ಪಾರ್ಕ್ ಮಾಡಿದ್ದ ಕಾರಿನ ಮೇಲೆ ಕಲ್ಲು ಎತ್ತಿ ಹಾಕಿದ ಕಿಡಿಗೇಡಿಗಳು - ವಿಡಿಯೋ
Published : Mar 19, 2024, 12:45 PM IST
ಬೆಂಗಳೂರು: ಮನೆ ಮುಂದೆ ಪಾರ್ಕ್ ಮಾಡಿದ್ದ ಕಾರಿನ ಗಾಜಿನ ಮೇಲೆ ಪುಂಡರಿಬ್ಬರು ಕಲ್ಲು ಎತ್ತಿ ಹಾಕಿರುವ ಘಟನೆ ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯ ಅಂದ್ರಹಳ್ಳಿಯಲ್ಲಿ ನಡೆದಿದೆ. ಮಾರ್ಚ್ 13ರ ರಾತ್ರಿ 2:30ರ ಸುಮಾರಿಗೆ ಘಟನೆ ನಡೆದಿದ್ದು, ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಕಿಡಿಗೇಡಿಗಳು ಕಾರಿನ ಮುಂಭಾಗದ ಗಾಜಿನ ಮೇಲೆ ಕಲ್ಲು ಎತ್ತಿಹಾಕಿ ಪರಾರಿಯಾಗಿದ್ದಾರೆ. ಕಿಡಿಗೇಡಿಗಳ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ವೈಯಕ್ತಿಕ ವೈಷಮ್ಯದ ಕಾರಣದಿಂದಲೂ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದ್ದು, ಘಟನೆ ಕುರಿತು ಕಾರಿನ ಮಾಲೀಕ ನೀಡಿದ ದೂರಿನನ್ವಯ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.
ಇದೇ ರೀತಿ ಜನವರಿ 16 ರಂದು ಆಟೋ ರಿಕ್ಷಾದಲ್ಲಿ ಬಂದ ಕಿಡಿಗೇಡಿಗಳ ಗುಂಪೊಂದು ಎರಡು ಕೆಎಸ್ಆರ್ಟಿಸಿ ಬಸ್ಗಳ ಗಾಜುಗಳನ್ನು ಒಡೆದಿರುವ ಘಟನೆ ಮೆಜೆಸ್ಟಿಕ್ ಬಳಿ ನಡೆದಿತ್ತು. ರಾತ್ರಿ ಹೊತ್ತು ಬೆಂಗಳೂರು ಮೈಸೂರು ಮಾರ್ಗದಲ್ಲಿ ಸಂಚರಿಸುವ ಬಸ್ಗಳನ್ನು ಅಡ್ಡಗಟ್ಟಿದ್ದಲ್ಲದೇ, 2ಕಾರು, ಆಟೋಗಳ ಗಾಜನ್ನು ಒಡೆದಿದ್ದರು. ಸಿಲಿಕಾನ್ ಸಿಟಿಯಲ್ಲಿ ಪುಂಡರ ಹಾವಳಿ ಹೆಚ್ಚಾಗಿದ್ದು, ಕಠಿಣ ಕ್ರಮ ಕೈಗೊಳ್ಳುವ ಮೂಲಕ ಬ್ರೇಕ್ ಹಾಕಬೇಕಾಗಿದೆ.
ಇದನ್ನೂ ಓದಿ: ಮಾರುಕಟ್ಟೆಗೆ ಅತಿ ವೇಗವಾಗಿ ನುಗ್ಗಿದ ಕಾರು; ಮಹಿಳೆ ಸಾವು, 10 ಮಂದಿಗೆ ಗಾಯ