ಕರ್ನಾಟಕ

karnataka

ಹಿಂದೆ ಮಾಡಿದ ತಪ್ಪು ಮತ್ತೆ ಪುನರಾವರ್ತನೆ ಆಗಬಾರದು: ವಿನಯ್ ಕುಲಕರ್ಣಿ ಅಸಮಾಧಾನ

By

Published : Jun 4, 2023, 5:44 PM IST

ನಮ್ಮ ಸಮಾಜಕ್ಕೆ ಒತ್ತು ಕೊಡದೇ ಇರುವುದರಿಂದ ಮುಂಬರುವ ಲೋಕಸಭೆ ಚುನಾವಣೆ ಮೇಲೆ ಪ್ರಭಾವ ಬೀರುತ್ತದೆ ಎಂದು ವಿನಯ್ ಕುಲಕರ್ಣಿ ಹೇಳಿದರು.

ಮಾಜಿ ಸಚಿವ ವಿನಯ ಕುಲಕರ್ಣಿ
ಮಾಜಿ ಸಚಿವ ವಿನಯ ಕುಲಕರ್ಣಿ

ಇಷ್ಟು ವರ್ಷ ಕಾಂಗ್ರೆಸ್ ಪರಿಸ್ಥಿತಿ ಏನಾಗಿತ್ತು ಎಂಬುದನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು .

ಬೆಳಗಾವಿ :ರಾಜ್ಯದಲ್ಲಿ ವಿರೇಂದ್ರ ಪಾಟೀಲರ ನಂತರ ಇಷ್ಟೊಂದು ದೊಡ್ಡ ಬಹುಮತ ಕಾಂಗ್ರೆಸ್ ಪಕ್ಷಕ್ಕೆ ಸಿಕ್ಕಿದೆ. ಹೀಗಾಗಿ ಹಿಂದೆ ಮಾಡಿದ ತಪ್ಪು ಮತ್ತೆ ಪುನರಾವರ್ತನೆ ಆಗಬಾರದು ಎಂದು ತಮ್ಮದೇ ಪಕ್ಷದ ನಾಯಕರಿಗೆ ಮಾಜಿ ಸಚಿವ, ಶಾಸಕ ವಿನಯ್ ಕುಲಕರ್ಣಿ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.
ಬೆಳಗಾವಿ ಪ್ರವಾಸಿ‌ ಮಂದಿರದಲ್ಲಿ‌ ಇಂದು ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ, ಕಳೆದ ಚುನಾವಣೆಗಳಲ್ಲಿ ನಮ್ಮ ಸಮಾಜದಿಂದ ಕಾಂಗ್ರೆಸ್ ಪಕ್ಷಕ್ಕೆ ಮತಗಳು ಕಡಿಮೆ ಸಂಖ್ಯೆಯಲ್ಲಿ ಬರುತ್ತಿದ್ದವು. ಆದರೆ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಲಿಂಗಾಯತರು ಕಾಂಗ್ರೆಸ್ ಪರ ಮತ ಚಲಾಯಿಸಿದ್ದರಿಂದ 135 ಸ್ಥಾನ ಗೆಲ್ಲಲು ಸಾಧ್ಯವಾಗಿದೆ. ಇದು ಸಾಮಾನ್ಯ ಸಂಗತಿಯಲ್ಲ. ಪಕ್ಷದ ಮುಖಂಡರಿಗೆ ಇದನ್ನು ತಿಳಿಸುತ್ತೇವೆ. ನಮ್ಮ ಸಮಾಜಕ್ಕೆ ಒತ್ತು ಕೊಡದೇ ಇರುವುದರಿಂದ ಇಷ್ಟು ವರ್ಷ ಕಾಂಗ್ರೆಸ್ ಪರಿಸ್ಥಿತಿ ಏನಾಗಿತ್ತು ಎಂಬುದನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು ಎಂದು ವಿನಯ್​ ಕುಲಕರ್ಣಿ ಹೇಳಿದರು.

ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಪಕ್ಷದಿಂದ ನಮ್ಮ ಸಮಾಜದ ನಾಯಕರು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ನಲ್ಲಿ ಒಟ್ಟು 37 ಜನ ಶಾಸಕರು ಲಿಂಗಾಯತ ಸಮಾಜದಿಂದ ಆಯ್ಕೆಯಾಗಿದ್ದು, ಹೀಗಾಗಿ ಹಲವರಿಗೆ ಸಚಿವ ಸ್ಥಾನ ಸಿಗಲಿಲ್ಲ ಎನ್ನುವುದಕ್ಕಿಂತ ಮುಂದಿನ ದಿನಗಳಲ್ಲಿ ಸ್ಥಾನ ಮಾನ ಸಿಗುತ್ತದೆ ಎಂದು ವಿನಯ್​ ಕುಲಕರ್ಣಿ ವಿಶ್ವಾಸ ವ್ಯಕ್ತಪಡಿಸಿದರು.

ಪಂಚಮಸಾಲಿ‌ ಮೀಸಲಾತಿ ಹೋರಾಟ ಮುನ್ನಡೆಸಿದವರಿಗೆ ಸ್ಥಾನ ಸಿಗಲಿಲ್ಲ ಎಂಬ ಮಾಧ್ಯಮಗಳ ಪ್ರಶ್ನೆಗೆ, ಪಂಚಮಸಾಲಿ ಸಮಾಜದಿಂದ 13 ಜನ ನಾವು ಆರಿಸಿ‌ ಬಂದಿದ್ದೆವು. ಯಾರು ಸಮಾಜಕ್ಕಾಗಿ ಹೋರಾಟ ಮಾಡಿದ್ದೇವೋ, ಸಮಾಜ ಕಟ್ಟುವ ಕೆಲಸ ಮಾಡಿದ್ದೆವೋ ಅದನ್ನು ನಮ್ಮ‌ ಪಕ್ಷ ಅರ್ಥ ಮಾಡಿಕೊಳ್ಳಬೇಕಿತ್ತು. ಆದರೆ ಅರ್ಥ ಮಾಡಿಕೊಂಡಿಲ್ಲ. ಸಮಾಜ ಇದನ್ನು ಬಹಳ ಸೂಕ್ಷ್ಮತೆಯಿಂದ ನೋಡುತ್ತದೆ.

ಹೀಗಾಗಿ ಮುಂಬರುವ ಲೋಕಸಭೆ ಚುನಾವಣೆ ಮೇಲೆ ಇದು ನೂರಕ್ಕೆ ನೂರು ಪ್ರಭಾವ ಬೀರುತ್ತದೆ. ಸುಮ್ಮನೇ ಯಾವುದೋ‌ ಒತ್ತಡಕ್ಕೆ ಮಣಿದು ಸಚಿವ ಸ್ಥಾನ ಕೊಡುವಂತದ್ದು ಆಗಿದೆ. ಅಲ್ಲದೇ ಖಾತೆ ಹಂಚಿಕೆಯಲ್ಲೂ ಲಿಂಗಾಯತರಿಗೆ ಅನ್ಯಾಯವಾಗಿದೆ ಎಂದು ವಿನಯ್​ ಕುಲಕರ್ಣಿ ಅಸಮಾಧಾನ ಹೊರ ಹಾಕಿದರು.

ಸಂಪುಟ ವಿಸ್ತರಣೆ ಸಹಜವಾಗಿ ಮತ್ತೆ ಆಗಿಯೇ ಆಗುತ್ತದೆ. ನಮ್ಮ ಒಂದೇ ಸಮಾಜ ಅಲ್ಲ, ಬೇರೆ ಬೇರೆ ಸಮಾಜಗಳಿಗೂ ಅವಕಾಶ ಸಿಗಬೇಕಿದೆ. ಹಿಂದೆ ಮಂತ್ರಿ‌ ಆದವರಿಗೆ ಕೊಡುವಂತದ್ದು ಏನಿದೆ. ಹೊಸ ಹೊಸ ಯುವಕರಿಗೆ ಸ್ಥಾನ ಬಿಟ್ಟುಕೊಡುವಂತೆ ಕೇಳುತ್ತೇವೆ. ಭವಿಷ್ಯದಲ್ಲಿ ಹೊಸ ನಾಯಕರನ್ನು ಸೃಷ್ಟಿಸಬೇಕಿದೆ ಎಂದು‌ ಹೇಳಿದರು.

ಗೋಹತ್ಯೆ ನಿಷೇಧ ಕಾಯ್ದೆ : ಗೋಹತ್ಯೆ ನಿಷೇಧ ಕಾಯ್ದೆಯ ಬಗ್ಗೆ ಮಾತನಾಡುವ ಬಿಜೆಪಿಯ ಯಾರ ಮನೆಯಲ್ಲಿಯೂ ಹಸು ಸಾಕಿಲ್ಲ. ಸುಮ್ಮನೆ ಅವರು ಮಾತನಾಡುತ್ತಾರಷ್ಟೇ. ಅವರು ಪ್ಲಾಸ್ಟಿಕ್ ಆಕಳು ಕಟ್ಟಿ ಪೂಜೆ ಮಾಡುತ್ತಾರೆ. ಮನೆಯಲ್ಲಿ ಒಂದು ಆಕಳು ಕಟ್ಟಿ ಮಾತನಾಡಲಿ. ಇಡೀ ರಾಜ್ಯದಲ್ಲೇ ಅತೀ ಹೆಚ್ಚು ಹಸುಗಳನ್ನು ಸಾಕಿದವನು ನಾನು.

ಎಚ್​ಎಫ್ ತಳಿ ಆಕಳು ಹೋರಿ ಹಾಕಿದರೆ ಏನು ಮಾಡುವುದು. ಈಗ ಕೃಷಿಯಲ್ಲಿ ಬಹಳಷ್ಟು ರೈತರು ಎತ್ತುಗಳನ್ನೇ ಬಳಸುತ್ತಿಲ್ಲ. ವಯಸ್ಸಾದ ಎತ್ತುಗಳನ್ನು ಹಾಗೂ ಬರಡು ಬಿದ್ದ ಆಕಳುಗಳನ್ನು ಏನು‌ ಮಾಡುವುದು. ಹೀಗಾಗಿ ಕೃಷಿ ಕಾರ್ಮಿಕರ ಸಮಸ್ಯೆ ಇದೆ. ಕೃಷಿಯಲ್ಲಿ ಈಗ ಎಲ್ಲ ಕಟಿಂಗ್ ಮಷಿನ್ ಬಂದಿವೆ. ಹಸುಗಳಿಗೆ ವಯಸ್ಸು ಆದರೆ ಏನೂ ಮಾಡಬೇಕು ? ಆದರೆ ದೇಸಿ ತಳಿಗಳನ್ನು ಸಂರಕ್ಷಿಸುವ ಕೆಲಸವನ್ನು ಎಲ್ಲರೂ ಮಾಡಬೇಕು ಎಂದರು.

ಕೋಟಿ ಕೋಟಿ ಬಂಡವಾಳ ಹಾಕಿ ಹಸು ಸಾಕಾಣಿಕೆ ಮಾಡುತ್ತೇವೆ. ಗೋಹತ್ಯೆ ನಿಷೇಧ ಕಾಯ್ದೆ ತಿದ್ದುಪಡಿಯಾಗಬೇಕು. ಇನ್ನು ಗೋಮಾತೆ ಹೆಸರಿನಲ್ಲಿ ರಾಜಕೀಯ ಮಾಡುವವರನ್ನು ಬಿಟ್ಟು.‌ ದನ, ಕರುಗಳ ಸಾಕುವವರು, ಒಳ್ಳೆಯ ರೈತರನ್ನು ಕರೆಸಿ ಅವರ ವಿಚಾರಗಳನ್ನು ತಿಳಿದುಕೊಳ್ಳಬೇಕು ಎಂದು ವಿನಯ್​ ಕುಲಕರ್ಣಿ ಅಭಿಪ್ರಾಯಪಟ್ಟರು.

ಬಿಜೆಪಿ ಟೀಕೆ ಕೈಯಲ್ಲಿ ಆಗದವರು ಮೈಯಲ್ಲಾ ಪರಚಿಕೊಂಡರು ಎನ್ನುವ ಹಾಗೆ ಅವರ ಪರಿಸ್ಥಿತಿಯಾಗಿದೆ. ಕಳೆದ ಐದು ವರ್ಷದಲ್ಲಿ ಅಧಿಕಾರ ಬಿಜೆಪಿಯವರ ಹತ್ತಿರ ಇತ್ತು. ಕೊರೊನಾ ಸಂದರ್ಭದಲ್ಲಿ ಅವರು ಏನೂ ಮಾಡಿದರು? ಅವರಿಗೆ ಏನಾದರೂ ಮಾನವೀಯತೆ ಇತ್ತಾ? ಬಡವರು, ರೈತರ ಪರವಾದ ಯೋಜನೆ ಮಾಡಿದ್ದಾರಾ? ಬಿಜೆಪಿಯವರು ನೀಡಿದ ಭರವಸೆ ಈಡೇರಿಸಿದ್ದಾರಾ ಎಂದು ಪ್ರಶ್ನಿಸಿದ ಕುಲಕರ್ಣಿ, ಬಿಜೆಪಿಯವರಿಗೆ ಕಾಂಗ್ರೆಸ್ ಸರ್ಕಾರವನ್ನು ಪ್ರಶ್ನಿಸುವ ನೈತಿಕತೆ ಇಲ್ಲ ಎಂದು‌ ಕಿಡಿಕಾರಿದರು.

ಇದನ್ನೂ ಓದಿ :ರಾಜ್ಯ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ನಾಳೆ ಬಿಜೆಪಿ ಪ್ರತಿಭಟನೆ: ಎನ್ ರವಿಕುಮಾರ್

ABOUT THE AUTHOR

...view details