ETV Bharat / bharat

ಹನುಮಾನ್​ ಚಾಲೀಸಾ ಪಠಿಸುವ ಸವಾಲು ಕೇಸ್​: ರಾಣಾ ದಂಪತಿಯ ಖುಲಾಸೆ ಕೋರಿ ಕೋರ್ಟ್​ಗೆ ಅರ್ಜಿ

author img

By

Published : Jan 10, 2023, 5:36 PM IST

application-of-rana-couple-in-bombay-sessions-court-for-acquittal-in-hanuman-chalisa-case
ಹನುಮಾನ್​ ಚಾಲೀಸಾ ಪಠಿಸುವ ಸವಾಲು ಕೇಸ್​: ರಾಣಾ ದಂಪತಿಯ ಖುಲಾಸೆ ಕೋರಿ ಕೋರ್ಟ್​ಗೆ ಅರ್ಜಿ

ಹನುಮಾನ್​ ಚಾಲೀಸಾ ಪಠಿಸುವ ಸವಾಲು ಪ್ರಕರಣದಲ್ಲಿ ತಮ್ಮನ್ನು ಖುಲಾಸೆ ಮಾಡುವಂತೆ ಕೋರಿ ಸಂಸದೆ ನವನೀತ್ ರಾಣಾ ಮತ್ತು ಶಾಸಕ ರವಿ ರಾಣಾ ದಂಪತಿ ತಮ್ಮ ವಕೀಲರ ಮೂಲಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಮುಂಬೈ (ಮಹಾರಾಷ್ಟ್ರ): ಮಹಾರಾಷ್ಟ್ರ ರಾಜ್ಯ ರಾಜಕಾರಣದಲ್ಲಿ ಭಾರೀ ಕೋಲಾಹಲ ಸೃಷ್ಟಿಸಿದ್ದ ಶಿವಸೇನೆ ಪಕ್ಷದ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಅವರ ನಿವಾಸ 'ಮಾತೋಶ್ರೀ' ಹೊರಡಗೆ ಹನುಮಾನ್​ ಚಾಲೀಸಾ ಪಠಿಸುವ ಸವಾಲು ಪ್ರಕರಣಕ್ಕೆ ಹೊಸ ತಿರುವ ಸಿಕ್ಕಿದೆ. ಈ ಪ್ರಕರಣದ ಆರೋಪಿಗಳಾದ ಸಂಸದೆ ನವನೀತ್ ರಾಣಾ ಮತ್ತು ಶಾಸಕ ರವಿ ರಾಣಾ ದಂಪತಿ ಅವರನ್ನು ಖುಲಾಸೆಗೊಳಿಸುವಂತೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ.

ಬಾಂಬೆ ಸೆಷನ್ಸ್ ನ್ಯಾಯಾಲಯದ ವಿಶೇಷ ಪಿಎಂಎಲ್‌ಎ ನ್ಯಾಯಾಲಯದಲ್ಲಿ ರಾಣಾ ದಂಪತಿ ಪರ ವಕೀಲ ರಿಜ್ವಾನ್ ಮರ್ಚೆಂಟ್ ಇಂದು ದೋಷಮುಕ್ತ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯಲ್ಲಿ ಎಫ್‌ಐಆರ್ ದಾಖಲಾಗದೇ ಇರುವಾಗ ಪೊಲೀಸರು ರಾಣಾ ದಂಪತಿಯನ್ನು ಸೆಕ್ಷನ್ 353 ಅಡಿ ಹೇಗೆ ಬಂಧಿಸುತ್ತಾರೆ?. ಈ ತಾಂತ್ರಿಕ ತಪ್ಪು ಪೊಲೀಸರ ನಿರ್ಲಕ್ಷ್ಯವೋ, ಇದು ಉದ್ದೇಶಪೂರ್ವಕವಾಗಿ ಮಾಡಿದ ತಪ್ಪೋ ಎಂಬ ಪ್ರಶ್ನೆಯನ್ನು ಎತ್ತಲಾಗಿದೆ. ಈ ಅರ್ಜಿಗೆ ಉತ್ತರ ನೀಡುವಂತೆ ಪಬ್ಲಿಕ್ ಪ್ರಾಸಿಕ್ಯೂಟರ್‌ಗೆ ನ್ಯಾಯಾಲಯ ಸೂಚಿಸಿದ್ದು, ಪ್ರಕರಣದ ಮುಂದಿನ ವಿಚಾರಣೆ ಫೆಬ್ರವರಿ 2ರಂದು ನಡೆಯಲಿದೆ.

ಪ್ರಕರಣದ ಹಿನ್ನೆಲೆ: ಕಳೆದ ವರ್ಷ ಮಹಾರಾಷ್ಟ್ರದಲ್ಲಿ ಧ್ವನಿವರ್ಧಕಗಳ ವಿಚಾರವಾಗಿ ರಾಜಕೀಯ ತಿಕ್ಕಾಟ ನಡೆದಿತ್ತು. ಇದೇ ವಿಚಾರವಾಗಿ ಅಂದಿನ ಮಹಾ ವಿಕಾಸ್ ಆಘಾಡಿ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ, ಶಿವಸೇನೆ ಪಕ್ಷದ ಅಧ್ಯಕ್ಷ ಉದ್ಧವ್​ ಠಾಕ್ರೆ ನಿವಾಸ 'ಮಾತೋಶ್ರೀ' ಮುಂದೆ ಅಮರಾವತಿಯ ಪಕ್ಷೇತರ ಸಂಸದೆಯಾದ ನಟಿ ನವನೀತ್​ ರಾಣಾ ಮತ್ತು ಪತಿ, ಶಾಸಕ ರವಿ ರಾಣಾ ಚಾಲೀಸಾ ಪಠಿಸುವ ಸವಾಲು ಹಾಕಿದ್ದರು. ಅಂತೆಯೇ, ಏಪ್ರಿಲ್​ 23ರಂದು 'ಮಾತೋಶ್ರೀ' ಬಳಿ ರಾಣಾ ದಂಪತಿ ಬಂದಿದ್ದರು. ಈ ವೇಳೆ, ದೊಡ್ಡ ಮಟ್ಟದ ಕೋಲಾಹಲ ಸೃಷ್ಟಿಯಾಗಿತ್ತು.

ನಂತರ ದೇಶದ್ರೋಹ ಮತ್ತು ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಆರೋಪ ಪ್ರಕರಣದಲ್ಲಿ ಸಂಸದೆ ನವನೀತ್ ರಾಣಾ ಮತ್ತು ಶಾಸಕ ರವಿ ರಾಣಾ ವಿರುದ್ಧ ಇಲ್ಲಿಮ ಖಾರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಇಬ್ಬರನ್ನೂ ಬಂಧಿಸಿದ್ದರು. ಇದಾದ ನಂತರ 14 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದ ರಾಣಾ ದಂಪತಿಯು ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು. ಜೈಲಿನಿಂದ ಬಿಡುಗಡೆಯಾದ ನವನೀತ್​ ರಾಣಾ ಆಸ್ಪತ್ರೆಗೆ ಸೇರಿದ್ದರು. ಅಲ್ಲಿಂದ ತಮ್ಮ ಬಂಧನ ಸಂದರ್ಭದಲ್ಲಿ ಪೊಲೀಸರು ತಮ್ಮೊಂದಿಗೆ ಕೆಟ್ಟಾಗಿ ನಡೆದುಕೊಂಡಿದ್ದಾರೆ ಎಂದು ಲೋಕಸಭಾ ಸ್ಪೀಕರ್​ ಓಂಬಿರ್ಲಾ ಅವರಿಗೆ ದೂರು ಸಂಸದೆ ನವನೀತ್ ರಾಣಾ ಸಹ ನೀಡಿದ್ದರು.

ಇದನ್ನೂ ಓದಿ: ಅಮರಾವತಿಗೆ ಬಂದ ರಾಣಾ ದಂಪತಿಗೆ ಹಾಲಿನ ಅಭಿಷೇಕ.. ಸಂಸದೆ-ಶಾಸಕನ ವಿರುದ್ಧ ಮತ್ತೊಂದು ಎಫ್​ಐಆರ್​​

ಸಂಸದೆಯ ದೂರಿನ ಮೇರೆಗೆ ವಿಶೇಷ ಹಕ್ಕುಗಳ ಸಂಸದೀಯ ಸಮಿತಿ ವಿಚಾರಣೆ ನಡೆಸಿತ್ತು. ಈ ಸಮಿತಿಯ ಮುಂದೆ ಹಾಜರಾಗಿದ್ದ ಪೊಲೀಸರು ತಮ್ಮೊಂದಿಗೆ ತೋರಿದ್ದ ವರ್ತನೆಯನ್ನು 'ದುಷ್ಕೃತ್ಯ' ಎಂದು ನವನೀತ್​ ರಾಣಾ ಆರೋಪಿಸಿದ್ದರು. ಇನ್ನು, ಹನುಮಾನ್​ ಚಾಲೀಸಾ ಪಠಿಸುವ ಸವಾಲು ಗಲಾಟೆಯ ಪ್ರಕರಣದಿಂದಾಗಿ ರಾಣಾ ದಂಪತಿ ಸುಮಾರು 36 ದಿನಗಳ ಕಾಲ ತಮ್ಮ ಸ್ವಕ್ಷೇತ್ರದಿಂದ ದೂರು ಉಳಿಯುವಂತೆ ಆಗಿತ್ತು. ನಂತರ ತಮ್ಮ ಕ್ಷೇತ್ರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಸಂಸದೆ ನವನೀತ್​ ಮತ್ತು ಶಾಸಕ ರವಿ ದಂಪತಿಗೆ ಅವರ ಅಭಿಮಾನಿಗಳು ಹಾಲಿನ ಅಭಿಷೇಕ ಮಾಡಿ ಸ್ವಾಗತಿಸಿದ್ದರು. ಇದೇ ಪ್ರಕರಣದಲ್ಲಿ ಬಿಡುಗಡೆಗೊಂಡ ಮೇಲೂ ರಾಣಾ ದಂಪತಿ ನ್ಯಾಯಾಲಯ ವಿಚಾರಣೆಗೂ ಹಾಜರಾಗಿದ್ದರು.

ಇದೀಗ ಈ ಪ್ರಕರಣದಿಂದ ಸಂಸದೆ ನವನೀತ್​ ಮತ್ತು ಶಾಸಕ ರವಿ ದಂಪತಿಯನ್ನು ಖುಲಾಸೆಗೊಳಿಸುವಂತೆ ವಕೀಲ ರಿಜ್ವಾನ್ ಮರ್ಚೆಂಟ್ ವಿಶೇಷ ಪಿಎಂಎಲ್‌ಎ ನ್ಯಾಯಾಲಯದ ನ್ಯಾಯಾಧೀಶ ರಾಹುಲ್ ರೋಕ್ಡೆ ಅವರ ಮುಂದೆ ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೇ, ಈ ಅರ್ಜಿಗೆ ಪ್ರತಿಕ್ರಿಯೆ ನೀಡುವಂತೆ ಸರ್ಕಾರಿ ವಕೀಲರಿಗೆ ನ್ಯಾಯಾಲಯ ಸೂಚಿಸಿದ್ದರಿಂದ ಪ್ರಕರಣ ಮತ್ತೆ ಚರ್ಚೆಯ ಮುನ್ನಲೆಗೆ ಬಂದಿದೆ.

ಇದನ್ನೂ ಓದಿ: ಹನುಮಾನ್​ ಚಾಲೀಸಾ ಪಠಿಸುವ ಸವಾಲು : ಗಂಡ-ಹೆಂಡ್ತಿಯನ್ನು ಬೇರೆ ಬೇರೆ ಜೈಲಿಗೆ ರವಾನಿಸಿದ ಮುಂಬೈ ಪೊಲೀಸರು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.