ಕರ್ನಾಟಕ

karnataka

ಮುತ್ತು ಕೊಡೋಳು ಬಂದಾಗ ತುತ್ತು ಕೊಟ್ಟ ತಾಯಿಯ ಮರ್ಡರ್​.. ಆಸ್ತಿಗಾಗಿ ಪತ್ನಿಯೊಂದಿಗೆ ಸೇರಿ ಹೆತ್ತಮ್ಮನನ್ನೇ ಕೊಂದ ಪುತ್ರ: ಮಗ ಸೊಸೆ ಅರೆಸ್ಟ್​

By

Published : Aug 5, 2023, 6:39 PM IST

Updated : Aug 5, 2023, 10:10 PM IST

ಆಸ್ತಿಗಾಗಿ ಮಗನೇ ತಾಯಿಯನ್ನು ಕೊಲೆ ಮಾಡಿರುವ ಘಟನೆ ದೇವನಹಳ್ಳಿಯ ಉದಯಗಿರಿ ಸಮೀಪ ನಡೆದಿದೆ.

crime-son-killed-his-mother-along-with-his-wife-for-property-in-devanahalli
ಆಸ್ತಿಗಾಗಿ ಪತ್ನಿಯೊಂದಿಗೆ ಸೇರಿ ತಾಯಿಯನ್ನೇ ಕೊಂದ ಮಗ: ಆರೋಪಿಗಳು ಅಂದರ್​

ಡಿಸಿಪಿ ಲಕ್ಷ್ಮೀ ಪ್ರಸಾದ್

ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ಆಸ್ತಿಗಾಗಿ ಹೆತ್ತ ತಾಯಿಯನ್ನು ಮಗ ಕೊಲೆ ಮಾಡಿರುವ ಪ್ರಕರಣ ದೇವನಹಳ್ಳಿ ತಾಲೂಕಿನ ಉದಯಗಿರಿ ಸಮೀಪ ನಡೆದಿದೆ. ಚಿನ್ನಮ್ಮ ಕೊಲೆಗೀಡಾದ ಮಹಿಳೆ. ಚಿನ್ನಮ್ಮನಿಗೆ ಇಬ್ಬರು ಗಂಡು ಮಕ್ಕಳು. ಮೊದಲನೇ ಮಗ ರಾಘವೇಂದ್ರ ಮತ್ತು ಎರಡನೇ ಮಗ ರಾಜೇಶ್. ಮೊದಲ ಮಗ ರಾಘವೇಂದ್ರನಿಗೆ ಸುಧಾ ಎಂಬುವವಳೊಂದಿಗೆ ಮದುವೆ ಆಗಿದೆ. ಕಳೆದ ಒಂದು ವರ್ಷದ ಹಿಂದೆ ಚಿನ್ನಮ್ಮ ತನ್ನ ಗಂಡನನ್ನು ಕಳೆದುಕೊಂಡಿದ್ದರು. ಇರೋ ಜಮೀನನ್ನು ಮಾರಿ ಇಬ್ಬರು ಮಕ್ಕಳಿಗೆ ಸಮನಾಗಿ ಹಂಚುವ ನಿರ್ಧಾರ ಮಾಡಿದ್ದರು. ಅದಕ್ಕೂ ಮೊದಲೇ ಮಗ ರಾಘವೇಂದ್ರ ಮತ್ತು ಸೊಸೆ ಸುಧಾ ಸೇರಿಕೊಂಡು ಚಿನ್ನಮ್ಮನನ್ನು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನು ಆಸ್ತಿ ವಿಚಾರವಾಗಿ ಹಲವು ದಿನಗಳಿಂದ ರಾಘವೇಂದ್ರ ತಾಯಿ ಜೊತೆ ಜಗಳವಾಡುತ್ತಿದ್ದ. ಇಂದು ಬೆಳಗ್ಗೆ ಚಿನ್ನಮ್ಮ ಊರಿನ ಆಚೆ ಪೊರಕೆ ಕಡ್ಡಿ ಕಟಾವಿಗೆ ಹೋಗಿದ್ದಾರೆ. ಇದೇ ಅವಕಾಶ ಬಳಸಿಕೊಂಡ ರಾಘವೇಂದ್ರ ಮತ್ತು ಸುಧಾ ಚಿನ್ನಮ್ಮನನ್ನು ಹಿಂಬಾಲಿಸಿಕೊಂಡು ಹೋಗಿದ್ದಾರೆ. ನಿರ್ಜನ ಪ್ರದೇಶದಲ್ಲಿ ಕೆಲ ಕಾಲ ಚಿನ್ನಮ್ಮ ಜೊತೆ ಜಗಳವಾಡಿ ಕೊನೆಗೆ ಹಲ್ಲೆ ಮಾಡಿದ್ದಾರೆ. ನಂತರ ಆಂಬ್ಯುಲೆನ್ಸ್ ಕರೆಸಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಅಷ್ಟರಲ್ಲಾಗಲೇ ಚಿನ್ನಮ್ಮ ಮೃತಪಟ್ಟಿದ್ದರು. ಈ ವಿಷಯ ತಿಳಿದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸ್​ ಠಾಣೆಯ ಸಿಬ್ಬಂದಿ ವೃದ್ಧೆ ಚಿನ್ನಮ್ಮನ ಮಗ ರಾಘವೇಂದ್ರ ಮತ್ತು ಸೊಸೆ ಸುಧಾಳನ್ನು ಬಂಧಿಸಿದ್ದಾರೆ. ಸ್ಥಳಕ್ಕೆ ಡಿಸಿಪಿ ಲಕ್ಷ್ಮೀ ಪ್ರಸಾದ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ:ಜೈನ ಮುನಿ ಹತ್ಯೆ ಪ್ರಕರಣ: ಖುದ್ದು ಫೀಲ್ಡ್‌ಗಿಳಿದು ಸಿಐಡಿ ಡಿಜಿಪಿ ಡಾ ಎಂ ಎ ಸಲೀಂ ಪರಿಶೀಲನೆ..

ಘಟನೆ ಕುರಿತು ಡಿಸಿಪಿ ಲಕ್ಷ್ಮೀ ಪ್ರಸಾದ್ ಮಾತನಾಡಿ, "ಇಂದು ದೇವನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಉದಯಗಿರಿಯ ಬಳಿ ಚಿನ್ನಮ್ಮ(60) ಇವರ ಕೊಲೆಯಾಗಿದೆ. ಮಗ ರಾಘವೇಂದ್ರ ಮತ್ತು ಸೊಸೆ ಸುಧಾ ಹಲ್ಲೆ ಮಾಡಿದ್ದಾರೆ ಎಂದು ನಮಗೆ ಮಾಹಿತಿ ಸಿಕ್ಕಿದೆ. ಹಲ್ಲೆಗೊಳಗಾದ ಚಿನ್ನಮ್ಮರನ್ನು ಆಸ್ಪತ್ರೆಗೆ ರವಾನಿಸಲಾಗಿತ್ತು. ಆಸ್ಪತ್ರೆಯಲ್ಲಿ ಅವರು ಸಾವನ್ನಪ್ಪಿದ್ದಾರೆ. ಮಗ ಮತ್ತು ಸೊಸೆಯನ್ನು ನಾವು ಬಂಧಿಸಿದ್ದು, ಮುಂದಿನ ಕ್ರಮ ಜರುಗಿಸುತ್ತೇವೆ. ಅವರು ಸೊಪ್ಪು ಕಟಾವಿಗೆ ಬಂದಾಗ ಜಗಳ ಆಗಿದೆ. ನಂತರ ಚಿನ್ನಮ್ಮನ ತಲೆಗೆ ಹೊಡೆದಿದ್ದಾರೆ. ಹೀಗಾಗಿ ಅವರು ಮೃತಪಟ್ಟಿದ್ದಾರೆ" ಎಂದು ಮಾಹಿತಿ ನೀಡಿದರು.

ಮೃತಳ ಕಿರಿಯ ಮಗ ರಾಜೇಶ್ ಮಾತನಾಡಿ, "ನಮ್ಮ ತಾಯಿ ತೆಂಗಿನ ಕಡ್ಡಿ ಕಟಾವು ಮಾಡಿದ್ದರು. ನಾನು ಅದನ್ನು ತೆಗೆದುಕೊಂಡು ಹೋಗಿ ಮನೆಗೆ ಇಟ್ಟುಬರುವಷ್ಟರಲ್ಲಿ ಈ ಘಟನೆ ನಡೆದಿದೆ. ರಾಘವೇಂದ್ರ ಮತ್ತು ಸುಧಾ ಅವರು ಈ ಕೆಲಸ ಮಾಡಿ ಬಳಿಕ ಆಂಬ್ಯುಲೆನ್ಸ್​ನಲ್ಲಿ ಕರೆದುಕೊಂಡು ಹೋಗಿದ್ದಾರೆ. ಆರೋಪಿಗಳಿಬ್ಬರು ನನಗೆ ಅಣ್ಣ - ಅತ್ತಿಗೆಯಾಗುತ್ತಾರೆ. ಈ ಘಟನೆ ಜಮೀನು ವಿಚಾರಕ್ಕೆ ನಡೆದಿದೆ" ಎಂದು ಘಟನೆ ಬಗ್ಗೆ ವಿವರಿಸಿದರು.

ಇದನ್ನೂ ಓದಿ:ಬೇರೆ ಬೇರೆ ರಾಜ್ಯಗಳಿಗೆ ತೆರಳಿ ಮನೆಗಳ್ಳತನ ಮಾಡುತ್ತಿದ್ದ ಉತ್ತರ ಪ್ರದೇಶ ಮೂಲದ ಆರೋಪಿಗಳ ಬಂಧನ

Last Updated :Aug 5, 2023, 10:10 PM IST

ABOUT THE AUTHOR

...view details