ಕರ್ನಾಟಕ

karnataka

ಕೇಂದ್ರದ ವಿರುದ್ಧದ ನಿರ್ಣಯ ಖಂಡನೀಯ: ಬಸವರಾಜ ಬೊಮ್ಮಾಯಿ

By ETV Bharat Karnataka Team

Published : Feb 23, 2024, 7:22 AM IST

ಕೇಂದ್ರ ಸರ್ಕಾರದ ವಿರುದ್ಧ 'ನಿರ್ಣಯ' ಮಾಡಿರುವ ಕಾಂಗ್ರೆಸ್​ ವಿರುದ್ಧ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ.

Basavaraj Bommai
ಬಸವರಾಜ ಬೊಮ್ಮಾಯಿ

ಬೆಂಗಳೂರು: ಕಾಂಗ್ರೆಸ್ ಸರ್ಕಾರ ಸದನಕ್ಕೆ ಸುಳ್ಳು ಮಾಹಿತಿ ಕೊಟ್ಟು, ಕೇಂದ್ರ ಸರ್ಕಾರದ ವಿರುದ್ಧ ನಿರ್ಣಯ ಮಾಡಿದ್ದು ಅತ್ಯಂತ ಖಂಡನೀಯ. ರಾಜ್ಯ ಸರ್ಕಾರ ತನ್ನ ಜವಾಬ್ದಾರಿಯನ್ನು ಮರೆತು ಕೇವಲ ರಾಜಕಾರಣಕ್ಕಾಗಿ ಸುಳ್ಳು ಹೇಳುತ್ತಿದೆ. ಸತ್ಯ ಹೇಳಲು ನಾವು ಜನರ ಬಳಿ ಹೋಗುತ್ತೇವೆ. ಅವರೂ ಬರಲಿ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸವಾಲು ಹಾಕಿದ್ದಾರೆ.

ನಗರದ ಖಾಸಗಿ ಹೋಟೆಲ್​ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೆ ನೀವಿದ್ದಾಗ 15ನೇ ಹಣಕಾಸಿನ ಕಾರ್ಯ ಚಟುವಟಿಕೆ ನಡೆದಿತ್ತು. ಆಗ ನೀವು ನಿದ್ದೆ ಮಾಡಿದ್ರಿ. ನಿಮ್ಮ ಸಮ್ಮಿಶ್ರ ಸರ್ಕಾರ ಇದ್ದಾಗ ಫೈನಲ್‌ ಮೀಟಿಂಗ್ ಕೂಡಾ ಮಾಡಿದ್ದಿರಿ. ಈಗಿರುವ ಕಾಂಗ್ರೆಸ್​ನ ಐವರು ಮಂತ್ರಿಗಳು ಆಗ ನಿದ್ದೆ ಮಾಡುತ್ತಿದ್ದರು. ಹಣಕಾಸಿನ ಆಯೋಗ ತನ್ನ ಕೆಲಸ ಮಾಡಲು ಶುರು ಮಾಡಿ ಬಹಳ ಸಮಯ ಆಗಿದೆ. ಹಣಕಾಸಿನ ಆಯೋಗಕ್ಕೂ ಕೇಂದ್ರ ಸರ್ಕಾರಕ್ಕೂ ಯಾವುದೇ ಸಂಬಂಧ ಇಲ್ಲ. ಈಗ ಏನು ಮಾಡಿದರೂ ನಿಮ್ಮ ವಾದ ನಡೆಯಲ್ಲ. ಏಕೆಂದರೆ, ಈಗಾಗಲೇ ಇಂಪ್ಲಿಮೆಂಟ್ ಆಗಿ ಹೋಗಿದೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಯುಪಿಎ ಸರ್ಕಾರಕ್ಕಿಂತ ಹೆಚ್ಚು ಹಣ ನಮ್ಮ ಸರ್ಕಾರ ಕೊಟ್ಟಿರುವ ಡಿಟೇಲ್ಸ್ ಇದೆ. 15ನೇ ಹಣಕಾಸಿನ ಅವಧಿ ಮಾರ್ಚ್ 26ರವರೆಗೂ ಇದೆ. ಹೀಗಿರುವಾಗ ಸುಳ್ಳನ್ನು ಪದೇ ಪದೆ ಹೇಳಿದರೆ ಅದು ಸತ್ಯ ಆಗಲಿದೆ ಎಂಬ ಭ್ರಮೆಯಲ್ಲಿ ಕೇವಲ ಕೆಟ್ಟ ರಾಜಕಾರಣ ಮಾಡುವ ಸಲುವಾಗಿ ನಮ್ಮನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಬೇಕು ಎನ್ನುವ ದುಷ್ಟ ಹುನ್ನಾರ ಇಟ್ಟುಕೊಂಡಿದ್ದಾರೆ. ಕರ್ನಾಟಕ ವಿಧಾನಸಭೆಯ ಇತಿಹಾಸದಲ್ಲಿ ಅತ್ಯಂತ ದ್ರೋಹದ ಕೆಲಸವನ್ನು ಅವರು ಮಾಡಿದ್ದಾರೆ. ಇದನ್ನು ಖಂಡಿಸುತ್ತೇವೆ. ಸತ್ಯ ಹೇಳಲು ನಾವು ಜನರ ಬಳಿ ಹೋಗುತ್ತೇವೆ. ಅವರೂ ಬರಲಿ ಎಂದು ಸವಾಲು ಹಾಕಿದರು.

ಇದನ್ನೂ ಓದಿ:ಎಂಎಸ್​ಪಿ ಜಾರಿ, ಕೇಂದ್ರ ಅನುದಾನ ಹಂಚಿಕೆಯಲ್ಲಿ ಅನ್ಯಾಯವಾಗದಂತೆ ಒತ್ತಾಯಿಸಿ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ

ನಿನ್ನೆ ವಿಧಾನಸಭೆಯಲ್ಲಿ ಎಂ.ಎಸ್ ಸ್ವಾಮಿನಾಥ್ ವರದಿ ಜಾರಿಗೆ ಮತ್ತು ಕೇಂದ್ರದ ಅನುದಾನ ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯವಾಗದಂತೆ ಒತ್ತಾಯಿಸಿ ನಿರ್ಣಯ ಅಂಗೀಕರಿಸಲಾಯಿತು. ಈ ಎರಡೂ ನಿರ್ಣಯಗಳನ್ನು ಕಾನೂನು ಸಚಿವ ಹೆಚ್.ಕೆ ಪಾಟೀಲ್ ಮಂಡನೆ ಮಾಡಿದರು. ಬಿಜೆಪಿ ನಾಯಕರ ತೀವ್ರ ವಿರೋಧದ ನಡುವೆಯೂ ಈ ಎರಡೂ ನಿರ್ಣಯಗಳಿಗೆ ಅಂಗೀಕಾರ ಪಡೆಯಲಾಯಿತು. ಈ ವೇಳೆ, ಬಿಜೆಪಿ ಶಾಸಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದ ಜನರ ಹಿತರಕ್ಷಣೆಯ ವಿಷಯದಲ್ಲಿ ಯಾವುದೇ ಅನ್ಯಾಯ ಆಗಬಾರದು ಎಂಬ ಕಾರಣದಿಂದ ಕೇಂದ್ರದ ವಿರುದ್ಧ ಇಂತಹ ನಿರ್ಣಯ ಕೈಗೊಳ್ಳಲಾಗಿದೆ ಎಂದು ಕಾಂಗ್ರೆಸ್​ ಸಮರ್ಥಿಸಿಕೊಂಡಿದೆ.

ಇದನ್ನೂ ಓದಿ:ಹಿಂದೂಗಳನ್ನು ನಮ್ಮ ಸರ್ಕಾರದ ವಿರುದ್ಧ ಎತ್ತಿಕಟ್ಟುವ ದುರುದ್ದೇಶದಿಂದ ಬಿಜೆಪಿಯಿಂದ ಕಪೋಲಕಲ್ಪಿತ ಆರೋಪ: ಸಿಎಂ

ABOUT THE AUTHOR

...view details