ಕರ್ನಾಟಕ

karnataka

ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ನಿಧನ: ಗಣ್ಯರಿಂದ ಸಂತಾಪ

By

Published : Aug 7, 2023, 12:35 PM IST

Updated : Aug 7, 2023, 4:07 PM IST

ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ನಿಧನಕ್ಕೆ ರಾಜಕೀಯ ಗಣ್ಯರು, ಸಿನಿ ತಾರೆಯರು ಸಂತಾಪ ಸೂಚಿಸಿದ್ದಾರೆ.

dignitaries
ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ನಿಧನ

ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ನಿಧನ: ಗಣ್ಯರಿಂದ ಸಂತಾಪ

ಕನ್ನಡ ಚಿತ್ರರಂಗದ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ (38) ಹೃದಯಾಘಾತದಿಂದ ನಿಧನರಾಗಿದ್ದಾರೆ. ಸ್ಪಂದನಾ ಅವರು ತಮ್ಮ ಕುಟುಂಬಸ್ಥರು ಮತ್ತು ಸ್ನೇಹಿತೆಯರೊಂದಿಗೆ ಬ್ಯಾಂಕಾಕ್ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ, ಅವರಿಗೆ ಹೃದಯಾಘಾತವಾಗಿದೆ. ಸದ್ಯ ವಿಜಯ ರಾಘವೇಂದ್ರ ಮತ್ತು ಅವರ ತಂದೆ ಚಿನ್ನೇಗೌಡ, ಸಹೋದರ ಶ್ರೀಮುರಳಿ ಹಾಗೂ ಸ್ಪಂದನ ತಂದೆ ಶಿವರಾಮ್​ ಬ್ಯಾಂಕಾಕ್​ಗೆ ತೆರಳಿದ್ದಾರೆ. ಸ್ಪಂದನಾ ನಿಧನಕ್ಕೆ ರಾಜಕೀಯ ಗಣ್ಯರು, ಸಿನಿ ತಾರೆಯರು ಮತ್ತು ಸ್ನೇಹಿತರು ಸಂತಾಪ ಸೂಚಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಟ್ವೀಟ್​: "ಕನ್ನಡದ ಖ್ಯಾತ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನ ಅವರ ಅಕಾಲಿಕ ನಿಧನದ ವಾರ್ತೆ ಆಘಾತವನ್ನುಂಟು ಮಾಡಿದೆ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ. ಸ್ಪಂದನಾ ಅವರ ಅಗಲಿಕೆಯಿಂದ ನೊಂದಿರುವ ವಿಜಯ ರಾಘವೇಂದ್ರ ಹಾಗೂ ಬಿ.ಕೆ ಶಿವರಾಂ ಅವರ ಕುಟುಂಬಕ್ಕೆ ನನ್ನ ಸಂತಾಪಗಳು" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್​ ಮಾಡಿದ್ದಾರೆ.

ಡಿಸಿಎಂ ಡಿಕೆಶಿ ಸಂತಾಪ: "ಕನ್ನಡದ ಖ್ಯಾತ ನಟ ಶ್ರೀ ವಿಜಯ ರಾಘವೇಂದ್ರ ಅವರ ಧರ್ಮಪತ್ನಿ ಶ್ರೀಮತಿ ಸ್ಪಂದನಾ ರಾಘವೇಂದ್ರ ಅವರು ಬ್ಯಾಂಕಾಕ್ ನಲ್ಲಿ ದಿಢೀರ್ ಸಾವಿಗೀಡಾಗಿರುವ ಸಂಗತಿ ತಿಳಿದು ಅಪಾರ ನೋವುಂಟಾಯಿತು. ಇತ್ತೀಚೆಗಷ್ಟೇ ಅವರು ನನ್ನನ್ನು ಭೇಟಿಯಾಗಿ ಶುಭ ಹಾರೈಸಿದ್ದರು. ಸ್ಪಂದನಾ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಅವರ ಕುಟುಂಬ ವರ್ಗದವರು ಹಾಗೂ ಸ್ನೇಹಿತ ವರ್ಗಕ್ಕೆ ನನ್ನ ಸಾಂತ್ವನಗಳು" ಎಂದು ಡಿಸಿಎಂ ಡಿಕೆ ಶಿವಕುಮಾರ್​ ಸಂತಾಪ ಸೂಚಿಸಿದ್ದಾರೆ.

ಹೆಚ್​ಡಿಕೆ ಬೇಸರ: "ಹೃದಯಾಘಾತಕ್ಕೆ ತುತ್ತಾಗಿರುವುದು ನೋವಿನ ಸಂಗತಿ. ಚಿಕ್ಕ ವಯಸ್ಸಿನಲ್ಲಿ ಆರೋಗ್ಯವಾಗಿ ಇದ್ದೋರು ಇಂತಹ ಸಾವು ಕಂಡಿರುವುದು ದುಃಖ ತಂದಿದೆ. ಅವರ ಕುಟುಂಬದವರಿಗೆ ಈ ದುಃಖ ಭರಿಸುವ ಶಕ್ತಿ ಭಗವಂತ ನೀಡಲಿ. ಇದೊಂದು ಆಘಾತಕಾರಿ ಘಟನೆ. ಕೋವಿಡ್ ನಂತರ ಇಂತಹ ಘಟನೆಗಳು ಅಚ್ಚರಿ ರೂಪದಲ್ಲಿ ಆಗುತ್ತಿವೆ. ಕೋವಿಡ್ ನಂತರ ಆದ ಕೆಲ ಸಮಸ್ಯೆ, ಮನುಷ್ಯನ ದೇಹದ ಮೇಲೆ ಆಗಿರುವ ಸಮಸ್ಯೆಗಳಿಂದ ಹೀಗೆ ಆಗುತ್ತಿದೆ. ಪ್ರತಿಯೊಬ್ಬರು ಎಚ್ಚರಿಕೆಯಿಂದ, ಜಾಗೃತೆಯಿಂದ ಆರೋಗ್ಯದ ಎಚ್ಚರ ವಹಿಸಬೇಕು. ಆಗಾಗ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಕೆಲಸವೂ ಆಗಬೇಕು. ಚಿಕ್ಕ ವಯಸ್ಸಿನಲ್ಲಿ ಇಂತಹ ಸಾವು ಕುಟುಂಬದಲ್ಲಿ ದೊಡ್ಡ ನೋವು ತರಿಸಿದೆ. ಆ ನೋವಿನಿಂದ ಹೊರ ಬರೋದು ತುಂಬಾ ಕಷ್ಟ" ಎಂದು ಸ್ಪಂದನಾ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್.​ಡಿ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.

ಮಾಜಿ ಸಚಿವ ಅಶ್ವತ್ಥನಾರಾಯಣ ಮಾಧ್ಯಮದೊಂದಿಗೆ ಮಾತನಾಡಿ, "ಸ್ಪಂದನಾ ವಿಜಯ ರಾಘವೇಂದ್ರ ಅವರು ಸಣ್ಣ ವಯಸ್ಸಿನಲ್ಲಿಯೇ ನಿಧನರಾಗಿದ್ದಾರೆ. ನಂಬಲು ಅಸಾಧ್ಯವಾದ ಘಟನೆಯಿದು. ಸ್ಪಂದನಾ ಕುಟುಂಬದವರಿಗೆ, ತಂದೆ ತಾಯಿಗೆ, ವಿಜಯ್​ ರಾಘವೇಂದ್ರ ಅವರಿಗೆ ಈ ನೋವನ್ನು ಭರಿಸುವ ಶಕ್ತಿಯನ್ನು ಆ ಭಗವಂತ ನೀಡಲಿ" ಎಂದರು. ಬಳಿಕ ಕಾಂಗ್ರೆಸ್​ ನಾಯಕ, ಸ್ಪಂದನಾ ಅವರ ಚಿಕ್ಕಪ್ಪ ಬಿ ಕೆ ಹರಿಪ್ರಸಾದ್ ಮಾತನಾಡಿ, ಸ್ಪಂದನಾ ನಿಧನಕ್ಕೆ ಸಂತಾಪ ಸೂಚಿಸಿದರು.

"ನಟ ವಿಜಯ ರಾಘವೇಂದ್ರರವರ ಧರ್ಮಪತ್ನಿ ಸ್ಪಂದನಾ ಹೃದಯಾಘಾತದಿಂದ ನಿಧನರಾದ ಸುದ್ದಿ ಕೇಳಿ ಆಘಾತವಾಗಿದೆ. ಅತಿ ಸಣ್ಣ ವಯಸ್ಸಿಗೆ ಆಗುವ ಹೃದಯಾಘಾತದ ದುರ್ಘಟನೆಗಳು ನನ್ನ ಮನಸ್ಸನ್ನು ವಿಚಲಿತಗೊಳಿಸಿವೆ. ಸ್ಪಂದನಾ ಅವರ ಸಾವು ಅನಿರೀಕ್ಷಿತ. ವಿಜಯ್ ರಾಘವೇಂದ್ರ ಕುಟುಂಬದ ಶೋಕದಲ್ಲಿ ನಾನೂ ಭಾಗಿ" ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್​ ಗುಂಡೂರಾವ್​ ಟ್ವೀಟ್​ ಮಾಡಿ ಸಂತಾಪ ಸೂಚಿಸಿದ್ದಾರೆ.

"ಮೊದಲು ವಿಷಯ ತಿಳಿದಾಗ ಈ ಸುದ್ದಿ ಸುಳ್ಳಾಗಿರಲಿ ಅಂತ ಬೇಡಿಕೊಂಡೆ. ಆದರೆ, ಭಗವಂತನೂ ನಿಷ್ಕರುಣಿ ಆಗ್ಬಿಟ್ರು. ಇದು ನಿಜಕ್ಕೂ ದೊಡ್ಡ ಶಾಕ್​. ಸ್ಪಂದನಾ ಅವರ ಆತ್ಮಕ್ಕೆ ಶಾಂತಿ ಸಿಗಲಿ. ರಾಘಣ್ಣನಿಗೆ ಈ ನೋವು ಭರಿಸೋ ಶಕ್ತಿ ಭಗವಂತ ಕೊಡಲಿ #ಓಂ ಶಾಂತಿ" ಎಂದು ನಟ, ಬಿಗ್​ ಬಾಸ್​ ಮಾಜಿ ಸ್ಪರ್ಧಿ ಕಿರಿಕ್​ ಕೀರ್ತಿ ಇನ್​ಸ್ಟಾದಲ್ಲಿ ಸ್ಪಂದನಾ ಫೋಟೋ ಹಂಚಿಕೊಂಡು ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ:ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಹೃದಯಾಘಾತದಿಂದ ನಿಧನ

Last Updated :Aug 7, 2023, 4:07 PM IST

ABOUT THE AUTHOR

...view details