ETV Bharat / bharat

ಅಯೋಧ್ಯೆಯಲ್ಲಿ ದೀಪೋತ್ಸವ : 24 ಲಕ್ಷ ದೀಪಗಳಿಂದ ಗಿನ್ನೆಸ್​ ದಾಖಲೆಗೆ ಸಜ್ಜು, ಜಾರ್ಖಂಡ್​ನ ಆದಿವಾಸಿಗಳು ಭಾಗಿ

author img

By ETV Bharat Karnataka Team

Published : Nov 11, 2023, 11:26 AM IST

ayodhya-is-all-set-to-hold-a-grand-deeptosav-on-the-eve-of-diwali-24-lakh-diyas-at-51-ghats-set-to-illuminate-the-city
ಅಯೋಧ್ಯೆಯಲ್ಲಿ ದೀಪೋತ್ಸವ : 24 ಲಕ್ಷ ದೀಪಗಳಿಂದ ಗಿನ್ನೆಸ್​ ದಾಖಲೆಗೆ ಸಜ್ಜು.. ಜಾರ್ಖಂಡ್​ನ ಆದಿವಾಸಿಗಳು ಭಾಗಿ

ಅಯೋಧ್ಯೆಯಲ್ಲಿ ದೀಪೋತ್ಸವಕ್ಕೆ ಭರ್ಜರಿ ಸಿದ್ಧತೆ ನಡೆಸಲಾಗಿದೆ. ಐತಿಹಾಸಿಕ ದೀಪೋತ್ಸವಕ್ಕೆ ಅಯೋಧ್ಯಾನಗರಿ ಸಾಕ್ಷಿಯಾಗಲಿದೆ.

ಅಯೋಧ್ಯಾ (ಉತ್ತರಪ್ರದೇಶ) : ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. 2024ರ ಜನವರಿಯಲ್ಲಿ ಮರ್ಯಾದಾ ಪುರುಷೋತ್ತಮ ಶ್ರೀರಾಮನ ಪ್ರಾಣ ಪ್ರತಿಷ್ಠೆ ನಡೆಯಲಿದೆ. ಈ ಐತಿಹಾಸಿಕ ಕ್ಷಣಕ್ಕಾಗಿ ಇಡೀ ಭಾರತವೇ ಕಾತರದಿಂದ ಕಾಯುತ್ತಿದೆ. ಮುಂದಿನ ವರ್ಷ ಜನವರಿ 22ರಂದು ಅಯೋಧ್ಯೆಯಲ್ಲಿ ರಾಮಲಲ್ಲಾನ ಮಂದಿರ ಲೋಕಾರ್ಪಣೆಗೊಳ್ಳಲಿದೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​, ಆರ್.​ಎಸ್.​ಎಸ್​ ಸರಸಂಘಚಾಲಕ್​ ಮೋಹನ್​ ಭಾಗವತ್​ ಸೇರಿದಂತೆ ಗಣ್ಯಾತಿಗಣ್ಯರು ಭಾಗವಹಿಸಲಿದ್ದಾರೆ.

ದೀಪೋತ್ಸವಕ್ಕೆ ಶೋಭಾಯಾತ್ರೆಗೆ ಚಾಲನೆ : ಇದಕ್ಕೂ ಮುನ್ನ ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಅಯೋಧ್ಯೆ ಸಜ್ಜಾಗಿದೆ. ದೀಪಾವಳಿ ಹಿನ್ನೆಲೆ ಅಯೋಧ್ಯೆಯಲ್ಲಿನ 51 ಘಾಟ್​ಗಳಲ್ಲಿ 24 ಲಕ್ಷಕ್ಕೂ ಅಧಿಕ ದೀಪಗಳನ್ನು ಬೆಳಗಲು ಸಿದ್ಧತೆ ನಡೆಸಲಾಗಿದೆ. ದೀಪೋತ್ಸವ ಸಂಬಂಧ ರಾಮ ಜನ್ಮಭೂಮಿ ಪಥವನ್ನು ಹೂವುಗಳಿಂದ ಅಲಂಕಾರಗೊಳಿಸಲಾಗಿದೆ. ಇಲ್ಲಿನ ಬೀದಿಗಳು ರಂಗೋಲಿಗಳಿಂದ ಕಂಗೊಳಿಸುತ್ತಿವೆ. ಸುಮಾರು 24 ಲಕ್ಷಕ್ಕೂ ಅಧಿಕ ಮಣ್ಣಿನ ದೀಪಗಳಿಂದ ದೀಪೋತ್ಸವ ಆಚರಿಸಲಾಗುತ್ತಿದ್ದು, ಈ ಮೂಲಕ ಗಿನ್ನೆಸ್​ ದಾಖಲೆ ಬರೆಯಲು ಮುಂದಾಗಿದೆ. ದೀಪೋತ್ಸವದ ಶೋಭಾಯಾತ್ರೆ ಆರಂಭಗೊಂಡಿದ್ದು, ಈ ವೇಳೆ ಮಹಿಳೆಯರು ಸಾಂಪ್ರದಾಯಿಕ ಉಡುಪು ತೊಟ್ಟು ನೃತ್ಯ ಮಾಡಿದರು. ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು ಭಾಗಿಯಾಗಿವೆ.

ಜಾರ್ಖಂಡ್​ನ ಬುಡಕಟ್ಟು ಜನಾಂಗದವರು ಭಾಗಿ : ಅಯೋಧ್ಯೆಯಲ್ಲಿ ನಡೆಯಲಿರುವ ದೀಪೋತ್ಸವಕ್ಕೆ ದೇಶ ವಿದೇಶಗಳಿಂದ ಲಕ್ಷಾಂತರ ಜನರು ಆಗಮಿಸುತ್ತಾರೆ. ಇಲ್ಲಿನ ದೀಪೋತ್ಸವದಲ್ಲಿ ಭಾಗಿಯಾಗಿ ಧನ್ಯರಾಗುತ್ತಾರೆ. ಜಾರ್ಖಂಡ್​ನ ಪಕೂರ್​ ಜಿಲ್ಲೆಯ ಬುಡಕಟ್ಟು ಜನಾಂಗದವರು ಅದ್ಧೂರಿ ದೀಪೋತ್ಸವದಲ್ಲಿ ಭಾಗವಹಿಸಲಿದ್ದಾರೆ. ಒಟ್ಟು 48 ಮಂದಿ ಬುಡಕಟ್ಟು ಜನಾಂಗದವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು, ಶನಿವಾರ ಅಯೋಧ್ಯೆಗೆ ಬಂದಿಳಿದಿದ್ದಾರೆ.

ಈ ಬುಡಕಟ್ಟು ಜನಾಂಗದವರು ಜಾರ್ಖಂಡ್​ನ ಗುಡ್ಡಗಾಡುಗಳಲ್ಲಿ ವಾಸ ಮಾಡುತ್ತಾರೆ. ದೀಪೋತ್ಸವ ಆಚರಿಸಲು ಬರಿಗಾಲಿನಲ್ಲಿ ಅಯೋಧ್ಯೆಗೆ ಆಗಮಿಸಿದ್ದಾರೆ. ಜಾರ್ಖಂಡ್​​ ಪ್ರದೇಶ್ ಶ್ರೀರಾಮ ಜಾನಕಿ ಚಾರಿಟೇಬಲ್ ಟ್ರಸ್ಟ್​ ಬುಡಕಟ್ಟು ಜನಾಂಗದವರನ್ನು ದೀಪೋತ್ಸವದಲ್ಲಿ ಕರೆತಂದಿದೆ. ನಾಳೆ ಬುಡಕಟ್ಟು ಜನರು ಸಿಎಂ ಯೋಗಿ ಆದಿತ್ಯನಾಥ್​ ಜೊತೆಯಲ್ಲಿ ದೀಪೋತ್ಸವದಲ್ಲಿ ಭಾಗವಹಿಸಲಿದ್ದಾರೆ. ಈ ವೇಳೆ ಬುಡಕಟ್ಟು ಜನಾಂಗದವರು ಅವರ ಸಾಂಪ್ರದಾಯಿಕ ಉಡುಪನ್ನು ಧರಿಸಲಿದ್ದಾರೆ. ಅಯೋಧ್ಯೆಯಲ್ಲಿ ಪ್ರತಿ ವರ್ಷ ದೀಪೋತ್ಸವ ಆಚರಣೆ ಸಂದರ್ಭ ಬುಡಕಟ್ಟು ಜನರಿಗೆ ವಿಶೇಷ ಆಹ್ವಾನ ನೀಡಲಾಗುತ್ತದೆ. ಈ ಹಿಂದೆ ಸಂತಾಲಿ ಸಮುದಾಯವು ಅಯೋಧ್ಯೆಯಲ್ಲಿ ನಡೆದ ದೀಪೋತ್ಸವದಲ್ಲಿ ಭಾಗಿಯಾಗಿತ್ತು.

ಮದುಮಗಳಂತೆ ಸಿಂಗಾರಗೊಂಡ ಆಯೋಧ್ಯೆ : ದೀಪೋತ್ಸವ ಹಿನ್ನೆಲೆ ಅಯೋಧ್ಯಾನಗರಿ ಮಧುಮಗಳಂತೆ ಸಿಂಗಾರಗೊಂಡಿದೆ. ಸಾವಿರಾರು ಭಕ್ತರು ದೀಪೋತ್ಸವಕ್ಕೆ ಕಾತರದಿಂದ ಕಾಯುತ್ತಿದ್ದಾರೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಮುಂದುವರೆದಿದ್ದು, ಸಾಕಷ್ಟು ಕೆಲಸ ಈಗಾಗಲೇ ಪೂರ್ಣಗೊಂಡಿದೆ. ರಾಮಮಂದಿರ ನಿರ್ಮಾಣ ಕಾರ್ಯದ ವಿಡಿಯೋವೊಂದನ್ನು ರಾಮಜನ್ಮಭೂಮಿ ಟ್ರಸ್ಟ್​ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು.

ಇದನ್ನೂ ಓದಿ : ಅಯೋಧ್ಯೆ ರಾಮಮಂದಿರ ನಿರ್ಮಾಣ ಕಾರ್ಯದ ವಿಡಿಯೋ ಬಿಡುಗಡೆ.. ಜನವರಿಯಲ್ಲಿ ಪ್ರಾಣ ಪ್ರತಿಷ್ಠಾಪನೆ, ಪ್ರಧಾನಿ ಮೋದಿಗೆ ಆಹ್ವಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.