ಕರ್ನಾಟಕ

karnataka

ಆಮ್ ಆದ್ಮಿ ಪಕ್ಷದ ಮಾನ್ಯತೆ ರದ್ದತಿಗೆ ನಿವೃತ್ತ ಅಧಿಕಾರಿಗಳಿಂದ ಚು.ಆಯೋಗಕ್ಕೆ ಪತ್ರ

By

Published : Sep 16, 2022, 11:43 AM IST

ಆಮ್ ಆದ್ಮಿ ಪಕ್ಷದ ಮಾನ್ಯತೆ ರದ್ದುಗೊಳಿಸುವಂತೆ ನಿವೃತ್ತ ಅಧಿಕಾರಿಗಳಿಂದ ಆಯೋಗಕ್ಕೆ ಪತ್ರ
Ex bureaucrats write to EC seek de recognition of AAP

ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿರುವ ಆಮ್ ಆದ್ಮಿ ಪಕ್ಷದ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ 56 ನಿವೃತ್ತ ಅಧಿಕಾರಿಗಳು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.

ನವದೆಹಲಿ: ಗುಜರಾತ್​ನ ಸರ್ಕಾರಿ ನೌಕರರು ತನ್ನ ಪಕ್ಷದ ಪರವಾಗಿ ಕೆಲಸ ಮಾಡುವಂತೆ ಅವರಿಗೆ ಆಮಿಷ ಒಡ್ಡಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಕಾರಣಕ್ಕೆ ಆಮ್ ಆದ್ಮಿ ಪಕ್ಷದ ಮಾನ್ಯತೆಯನ್ನು ರದ್ದುಗೊಳಿಸುವಂತೆ ಮತ್ತು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಕೋರಿ ನಿವೃತ್ತ ಸರ್ಕಾರಿ ಅಧಿಕಾರಿಗಳ ಗುಂಪೊಂದು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ.

ಎಎಪಿಯಿಂದ ಚುನಾವಣಾ ಚಿಹ್ನೆಗಳ (ಮೀಸಲಾತಿ ಮತ್ತು ಹಂಚಿಕೆ) ಆದೇಶದ ಸೆಕ್ಷನ್ 1 ಎ ಉಲ್ಲಂಘನೆಯಾಗಿರುವುದನ್ನು ಉಲ್ಲೇಖಿಸಿ ನಿವೃತ್ತ ಅಧಿಕಾರಿಗಳ ಗುಂಪು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ ಎಂದು ಕರ್ನಾಟಕದ ಮಾಜಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಂ. ಮದನ್ ಗೋಪಾಲ್ ಹೇಳಿದ್ದಾರೆ.

ರಾಜ್​ಕೋಟ್​ನಲ್ಲಿ ಕೇಜ್ರಿವಾಲ್ ಮಾತನಾಡಿದ್ದು ಸಂಪೂರ್ಣ ತಪ್ಪು. ಸಂವಿಧಾನದಲ್ಲಿ ನಂಬಿಕೆ ಇರುವ ನಮಗೆ ಇದರಿಂದ ನೋವಾಗಿದೆ. ಒಂದು ರಾಜ್ಯದ ಮುಖ್ಯಮಂತ್ರಿಗಳಿಂದ ಇಂಥ ವಿವಾದಾತ್ಮಕ ಮತ್ತು ಅಸಮತೋಲನದ ಹೇಳಿಕೆಯನ್ನು ನಾವು ನಿರೀಕ್ಷೆ ಮಾಡಿರಲಿಲ್ಲ ಎಂದು ಮದನ ಗೋಪಾಲ್ ಹೇಳಿದರು.

ಚುನಾವಣಾ ಪೂರ್ವದಲ್ಲಿ ಪ್ರಚಾರ ಮಾಡುವುದು ಅವರ ಹಕ್ಕು. ಆದರೆ ಸಾರ್ವಜನಿಕ ಸಾರಿಗೆ ನಿಗಮಗಳ ಚಾಲಕರು, ಕಂಡಕ್ಟರ್‌ಗಳು ಮತ್ತು ಪೊಲೀಸ್ ಸಿಬ್ಬಂದಿಗೆ ನಿರ್ದಿಷ್ಟ ಪಕ್ಷಕ್ಕಾಗಿ ಕೆಲಸ ಮಾಡುವಂತೆ ಅವರು ಮಾಡಿದ ಮನವಿ ಸಂಪೂರ್ಣ ತಪ್ಪು. ಸರ್ಕಾರಿ ನೌಕರರು ಯಾವುದೇ ರಾಜಕೀಯ ಪಕ್ಷಕ್ಕಾಗಿ ಪ್ರಚಾರ ಮಾಡುವಂತಿಲ್ಲ. ನಮಗೆ ನೀತಿ ಸಂಹಿತೆ ಇದೆ. ನಮ್ಮ ನಿಷ್ಠೆಯು ಭಾರತದ ಸಂವಿಧಾನದೊಂದಿಗೆ ಇದೆ. ಈ ಬೆಳವಣಿಗೆಯು ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳಿಗೆ ಒಳ್ಳೆಯದಲ್ಲ ಎಂದು ಮಾಜಿ ಅಧಿಕಾರಿ ಹೇಳಿದರು.

ಅರವಿಂದ್ ಕೇಜ್ರಿವಾಲ್ ಕೂಡ ಓರ್ವ ಸರ್ಕಾರಿ ಅಧಿಕಾರಿಯಾಗಿದ್ದರು ಮತ್ತು ಮಾಡಬೇಕಾದ ಮತ್ತು ಮಾಡಬಾರದ ವಿಷಯಗಳ ಬಗ್ಗೆ ಹೆಚ್ಚು ತಿಳಿದಿರುತ್ತಾರೆ. ಇಂಥವರು ಪತ್ರಿಕಾಗೋಷ್ಠಿಯಲ್ಲಿ ಬೇಜವಾಬ್ದಾರಿಯಿಂದ ಮಾತನಾಡುವುದು ತುಂಬಾ ತಪ್ಪು ಎಂದು ಗೋಪಾಲ್ ಹೇಳಿದರು.

ಭಾರತದ ಸಂವಿಧಾನದ ಕಾನೂನು ಮತ್ತು ನಿಬಂಧನೆಗಳನ್ನು ದೃಢವಾಗಿ ನಂಬಿರುವ ಅಧಿಕಾರಿಗಳಾಗಿರುವ ನಾವು ರಾಜಕೀಯ ಪಕ್ಷಗಳಿಂದ ನಿಯಮಗಳ ಉಲ್ಲಂಘನೆಯ ವಿರುದ್ಧ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದೇವೆ. ಚುನಾವಣಾ ಆಯೋಗವು ಈ ರಾಜಕೀಯ ಪಕ್ಷಗಳ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅವರು ಹೇಳಿದರು.

ಅರವಿಂದ್ ಕೇಜ್ರಿವಾಲ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ 56 ನಿವೃತ್ತ ಅಧಿಕಾರಿಗಳು ಗುರುವಾರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.

ಇದನ್ನೂ ಓದಿ:ಚುನಾವಣಾ ಆಯೋಗ 'ಅನಗತ್ಯ ಸಂಸ್ಥೆ'ಯೆಂದು ಕಿತ್ತೊಗೆದ ತಾಲಿಬಾನ್

ABOUT THE AUTHOR

...view details