ETV Bharat / bharat

ಮಹಾರಾಷ್ಟ್ರದಲ್ಲಿ ಕ್ಷಿಪ್ರ ಕ್ರಾಂತಿಯೇ?..11 ಶಾಸಕರ ಜೊತೆ ಶಿವಸೇನೆ ಮುಖ್ಯಸ್ಥ ಏಕನಾಥ್​ ಶಿಂಧೆ ನಾಪತ್ತೆ

author img

By

Published : Jun 21, 2022, 9:35 AM IST

Shiv Sena President Eknath Shinde
ಶಿವಸೇನೆ ಮುಖ್ಯಸ್ಥ ಏಕನಾಥ್​ ಶಿಂಧೆ

ಸೋಮವಾರ ಒಟ್ಟು ಹತ್ತು ಸ್ಥಾನಗಳಿಗೆ ನಡೆದ ವಿಧಾನ ಪರಿಷತ್ತು ಚುನಾವಣೆಯಲ್ಲಿ ಶಿವಸೇನೆ ತನ್ನ ಎರಡೂ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡಿದೆ. ಕಳೆದ ಕೆಲವು ವರ್ಷಗಳಿಂದ ಸಿಟ್ಟಿಗೆದ್ದಿದ್ದ ಶಿವಸೇನೆ ನಾಯಕ ಏಕನಾಥ್ ಶಿಂಧೆ ಮತ್ತು ಅವರ ಗುಂಪಿನ ಶಾಸಕರು ವಿಧಾನಪರಿಷತ್ತು ಚುನಾವಣೆ ನಂತರ ಕೈಗೆ ಸಿಗದಂತೆ ಮಾಯವಾಗಿದ್ದಾರೆ.

ಮುಂಬೈ: ಮಹಾರಾಷ್ಟ್ರದಲ್ಲಿ ಶಿವಸೇನೆ ವಿಭಜನೆಯ ಹಾದಿ ಹಿಡಿದಿದೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದ್ದು, ಅದಕ್ಕೆ ಇಂಬು ನೀಡುವಂತೆ ಇದೀಗ ಶಿವಸೇನೆ ಮುಖ್ಯಸ್ಥ ಹಾಗೂ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಅವರ ನಿಕಟವರ್ತಿ ಎಂದು ಪರಿಗಣಿಸಲ್ಪಟ್ಟಿರುವ ಏಕನಾಥ್​ ಶಿಂಧೆ ಸೋಮವಾರ ಸಂಜೆಯಿಂದ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಅವರ ಜೊತೆ 11 ಶಾಸಕರೂ ನಾಪತ್ತೆಯಾಗಿದ್ದು, ಸೂರತ್​ನ ಹೋಟೆಲ್​​ವೊಂದರಲ್ಲಿ ತಂಗಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಆ ಎಲ್ಲ ಶಾಸಕರು ಬಿಜೆಪಿ ರಾಜ್ಯಾಧ್ಯಕ್ಷ ಸಿ.ಆರ್​.ಪಾಟೀಲ್​ ಜೊತೆ ಸಂಪರ್ಕದಲ್ಲಿದ್ದಾರೆ ಎಂಬುದು ತಿಳಿದು ಬಂದಿದೆ.

11 ಶಾಸಕರ ಜೊತೆ ಶಿವಸೇನೆ ಮುಖ್ಯಸ್ಥ ಏಕನಾಥ್​ ಶಿಂಧೆ ನಾಪತ್ತೆ

ಕಳೆದ ಕೆಲವು ವರ್ಷಗಳಿಂದ ಸಿಟ್ಟಿಗೆದ್ದಿದ್ದ ಶಿವಸೇನೆ ನಾಯಕ ಏಕನಾಥ್ ಶಿಂಧೆ ಮತ್ತು ಅವರ ಗುಂಪಿನ ಶಾಸಕರು ವಿಧಾನಪರಿಷತ್ತು ಚುನಾವಣೆ ನಂತರ ಕೈಗೆ ಸಿಗದಂತಾಗಿದ್ದಾರೆ. ನಿನ್ನೆ ಸಂಜೆಯಿಂದ ನಾಪತ್ತೆಯಾಗಿದ್ದಾರೆ. ಶಾಸಕರು ಸಂಪರ್ಕಕ್ಕೆ ಸಿಗುತ್ತಿಲ್ಲ ಎಂಬ ವದಂತಿ ಹಬ್ಬಿದ ಕೂಡಲೇ ಎಲ್ಲ ಶಾಸಕರ ಸಭೆ ಕರೆಯುವಂತೆ ಮುಖ್ಯಮಂತ್ರಿ ಆದೇಶ ನೀಡಿದ್ದಾರೆ.

ಸೋಮವಾರ ಒಟ್ಟು ಹತ್ತು ಸ್ಥಾನಗಳಿಗೆ ನಡೆದ ವಿಧಾನ ಪರಿಷತ್ತು ಚುನಾವಣೆಯಲ್ಲಿ ಶಿವಸೇನೆ ತನ್ನ ಎರಡೂ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಈ ಬಾರಿಯ ಚುನಾವಣೆಯಲ್ಲಿ ಶಿವಸೇನೆಯೂ ಕಾಂಗ್ರೆಸ್ ಜೊತೆಯೂ ಒಡಕು ಸೃಷ್ಟಿಸಿಕೊಂಡಿದೆ ಎಂಬ ಮಾತು ಕೇಳಿಬರುತ್ತಿದೆ. ಒಡೆದ ಮತಗಳಿಂದಾಗಿ ಶಿವಸೇನೆ ಇಬ್ಭಾಗವಾಗುತ್ತಿದೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ದಟ್ಟವಾಗಿದೆ.

ಠಾಕ್ರೆ ಮತ್ತು ಶಿಂಧೆ ನಡುವೆ ವಾಗ್ವಾದ : ಶಿವಸೇನೆಯ 56ನೇ ವಾರ್ಷಿಕೋತ್ಸವದಂದು ಪಕ್ಷದ ಮುಖ್ಯಸ್ಥ ಉದ್ಧವ್ ಠಾಕ್ರೆ ಮತ್ತು ಏಕನಾಥ್ ಶಿಂಧೆ ನಡುವೆ ಜಟಾಪಟಿ ನಡೆದಿತ್ತು. ವಾರ್ಷಿಕೋತ್ಸವದ ದಿನ ಮಾರ್ಗದರ್ಶನ ನೀಡಲು ನಿರಾಕರಿಸಿದ್ದ ಕಾರಣ, ಆ ದಿನಗಳಿಂದ ಏಕನಾಥ್ ಶಿಂಧೆ ಅಸಮಾಧಾನಗೊಂಡಿದ್ದರು. ಆದರೆ, ವಿಧಾನಪರಿಷತ್ ಚುನಾವಣೆ ಬಳಿಕ ಏಕನಾಥ್ ಶಿಂಧೆ ಹಾಗೂ ಅವರ ಆಪ್ತರು ನಾಪತ್ತೆಯಾಗಿದ್ದಾರೆ. ಶಿಂಧೆ ಅವರನ್ನು ಶಿವಸೇನೆ ನಿರಂತರವಾಗಿ ಸಂಪರ್ಕಿಸುತ್ತಿದೆ. ಆದರೆ, ಶಿಂಧೆ ಅವರ ಮೊಬೈಲ್ ಸ್ವಿಚ್ ಆಫ್ ಆಗಿರುವುದರಿಂದ ಶಿವಸೇನೆಗೆ ತಲೆನೋವು ಹೆಚ್ಚಾಗಿದೆ.

ಇಂದು ಮತ್ತೆ ಸಭೆ : ಮಧ್ಯರಾತ್ರಿ ವರ್ಷಾ ಬಂಗಲೆಯಲ್ಲಿ ನಡೆದ ಸಭೆಯ ನಂತರ ಇಂದು ಮತ್ತೆ ಶಿವಸೇನೆ ಶಾಸಕರ ಸಭೆ ಕರೆಯಲಾಗಿದೆ. ಇಂದು ಮಧ್ಯಾಹ್ನ 12 ಗಂಟೆಗೆ ಮತ್ತೊಂದು ಸಭೆ ನಿಗದಿಯಾಗಿದೆ. ಈ ಸಭೆಗೆ ಎಷ್ಟು ಶಾಸಕರು ಹಾಜರಾಗುತ್ತಾರೆ ಎಂಬುದರ ಮೇಲೆ ಮಹಾವಿಕಾಸ್ ಅಘಾಡಿಯ ಭವಿಷ್ಯ ನಿಂತಿದೆ. ಎನ್​ಸಿಪಿ ರಾಜ್ಯಾಧ್ಯಕ್ಷ ಜಯಂತ್ ಪಾಟೀಲ್ ಕೂಡ ವರ್ಷಾ ಅವರ ನಿವಾಸಕ್ಕೆ ಭೇಟಿ ನೀಡಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರೊಂದಿಗೆ ಚರ್ಚೆ ನಡೆಸಿದ್ದರು.

ಸ್ಪರ್ಧಿಸಿದ ಎಲ್ಲ ಸ್ಥಾನಗಳಲ್ಲಿ ಗೆಲುವು ಸಾಧಿಸಿದ ಬಿಜೆಪಿ: ಮಹಾರಾಷ್ಟ್ರ ವಿಧಾನ ಪರಿಷತ್ತಿನ 10 ಸ್ಥಾನಗಳಿಗೆ ಸೋಮವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ಕಣಕ್ಕಿಳಿಸಿದ ಎಲ್ಲ ಐವರು ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಐದು ಸ್ಥಾನಗಳಿಗೆ ಬಿಜೆಪಿಯಿಂದ ಪ್ರವೀಣ್ ದಾರೆಕರ್, ಪ್ರೊ. ರಾಮ್ ಶಿಂದೆ, ಉಮಾ ಖಾಪ್ರೆ, ಶ್ರೀಕಾಂತ್ ಭಾರತೀಯ ಹಾಗೂ ಪ್ರಸಾದ್ ಲಾಡ್ ಸ್ಪರ್ಧಿಸಿದ್ದರು.

ಆಡಳಿತಾರೂಢ ಮಹಾವಿಕಾಸ್ ಅಘಾಡಿಗೆ ಆಘಾತ: ಆಡಳಿತಾರೂಢ ಮೈತ್ರಿಕೂಟ ಮಹಾ ವಿಕಾಸ್ ಅಘಾಡಿ 6 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಆದರೆ, ಐವರು ಮಾತ್ರ ಜಯಗಳಿಸಿದ್ದಾರೆ. ಶಿವಸೇನಾದ ಇಬ್ಬರು ಅಭ್ಯರ್ಥಿಗಳು ಹಾಗೂ ಎನ್‌ಸಿಪಿಯ ಇಬ್ಬರು ಅಭ್ಯರ್ಥಿಗಳು ಗೆಲುವು ಸಾಧಿಸಿದರೆ, ಕಾಂಗ್ರೆಸ್‌ನಿಂದ ಭಾಯಿ ಜಗ್‌ತಾಪ್ ವಿಜಯ ಸಾಧಿಸಿದ್ದರು. ಬಿಜೆಪಿಯ ನಾಲ್ವರು ಅಭ್ಯರ್ಥಿಗಳು ಮೊದಲ ಪ್ರಾಶಸ್ತ್ಯದ ಮತದಲ್ಲೇ ಗೆಲುವು ಖಚಿತಪಡಿಸಿಕೊಂಡಿದ್ದರು.

ಇದನ್ನೂ ಓದಿ : ಮಧ್ಯರಾತ್ರಿ ಹೈಡ್ರಾಮಾ: ಮಹಾರಾಷ್ಟ್ರದಲ್ಲಿ ಗೆದ್ದು ಬಿಗಿದ ಬಿಜೆಪಿ, ಆಡಳಿತ ಪಕ್ಷಕ್ಕೆ ಬಿಗ್ ಶಾಕ್​!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.