ETV Bharat / bharat

Exclusive: ತೆಲಂಗಾಣದಲ್ಲಿ ಬಿಜೆಪಿ ಸರ್ಕಾರ ನಿಶ್ಚಿತ.. ಮಾಜಿ ಸಚಿವ ಪೋಖ್ರಿಯಾಲ್ ವಿಶ್ವಾಸ

author img

By

Published : Jul 5, 2022, 12:32 PM IST

Exclusive: BJP's next government in Telangana says former Union Minister Ramesh Pokhriyal 'Nishank'
Exclusive: BJP's next government in Telangana says former Union Minister Ramesh Pokhriyal 'Nishank'

ತೆಲಂಗಾಣದಲ್ಲೂ ಬಿಜೆಪಿ ಸರ್ಕಾರ ನಿಶ್ಚಿತ-ಕೇಂದ್ರದ ಮಾಜಿ ಸಚಿವ ರಮೇಶ್​ ಪೋಖ್ರಿಯಾಲ್​ ಭವಿಷ್ಯ- ಪ್ರತಿಪಕ್ಷಗಳ ಟೀಕೆಗೆ ತಿರುಗೇಟು

ಹೈದರಾಬಾದ್(ತೆಲಂಗಾಣ): ಮುಂದಿನ ಬಾರಿ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿ ರಾಜ್ಯದಲ್ಲಿ ಸರ್ಕಾರ ರಚಿಸಲಿದೆ ಎಂದು ಕೇಂದ್ರದ ಮಾಜಿ ಶಿಕ್ಷಣ ಸಚಿವ ರಮೇಶ ಪೋಖ್ರಿಯಾಲ್ ನಿಶಾಂಕ್ ವಿಶ್ವಾಸ ವ್ಯಕ್ತಪಡಿಸಿದರು.

ತೆಲಂಗಾಣದಲ್ಲಿ ಬಿಜೆಪಿ ಸರ್ಕಾರ ನಿಶ್ಚಿತ.. ಮಾಜಿ ಸಚಿವ ಪೋಖ್ರಿಯಾಲ್ ವಿಶ್ವಾಸ

ಹೈದರಾಬಾದ್​ನ ರಾಮೋಜಿ ಫಿಲ್ಮ್​ ಸಿಟಿಯಲ್ಲಿರುವ 'ಈಟಿವಿ ಭಾರತ' ಮಾಧ್ಯಮ ಕಚೇರಿಗೆ ನೀಡಿದ್ದ ಅವರು ವಿಶೇಷ ಸಂದರ್ಶನದಲ್ಲಿ ಮಾತನಾಡಿದರು. ತೆಲಂಗಾಣ ಸರ್ಕಾರ ಅಭಿವೃದ್ಧಿ ಮಾಡಿರುವುದಾಗಿ ಹೇಳಿಕೊಳ್ಳುತ್ತಿದ್ದರೂ ರಾಜ್ಯ ಸದ್ಯ 3 ಲಕ್ಷ ಕೋಟಿ ರೂಪಾಯಿ ಸಾಲದ ಹೊರೆಯನ್ನು ಹೊಂದಿದೆ ಎಂದರು. ಮಾಜಿ ಸಚಿವ ರಮೇಶ ಪೋಖ್ರಿಯಾಲ್ ನಿಶಾಂಕ್ ಅವರೊಂದಿಗಿನ ಸಂದರ್ಶನದ ಪೂರ್ಣ ಮಾಹಿತಿ ಇಲ್ಲಿದೆ.

ಪ್ರಶ್ನೆ: ತೆಲಂಗಾಣ ರಾಜ್ಯ ಉದಯಿಸಿದಾಗಿನಿಂದಲೂ ಬಿಜೆಪಿ ತೆಲಂಗಾಣದ ಅಭಿವೃದ್ಧಿಯ ಬಗ್ಗೆ ನಿರಂತರವಾಗಿ ಮಾತನಾಡುತ್ತಿದೆ. ಆದರೆ ಇತ್ತೀಚಿನ ಸಭೆಯಲ್ಲಿ ತೆಲಂಗಾಣಕ್ಕೆ ಸಂಬಂಧಿಸಿದಂತೆ ಯಾವ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ?

ಉತ್ತರ: ಅಭಿವೃದ್ಧಿ ಹೊಂದುತ್ತಿರುವ ಎಲ್ಲ ರಾಜ್ಯಗಳ ಸಮಸ್ಯೆಗಳು ಒಂದೇ ರೀತಿಯದಾಗಿವೆ. ಜಾರ್ಖಂಡ್, ಉತ್ತರಾಖಂಡ, ಛತ್ತೀಸ್‌ಗಢ, ತೆಲಂಗಾಣ ಯಾವುದೇ ರಾಜ್ಯವಾದರೂ ಎಲ್ಲೆಡೆಯೂ ಇಂಥಹದ್ದೇ ಪರಿಸ್ಥಿತಿಯಿದೆ. ತೆಲಂಗಾಣ ರಾಜ್ಯದ ಚಳವಳಿಯು ಉದ್ಯೋಗ ಮತ್ತು ಇತರ ಅನೇಕ ವಿಷಯಗಳ ಬಗ್ಗೆಯೂ ನಡೆದಿತ್ತು. ತೆಲಂಗಾಣ ಅಭಿವೃದ್ಧಿಗಾಗಿ ಬಿಜೆಪಿ ನೀಲನಕ್ಷೆಯೊಂದನ್ನು ರೂಪಿಸುತ್ತಿದೆ. ಇದಕ್ಕಾಗಿ ಜನರೊಂದಿಗೆ ಸಂವಾದ ನಡೆಸಿ ಸಭೆ ಮಾಡಿದ್ದೇವೆ. ಇಲ್ಲಿನ ಅರಣ್ಯವಾಸಿಗಳು ಮತ್ತು ಹಿಂದುಳಿದ ಸಮುದಾಯಗಳಿಗೆ ಇಂದಿಗೂ ಅವರ ಹಕ್ಕುಗಳು ಸಿಕ್ಕಿಲ್ಲ, ನಿರುದ್ಯೋಗಿಗಳಿಗೆ ಉದ್ಯೋಗವೂ ಸಿಕ್ಕಿಲ್ಲ. ರಾಜ್ಯದ ಏಳಿಗೆಯ ಗುರಿ ಹೊಂದಿದ ಯಾವುದೇ ಯೋಜನೆ ಇಲ್ಲ. ಈ ರಾಜ್ಯಗಳು ಭಾರತ ಸರ್ಕಾರದ ಎಲ್ಲ ಯೋಜನೆಗಳ ಪ್ರಯೋಜನ ಪಡೆಯಲು ಮುಂದಾಗದೇ ಅಭಿವೃದ್ಧಿಯ ವಿಷಯದಲ್ಲಿ ಹಿಂದುಳಿದಿವೆ ಎಂದು ಹೇಳಿದರು.

ಪ್ರಶ್ನೆ: ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಉದ್ಯೋಗ ಸೃಷ್ಟಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಕಾರ್ಯಕ್ಷಮತೆಯ ಬಗ್ಗೆ ತೆಲಂಗಾಣ ಮುಖ್ಯಮಂತ್ರಿಗಳು ವಿಶೇಷವಾಗಿ ಪ್ರಶ್ನೆ ಮಾಡುತ್ತಿರುತ್ತಾರೆ. ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು?

ಉತ್ತರ: ತೆಲಂಗಾಣ ಮುಖ್ಯಮಂತ್ರಿಗಳು ತಾವು ಆಡಳಿತ ನಡೆಸುತ್ತಿರುವ ರಾಜ್ಯಕ್ಕೂ ಮತ್ತು ಅವರು ಮಾತನಾಡುತ್ತಿರುವ ರಾಜ್ಯಗಳಿಗೂ ಬಹಳ ವ್ಯತ್ಯಾಸವಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ನಿರುದ್ಯೋಗಿಗಳಿಗೆ ಉದ್ಯೋಗ, ಮೂಲಸೌಕರ್ಯ ಅಭಿವೃದ್ಧಿ, ಜನರ ಆರ್ಥಿಕ ಸ್ಥಿತಿ ಸುಧಾರಿಸುವ ಭರವಸೆ ನೀಡಿ ರಾಜ್ಯ ಸ್ಥಾಪನೆ ಆಂದೋಲನ ನಡೆಸಿದ್ದೀರಿ. ಆದರೆ ಇಂದು ತೆಲಂಗಾಣ ₹ 3 ಲಕ್ಷ ಕೋಟಿ ರೂಪಾಯಿಗಳ ಸಾಲಗಾರನಾಗಿದೆ. ಇಲ್ಲಿ ಹುಟ್ಟುವ ಪ್ರತಿ ಮಗುವಿನ ಮೇಲೂ ಸಾಲದ ಹೊರೆ ಇದೆ. ಇಂಥದೊಂದು ಕೆಟ್ಟ ಆಡಳಿತವನ್ನು ಜನ ಬಯಸಿರಲಿಲ್ಲ ಎಂದರು.

ಪ್ರಶ್ನೆ: ಪ್ರತಿಪಕ್ಷಗಳ ಆಡಳಿತವಿರುವ ರಾಜ್ಯಗಳು ಕೇಂದ್ರ ಸರ್ಕಾರದ ನೀತಿಗಳ ಬಗ್ಗೆ ಪದೇ ಪದೇ ಪ್ರಶ್ನೆ ಎತ್ತುತ್ತವೆ. ಅಗ್ನಿಪಥ ಯೋಜನೆಯಾಗಲಿ ಅಥವಾ ಹೊಸ ಶಿಕ್ಷಣ ನೀತಿಯಾಗಲಿ, ಇವು ಯಾವುದೂ ರಾಜ್ಯಗಳ ಪರವಾಗಿಲ್ಲ ಎನ್ನುತ್ತವೆಯಲ್ಲ?

ಉತ್ತರ: ಇಂಥ ಪ್ರಶ್ನೆಗಳನ್ನು ಎತ್ತುವವರು ಮೊದಲಿಗೆ ಸರಿಯಾದ ಮಾಹಿತಿಯನ್ನು ಹೊಂದಿರಬೇಕು ಮತ್ತು ವಿಷಯವನ್ನು ಸರಿಯಾಗಿ ಅಧ್ಯಯನ ಮಾಡಬೇಕು. ಅಗ್ನಿಪಥ ಯೋಜನೆಯು ದೇಶದ ಯುವಜನರ ಮನಸ್ಸಿನಲ್ಲಿ ದೇಶಭಕ್ತಿಯ ಮನೋಭಾವವನ್ನು ತುಂಬುವ ಪ್ರಯತ್ನವಾಗಿದೆ. ಅಗ್ನಿಪಥ ಯೋಜನೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿರುವ ಪ್ರತಿಪಕ್ಷದ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ತಮ್ಮ ರಾಜ್ಯದಲ್ಲಿರುವ ನಿರುದ್ಯೋಗಿಗಳ ಸಹಾಯಕ್ಕೆ ಏನು ಮಾಡಿದ್ದಾರೆ ಎಂದು ನಾನು ಕೇಳುತ್ತೇನೆ.

ಪ್ರಶ್ನೆ: ಅಗ್ನಿವೀರ್ ಯೋಜನೆಯ ನಾಲ್ಕು ವರ್ಷಗಳ ನಂತರ ಯುವಕರ ಗತಿಯೇನು ಎಂದು ಪ್ರತಿಪಕ್ಷದ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಕೇಳುತ್ತಿದ್ದಾರೆ. ಸೈನ್ಯದಿಂದ ನಿವೃತ್ತರಾದ ನಂತರ ಅಗ್ನಿವೀರರು ಏನು ಮಾಡುತ್ತಾರೆ ಎಂಬುದು ಅವರ ಪ್ರಶ್ನೆಯಾಗಿದೆ.

ಉತ್ತರ: ಅಗ್ನಿವೀರ್ ಯೋಜನೆಯು ನಾಲ್ಕು ವರ್ಷಗಳಲ್ಲಿ ಯುವಕರಲ್ಲಿ ದೇಶಪ್ರೇಮವನ್ನು ಮೂಡಿಸುತ್ತದೆ. ಅವರು ತಮ್ಮ ಜೀವನದಲ್ಲಿ ರಾಷ್ಟ್ರವನ್ನು ಪ್ರಮುಖವಾಗಿ ಪರಿಗಣಿಸಲಾರಂಭಿಸುತ್ತಾರೆ. ವಿಶ್ವದ ಯಾವುದೇ ರಾಷ್ಟ್ರವು ಉನ್ನತ ಸ್ಥಾನಕ್ಕೆ ಏರಬೇಕು ಎಂದಾದಲ್ಲಿ ಮೊದಲಿಗೆ ಆ ರಾಷ್ಟ್ರದ ಯುವಕರಲ್ಲಿ ದೇಶಪ್ರೇಮವನ್ನು ಬೇರೂರಿಸಬೇಕಾಗುತ್ತದೆ. ಸೈನ್ಯದಿಂದ ನಿವೃತ್ತರಾದ ನಂತರ ಅಗ್ನಿವೀರರು ಹಲವಾರು ಉದ್ಯೋಗ ಆಯ್ಕೆಗಳನ್ನು ಹೊಂದಿರುತ್ತಾರೆ. ಅವರು ಯಾವುದೇ ಕ್ಷೇತ್ರವನ್ನು ಆಯ್ಕೆ ಮಾಡಬಹುದು. ಅಲ್ಲದೇ ಬಹುತೇಕ ಎಲ್ಲ ಕ್ಷೇತ್ರಗಳಲ್ಲೂ ಅವರಿಗೆ ಆದ್ಯತೆ ಸಿಗಲಿದೆ. ಇದನ್ನು ಪ್ರತಿಪಕ್ಷಗಳು ಅರ್ಥ ಮಾಡಿಕೊಳ್ಳಬೇಕು. ನೀವು ನಮಗಾಗಿ ಏನು ಮಾಡಿರುವಿರಿ ಎಂದು ಸ್ವಲ್ಪ ಸಮಯದ ನಂತರ ಅಗ್ನಿವೀರರೇ ರಾಜ್ಯ ಸರ್ಕಾರಗಳಿಗೆ ಪ್ರಶ್ನೆ ಕೇಳಲಾರಂಭಿಸುತ್ತಾರೆ ನೋಡ್ತಾ ಇರಿ.

ಪ್ರಶ್ನೆ: ಒಂದು ವರ್ಷ ಕಾಲ ರೈತರು ಬೀದಿಗಿಳಿದು ಹೋರಾಟ ಮಾಡಿದ ನಂತರ ವಿವಾದಿತ ಕೃಷಿ ಕಾನೂನುಗಳನ್ನು ಕೇಂದ್ರ ಸರ್ಕಾರ ಹಿಂಪಡೆಯಿತು. ನಾಲ್ಕು ವರ್ಷಗಳ ನಂತರ ಸೈನ್ಯ ಸೇರಿದ ಯುವಕರ ಪಾಡು ಹೀಗೇ ಆಗಲಿದೆ. ಬಿಜೆಪಿ ಸರ್ಕಾರದ ನೀತಿಯೇ ಹೀಗಾ ಎಂದು ಪ್ರತಿಪಕ್ಷಗಳ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಕೇಳುತ್ತಿದ್ದಾರಲ್ಲ?

ಉತ್ತರ: ಅವರು ಹೇಳಿದಂತೆ ರೈತ ಒಂದು ವರ್ಷ ರಸ್ತೆಯಲ್ಲಿ ಕುಳಿತಿರಲಿಲ್ಲ, ಬದಲಾಗಿ ಆತ ತನ್ನ ಜಮೀನಿನಲ್ಲಿ ಕಷ್ಟಪಟ್ಟು ಕೆಲಸ ಮಾಡಿದ್ದ. ಅದರಿಂದಾಗಿಯೇ ಆತ ಸಮೃದ್ಧ ಬೆಳೆಯನ್ನೂ ಪಡೆದಿದ್ದಾನೆ. ದೇಶದಲ್ಲಿ ಕೃಷಿ ಉತ್ಪಾದನೆ ಹೆಚ್ಚಾಗಿದ್ದು, ರೈತರ ಆರ್ಥಿಕ ಸ್ಥಿತಿ ಸುಧಾರಿಸಿದೆ. ಪ್ರಶ್ನೆ ಎತ್ತುವವರು ರೈತರ ಸ್ನೇಹಿತರಲ್ಲ. ಎಲ್ಲದಕ್ಕೂ ಪ್ರಶ್ನೆ ಮಾಡುವವರು ಅವರದೇ ಆದ ಉದ್ದೇಶ ಹೊಂದಿದ್ದಾರೆ. ರೈತರ ಸಬಲೀಕರಣ ಪ್ರಧಾನಿ ಮೋದಿಯವರ ಗುರಿಯಾಗಿತ್ತು. ರೈತರ ಸಬಲೀಕರಣಕ್ಕಾಗಿ ಕೃಷಿ ಕಾನೂನುಗಳನ್ನು ಜಾರಿಗೆ ತರಲಾಗಿತ್ತು. ಇಂದು ಪ್ರಧಾನಿ ಮೋದಿಯವರ ಕಾರ್ಯಗಳಿಂದ ದೇಶ ಪ್ರಗತಿಯಲ್ಲಿದೆ. ದೇಶದ ಬಹುದೊಡ್ಡ ಭಾಗದಲ್ಲಿ ಪ್ರತಿಪಕ್ಷಗಳು ಮಸುಕಾಗಿವೆ. ಪ್ರತಿಪಕ್ಷಗಳಿಗೆ ರೈತರ ಬಗ್ಗೆಯಾಗಲಿ, ಯುವಕರ ಬಗ್ಗೆಯಾಗಲಿ ಕಾಳಜಿ ಇಲ್ಲ. ವಿರೋಧಿಸುಕ್ಕಾಗಿ ಮಾತ್ರ ಪ್ರತಿಭಟನೆ ಮಾಡುತ್ತಾರೆ. ಏನೇ ಇದ್ದರೂ ನಿಮ್ಮ ಸಲಹೆ ನೀಡಿ, ನಾವು ಪರಿಗಣಿಸುತ್ತೇವೆ.

ಪ್ರಶ್ನೆ: ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಅಧಿಕಾರ ಬದಲಾವಣೆ ಮತ್ತು ಆಪರೇಷನ್ ಕಮಲದ ಬಗ್ಗೆ ಪ್ರಶ್ನೆಗಳು ಎದ್ದಿವೆ. ನಿಮ್ಮ ಪ್ರತಿಕ್ರಿಯೆ?

ಉತ್ತರ: ಯಾವುದೇ ಪಕ್ಷ ತನ್ನನ್ನು ತಾನು ನಿರಂತರವಾಗಿ ವಿಸ್ತರಿಸಿಕೊಳ್ಳಲು ಬಯಸುತ್ತದೆ. ಅದರಂತೆ ಬಿಜೆಪಿ ಕೂಡ ದಿನದಿಂದ ದಿನಕ್ಕೆ ವಿಸ್ತಾರವಾಗುತ್ತಿದೆ. ಒಂದು ಕಾಲದಲ್ಲಿ ಬಿಜೆಪಿಗೆ ಇಬ್ಬರೇ ಸಂಸದರಿದ್ದರು. ಇಂದು ಇಡೀ ದೇಶ ಬಿಜೆಪಿಯನ್ನು ಬೆಂಬಲಿಸುತ್ತಿದೆ. ಜನರು ನಮ್ಮ ಕಾರ್ಯಸೂಚಿಯನ್ನು ಬೆಂಬಲಿಸಲು ಬಯಸುತ್ತಾರೆ. ಮುಂದಿನ ಬಾರಿ ತೆಲಂಗಾಣದಲ್ಲಿ ಬಿಜೆಪಿಯು ಸರ್ಕಾರ ಸ್ಥಾಪಿಸಲಿದೆ.

ಪ್ರಶ್ನೆ: ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆಯೂ ಹಲವೆಡೆ ಅಪಸ್ವರಗಳು ಕೇಳಿಬಂದಿವೆ. ನೀವು ಈ ಸಮಸ್ಯೆಯನ್ನು ಹೇಗೆ ನೋಡುತ್ತೀರಿ?

ಉತ್ತರ: ನಾನು ಶಿಕ್ಷಣ ಸಚಿವನಾಗಿದ್ದ ಅವಧಿಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಯಾರೂ ಪ್ರಶ್ನೆ ಎತ್ತಿರಲಿಲ್ಲ. ಆಗ ಏನೇ ಪ್ರಶ್ನೆ ಬಂದಿದ್ದರೂ ನಾನು ಸೂಕ್ತವಾಗಿ ಎಲ್ಲದಕ್ಕೂ ಉತ್ತರಿಸಿದ್ದೆ. ಅದರ ನಂತರ ಸಮಸ್ಯೆಗಳು ಪರಿಹಾರವಾದವು. ವಿಶ್ವದ ಪ್ರಮುಖ ವಿಶ್ವವಿದ್ಯಾನಿಲಯಗಳಾದ ಹಾರ್ವರ್ಡ್ ವಿವಿ, ಕೇಂಬ್ರಿಡ್ಜ್ ವಿವಿ ಅಥವಾ ಆಕ್ಸ್‌ಫರ್ಡ್ ವಿವಿ ಹೀಗೆ ಪ್ರತಿಷ್ಠಿತ ವಿವಿಗಳು ಭಾರತದ ಹೊಸ ಶಿಕ್ಷಣ ನೀತಿಯು ಇಡೀ ಜಗತ್ತಿಗೆ ಗೇಮ್ ಚೇಂಜರ್ ಆಗಿ ಕೆಲಸ ಮಾಡಲಿದೆ ಎಂದು ಶ್ಲಾಘಿಸಿವೆ. ನಮ್ಮ ಹೊಸ ಶಿಕ್ಷಣ ನೀತಿಯು ಸುವರ್ಣ ಭಾರತಕ್ಕೆ ಆಧಾರವಾಗಲಿದೆ. ಹೊಸ ಶಿಕ್ಷಣ ನೀತಿಯು ಮಾತೃಭೂಮಿಯಲ್ಲಿ ಪ್ರಾರಂಭವಾಗುತ್ತದೆ. ಇದು ಜೀವನ ಮೌಲ್ಯಗಳ ಅಡಿಪಾಯದ ಮೇಲೆ ನಿಂತಿದೆ ಮತ್ತು ಇದು ನಮ್ಮ ದೇಶದಿಂದ ಜಗತ್ತಿಗೆ ಹರಡುತ್ತದೆ. ಇದು ಜ್ಞಾನ, ವಿಜ್ಞಾನ, ಸಂಶೋಧನೆ ಮತ್ತು ತಂತ್ರಜ್ಞಾನದ ವಿಷಯದಲ್ಲಿ ವಿಶೇಷ ಸ್ಥಾನ ಪಡೆಯಲಿದೆ. ಮತ್ತೊಮ್ಮೆ ಭಾರತ ವಿಶ್ವಗುರುವಾಗಿ ಎದ್ದು ನಿಲ್ಲಲಿದೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ದೇಶದಲ್ಲಿ ಯಾರೂ ವಿರೋಧಿಸಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.