ETV Bharat / state

ರೇರಾಗೆ 15 ದಿನದಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ‌ ನೇಮಿಸುವುದಾಗಿ ಸರ್ಕಾರದ ಭರವಸೆ - Rera tribunal

author img

By ETV Bharat Karnataka Team

Published : Apr 25, 2024, 7:10 AM IST

Etv Bharat
Etv Bharat

ರೇರಾ ಮೇಲ್ಮನವಿ ಪ್ರಾಧಿಕಾರಕ್ಕೆ 15 ದಿನದಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ನೇಮಿಸುವುದಾಗಿ ಸರ್ಕಾರ ಭರವಸೆ ನೀಡಿದೆ.

ಬೆಂಗಳೂರು: ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ (ರೇರಾ) ಮೇಲ್ಮನವಿ ನ್ಯಾಯಾಧೀಕರಣಕ್ಕೆ 15 ದಿನಗಳಲ್ಲಿ ಅಧ್ಯಕ್ಷರನ್ನು ನೇಮಿಸಲಾಗುವುದು ಎಂದು ರಾಜ್ಯ ಸರ್ಕಾರ ಭರವಸೆ ನೀಡಿದ ಹಿನ್ನೆಲೆಯಲ್ಲಿ ಹೈಕೋರ್ಟ್ ಅರ್ಜಿಗಳನ್ನು ಇತ್ಯರ್ಥಪಡಿಸಿ ಆದೇಶಿಸಿದೆ. ರೇರಾ ಮೇಲ್ಮನವಿ ನ್ಯಾಯಾಧೀಕರಣಕ್ಕೆ ಮುಖ್ಯಸ್ಥರನ್ನು ನೇಮಿಸುವಂತೆ ಕೋರಿ ಬೆಂಗಳೂರಿನ ಮ್ಯಾಥ್ಯೂ ಥಾಮಸ್ ಮತ್ತಿತರರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠ ನಡೆಸಿ, ಈ ಆದೇಶ ನೀಡಿದೆ.

ಅಲ್ಲದೆ, ಈ ಎಲ್ಲ ಪ್ರಕರಣಗಳನ್ನು ಮೇಲ್ಮನವಿ ನ್ಯಾಯಾಧೀಕರಣದ ಮುಂದೆ ವಿಚಾರಣೆಗೆ ನಿಗದಿಪಡಿಸುತ್ತೇವೆ. ಒಮ್ಮೆ ನ್ಯಾಯಾಧೀಕರಣ ರಚನೆಯಾದ ಮೇಲೆ ಅವರು ವಿಚಾರಣೆ ನಡೆಸಬಹುದು ಎಂದು ಪೀಠ ತಿಳಿಸಿತು.

ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರವಾಗಿ ಹಾಜರಾಗಿದ್ದ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ, ರೇರಾ ಮೇಲ್ಮನವಿ ನ್ಯಾಯಾಧೀಕರಣ ಈಗ ಕಾರ್ಯಾರಂಭಿಸಬಹುದು. ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಿಗೆ ಅಧ್ಯಕ್ಷರ ಹೆಸರನ್ನು ಒಳಗೊಂಡ ಕಡತವನ್ನು ಕಳುಹಿಸಬೇಕಿದೆ. ಅಧ್ಯಕ್ಷರನ್ನು ನೇಮಕ ಮಾಡುವುದು ಮಾತ್ರ ಬಾಕಿ ಇದೆ. ಅಲ್ಲದೇ, ಅಡ್ವೊಕೇಟ್‌ ಜನರಲ್‌ ಈ ನ್ಯಾಯಾಲಯ ಮೇಲಿಂದ ಮೇಲೆ ಆದೇಶ ಮಾಡಿರುವ ಹಿನ್ನೆಲೆಯಲ್ಲಿ 2024ರ ಏಪ್ರಿಲ್ 20ರಂದು ಹೊರಡಿಸಿರುವ ಅಧಿಸೂಚನೆಯನ್ನು ಸಲ್ಲಿಸಿದ್ದಾರೆ. ನ್ಯಾಯಾಧೀಕರಣಕ್ಕೆ ಸದಸ್ಯರನ್ನು ನೇಮಕ ಮಾಡಲಾಗಿದ್ದು, ಅಧ್ಯಕ್ಷರ ನೇಮಕಾತಿಯು 15 ದಿನಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ತಿಳಿಸಿದ್ದಾರೆ.

ಇಲ್ಲಿ ಬಾಕಿರುವ ಪ್ರಕರಣಗಳನ್ನು ನ್ಯಾಯಾಧೀಕರಣಕ್ಕೆ ವರ್ಗಾಯಿಸಬಹುದಾಗಿದ್ದು, ಶೀಘ್ರದಲ್ಲೇ ಅಧ್ಯಕ್ಷರ ನೇಮಕವಾಗಲಿದೆ. ಎಜಿ ಅವರು ನ್ಯಾಯಾಲಯಕ್ಕೆ ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ ಅರ್ಜಿಗಳು ಅಮಾನ್ಯವಾಗಿವೆ ಎಂದು ಆದೇಶಿಸಿತು.

ಇದನ್ನೂ ಓದಿ: 'ಪಿತ್ರಾರ್ಜಿತ ತೆರಿಗೆ' ವಿವಾದದಿಂದ ಅಂತರ ಕಾಯ್ದುಕೊಂಡ ಕಾಂಗ್ರೆಸ್‌: 'ನನ್ನ ಮಾತು ತಿರುಚಿದ್ದು ದುರದೃಷ್ಟಕರ' ಎಂದ ಪಿತ್ರೋಡಾ - Inheritance Tax

ಅಧ್ಯಕ್ಷರ ನೇಮಕವನ್ನು 15 ದಿನಗಳಲ್ಲಿ ಪೂರ್ಣಗೊಳಿಸಲಾಗುವುದು ಎಂಬ ಎಜಿ ಅವರ ವಾದವನ್ನು ದಾಖಲೆಯಲ್ಲಿ ಸ್ವೀಕರಿಸಲಾಗಿದೆ. ರೇರಾ ಅಧ್ಯಕ್ಷರು ಮತ್ತು ಸದಸ್ಯರನ್ನು ಒಂದು ತಿಂಗಳಲ್ಲಿ ನೇಮಕ ಮಾಡಲಾಗುವುದು ಎಂದು ತಿಳಿಸಿದ್ದಾರೆ ಎಂದು ನ್ಯಾಯಾಲಯ ಆದೇಶದಲ್ಲಿ ದಾಖಲಿಸಿದೆ.

ಪ್ರಕರಣದ ಹಿನ್ನೆಲೆ: 2021ರ ಮಾರ್ಚ್ 17ರಂದು ನಿರ್ಮಾಣ ಯೋಜನೆಯೊಂದಕ್ಕೆ ಸಂಬಂಧಿಸಿದಂತೆ ರೇರಾ ಪ್ರವರ್ತಕರಿಗೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಪ್ರವರ್ತಕರು ನ್ಯಾಯಾಧೀಕರಣದಲ್ಲಿ ಮೇಲ್ಮನವಿ ಸಲ್ಲಿಸಿದ್ದು, ಅದನ್ನು ಪುರಸ್ಕರಿಸಿ ಪ್ರಕರಣವನ್ನು ರೇರಾಕ್ಕೆ ಮರಳಿಸಲಾಗಿತ್ತು. ನಂತರ ರೇರಾ ಮತ್ತೆ 2022ರ ಸೆಪ್ಟೆಂಬರ್ 2ರಂದು ಅರ್ಜಿದಾರರ ಪರವಾಗಿ ಆದೇಶಿಸಿದ್ದು, ಇದನ್ನು ಪ್ರಶ್ನಿಸಿ 2023ರ ಫೆಬ್ರವರಿ 2ರಂದು ಪ್ರವರ್ತಕರು ನ್ಯಾಯಾಧೀಕರಣದಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

ನ್ಯಾಯಾಧೀಕರಣ ರಚನೆ ಆಗದಿರುವುದರಿಂದ ಅದು ಬಾಕಿ ಉಳಿದಿದೆ. ಈ ಹಿನ್ನೆಲೆಯಲ್ಲಿ ಅರ್ಜಿದಾರರು ನ್ಯಾಯಾಧೀಕರಣದಲ್ಲಿ ಬಾಕಿ ಇರುವ ಹುದ್ದೆಗಳನ್ನು ತುಂಬುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. 2023ರ ಜುಲೈ 2 ರಿಂದ ನ್ಯಾಯಾಧೀಕರಣವು ಖಾಲಿಯಿದ್ದು, ಅರ್ಜಿದಾರರು ರೇರಾ ಮೇಲ್ಮನವಿ ನ್ಯಾಯಾಧೀಕರಣಕ್ಕೆ ಸದಸ್ಯರು ಮತ್ತು ಅಧ್ಯಕ್ಷರನ್ನು ನೇಮಿಸುವಂತೆ ಕೋರಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಇದಕ್ಕೆ ಸೂಕ್ತ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಅರ್ಜಿದಾರರು ಹೈಕೋರ್ಟ್ ಕದತಟ್ಟಿದ್ದಾರೆ ಎಂದು ನ್ಯಾಯಾಲಯವು ಆದೇಶದಲ್ಲಿ ಉಲ್ಲೇಖಿಸಿತ್ತು.

ಇದನ್ನೂ ಓದಿ: ಶಾಸಕ ಉದಯ್ ಗರುಡಾಚಾರ್​​ಗೆ​​ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಶಿಕ್ಷೆ ರದ್ದುಪಡಿಸಿದ ಹೈಕೋರ್ಟ್ - Uday Garudachar

ETV Bharat Logo

Copyright © 2024 Ushodaya Enterprises Pvt. Ltd., All Rights Reserved.