ಕರ್ನಾಟಕ

karnataka

ಅನೈತಿಕ ಸಂಬಂಧಕ್ಕೆ ಅಡ್ಡಿ: ಮಗನನ್ನೇ ಕೊಲೆ ಮಾಡಿಸಿದ ತಾಯಿ, ಮೂವರ ಬಂಧನ

By

Published : Aug 6, 2022, 11:25 AM IST

bagalkot

ಅನೈತಿಕ ಸಂಬಂಧಕ್ಕೆ ಅಡ್ಡಿ ಆಗುತ್ತಿದ್ದಾನೆ ಎಂಬ ಕಾರಣಕ್ಕಾಗಿ ತಾಯಿಯೇ ಮಗನನ್ನು ಕೊಲೆ ಮಾಡಿಸಿದ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.

ಬಾಗಲಕೋಟೆ: ಅನೈತಿಕ ಸಂಬಂಧಕ್ಕೆ ಅಡ್ಡಿಯಾಗುತ್ತಿದ್ದ ಕಾರಣ ತಾಯಿಯೊಬ್ಬಳು ತನ್ನ ಮಗನನ್ನೇ ಕೊಲೆ ಮಾಡಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಕೊಲೆ ಪ್ರಕರಣ ಭೇದಿಸುವಲ್ಲಿ ಲೋಕಾಪುರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಮುಧೋಳ ತಾಲೂಕಿನ ನಾಗಣಾಪುರ ಗ್ರಾಮದ ವಸಂತ ಮಹಾಲಿಂಗಪ್ಪ ಕುರಬಳ್ಳಿ (28)ಕೊಲೆಯಾದ ವ್ಯಕ್ತಿ. ಆರೋಪಿಗಳಾದ ಮೂಡಲಗಿ ತಾಲೂಕಿನ ರಡ್ಡೇರಹಟ್ಟಿಗ್ರಾಮದ ಲಕ್ಷ್ಮಣ ಉರ್ಫ ಸಿಂಧೂರ ಬೀರನ್ನವರ, ಗೋಕಾಕ್ ತಾಲೂಕಿನ ವೆಂಕಟಾಪುರ ಗ್ರಾಮದ ಭೀಮಪ್ಪ ಮಳಲಿ, ಮುಧೋಳ ತಾಲೂಕಿನ ಜೀರಗಾಳ ಗ್ರಾಮದ ನಿಂಗಪ್ಪ ಬಳಗನ್ನವರ ವಶಕ್ಕೆ ಪಡೆದು, ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಜೊತೆಗೆ ತಾಯಿ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.

ಏನಿದು ಘಟನೆ? : ಆರೋಪಿ ನಿಂಗಪ್ಪ ಬಳಗನ್ನವರ ಜೊತೆ ಕೊಲೆಯಾದ ವಸಂತನ ತಾಯಿಗೆ ಅನೈತಿಕ ಸಂಬಂಧವಿತ್ತು. ಅಷ್ಟೇ ಅಲ್ಲದೆ, ಆಸ್ತಿ ವಿಚಾರವಾಗಿ ವಸಂತನಿಗೂ ಹಾಗೂ ಆತನ ಅಕ್ಕನ ಗಂಡಂದಿರಾದ ಲಕ್ಷ್ಮಣ ಉರ್ಫ ಸಿಂಧೂರ ಬೀರನ್ನವರ, ಭೀಮಪ್ಪ ಮಳಲಿ ಜೊತೆ ಜಗಳವಾಗಿತ್ತು. ಈ ಹಿನ್ನೆಲೆ ನಿಂಗಪ್ಪ, ಲಕ್ಷ್ಮಣ, ಭೀಮಪ್ಪ, ಮತ್ತು ವಸಂತನ ತಾಯಿ ಜೂನ್​ 19 ರಂದು ಆತನನ್ನು ಕೊಲೆ ಮಾಡಿ, ಗೋಣಿ ಚೀಲದಲ್ಲಿ ತುಂಬಿಕೊಂಡು ಬಂದು ಸವದತ್ತಿ ತಾಲೂಕಿನ ದಾಸನಾಳ ಗ್ರಾಮದ ಕಾಲುವೆಯಲ್ಲಿ ಎಸೆದು ಹೋಗಿದ್ದರು. ಬಳಿಕ ಜುಲೈ 6 ರಂದು ತಾಯಿಯೇ ನನ್ನ ಮಗ ಕಾಣೆಯಾಗಿದ್ದಾನೆಂದು ಲೋಕಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಇನ್ನೊಂದೆಡೆ, ಕೊಲೆಯಾದ ವಸಂತನ ಪತ್ನಿ ಭಾಗ್ಯಶ್ರೀ ಕುರಬಳ್ಳಿ, ತನ್ನ ಗಂಡನ್ನು ಅತ್ತೆ ಹಾಗೂ ಅತ್ತಿಗೆಯರ ಗಂಡಂದಿರು ಕೊಲೆ ಮಾಡಿ ಸಾಕ್ಷಿ ನಾಶ ಪಡಿಸುವ ಉದ್ದೇಶದಿಂದ ಎಲ್ಲೋ ಶವ ಬಿಸಾಕಿ ಬಂದಿದ್ದಾರೆ ಎಂದು ಆರೋಪಿಸಿ ಜುಲೈ 30 ರಂದು ದೂರು ನೀಡಿದ್ದರು.

ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ್​ ಅವರ ಮಾರ್ಗದರ್ಶನದಲ್ಲಿ ನಡೆದ ತನಿಖೆ ನೇತೃತ್ವವನ್ನು ಮುಧೋಳ ಸಿಪಿಐ ಅಯ್ಯನಗೌಡ ಪಾಟೀಲ ಹಾಗೂ ಪಿಎಸ್‌ಐ ಮಲ್ಲಿಕಾರ್ಜುನ ಬಿರಾದಾರ ವಹಿಸಿದ್ದು, ತನಿಖಾ ತಂಡವನ್ನು ರಚಿಸಿದ ಒಂದೇ ದಿನದಲ್ಲಿ ಪ್ರಕರಣ ಭೇದಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಕಾರ್ಯಚರಣೆಯಲ್ಲಿ ಭಾಗಿಯಾಗಿದ್ದ ಪೊಲೀಸ್ ಸಿಬ್ಬಂದಿ ಜಗದೀಶ ಕಾಂತಿ, ಜಿ.ಎಂ. ಕ್ಯಾತನ್, ಎಸ್.ಎಸ್. ಗಾಳಿ, ಎಂ.ಎಸ್. ಗುಲಗಾಲಜಂಬಗಿ, ಸಾತಪ್ಪ ಗಂಗಾಯಿ, ಆರ್.ಬಿ. ಗಲಗಲಿ, ಚಂದ್ರಶೇಖರ ಬಡಿಗೇರ, ಮೌನೇಶ ಪತ್ತಾರ, ದಾದಾಪೀರ ಅತ್ರಾವತ್ತ, ಬಸವರಾಜ ತಂಗಡಿ ಕಾರ್ಯವನ್ನು ಶ್ಲಾಘಿಸಿ ಸೂಕ್ತ ಬಹುಮಾನ ಘೋಷಿಸಲಾಗಿದೆ ಎಂದು ಎಸ್​ಪಿ ಜಯಪ್ರಕಾಶ ತಿಳಿಸಿದ್ದಾರೆ.

ಇದನ್ನೂ ಓದಿ:ಕಾರವಾರ: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ, ವೃದ್ಧನಿಗೆ 20 ವರ್ಷ ಜೈಲು ಶಿಕ್ಷೆ

ABOUT THE AUTHOR

...view details