ಹಾವೇರಿ: ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಜೆಡಿಎಸ್ನಿಂದ ಅಮಾನತು ಮಾಡಿರುವುದು ಸ್ವಾಗತಾರ್ಹ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು. ಬ್ಯಾಡಗಿ ತಾಲೂಕಿನ ಕಾಗಿನೆಲೆಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾವು ಈ ಪ್ರಕರಣದಲ್ಲಿ ಯಾವುದೇ ಕಾರಣಕ್ಕೂ ಮೂಗು ತೂರಿಸಲ್ಲ. ಕಾನೂನು ಕ್ರಮ ತೆಗೆದುಕೊಳ್ಳಲಿ. ರೇವಣ್ಣ ಅವರೊಂದಿಗೆ ನಮಗೆ ಸಂಬಂಧ ಇಲ್ಲ ಎಂದು ನಿನ್ನೆ ಕುಮಾರಸ್ವಾಮಿಯವರು ಖಡಕ್ ಆಗಿ ಹೇಳಿದ್ದಾರೆ ಎಂದರು.
ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಪೊಲೀಸರು ಪ್ರಕರಣದ ತನಿಖೆ ಮಾಡುತ್ತಿದ್ದಾರೆ. ಎಲ್ಲಾ ಸಂತ್ರಸ್ತರಿಗೂ ಬಂದು ದೂರು ಕೊಡಿ ಎಂದು ಹೇಳಿದ್ದಾರೆ. ದೂರು ಸ್ವೀಕರಿಸಿದ ಮೇಲೆ ಈ ಘಟನೆ ಎಲ್ಲಿ ನಡೆಯಿತು, ಏನಾಯಿತು ಎಂದು ಪೊಲೀಸರು ಹೇಳಿಕೆ ಪಡೆದು, ಕೋರ್ಟ್ಗೆ ವರದಿ ಸಲ್ಲಿಸುತ್ತಾರೆ ಎಂದು ತಿಳಿಸಿದರು.
ಈಗಾಗಲೇ ಚುನಾವಣೆ ನಡೆದಿದೆ, ಅವರು ಇನ್ನೂ ಎನ್ಡಿಎ ಮೈತ್ರಿಯಿಂದ ಗೆದ್ದಿಲ್ಲ. ಗೆದ್ದ ಬಳಿಕ ನಮ್ಮ ಪಕ್ಷ ಏನು ಕ್ರಮ ಕೈಗೊಳ್ಳಬೇಕೋ ಕೈಗೊಳ್ಳುತ್ತದೆ ಎಂದು ಹೇಳಿದರು.
ಹಳ್ಳಿಹಳ್ಳಿಗಳಲ್ಲಿ ಪೆನ್ ಡ್ರೈವ್ ಹಂಚಿದ್ದಾರೆ. ಇದನ್ನು ಕಾಂಗ್ರೆಸ್ನವರು ಮತ್ತು ಪೊಲೀಸರು ಮೂಖ ಪ್ರೇಕ್ಷಕರಂತೆ ನೋಡಿದ್ದಾರೆ. ಚುನಾವಣೆಯ ವಿಷಯಕ್ಕೆ ಈ ಪ್ರಕರಣವನ್ನು ಬಳಕೆ ಮಾಡಿಕೊಂಡಿದ್ದಾರೆ. ಏನೇ ಆಗಲಿ ತಪ್ಪು ತಪ್ಪೇ. ಉಪ್ಪು ತಿಂದವರು ನೀರು ಕುಡಿಯಲೇ ಬೇಕು. ಕುಮಾರಸ್ವಾಮಿ ಅವರು ಪ್ರಜ್ವಲ್ ರೇವಣ್ಣರನ್ನು ಪಾರ್ಟಿಯಿಂದ ಅಮಾನತು ಮಾಡಿರುವುದನ್ನು ಸ್ವಾಗತಿಸುತ್ತೇನೆ ಎಂದರು.
ಕಾಗಿನೆಲೆಗೆ ಜೆ.ಪಿ.ನಡ್ಡಾ ಭೇಟಿ: ಮತ್ತೊಂದೆಡೆ, ಕಾಗಿನೆಲೆಯ ಕನಕ ಗುರುಪೀಠಕ್ಕೆ ಇಂದು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಭೇಟಿ ನೀಡಿ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಆಶೀರ್ವಾದ ಪಡೆದರು. ಮಾಜಿ ಸಿಎಂ ಹಾಗೂ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ್ ಬೊಮ್ಮಾಯಿ, ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಜೊತೆಗಿದ್ದರು.