ETV Bharat / bharat

ತೆಲಂಗಾಣ ವಿಧಾನಸಭೆ ಚುನಾವಣೆ: 119 ಸ್ಥಾನಗಳಿಗೆ 1,000ಕ್ಕೂ ಹೆಚ್ಚು ಕಾಂಗ್ರೆಸ್​ ಆಕಾಂಕ್ಷಿಗಳಿಂದ ಅರ್ಜಿ

author img

By ETV Bharat Karnataka Team

Published : Aug 30, 2023, 9:24 PM IST

ತೆಲಂಗಾಣ ವಿಧಾನಸಭೆ ಚುನಾವಣೆ ಸಂಬಂಧ 119 ಸ್ಥಾನಗಳಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್​ ಬಯಸಿ 1,000ಕ್ಕೂ ಅಧಿಕ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ.

over-1000-applicants-for-119-seats-shows-poll-trend-in-telangana-says-congress
ತೆಲಂಗಾಣ ವಿಧಾನಸಭೆ ಚುನಾವಣೆ : 119 ಸ್ಥಾನಗಳಿಗೆ 1000ಕ್ಕೂ ಅಧಿಕ ಕಾಂಗ್ರೆಸ್​ ಆಕಾಂಕ್ಷಿಗಳಿಂದ ಅರ್ಜಿ

ನವದೆಹಲಿ : ಈ ವರ್ಷಾಂತ್ಯಕ್ಕೆ ತೆಲಂಗಾಣ ವಿಧಾನಸಭೆ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳು​ ಭರ್ಜರಿ ಪ್ರಚಾರದಲ್ಲಿ ತೊಡಗಿವೆ. ಇಲ್ಲಿನ 119 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಈಗಾಗಲೇ ರಾಜಕೀಯ ಪಕ್ಷಗಳು ಅಖಾಡಕ್ಕೆ ಧುಮುಕಿದೆ. ಚುನಾವಣೆ ಹಿನ್ನೆಲೆಯಲ್ಲಿ 119 ವಿಧಾನಸಭಾ ಕ್ಷೇತ್ರಗಳಿಗೆ ಸುಮಾರು 1,000ಕ್ಕೂ ಅಧಿಕ ಜನ ಟಿಕೆಟ್​​ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ ಎಂದು ಕಾಂಗ್ರೆಸ್​ ಹೇಳಿದೆ. ವಿಧಾನಸಭೆ ಕ್ಷೇತ್ರಗಳಿಗೆ ಅರ್ಜಿ ಸಲ್ಲಿಸಲು ಕಾಂಗ್ರೆಸ್​ ಕೋರಿದ್ದು, ಇದಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ದೊರೆತಿದೆ ಎಂದು ತಿಳಿಸಿದೆ.

ಈ ಸಂಬಂಧ ಪ್ರತಿಕ್ರಿಯಿಸಿರುವ ತೆಲಂಗಾಣ ರಾಜ್ಯ ಕಾಂಗ್ರೆಸ್​ ಉಸ್ತುವಾರಿ ಮಾಣಿಕ್ ರಾವ್​ ಠಾಕ್ರೆ, ತೆಲಂಗಾಣ ಚುನಾವಣೆ ಹಿನ್ನೆಲೆಯಲ್ಲಿ 119 ವಿಧಾನಸಭಾ ಕ್ಷೇತ್ರಗಳಿಗೆ ಸುಮಾರು 1,009 ಟಿಕೆಟ್​ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಕೆಲವು ಕ್ಷೇತ್ರಗಳಿಂದ ಸುಮಾರು 15ಕ್ಕೂ ಹೆಚ್ಚು ಟಿಕೆಟ್​ ಆಕಾಂಕ್ಷಿಗಳು ಮತ್ತು ಇನ್ನು ಕೆಲವು ಕ್ಷೇತ್ರಗಳಿಂದ 6ಕ್ಕೂ ಹೆಚ್ಚು ಟಿಕೆಟ್​ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಇದು ರಾಜ್ಯದಲ್ಲಿ ಕಾಂಗ್ರೆಸ್​ ಪರವಾದ ಅಲೆಯನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್​ ಪಕ್ಷವು ಚುನಾವಣೆಯಲ್ಲಿ ಸ್ಪರ್ಧಿಸುವ ಟಿಕೆಟ್​ ಆಕಾಂಕ್ಷಿಗಳಿಗೆ ನಿರ್ದಿಷ್ಟ ಅರ್ಜಿ ಶುಲ್ಕವನ್ನು ನಿಗದಿಪಡಿಸಿದ್ದರೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪಕ್ಷವು ಅರ್ಜಿ ಸಲ್ಲಿಸಲು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 50 ಸಾವಿರ ಮತ್ತು ಎಸ್​ಸಿ,ಎಸ್​ಟಿ ಟಿಕೆಟ್​ ಆಕಾಂಕ್ಷಿಗಳಿಗೆ 25 ಸಾವಿರ ರೂ ಶುಲ್ಕವನ್ನು ನಿಗದಿಪಡಿಸಿತ್ತು. ಆದರೂ 1000ಕ್ಕೂ ಅಧಿಕ ಟಿಕೆಟ್​ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಕಾಂಗ್ರೆಸ್ ಪಕ್ಷವು ತನ್ನ ಬೊಕ್ಕಸವನ್ನು ತುಂಬಿಸಿಕೊಳ್ಳಲು ಅರ್ಜಿ ಶುಲ್ಕವನ್ನು ವಿಧಿಸಿದೆ ಎಂಬ ಆರೋಪವನ್ನು ತಳ್ಳಿ ಹಾಕಿದರು.

ಕಳೆದ ಕೆಲವು ತಿಂಗಳ ಹಿಂದೆ ಕರ್ನಾಟಕ ವಿಧಾನ ಸಭೆ ಚುನಾವಣೆ ನಡೆದಿತ್ತು. ಚುನಾವಣೆಗೂ ಮುನ್ನ ಟಿಕೆಟ್​ ಆಕಾಂಕ್ಷಿಗಳಿಗೆ 2 ಲಕ್ಷ ರೂ ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿತ್ತು. ಆದರೆ ನಾವು ತೆಲಂಗಾಣದಲ್ಲಿ ಅರ್ಜಿ ಶುಲ್ಕವನ್ನು ಕಡಿಮೆ ಮಾಡಿದ್ದೇವೆ. ತೀವ್ರ ಟಿಕೆಟ್​ ಆಕಾಂಕ್ಷಿಗಳು ಮಾತ್ರ ಅರ್ಜಿ ಸಲ್ಲಿಸುವಂತೆ ಮಾಡಲು ಈ ಶುಲ್ಕ ನಿಗದಿಪಡಿಸಲಾಗಿದೆ. ವಿವಿಧ ವರ್ಗದ ಟಿಕೆಟ್​ ಆಕಾಂಕ್ಷಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ ಎಂದು ಹೇಳಿದರು.

ಅರ್ಜಿ ಶುಲ್ಕದಿಂದ ಸಂಗ್ರಹವಾದ ಮೊತ್ತವನ್ನು ರಾಜ್ಯ ಕಾಂಗ್ರೆಸ್​ ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳಲಿದೆ. ಚುನಾವಣಾ ಅಭ್ಯರ್ಥಿಗಳ ಆಯ್ಕೆ ಸಂಬಂಧ ಕಾಂಗ್ರೆಸ್​ ಪಕ್ಷವು ಹಲವು ಸಮೀಕ್ಷೆಗಳನ್ನು ನಡೆಸಿದೆ. ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಲ್ಲಿ ಅಭ್ಯರ್ಥಿಗಳ ಹಿನ್ನಲೆಯನ್ನು ಪರಿಶೀಲಿಸಲಾಗುವು ಎಂದರು.

ಬಿಆರ್​ಎಸ್​ ಪಕ್ಷವನ್ನು ಸೋಲಿಸುವುದು ನಮ್ಮ ಗುರಿ: ಆಡಳಿತಾರೂಢ ಬಿಆರ್​ಎಸ್​ ಪಕ್ಷವನ್ನು ಸೋಲಿಸುವುದು ನಮ್ಮ ಮುಖ್ಯ ಗುರಿಯಾಗಿದೆ. ಆದ್ದರಿಂದ ಗೆಲ್ಲುವ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಮುಖ್ಯವಾಗುತ್ತದೆ. ಈ ವೇಳೆ ಜಾತಿ ಸಮೀಕರಣವನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಈ ಬಾರಿ ಹಿಂದುಳಿದ ವರ್ಗದ ಹಲವು ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ. ಜೊತೆಗೆ ಯುವಜನರಿಗೆ ಮತ್ತು ಮಹಿಳೆಯರಿಗೆ ಹೆಚ್ಚು ಪ್ರಾತಿನಿಧ್ಯ ನೀಡಲು ನಿರ್ಧರಿಸಲಾಗಿದೆ. ಮೊದಲೇ ಹೇಳಿದಂತೆ ನಾವು ಸೆಪ್ಟೆಂಬರ್​ ತಿಂಗಳಲ್ಲಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡುತ್ತೇವೆ ಎಂದು ಮಾಣಿಕ್​ ಠಾಕ್ರೆ ಹೇಳಿದರು.

ಕಾಂಗ್ರೆಸ್​ ಪಕ್ಷವು ಘೋಷಣೆ ಮಾಡಿರುವ ಗ್ಯಾರಂಟಿ ಯೋಜನೆಗಳ ಪ್ರಭಾವ ರಾಜ್ಯದಲ್ಲಿ ಕಾಣುತ್ತಿದೆ. ಈ ಹಿಂದೆ ರಾಜ್ಯಕ್ಕೆ ಆಗಮಿಸಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ನಿರುದ್ಯೋಗಿಗಳಿಗೆ ಯೋಜನೆಗಳನ್ನು ಘೋಷಿಸಿದ್ದರು. ಅಲ್ಲದೆ ಆಗಸ್ಟ್​ 26ರಂದು ರಾಜ್ಯಕ್ಕೆ ಭೇಟಿ ನೀಡಿದ್ದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ ಅವರು ರಾಜ್ಯ ಸರ್ಕಾರ ದಲಿತರನ್ನು ನಿರ್ಲಕ್ಷಿಸಿರುವುದನ್ನು ಜನರ ಮುಂದಿರಿಸಿದ್ದರು. ಮುಂದಿನ ದಿನಗಳಲ್ಲಿ ಇನ್ನಷ್ಟು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡುವುದಾಗಿ ಹೇಳಿದರು.

ಎಲ್ಲಾ ವಿಧಾನಸಭೆ ಕ್ಷೇತ್ರಗಳಲ್ಲಿ ಬಸ್ ಯಾತ್ರೆ:​ ತೆಲಂಗಾಣ ಪ್ರದೇಶ ಕಾಂಗ್ರೆಸ್​ ಸಮಿತಿ ಅಧ್ಯಕ್ಷ ರೇವಂತ್​ ರೆಡ್ಡಿ ಮತ್ತು ವಿರೋಧ ಪಕ್ಷ ನಾಯಕ ಬಟ್ಟಿ ವಿಕ್ರಮಾರ್ಕ್​ ನೇತೃತ್ವದಲ್ಲಿ ಈಗಾಗಲೇ ರಾಜ್ಯಾದ್ಯಂತ ಪ್ರತ್ಯೇಕ ಪಾದಯಾತ್ರೆ ನಡೆದಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಬಸ್ ಯಾತ್ರೆ ನಡೆಸಲಾಗುವುದು. ರಾಜ್ಯದಲ್ಲಿ ಕಾಂಗ್ರೆಸ್ ತನ್ನ ಪ್ರತಿಸ್ಪರ್ಧಿಗಳ ಜೊತೆ ತೀವ್ರ ಪೈಪೋಟಿಯನ್ನು ನಡೆಸಲಿದೆ ಎಂದು ಹೇಳಿದರು.

ಇತ್ತೀಚೆಗೆ ಮಾಜಿ ಸಚಿವ ಮತ್ತು ಬಿಜೆಪಿ ನಾಯಕ ಆಗಮ ಚಂದ್ರಶೇಖರ್ ಅವರ ಸೇರ್ಪಡೆಯಾಗಿದ್ದರು. ಇದಕ್ಕೂ ಮೊದಲು ಬಿಆರ್‌ಎಸ್ ನಾಯಕ ಪೊಂಗುಲೇಟಿ ಶ್ರೀನಿವಾಸ್ ರೆಡ್ಡಿ ಮತ್ತು ಜೂಪಲ್ಲಿ ಕೃಷ್ಣರಾವ್ ಅವರು ಕಾಂಗ್ರೆಸ್ ಸೇರ್ಪಡೆಯಾಗಿದ್ದರು.

ಇದನ್ನೂ ಓದಿ : Exclusive: ತೆಲಂಗಾಣದಲ್ಲಿ ಬಿಜೆಪಿ ಸರ್ಕಾರ ನಿಶ್ಚಿತ.. ಮಾಜಿ ಸಚಿವ ಪೋಖ್ರಿಯಾಲ್ ವಿಶ್ವಾಸ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.