ETV Bharat / state

ಕರ್ನಾಟಕ ಬ್ಯಾಂಕ್​ಗೆ ಕನ್ನ, ಲಾಕರ್ ಹೊತ್ತೊಯ್ದ ಪ್ರಕರಣ : ಮೂವರು ಆರೋಪಿಗಳ ಬಂಧನ

author img

By ETV Bharat Karnataka Team

Published : Mar 11, 2024, 6:43 PM IST

three  acused arrested
ಮೂವರು ಆರೋಪಿಗಳ ಬಂಧನ

ಅಡ್ಯನಡ್ಕ ಕರ್ನಾಟಕ ಬ್ಯಾಂಕ್ ಶಾಖೆಯ ಕಳವು ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ.

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯನ್ನು ಬೆಚ್ಚಿ ಬೀಳಿಸಿದ್ದ ಅಡ್ಯನಡ್ಕ ಕರ್ನಾಟಕ ಬ್ಯಾಂಕ್ ಶಾಖೆಯ ಕಳವು ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಬೀಗ ಮುರಿದು ಕೋಟ್ಯಂತರ ಮೌಲ್ಯದ ನಗದು ಕದ್ದೊಯ್ದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಟ್ವಾಳ ತಾಲೂಕು ಬಿ. ಮೂಡ ಗ್ರಾಮದ ಮಹಮ್ಮದ್ ರಫೀಕ್ (35), ಮಂಜೇಶ್ವರ ತಾಲೂಕು ಉಪ್ಪಳ ಮೊಗ್ರಾಲ್ ಬಿಂಗಿನಾನಿ ನಿವಾಸಿ ಇಬ್ರಾಹಿಂ ಕಲಂದರ್ (41) ಹಾಗೂ ಮಂಜೇಶ್ವರ ತಾಲೂಕು ಬಾಯಾರು ಗ್ರಾಮದ ಗಾಳಿಯಡ್ಕ ನಿವಾಸಿ ದಯಾನಂದ ಎಸ್ (37)ಬಂಧಿತ ಆರೋಪಿಗಳು.

ಘಟನೆಯಲ್ಲಿ ಐವರು ಭಾಗಿಯಾಗಿದ್ದು, ಇನ್ನಿಬ್ಬರಿಗಾಗಿ ಪೊಲೀಸರ ಶೋಧಕಾರ್ಯ ಮುಂದುವರೆದಿದೆ. ಬಂಧಿತ ಆರೋಪಿಗಳನ್ನು ಸ್ಥಳ ಮಹಜರಿಗಾಗಿ ಪೊಲೀಸರು ಸೋಮವಾರ ಅಡ್ಯನಡ್ಕಕ್ಕೆ ಕರೆದುಕೊಂಡು ಬಂದಿದ್ದರು. ಫೆ. 7ರಂದು ಕಳ್ಳತನ ನಡೆದಿದ್ದು, ವಿಟ್ಲ ಪೊಲೀಸರು ಪ್ರಕರಣ ದಾಖಲಿಸಿದ್ದರು. ಫೆ.28ರಂದು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿತ್ತು ಎಂದು ಹೇಳಲಾಗಿದೆ. ತನಿಖೆ ಬಳಿಕ ಮಾ.10ರಂದು ಪೊಲೀಸರು ಆರೋಪಿಗಳ ಬಂಧನ ಖಚಿತಪಡಿಸಿದ್ದಾರೆ.

ಬ್ಯಾಂಕ್ ಕಿಟಕಿ ಬಾಗಿಲುಗಳನ್ನು ಮುರಿದು ಸರಳು ತುಂಡರಿಸಿದ ಕಳ್ಳರು ಒಳನುಗ್ಗಿದ್ದರು. ಸೇಫ್ ಲಾಕರ್​ ಅನ್ನು ಗ್ಯಾಸ್ ಕಟ್ಟರ್ ನಿಂದ ತುಂಡರಿಸಿದ್ದರು. ಕೆಲವು ವರ್ಷಗಳಿಂದ ವೆಲ್ಡರ್ ಆಗಿದ್ದ ವ್ಯಕ್ತಿ ಸೇಫ್​ ಲಾಕರ್ ಕಟ್ಟಿಂಗ್​ಗೆ ಸಹಕರಿಸಿದ್ದ. ಆರೋಪಿಗಳನ್ನು ಸ್ಥಳ ಮಹಜರಿಗಾಗಿ ಪೊಲೀಸರು ಸೋಮವಾರ ಅಡ್ಯನಡ್ಕಕ್ಕೆ ಕರೆದುಕೊಂಡು ಬಂದಿದ್ದರು.

ಈ ಆರೋಪಿಗಳು ಕಾಸರಗೋಡು ಜಿಲ್ಲೆಯ ಹಲವೆಡೆ ಹಾಗೂ ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಕೆಲವು ಕಡೆ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎಂಬುದು ತಿಳಿದು ಬಂದಿದೆ. ದಕ್ಷಿಣ ಕನ್ನಡ ಜಿಲ್ಲಾ ಎಸ್​ಪಿ ರಿಷ್ಯಂತ್ ನೇತೃತ್ವದಲ್ಲಿ ಆರೋಪಿಗಳ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಲಾಗಿತ್ತು.

ಇದನ್ನೂ ಓದಿ : ಬಂಟ್ವಾಳ: ಕೋಟ್ಯಂತರ ಮೌಲ್ಯದ ಪಡಿತರ ಅಕ್ಕಿ ಕಳವು, ಇಬ್ಬರ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.