ETV Bharat / state

ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣ ಆಘಾತಕಾರಿ, ಮಾತೃಶಕ್ತಿಯ ಅವಮಾನವನ್ನು ಎಂದಿಗೂ ಸಹಿಸುವುದಿಲ್ಲ: ಬಿಜೆಪಿ - Hassan Pen Drive Case

author img

By ETV Bharat Karnataka Team

Published : Apr 30, 2024, 3:16 PM IST

ಮಾತೃಶಕ್ತಿಯ ಅವಮಾನವನ್ನು ಬಿಜೆಪಿ ಎಂದಿಗೂ ಸಹಿಸುವುದಿಲ್ಲ ಇದು ನಮ್ಮ ನಿಲುವು: ಬಿಜೆಪಿ ಸ್ಪಷ್ಟನೆ
ಮಾತೃಶಕ್ತಿಯ ಅವಮಾನವನ್ನು ಬಿಜೆಪಿ ಎಂದಿಗೂ ಸಹಿಸುವುದಿಲ್ಲ ಇದು ನಮ್ಮ ನಿಲುವು: ಬಿಜೆಪಿ ಸ್ಪಷ್ಟನೆ

ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣ ಆಘಾತಕಾರಿ. ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿದ್ದರೂ ಕಠಿಣ ಕ್ರಮ ಕೈಗೊಳ್ಳುವ ಬದಲು ರಾಜಕೀಯ ಮಾಡುತ್ತಿದೆ ಎಂದು ರಾಜ್ಯ ಬಿಜೆಪಿ ಟೀಕಿಸಿದೆ.

ಬೆಂಗಳೂರು: ನಾವು ದೇಶದ ಮಾತೃಶಕ್ತಿ, ನಾರಿ ಶಕ್ತಿಯ ಜೊತೆಗೆ ನಿಲ್ಲುತ್ತೇವೆ. ಮಾತೃಶಕ್ತಿಯ ಅವಮಾನವನ್ನು ಬಿಜೆಪಿ ಎಂದಿಗೂ ಸಹಿಸುವುದಿಲ್ಲ. ಇದು ನಮ್ಮ ನಿಲುವು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ಪಷ್ಟಪಡಿಸಿದ್ದಾರೆ ಎಂದು ರಾಜ್ಯ ಬಿಜೆಪಿ ಟ್ವೀಟ್​ ಮೂಲಕ ತಿಳಿಸಿದೆ‌.

ಅಮಿತ್ ಶಾ ಸ್ಪಷ್ಟೀಕರಣದ ವಿಡಿಯೋ ತುಣುಕನ್ನು ಪ್ರಕಟಿಸಿರುವ ಬಿಜೆಪಿ, ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣ ಆಘಾತಕಾರಿಯಾಗಿದೆ. ಈ ಕುರಿತು ಕಾಂಗ್ರೆಸ್ಸಿಗರು ನಮಗೆ ಪ್ರಶ್ನೆ ಕೇಳುವ ಬದಲು, ರಾಜ್ಯದಲ್ಲಿನ ಕಾಂಗ್ರೆಸ್‌ ಸರ್ಕಾರವನ್ನೇ ಪ್ರಶ್ನಿಸಬೇಕು ಎಂದಿದೆ.

ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ಖಂಡಿಸುವ, ಪ್ರತಿಭಟಿಸುವ ನಿಟ್ಟಿನಲ್ಲಿ ಕಾಳಜಿ ವಹಿಸುವಲ್ಲಿ ಎಂದಿಗೂ ರಾಜೀಯಾಗದ ದಾಖಲೆ ಇದ್ದರೆ ಅದು ಭಾರತೀಯ ಜನತಾ ಪಾರ್ಟಿಯಲ್ಲಿ ಮಾತ್ರ. ನಾರಿಯರನ್ನು ಮಾತೆಯರು ಎಂದು ಗೌರವಿಸುವ ಸಂಸ್ಕೃತಿ ಇದ್ದರೆ, ರಾಷ್ಟ್ರವನ್ನು 'ಭಾರತಮಾತೆ' ಎಂದು ಪೂಜಿಸುವ ಸಂಸ್ಕಾರವಿದ್ದರೆ ಅದು ಬಿಜೆಪಿಯ ಧ್ಯೇಯದ ಮಡಿಲಿನಲ್ಲಿ ಮಾತ್ರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಮಹಿಳಾ ಶೋಷಣೆಯ ಕುರಿತು ಡಿಸಿಎಂ ಡಿ.ಕೆ.ಶಿವಕುಮಾರ್ ಅಂಥವರಿಂದ ಹೇಳಿಸಿಕೊಳ್ಳಬೇಕಾದ ದುರ್ಗತಿ ಬಿಜೆಪಿಗೆ ಎಂದೂ ಬಾರದು. ಹಾಸನದ ಪೆನ್ ಡ್ರೈವ್ ಪ್ರಕರಣ ಸೇರಿದಂತೆ ನಾರಿಕುಲದ ಯಾವ ಬಗೆಯ ಶೋಷಣೆಯನ್ನೂ ನೋಡಿಕೊಂಡು ನಾವು ಮೌನವಹಿಸಿ ಕೂರುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಈ ಪ್ರಕರಣದ ಕುರಿತು ಸದ್ಯ ನೇಮಕವಾಗಿರುವ ಎಸ್ಐಟಿ ಶೀಘ್ರದಲ್ಲಿ ಸತ್ಯಾಸತ್ಯತೆಯನ್ನು ಹೊರತಂದು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಕೊಡಿಸಲಿ ಎಂದು ಒತ್ತಾಯಿಸುತ್ತೇವೆ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಿನಿಂದಲೂ ಅಭಿವೃದ್ಧಿಯ ಹೆಜ್ಜೆಯನ್ನಂತೂ ಇಟ್ಟಿಲ್ಲ. ಮಹಿಳೆಯರ ರಕ್ಷಣೆಗಾದರೂ ಆದ್ಯತೆ ನೀಡುವ ಯೋಗ್ಯತೆಯೂ ಇಲ್ಲ. ಬೆಳಗಾವಿಯಲ್ಲಿ ಹಾಡಹಗಲೇ ಮಹಿಳೆಯನ್ನು ಕಂಬಕ್ಕೆ ಕಟ್ಟಿ ಬೆತ್ತಲೆಗೊಳಿಸಿ ದೌರ್ಜನ್ಯವೆಸಗಿದ ಸಂದರ್ಭದಲ್ಲಿ ಬೆಳಗಾವಿಯಲ್ಲೇ (ಅಧಿವೇಶನದಲ್ಲಿ) ಇದ್ದ ಮುಖ್ಯಮಂತ್ರಿ, ಸಂತ್ರಸ್ತ ಮಹಿಳೆಗೆ ಸಾಂತ್ವನ ಹೇಳಲೂ ಭೇಟಿ ನೀಡದೇ ಕನಿಷ್ಠ ಸೌಜನ್ಯವನ್ನು ತೋರದ ಮುಖ್ಯಮಂತ್ರಿ, ಹುಬ್ಬಳ್ಳಿಯಲ್ಲಿ ಅನ್ಯಕೋಮಿನ ಯುವಕನಿಂದ ಹಾಡಹಗಲೇ ಅಮಾಯಕ ವಿದ್ಯಾರ್ಥಿನಿ ನೇಹಾ ಹಿರೇಮಠ ಬರ್ಬರವಾಗಿ ಹತ್ಯೆಯಾದಾಗ ಹೇಗೆ ನಡೆದುಕೊಂಡರು ಎಂಬುದನ್ನು ಈ ರಾಜ್ಯದ ಜನತೆ ಗಮನಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ‌.

ಈ ಸರ್ಕಾರದ ಆಡಳಿತದಲ್ಲಿ ಸರಣಿ ರೂಪದಲ್ಲಿ ಸ್ತ್ರೀಕುಲದ ಮೇಲೆ ನಿರಂತರ ಶೋಷಣೆ, ದೌರ್ಜನ್ಯ ನಡೆಯುತ್ತಿದ್ದರೂ ಉಡಾಫೆತನ ಪ್ರದರ್ಶಿಸುವ ಕಾಂಗ್ರೆಸ್​ಗೆ ಬಿಜೆಪಿಯತ್ತ ಬೊಟ್ಟು ಮಾಡುವ ಯಾವ ನೈತಿಕತೆಯೂ ಇಲ್ಲ. ನಾಗರಿಕ ಸಮಾಜ ತಲೆತಗ್ಗಿಸುವ ಹಾಸನದ ಪೆನ್ ಡ್ರೈವ್ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಸೇರಿದಂತೆ ಯಾರೇ ತಪ್ಪಿತಸ್ಥರಿದ್ದರೂ ಅವರ ವಿರುದ್ಧ ನಿಷ್ಪಕ್ಷಪಾತ ತನಿಖೆ ನಡೆದು ಕ್ರಮ ಜರುಗಲಿ. ಇದರ ನಡುವೆ ನೇಹಾ ಹಿರೇಮಠ ಕಗ್ಗೊಲೆ ಪ್ರಕರಣದ ತನಿಖೆ ದಿಕ್ಕುತಪ್ಪದಿರಲಿ ಎಂದು ಅವರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಹಾಸನ ವಿಡಿಯೋ ಪ್ರಕರಣ: ಜೆಡಿಎಸ್​ನಿಂದ ಪ್ರಜ್ವಲ್ ರೇವಣ್ಣ ಅಮಾನತು - JDS Suspends Prajwal Revanna

ETV Bharat Logo

Copyright © 2024 Ushodaya Enterprises Pvt. Ltd., All Rights Reserved.