕಾಗಿ ಸಾಕಷ್ಟು ರಜೆಗಳನ್ನು ಘೋಷಿಸುತ್ತಲೇ ಬರುತ್ತಿದೆ. ವೋಟ್ ಬ್ಯಾಂಕ್‌ಗಾಗಿ ಪ್ರತಿಪಕ್ಷವಾದ ಕಾಂಗ್ರೆಸ್ ಕೂಡ ಆಡಳಿತಾರೂಢ ಬಿಜೆಪಿ ಜೊತೆ ನಿಂತಿರುವುದು ಕಂಡುಬರುತ್ತಿದೆ.

62 ಐಚ್ಛಿಕ ರಜಾದಿನಗಳು!: ಮಧ್ಯಪ್ರದೇಶದಲ್ಲಿ ಧಾರ್ಮಿಕ ಆಚರಣೆಗಳು, ಹಬ್ಬಗಳು, ಮಹಾಪುರುಷರ ಜನ್ಮ ವಾರ್ಷಿಕೋತ್ಸವಗಳು ಮತ್ತು ಸ್ಮರಣ ವಾರ್ಷಿಕೋತ್ಸವಗಳಿಗೆಂದು ಐಚ್ಛಿಕ ರಜಾದಿನಗಳ ಪಟ್ಟಿ ದೊಡ್ಡದಿದೆ. ಇಡೀ ವರ್ಷದಲ್ಲಿ ಗುರು ಗೋಬಿಂದ್ ಸಿಂಗ್ ಜಯಂತಿ, ಮಹರ್ಷಿ ಗೋಕುಲದಾಸ್ ಜಯಂತಿ, ಹೇಮು ಕಲಾನಿ ಹುತಾತ್ಮ ದಿನ, ದೇವ್ ನಾರಾಯಣ ಜಯಂತಿ, ನರ್ಮದಾ ಜಯಂತಿ, ಹಜರತ್ ಅಲಿ ಜನ್ಮದಿನ, ಸ್ವಾಮಿ ರಾಮಚರಣ್ ಮಹಾರಾಜ್ ಜನ್ಮದಿನ, ಮಹರ್ಷಿ ದಯಾನಂದ ಜಯಂತಿ, ಏಕಲವ್ಯ ಜಯಂತಿ, ತುಳಸಿದಾಸ್ ಜಯಂತಿ, ವಿಶ್ವಕರ್ಮ ಜಯಂತಿ, ಅಕ್ಷಯ ತೃತೀಯ, ಶಂಕರಾಚಾರ್ಯ ಜಯಂತಿ... ಹೀಗೆ ಒಟ್ಟಾರೆ 62 ಐಚ್ಛಿಕ ರಜಾದಿನಗಳನ್ನು ಸರ್ಕಾರಿ ಸಿಬ್ಬಂದಿ ಸಂಬಳ ಸಮೇತವಾಗಿಯೇ ಪಡೆಯಬಹುದು.

ಅಲ್ಲದೇ, ಶಿವರಾಜ್ ಸಿಂಗ್​ ಚೌಹಾಣ್ ನೃತೃತ್ವದ​ ಸರ್ಕಾರ ಸರ್ಕಾರಿ ನೌಕರರಿಗೆ ವಾರದಲ್ಲಿ 5 ಕೆಲಸ ದಿನಗಳನ್ನು ಘೋಷಿಸಿದೆ. ಇವುಗಳ ಜೊತೆಗೆ 30 ಗಳಿಕೆ ರಜೆಗಳು (ಇಎಲ್​), 13 ಸಾಮಾನ್ಯ ರಜೆಗಳು (ಸಿಎಲ್​) ಹಾಗೂ 20 ವೈದ್ಯಕೀಯ ರಜೆಗಳು ಸಹ ಇವೆ. ಇಷ್ಟೇ ಅಲ್ಲ, ಒಂದು ವರ್ಷದಲ್ಲಿ 53 ಭಾನುವಾರಗಳು, 52 ಶನಿವಾರಗಳು ಬರುತ್ತವೆ. ಈ ಮೂಲಕ ಸರ್ಕಾರಿ ನೌಕರರು ವರ್ಷದಲ್ಲಿ ಕನಿಷ್ಠ 202 ದಿನ ವಿಶ್ರಾಂತಿ ಪಡೆದು 163 ದಿನ ಮಾತ್ರ ಕೆಲಸ ಮಾಡುತ್ತಾರೆ.

ಮತ್ತೊಂದೆಡೆ, ರಜೆ ಸಂಸ್ಕೃತಿ ಕೊನೆಯಾಗಬೇಕೆಂಬ ವಾದ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ. ಸರ್ಕಾರಿ ನೌಕರರು ತಮ್ಮ ಕೆಲಸ ಅವಧಿಯಲ್ಲೇ ಕಚೇರಿಗಳಲ್ಲಿ ಇರುವುದಿಲ್ಲ. ನಿಗದಿತ ಸಮಯಕ್ಕೂ ಬಾರದೆ, ಸಮಯಕ್ಕಿಂತ ಮುಂಚೆಯೇ ತೆರಳುವ ದೃಶ್ಯಗಳು ಸಾಮಾನ್ಯ. ರಾಜ್ಯದಲ್ಲಿ ಈಗ ಶನಿವಾರ ಕೂಡ ರಜೆ ಘೋಷಿಸಲಾಗಿದೆ. ಇದರಿಂದ ಜನರ ಕೆಲಸಕ್ಕೆ ಸಿಬ್ಬಂದಿ 5 ದಿನ ಮಾತ್ರ ಸಿಗುತ್ತಾರೆ. ಆದ್ದರಿಂದ ನೌಕರರು ಕೆಲಸ ಮಾಡಲು ನಿಗದಿತ ಕಾಲಮಿತಿ ನಿಗದಿಪಡಿಸಬೇಕು. ಕಚೇರಿ ಸಮಯಪಾಲನೆ ಮಾಡದ ನೌಕರರ ವಿರುದ್ಧ ಕ್ರಮ ಕೈಗೊಳ್ಳಬೇಕು. ರಜೆ ಸಂಸ್ಕೃತಿ ಕೊನೆಯಾಗಬೇಕು ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಅಜಯ್ ದುಬೆ.

ಇದನ್ನೂ ಓದಿ: ತೆಲಂಗಾಣ ವಿಧಾನಸಭೆ ಚುನಾವಣೆ: 119 ಸ್ಥಾನಗಳಿಗೆ 1,000ಕ್ಕೂ ಹೆಚ್ಚು ಕಾಂಗ್ರೆಸ್​ ಆಕಾಂಕ್ಷಿಗಳಿಂದ ಅರ್ಜಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.