ETV Bharat / state

ಬೇರೆ ಬೇರೆ ರಾಜ್ಯಗಳಿಗೆ ತೆರಳಿ ಮನೆಗಳ್ಳತನ ಮಾಡುತ್ತಿದ್ದ ಉತ್ತರ ಪ್ರದೇಶ ಮೂಲದ ಆರೋಪಿಗಳ ಬಂಧನ

author img

By

Published : Aug 5, 2023, 5:52 PM IST

ಬೆಳಗ್ಗೆ ಬೀಗ ಹಾಕಿರುವ ಮನೆಗಳನ್ನು ಗುರುತು ಮಾಡಿ, ರಾತ್ರಿ ಹೊತ್ತು ಬೀಗ ಒಡೆದು ಕಳ್ಳತನ ಮಾಡುತ್ತಿದ್ದರು.

Theft Accused
ಕಳ್ಳತನ ಆರೋಪಿಗಳು

ಬೆಂಗಳೂರು: ಉತ್ತರ ಪ್ರದೇಶದಿಂದ ಬಂದು ಬೆಂಗಳೂರಿನಲ್ಲಿ ಮನೆಗಳ್ಳತನ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಸಂಜಯ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಜಸ್ವೀರ್, ಹರಿಶ್ಚಂದ್ರ, ಚಂದ್ರಭಾನು, ಮಿಂಟು ವಿಶ್ವಾಸ್ ಬಂಧಿತ ಆರೋಪಿಗಳಾಗಿದ್ದು, 78.65 ಲಕ್ಷ ಮೌಲ್ಯದ 1 ಕೆಜಿ 430 ಗ್ರಾಂ ತೂಕದ ಚಿನ್ನ ಹಾಗೂ ವಜ್ರದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕಳ್ಳತನ ಮಾಡಲೆಂದೇ ಉತ್ತರ ಪ್ರದೇಶದಿಂದ ಬೇರೆ ಬೇರೆ ರಾಜ್ಯಗಳ ನಗರಗಳಿಗೆ ತೆರಳುತ್ತಿದ್ದ ಆರೋಪಿಗಳು, ಹಗಲಿನಲ್ಲಿ ಓಡಾಡಿ ಡೋರ್ ಲಾಕ್ ಮಾಡಲಾಗಿರುವ ಮನೆಗಳನ್ನು ಗುರುತಿಸಿಕೊಳ್ಳುತ್ತಿದ್ದರು. ರಾತ್ರಿ ಸಂದರ್ಭದಲ್ಲಿ ಅದೇ ಮನೆಗಳ ಬಳಿ ತೆರಳಿ ಡೋರ್ ಲಾಕ್ ಮುರಿದು ಕಳ್ಳತನ ಮಾಡುತ್ತಿದ್ದರು. ಬಳಿಕ ಬೇರೆ ಬೇರೆಯಾಗಿ ವಾಪಸ್ ಉತ್ತರ ಪ್ರದೇಶಕ್ಕೆ ಮರಳುತ್ತಿದ್ದರು. ಇದೇ ರೀತಿ ಜುಲೈ 24ರಂದು ಬೆಂಗಳೂರಿಗೆ ಬಂದಿದ್ದ ಆರೋಪಿಗಳು, ಆ್ಯಕ್ಟಿವಾ ಸ್ಕೂಟರ್​ ಒಂದನ್ನು ಖರೀದಿಸಿ ಸುತ್ತಾಡಿ ಡಾಲರ್ಸ್ ಕಾಲೊನಿಯ ಮನೆಯೊಂದನ್ನು ಗುರುತಿಸಿಕೊಂಡಿದ್ದರು.

ಜುಲೈ 28 ರಂದು ರಾತ್ರಿ ಆ ಮನೆಯ ಡೋರ್ ಲಾಕ್ ಮುರಿದು ಚಿನ್ನ, ವಜ್ರದ ಆಭರಣಗಳನ್ನು ಕದ್ದು ಪರಾರಿಯಾಗಿದ್ದರು. ಮನೆಗಳ್ಳತನ ಪ್ರಕರಣ ದಾಖಲಿಸಿಕೊಂಡ ಸಂಜಯ ನಗರ ಠಾಣಾ ಪೊಲೀಸರು ತ್ವರಿತ ಕಾರ್ಯಾಚರಣೆ ಕೈಗೊಂಡು ಕನ್ಯಾಕುಮಾರಿ- ದೆಹಲಿ ಹೈವೇಯಲ್ಲಿರುವ ಶಾಹೀನ್ ಟೋಲ್ ಬಳಿ ಮೂವರು ಆರೋಪಿಗಳನ್ನು ಬಂಧಿಸಿದ್ದರು. ಬಳಿಕ ಬಂಧಿತರು ನೀಡಿದ ಮಾಹಿತಿ ಮೇರೆಗೆ ಪಶ್ಚಿಮ ದೆಹಲಿಯ ತಿಲಕ್ ನಗರ ಬಳಿ ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದಾರೆ‌.

ಬಂಧಿತರ ವಿರುದ್ಧ ದೆಹಲಿಯ ಮಂಗೋಲ್ ಪುರಿ, ಪ್ರೀತ್ ವಿಹಾರ್, ಕೇರಳದ ಎರ್ನಾಕುಲಂ, ರಾಜಸ್ಥಾನದ ಜೈಪುರ್ ಸಿಟಿ, ಮಹೇಶ್ ನಗರ್, ಜವಹಾರ್ ನಗರ್, ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳಿರುವುದು ತನಿಖಾ ವೇಳೆಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಐಷಾರಾಮಿ ಕಾರು ಕದ್ದಿದ್ದ ಆರೋಪಿ ಅಂದರ್: ಐಷಾರಾಮಿ ಕಾರುಗಳನ್ನೇ ಟಾರ್ಗೆಟ್​ ಮಾಡಿ ಕಳ್ಳತನ ಮಾಡುತ್ತಿದ್ದ ಪ್ರಕರಣವನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿ ಖದೀಮನನ್ನು ಬಂಧಿಸಿದ್ದ ಘಟನೆ ಇತ್ತೀಚೆಗೆ ಮೈಸೂರಿನ ವಿವಿ ಪುರಂನಲ್ಲಿ ನಡೆದಿತ್ತು. ಮೈಸೂರಿನಲ್ಲೇ 3 ಕಾರುಗಳನ್ನು ಕಳ್ಳತನ ಮಾಡಿದ್ದ ಈತ ಬೇರೆಯವರಿಗೆ ಕಾರು ಮಾರಾಟ ಮಾಡಿದ್ದನು. ಮೈಸೂರಿನ ಯಾದವಗಿರಿ ನಿವಾಸಿ ಬಿ ಸತೀಶ್​ ಅವರ ಕಾರು ಕಳ್ಳತನವಾಗಿತ್ತು. ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕಳ್ಳತನವಾಗಿದ್ದ ಕಾರಿನಲ್ಲಿ ಜಿಪಿಎಸ್​ ಇದ್ದ ಮಾಹಿತಿ ಪಡೆದ ಪೊಲೀಸರು ಅದರ ಆಧಾರದಲ್ಲಿ ಬೆಂಗಳೂರಿನಲ್ಲಿ ಕಾರು ಪತ್ತೆ ಮಾಡಿದ್ದರು. ಕಳ್ಳನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಜೂನ್​ 5ರಂದು ಮಾಜಿ ಶಾಸಕ ಎಂ ಶಿವಣ್ಣ ಅವರ ಮನೆಯ ಅಂಗಳದಲ್ಲಿದ್ದ ಕಾರನ್ನು ಕೂಡ ಈತನೇ ಕಳ್ಳತನ ಮಾಡಿರುವುದು ಬಯಲಾಗಿತ್ತು.

ಇದನ್ನೂ ಓದಿ: ಮೈಸೂರಿನಲ್ಲಿ ಐಷಾರಾಮಿ ಕಾರುಗಳ ಕಳ್ಳತನ ಮಾಡುತ್ತಿದ್ದ ಖದೀಮನ ಸೆರೆ.. ಪೊಲೀಸರಿಗೆ ಸುಳಿವು ನೀಡಿದ ಜಿಪಿಎಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.