ETV Bharat / bharat

ಅಮರಾವತಿಗೆ ಬಂದ ರಾಣಾ ದಂಪತಿಗೆ ಹಾಲಿನ ಅಭಿಷೇಕ.. ಸಂಸದೆ-ಶಾಸಕನ ವಿರುದ್ಧ ಮತ್ತೊಂದು ಎಫ್​ಐಆರ್​​

author img

By

Published : May 29, 2022, 5:55 PM IST

Updated : May 29, 2022, 6:14 PM IST

Milk coronation Of Rana couple in Amravati
ಅಮರಾವತಿಯಲ್ಲಿ ರಾಣಾ ದಂಪತಿಗೆ ಹಾಲಿನ ಅಭಿಷೇಕ

36 ದಿನಗಳ ಬಳಿಕ ಸಂಸದೆ ನವನೀತ್ ಕೌರ್​ ರಾಣಾ ಮತ್ತು ಶಾಸಕ ರವಿ ರಾಣಾ ದಂಪತಿ ತಮ್ಮ ಸ್ವಕ್ಷೇತ್ರ ಅಮರಾವತಿಗೆ ಬಂದಿದ್ದು, ಅಭಿಮಾನಿಗಳು ಮತ್ತು ಬೆಂಬಲಿಗರು ವಿನೂತವಾಗಿ ಸ್ವಾಗತ ಕೋರಿದ್ದಾರೆ. ಅನುಮತಿ ಇಲ್ಲದೆ, ರ‍್ಯಾಲಿ ನಡೆಸಿರುವ ಆರೋಪದಡಿ ಈ ದಂಪತಿ ವಿರುದ್ಧ ಮತ್ತೊಂದು ಕೇಸ್​ ದಾಖಲಾಗಿದೆ.

ಅಮರಾವತಿ (ಮಹಾರಾಷ್ಟ್ರ): ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮನೆ ಮುಂದೆ ಹನುಮಾನ್ ಚಾಲೀಸ ಪಠಿಸುವ ಸವಾಲು ಹಾಕಿ ಜೈಲು ಸೇರಿದ್ದ ಸಂಸದೆ ನವನೀತ್ ಕೌರ್​ ರಾಣಾ ಮತ್ತು ಶಾಸಕ ರವಿ ರಾಣಾ ದಂಪತಿ 36 ದಿನಗಳ ಬಳಿಕ ತಮ್ಮ ಸ್ವಕ್ಷೇತ್ರ ಅಮರಾವತಿಗೆ ಬಂದಿದ್ದಾರೆ. ಹೀಗಾಗಿ ರಾಣಾ ದಂಪತಿಗೆ ಅವರ ಬೆಂಬಲಿಗರು ಹಾಲಿನ ಅಭಿಷೇಕ ಮಾಡಿ ಸ್ವಾಗತಿಸಿದ್ದಾರೆ. ಇದರ ಬೆನ್ನಲ್ಲೇ ಈ ದಂಪತಿ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ.

ಯಾವುದೇ ಅನುಮತಿ ಪಡೆಯದೇ ರ‍್ಯಾಲಿ ನಡೆಸಲಾಗಿದೆ ಎಂದು ಆರೋಪಿಸಿ ಶಾಸಕ ರವಿ ರಾಣಾ, ಸಂಸದೆ ನವನೀತ್​ ಕೌರ್​ ಮತ್ತು ನೂರಾರು ಕಾರ್ಯಕರ್ತರ ವಿರುದ್ಧ ಗಾಡ್ಗೆನಗರ ಮತ್ತು ರಾಜಾಪೇಟ್​ ಪೊಲೀಸ್​ ಠಾಣೆಗಳಲ್ಲಿ ಪ್ರತ್ಯೇಕ ಎಫ್ಐಆರ್​ ದಾಖಲಾಗಿವೆ.

ಅಮರಾವತಿಯಲ್ಲಿ ರಾಣಾ ದಂಪತಿಗೆ ಹಾಲಿನ ಅಭಿಷೇಕ

ಇತ್ತೀಚೆಗೆ ಧ್ವನಿವರ್ಧಕಗಳ ವಿಚಾರವಾಗಿ ರಾಣಾ ದಂಪತಿ ಮುಂಬೈನಲ್ಲಿರುವ ಸಿಎಂ ಉದ್ಧವ್ ಠಾಕ್ರೆ ಅವರ 'ಮಾತೋಶ್ರೀ' ನಿವಾಸದ ಮುಂದೆ ಹನುಮಾನ್ ಚಾಲೀಸ ಪಠಿಸುವ ಸವಾಲನ್ನು ಈ ದಂಪತಿ ಹಾಕಿದ್ದರು. ಅಂತೆಯೇ ಏಪ್ರಿಲ್ 23ರಂದು ಸಿಎಂ ಮನೆ ಬಳಿ ಬಂದಾಗ ಅವರನ್ನು ಬಂಧಿಸಲಾಗಿತ್ತು. ಅಲ್ಲಿಂದ 14 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿ ಇದ್ದು, ನಂತರ ಜಾಮೀನಿನ ಮೇಲೆ ಹೊರ ಬಂದಿದ್ದರು.

ಅಲ್ಲಿಂದ ಪೊಲೀಸರು ತಮ್ಮೊಂದಿಗೆ ಕೆಟ್ಟದಾಗಿ ನಡೆದುಕೊಂಡಿದ್ದಾರೆ ಎಂದು ಆರೋಪಿಸಿ ಸಂಸದೆ ನವನೀತ್ ಕೌರ್​ ರಾಣಾ, ದೆಹಲಿಗೆ ತೆರಳಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ದೂರು ನೀಡಿದ್ದರು. ಈ ಎಲ್ಲ ಕಾರಣಗಳಿಂದ ಕಳೆದ 36 ದಿನಗಳಿಂದ ಅಮರಾವತಿಯಿಂದ ರಾಣಾ ದಂಪತಿ ಹೊರಗೆ ಇದ್ದರು.

ಇಂದು ಅಮರಾವತಿಗೆ ತೆರಳಿದ ರಾಣಾ ದಂಪತಿಗೆ ವಿನೂತವಾಗಿ ಅಭಿಮಾನಿಗಳು ಮತ್ತು ಬೆಂಬಲಿಗರು ಸ್ವಾಗತ ಕೋರಿದ್ದಾರೆ. ತಿವಾಸಾ ನಗರದಲ್ಲಿ ಮೊದಲಿಗೆ ಇವರನ್ನು ಬರ ಮಾಡಿಕೊಂಡ ಬೆಂಬಲಿಗರು ಬಳಿಕ ಇಲ್ಲಿನ ದಸರಾ ಮೈದಾನದ ಬಳಿಯ ಹನುಮಾನ್ ದೇವಸ್ಥಾನದಲ್ಲಿ ರಾಣಾ ದಂಪತಿ ಜೊತೆ ಸೇರಿ ಹನುಮಾನ್ ಚಾಲೀಸ ಪಠಿಸಿದರು. ಇಲ್ಲಿಂದ ನಂತರ ಶಂಕರನಗರದಲ್ಲಿರುವ ತಮ್ಮ ನಿವಾಸಕ್ಕೆ ತೆರಳಿದ ರಾಣಾ ದಂಪತಿಗೆ ಬೆಂಬಲಿಗರು ಹಾಗೂ ಯುವ ಸ್ವಾಭಿಮಾನ್ ಪಕ್ಷದ ಕಾರ್ಯಕರ್ತರು ಹಾಲಿನ ಅಭಿಷೇಕ ಮಾಡಿದರು. ಇದರ ಬೆನ್ನಲ್ಲೇ ಪೊಲೀಸ್​ ಇಲಾಖೆ ಕ್ರಮ ಕೈಗೊಂಡಿದೆ.

ಇದನ್ನೂ ಓದಿ: ಎರಡು ವರ್ಷಗಳ ನಂತರ ಭಾರತ-ಬಾಂಗ್ಲಾ ನಡುವೆ 'ಬಂಧನ್', 'ಮೈತ್ರಿ'ಗೆ ಚಾಲನೆ

Last Updated :May 29, 2022, 6:14 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.