ಕರ್ನಾಟಕ

karnataka

ಅನಾರೋಗ್ಯದಿಂದ ಬಳಲುತ್ತಿದ್ದ ಬಿಜೆಪಿ ಸಂಸದ ಗಿರೀಶ್ ಬಾಪಟ್ ನಿಧನ: ಪ್ರಧಾನಿ ಮೋದಿ ಸಂತಾಪ

By

Published : Mar 29, 2023, 3:42 PM IST

ಅನಾರೋಗ್ಯದಿಂದ ಬಳಲುತ್ತಿದ್ದ ಪುಣೆಯ ಬಿಜೆಪಿ ಸಂಸದ ಗಿರೀಶ್ ಬಾಪಟ್ ವಿಧಿವಶರಾಗಿದ್ದಾರೆ.

bjp-mp-girish-bapat-has-passed-away-in-pune
ಅನಾರೋಗ್ಯದಿಂದ ಬಳಲುತ್ತಿದ್ದ ಬಿಜೆಪಿ ಸಂಸದ ಗಿರೀಶ್ ಬಾಪಟ್ ನಿಧನ: ಪ್ರಧಾನಿ ಮೋದಿ ಸಂತಾಪ

ಪುಣೆ (ಮಹಾರಾಷ್ಟ್ರ): ಮಹಾರಾಷ್ಟ್ರದ ಪುಣೆಯ ಬಿಜೆಪಿ ಸಂಸದ ಗಿರೀಶ್ ಬಾಪಟ್ ಇಂದು ನಿಧನರಾಗಿದ್ದಾರೆ. 74 ವರ್ಷ ವಯಸ್ಸಿನ ಅವರು ಕಳೆದ ಕೆಲವು ತಿಂಗಳಿಂದ ಉಸಿರಾಟದ ಕಾಯಿಲೆಯಿಂದ ಬಳಲುತ್ತಿದ್ದರು. ಇಂದು ಪುಣೆಯ ದೀನಾನಾಥ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಗಿರೀಶ್ ಬಾಪಟ್​ ಅವರ ನಿಧನಕ್ಕೆ ಪ್ರಧಾನಿ ಮೋದಿ, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್​ ಶಿಂಧೆ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.

ಅನಾರೋಗ್ಯದ ಹಿನ್ನೆಲೆಯಲ್ಲಿ ಬಿಜೆಪಿ ಸಂಸದ ಗಿರೀಶ್ ಬಾಪಟ್​ ಅವರನ್ನು ಕಳೆದ ಎರಡು ದಿನಗಳಿಂದ ದೀನಾನಾಥ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆರೋಗ್ಯ ಸ್ಥಿತಿ ಹದಗೆಟ್ಟಿದ್ದರಿಂದ ಡಯಾಲಿಸಿಸ್‌ಗೂ ಒಳಗಾಗಿದ್ದರು. ಇತ್ತೀಚಿಗೆ ನಡೆದ ಕಸ್ಬಾ ಉಪಚುನಾವಣೆಯಲ್ಲಿ ಆಕ್ಸಿಜನ್​ ಅಳವಡಿಸಿಕೊಂಡು ಪ್ರಚಾರ ಮಾಡಿದ್ದರು. ಅಲ್ಲದೇ, ಆಕ್ಸಿಜನ್​ನೊಂದಿಗೆ ಬಂದು ಮತದಾನ ಮಾಡಿದ್ದರು. ಎರಡು ದಿನಗಳ ಹಿಂದೆ ಮತ್ತೆ ಬಾಪಟ್ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿತ್ತು. ಗಿರೀಶ್ ಅವರು ಪತ್ನಿ, ಮಗ, ಸೊಸೆ ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.

ಮಹಾರಾಷ್ಟ್ರ ಬಿಜೆಪಿಗೆ ಇಂದು ತುಂಬಲಾರದ ನಷ್ಟ ಮತ್ತು ದುರದೃಷ್ಟಕರ ದಿನವಾಗಿದೆ. ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಹಾಗೂ ಪುಣೆ ಸಂಸದ ಗಿರೀಶ್ ಬಾಪಟ್ ಅವರು ನಮ್ಮನ್ನು ಅಗಲಿದ್ದಾರೆ. ಕಳೆದ ಒಂದೂವರೆ ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಸಂಜೆ 7 ಗಂಟೆಗೆ ಪುಣೆಯ ವೈಕುಂಠ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅಲ್ಲದೇ, ರಾಜ್ಯದ ವಿವಿಧ ಪಕ್ಷಗಳ ಮುಖಂಡರು ಕೂಡ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಬಿಜೆಪಿ ಪುಣೆ ನಗರಾಧ್ಯಕ್ಷ ಜಗದೀಶ್ ಮುಲಿಕ್ ಮಾಹಿತಿ ನೀಡಿದ್ದಾರೆ.

ಪ್ರಧಾನಿ ಮೋದಿ ಸಂತಾಪ:ಗಿರೀಶ್ ಬಾಪಟ್​ ಅವರ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ ಸೂಚಿಸಿ ಟ್ವೀಟ್​ ಮಾಡಿದ್ದಾರೆ. ಗಿರೀಶ್​ ಬಾಪಟ್ ಅವರು ಸಮಾಜದಲ್ಲಿ ಶ್ರದ್ಧೆಯಿಂದ ಸೇವೆ ಸಲ್ಲಿಸಿದ್ದರು. ಅವರು ವಿನಮ್ರ ಮತ್ತು ಶ್ರಮಶೀಲ ನಾಯಕರಾಗಿದ್ದರು. ಮಹಾರಾಷ್ಟ್ರದ ಅಭಿವೃದ್ಧಿಗಾಗಿ ತುಂಬಾ ಕೆಲಸ ಮಾಡಿದ್ದರು. ವಿಶೇಷವಾಗಿ ಪುಣೆಯ ಬೆಳವಣಿಗೆಯ ಬಗ್ಗೆಯೂ ಉತ್ಸಾಹರಾಗಿದ್ದರು. ಅವರ ಅಗಲಿಕೆ ದುಃಖ ತಂದಿದೆ. ಅವರ ಕುಟುಂಬ ಮತ್ತು ಬೆಂಬಲಿಗರಿಗೆ ಸಂತಾಪ ಮತ್ತು ಓಂ ಶಾಂತಿ ಎಂದು ಪ್ರಧಾನಿ ತಿಳಿಸಿದ್ದಾರೆ.

ಅಲ್ಲದೇ, ಗಿರೀಶ್ ಬಾಪತ್ ಮಹಾರಾಷ್ಟ್ರದಲ್ಲಿ ಬಿಜೆಪಿಯನ್ನು ಕಟ್ಟುವಲ್ಲಿ ಮತ್ತು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸಾರ್ವಜನಿಕ ಕಲ್ಯಾಣದ ಸಮಸ್ಯೆಗಳನ್ನು ಪ್ರಸ್ತಾಪಿಸಿದ ಜನರನ್ನು ತಲುಪಿಸಿದ ಶಾಸಕರಾಗಿದ್ದರು. ಪ್ರಭಾವಶಾಲಿ ಸಚಿವರಾಗಿ ಮತ್ತು ನಂತರ ಪುಣೆಯ ಸಂಸದರಾಗಿಯೂ ಗುರುತಿಸಿಕೊಂಡಿದ್ದರು. ಅವರ ಉತ್ತಮ ಕೆಲಸವು ಹಲವಾರನ್ನು ಪ್ರೇರೇಪಿಸುತ್ತದೆ ಎಂದು ಮೋದಿ ತಮ್ಮ ಟ್ವೀಟ್​ನಲ್ಲಿ ಹೇಳಿದ್ದಾರೆ.

ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಮಾತನಾಡಿ, ಬಿಜೆಪಿ ಸಂಸದ ಗಿರೀಶ್ ಬಾಪಟ್ ಅವರ ದುಃಖದ ನಿಧನಕ್ಕೆ ಸಂತಾಪ ವ್ಯಕ್ತಪಡಿಸುತ್ತೇನೆ. ತಳಮಟ್ಟದ ಕಾರ್ಯಕರ್ತನಾಗಿ ರಾಜಕೀಯ ಆರಂಭಿಸಿದ್ದ ಗಿರೀಶ್ ಬಾಪಟ್ ಆದರ್ಶ ಜನಪ್ರತಿನಿಧಿಯಾಗಿದ್ದರು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:66ಕ್ಕೂ ಹೆಚ್ಚು ದೇಶಗಳು ಹಿಂದೂ ಧರ್ಮವನ್ನು ಗುರುತಿಸುವುದಿಲ್ಲ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ

ABOUT THE AUTHOR

...view details