ETV Bharat / state

ಮೈಸೂರು: ಬೌದ್ಧ ಧರ್ಮದ ವಿಧಿ ವಿಧಾನದಂತೆ ಸಂಸದ ಶ್ರೀನಿವಾಸ್ ಪ್ರಸಾದ್ ಅಂತ್ಯಕ್ರಿಯೆ - Srinivasa Prasad funeral

author img

By ETV Bharat Karnataka Team

Published : Apr 30, 2024, 3:44 PM IST

ಶ್ರೀನಿವಾಸ್ ಪ್ರಸಾದ್ ಅಂತ್ಯಕ್ರಿಯೆ
ಶ್ರೀನಿವಾಸ್ ಪ್ರಸಾದ್ ಅಂತ್ಯಕ್ರಿಯೆ

ವಿಧಿವಶರಾದ ಸಂಸದ ಶ್ರೀನಿವಾಸ್‌ ಪ್ರಸಾದ್ ಅವರ ಅಂತ್ಯಕ್ರಿಯೆಯನ್ನು ಅಂಬೇಡ್ಕರ್​ ಟ್ರಸ್ಟ್​ ಆವರಣದಲ್ಲಿ ನಡೆಸಲಾಯಿತು.

ಮೈಸೂರು: ವಯೋಸಹಜ ಕಾಯಿಲೆಯಿಂದ ಮೃತಪಟ್ಟ ಸಂಸದ ಶ್ರೀನಿವಾಸ್‌ ಪ್ರಸಾದ್ ಅವರ ಅಂತ್ಯಕ್ರಿಯೆಯನ್ನು ಇಲ್ಲಿನ ಅಂಬೇಡ್ಕರ್​ ಟ್ರಸ್ಟ್​ ಆವರಣದಲ್ಲಿ ಬೌದ್ಧ ಧರ್ಮದ ವಿಧಿ-ವಿಧಾನಗಳ ಪ್ರಕಾರ ಮಂಗಳವಾರ ಮಧ್ಯಾಹ್ನ ನಡೆಸಲಾಯಿತು. ಈ ವೇಳೆ ಶ್ರೀನಿವಾಸ್‌ ಪ್ರಸಾದ್‌ ಅವರ ಮೂವರು ಹೆಣ್ಣು ಮಕ್ಕಳು, ಅಳಿಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಸಾವಿರಾರು ಸಂಖ್ಯೆಯ ಅಭಿಮಾನಿಗಳು ಭಾಗವಹಿಸಿದ್ದರು.

ಅದಕ್ಕೂ ಮುನ್ನ ಅಶೋಕಪುರಂನಲ್ಲಿರುವ ಎನ್​ಟಿಎಂ ಶಾಲೆಯ ಆವರಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಡಾ. ಜಿ.ಪರಮೇಶ್ವರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಅನೇಕ ಗಣ್ಯರು ಶ್ರೀನಿವಾಸ್‌ ಪ್ರಸಾದ್‌ ಅವರ ಅಂತಿಮ ದರ್ಶನ ಪಡೆದರು.

ಪ್ರಾಮಾಣಿಕ ರಾಜಕಾರಣಿ ಕಣ್ಮರೆ: ಅಂತ್ಯಕ್ರಿಯೆಗೂ ಮುನ್ನ ಸುದ್ದಿಗಾರರ ಜೊತೆ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ, ಬಾಬಾ ಸಾಹೇಬ್‌ ಅಂಬೇಡ್ಕರ್‌ ತತ್ವದಲ್ಲಿ ನಂಬಿಕೆಯಿಟ್ಟು ಸ್ವಾಭಿಮಾನದಿಂದ ಬದುಕಿದ ಪ್ರಾಮಾಣಿಕ ರಾಜಕಾರಣಿಯನ್ನು ಕಳೆದುಕೊಂಡಿದ್ದೇವೆ. ಶ್ರೀನಿವಾಸ್‌ ಪ್ರಸಾದ್‌ ನಿಧನ ನನಗೆ ತುಂಬಾ ಆಘಾತ ಉಂಟುಮಾಡಿದೆ. ಶ್ರೀನಿವಾಸ್‌ ಪ್ರಸಾದ್‌ ಸಮಾಜಕ್ಕೆ ಹೋರಾಟ ಮಾಡುವ ವಿಷಯದಲ್ಲಿ ಧೈರ್ಯದಿಂದ ಮುನ್ನುಗುತ್ತಿದ್ದ ಪ್ರಾಮಾಣಿಕ ರಾಜಕಾರಣಿ. ಅವರು ಬಾಬಾ ಸಾಹೇಬ್‌ ಅಂಬೇಡ್ಕರ್‌ ತತ್ವದಲ್ಲಿ ನಂಬಿಕೆ ಇಟ್ಟವರಾಗಿದ್ದು, ಸ್ವಾಭಿಮಾನದಿಂದ ಬದುಕಿದ ರಾಜಕಾರಣಿ ಆಗಿದ್ದರು. ಅವರು ಅನಾರೋಗ್ಯದಿಂದ ನಮ್ಮನ್ನು ಆಗಲಿ ಹೋಗಿದ್ದಾರೆ. ಕುಟುಂಬಕ್ಕೆ ನೋವನ್ನ ತಡೆದುಕೊಳ್ಳುವ ಶಕ್ತಿ ನೀಡಲಿ ಎಂದು ಭಗವಂತನನ್ನು ಬೇಡಿಕೊಳ್ಳುವೆ ಎಂದರು.

ಕಣ್ಣೀರಿಟ್ಟ ಸಂಸದ ಪ್ರತಾಪ್‌ ಸಿಂಹ: ಶ್ರೀನಿವಾಸ್‌ ಪ್ರಸಾದ್‌ ಅವರ ಅಂತಿಮ ದರ್ಶನ ಪಡೆದ ನಂತರ ಸಂಸದ ಪ್ರತಾಪ್‌ ಸಿಂಹ ಮಾಧ್ಯಮಗಳಿಗೆ ಹೇಳಿಕೆ ನೀಡುವಾಗ ಕಣ್ಣೀರಿಟ್ಟ ಪ್ರಸಂಗವೂ ನಡೆಯಿತು. ಶ್ರೀನಿವಾಸ್‌ ಪ್ರಸಾದ್‌ ಅವರನ್ನು ನೆನೆದು ಅವರು ನಿಸ್ಪಕ್ಷಪಾತವಾಗಿ ನಿಲುವು ತೆಗೆದುಕೊಳ್ಳುತ್ತಿದ್ದ ವ್ಯಕ್ತಿಯಾಗಿದ್ದರು. ದ್ವೇಷ, ಅಸೂಯೆ ಇಲ್ಲದ ವ್ಯಕ್ತಿ ಆಗಿದ್ದರು. ಈ ಭಾಗದಲ್ಲಿ ಅವರೊಬ್ಬ ಸಜ್ಜನ ರಾಜಕಾರಣಿಯಾಗಿದ್ದರು. ಅವರ ಸಾವು ನನಗೆ ವೈಯುಕ್ತಿಕವಾಗಿ ಬಹಳ ನಷ್ಟ ಉಂಟುಮಾಡಿದೆ. ನನಗೆ ನಾಲ್ಕು ಗೋಡೆಗಳ ಮಧ್ಯೆ ಕರೆದು ಕಿವಿಮಾತನ್ನ ಹೇಳುತ್ತಿದ್ದರು. ಅವರು ನನ್ನ ಬಗ್ಗೆ ಯಾವತ್ತೂ ಹೊರಗಡೆ ಟೀಕೆ ಮಾಡಿರಲಿಲ್ಲ. ನನ್ನನ್ನು ಮಗನ ರೀತಿ ನೋಡಿಕೊಳ್ಳುತ್ತಿದ್ದರು ಎಂದು ಭಾವುಕರಾದರು.

ಅಂತಿಮ ದರ್ಶನ ಪಡೆದ ಯದುವೀರ್‌: ಶ್ರೀನಿವಾಸ್‌ ಪ್ರಸಾದ್‌ ಮೈಸೂರು ಮತ್ತು ಚಾಮರಾಜನಗರದ ಪ್ರಭಾವಿ ನಾಯಕರು ಆಗಿದ್ದರು. ಈ ಬಾರಿ ನಾನು ಚುನಾವಣಾ ಸಂರ್ದಭದಲ್ಲಿ ಅವರನ್ನ ಭೇಟಿಯಾದಾಗ ನನಗೆ ಪ್ರೋತ್ಸಾಹ ನೀಡಿ ಬೆಂಬಲಿಸಿದ್ದರು. ಅವರ ಅಗಲಿಕೆ ನೋವನ್ನು ಅವರ ಕುಟುಂಬದವರಿಗೆ ತಡೆಯುವ ಶಕ್ತಿಯನ್ನು ದೇವರು ನೀಡಲಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಬಿಜೆಪಿ ಅಭ್ಯರ್ಥಿ ಯದುವೀರ್‌ ಒಡೆಯರ್‌ ಸಂತಾಪ ಸೂಚಿಸಿದರು.

ಆದರ್ಶ ರಾಜಕಾರಣಿ: ಬೆಂಗಳೂರು ಗ್ರಾಮಾಂತರದ ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್‌. ಮಂಜುನಾಥ್‌ ಕೂಡ ಶ್ರೀನಿವಾಸ್‌ ಪ್ರಸಾದ್‌ ಅವರ ಅಂತಿಮ ದರ್ಶನ ಪಡೆದರು. ಬಳಿಕ ಮಾಧ್ಯಮಗಳ ಜತೆ ಮಾತನಾಡಿ ಶ್ರೀನಿವಾಸ್‌ ಪ್ರಸಾದ ಅವರ ಆಗಲಿಕೆ ನೋವಿನ ಸಂಗತಿಯಾಗಿದೆ. ನನ್ನ-ಅವರ ಪರಿಚಯ 20 ವರ್ಷಗಳಷ್ಟು ಹಳೆಯದು. ಪ್ರಸ್ತುತ ರಾಜಕೀಯಕ್ಕೆ ಅವರೊಬ್ಬ ಆದರ್ಶ ರಾಜಕಾರಣಿ. ಕಿರಿಯ ರಾಜಕಾರಣಿಗಳನ್ನ ಬೆಳೆಸುವ ಗುಣ ಹೊಂದಿದ್ದರು. ಇವರದು ವಿಶಿಷ್ಟ ವ್ಯಕ್ತಿತ್ವ, ಯಾವಾಗಲೂ ಕೆಟ್ಟ ಪದವನ್ನ ಉಪಯೋಗಿಸುತ್ತಿರಲ್ಲಿಲ್ಲ. ಅವರೊಬ್ಬ ಆದರ್ಶ ರಾಜಕಾರಣಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.

ಇದನ್ನೂ ಓದಿ: ಸ್ನೇಹಿತನನ್ನು ಕಳೆದುಕೊಂಡಿರುವುದು ಬಹಳ ದುಃಖ ತಂದಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ - MP Srinivas Prasad

ETV Bharat Logo

Copyright © 2024 Ushodaya Enterprises Pvt. Ltd., All Rights Reserved.