ETV Bharat / state

ಮೋದಿ ಸೋಲಿಸಲು ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಅವಶ್ಯವಾಗಿದೆ: ಸಿ.ಎಂ. ಇಬ್ರಾಹಿಂ - CM Ibrahim

author img

By ETV Bharat Karnataka Team

Published : May 1, 2024, 9:19 AM IST

Congress  BJP  CM Ibrahim  Dharwad
ಮೋದಿ ಸೋಲಿಸಲು ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಅವಶ್ಯವಾಗಿದೆ: ಸಿ.ಎಂ. ಇಬ್ರಾಹಿಂ

''ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೋಲಿಸಲು ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಅವಶ್ಯವಾಗಿದೆ'' ಎಂದು ಹಿರಿಯ ರಾಜಕಾರಣಿ ಸಿ.ಎಂ. ಇಬ್ರಾಹಿಂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹುಬ್ಬಳ್ಳಿ: ''ಲೋಕಸಭಾ ಚುನಾವಣೆ ಬಳಿಕ ರಾಜ್ಯದಲ್ಲಿ ಮೂರನೇ ರಾಜಕೀಯ ಶಕ್ತಿ ಅಸ್ತಿತ್ವಗೊಳ್ಳಲಿದೆ. ಈಗಾಗಲೇ ಈ ಬಗ್ಗೆ ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಶ್ರೀಗಳೊಂದಿಗೆ ಸುದೀರ್ಘವಾಗಿ ಮಾತನಾಡಿದ್ದೇನೆ. ವಿಧಾನಸೌಧದಲ್ಲಿ ಬಸವತತ್ವದ ಆಡಳಿತ ಬಂದಾಗ ಮಾತ್ರ ರಾಜ್ಯದಲ್ಲಿ ಉತ್ತಮ ಆಡಳಿತ ಸಾಧ್ಯ'' ಎಂದು ಹಿರಿಯ ರಾಜಕಾರಣಿ ಸಿ.ಎಂ. ಇಬ್ರಾಹಿಂ ಹೇಳಿದ್ದಾರೆ.

ನಗರದಲ್ಲಿ ಮಂಗಳವಾರ ಮಾತನಾಡಿದ ‌ಅವರು, ''ನಮ್ಮ ತಾಯಿ ನಾಡು ಚೆನ್ನಾಗಿದ್ದರೆ, ದೇಶ ಚೆನ್ನಾಗಿರುತ್ತದೆ. ಒಬ್ಬ ರಾಷ್ಟ್ರದ ಪ್ರಧಾನಿ ಹಿಂದೂ, ಮುಸ್ಲಿಂ ಪ್ರತ್ಯೇಕ ಮಾಡಿ ರಾಜಕಾರಣ ಮಾಡುತ್ತಾರೆ. ಆದರೆ, ಹಿಂದಿನ ಪ್ರಧಾನಿಗಳು ಭಾರತವನ್ನು ಒಂದು ಗೂಡಿಸುವ ಮಾತು ಹೇಳತ್ತಾ ಇದ್ದರು. ಈ ಬಾರಿ ಬಿಜೆಪಿಯವರಿಗೆ ಲೋಕಸಭೆಯಲ್ಲಿ ಜನರು ತಕ್ಕಪಾಠ ಕಲಿಸತ್ತಾರೆ'' ಎಂದು ಹರಿಹಾಯ್ದರು.

''ಕರ್ನಾಟಕದಲ್ಲಿ ಕಾಂಗ್ರೆಸ್ ತಪ್ಪಿನಿಂದ ಬಿಜೆಪಿ ಬೆಳೆಯುತ್ತಿದೆ. ಇವತ್ತು ಬಸವತತ್ವದ ಆಧಾರದ ಮೇಲೆ ಸಂಘಟನೆ ಮಾಡಬೇಕಿದೆ. ಇದನ್ನೇ ನಾವು ತೀರ್ಮಾನ ಮಾಡಿದ್ದೇವೆ. ದಿಂಗಾಲೇಶ್ವರ ಶ್ರೀಗಳು ಈ ಬಗ್ಗೆ ಹೇಳಿಕೆಯನ್ನು ಕೊಡಲಿದ್ದಾರೆ'' ಎಂದರು. ಈ ಬಾರಿ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಪ್ರಹ್ಲಾದ್ ಜೋಶಿ ಅವರನ್ನು ಸೋಲಿಸಲು ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿ ಎಂದು ದಿಂಗಾಲೇಶ್ವರ ಶ್ರೀಗಳು ಹೇಳುತ್ತಾರೆ ಎಂದು ಹೇಳುವ ಮೂಲಕ ಶ್ರೀಗಳ ಮುಂದಿನ ರಾಜಕೀಯ ನಡೆಯನ್ನು ಸಿಎಂ ಇಬ್ರಾಹಿಂ ತಿಳಿಸಿದರು.

''ಈಗಾಗಲೇ ಎಲ್ಲೆಡೆ ಮೋದಿ ಅಲೆ ಕಡಿಮೆ ಆಗಿದೆ. ಬೆಂಗಳೂರಂತಹ ಮಹಾನಗರದಲ್ಲಿ ಮತದಾನ ಕಡಿಮೆ ಆಗಿದೆ. ಇದನ್ನು ನೋಡಿ ಆದರೂ ಮೋದಿ ರಾಜೀನಾಮೆ ಕೊಡಬೇಕು. ಸದ್ಯ ಕಾಂಗ್ರೆಸ್ ಮತ್ತು ಬಿಜೆಪಿ ಎರಡು ಪಕ್ಷಗಳು ಸರಿಯಿಲ್ಲ. ಆದರೆ, ಮೋದಿ ಸೋಲಿಸಲು ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಅವಶ್ಯವಾಗಿದೆ'' ಎಂದು ಅಭಿಪ್ರಾಯಪಟ್ಟರು.

ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಕೆ ಮಾಡಲಾಗುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ''ಪಾಪ ಆ ಹೆಣ್ಣು ಮಗು ಸತ್ತಿದೆ. ಆದರೆ, ಆ ಮಗು ಫೋಟೋ ಹಿಡಿದು, ಸತ್ತವಳ ಹೆಸರಿನ ಮೇಲೆ ಮತ ಕೇಳುತ್ತಿದ್ದಾರೆ'' ಎಂದು ಪ್ರಹ್ಲಾದ್ ಜೋಶಿ ವಿರುದ್ಧ ಹರಿಹಾಯ್ದರು. ''ನೇಹಾ ಕೊಲೆ ಮಾಡಿದ ಆರೋಪಿ ಫಯಾಜ್​ನನ್ನು ಅವತ್ತೆ ಗಲ್ಲಿಗೆ ಹಾಕಬೇಕಿತ್ತು. ಪ್ರಜ್ವಲ್ ನೂರಾರು ಹುಡುಗಿಯರ ಸೀರೆ ಎಳೆದಿದ್ದಾನೆ. ಈ ಬಗ್ಗೆ ಬಿ.ಎಸ್. ಯಡಿಯೂರಪ್ಪ, ಪ್ರಹ್ಲಾದ್ ಜೋಶಿ ಯಾಕೆ ಮಾತನಾಡುತ್ತಿಲ್ಲ. ಇದೇ ನಾ ಮೋದಿಯ ಅಚ್ಛೇ ದಿನ್ ಎಂದು ಪ್ರಶ್ನೆ ಮಾಡಿದರು. ಇದೀಗ ಪ್ರಜ್ವಲ್ ರೇವಣ್ಣಗೆ ಪಕ್ಷದಿಂದ ಹೊರಗಡೆ ಹಾಕುತ್ತೇವೆ ಎಂದು ಹೇಳುತ್ತಾರೆ. ಬಸರಿ ಆದ ಮೇಲೆ ಹೊರಗಡೆ ಹಾಕಿದರೇ ಏನೂ ಬರುತ್ತದೆ? ನೊಂದಿರುವ ಹೆಣ್ಣು ಮಕ್ಕಳಿಗೆ ಪರಿಹಾರ ಕೊಡೋರು ಯಾರು?'' ಎಂದು ಕಿಡಿಕಾರಿದರು.

ಇದನ್ನೂ ಓದಿ: ಲೋಕಸಮರ: ಕಾರ್ಯಚಟುವಟಿಕೆ ಇಲ್ಲದೆ ವಿಧಾನಸೌಧ ಬಿಕೋ; ನೀತಿ ಸಂಹಿತೆ ಸಡಿಲಿಕೆಗೆ ಮನವಿಗೆ ಚಿಂತನೆ - Vidhana Soudha

ETV Bharat Logo

Copyright © 2024 Ushodaya Enterprises Pvt. Ltd., All Rights Reserved.