ETV Bharat / state

ನೇಹಾ ಕೊಲೆ ಪ್ರಕರಣದ ತನಿಖೆ ಶೀಘ್ರವೇ ಪೂರ್ಣಗೊಳಿಸುತ್ತೇವೆ: ಕಮಿಷನರ್ ಭರವಸೆ, ವಿವಿಧೆಡೆ ಪ್ರತಿಭಟನೆ, ಆಕ್ರೋಶ - Neha Murder Case

author img

By ETV Bharat Karnataka Team

Published : Apr 20, 2024, 6:00 PM IST

NEHA MURDER CASE PROBE  COMPLETED SOON  COMMISSIONER PROMISES  DHARWAD
ಕಮೀಷನರ್ ಭರವಸೆ

ನೇಹಾ ಕೊಲೆ ಪ್ರಕರಣದ ತನಿಖೆ ಶೀಘ್ರವೇ ಪೂರ್ಣಗೊಳಿಸುತ್ತೇವೆ ಎಂದು ನಗರ ಪೊಲೀಸ್​ ಕಮಿಷನರ್ ಭರವಸೆ ನೀಡಿದ್ದಾರೆ. ಇದರ ಮಧ್ಯೆ ನಗರದ ವಿವಿಧೆಡೆ ಪ್ರತಿಭಟನೆಗಳು ಜರುಗಿದವು. ಅಷ್ಟೇ ಅಲ್ಲ, ಸ್ವಾಮೀಜಿಗಳು ಸಹ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾರ್ ಹೇಳಿಕೆ

ಹುಬ್ಬಳ್ಳಿ: ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ನಡೆದ ಎಂಸಿಎ ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಪ್ರಕರಣದ ತನಿಖೆಯನ್ನು ಆದಷ್ಟು ಬೇಗ ಪೂರ್ಣಗೊಳಿಸುತ್ತೇವೆ. ಅಲ್ಲದೇ ಎಲ್ಲಾ ಆಯಾಮಗಳಿಂದ ತನಿಖೆ ನಡೆಸುತ್ತೇವೆ ಎಂದು ನಗರ ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾರ್​ ಹೇಳಿದರು.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗಾಗಲೇ ನೇಹಾ ಹಿರೇಮಠ ಕೊಲೆಗೆ ಸಂಬಂಧಿಸಿದಂತೆ ಅವಳಿನಗರದಲ್ಲಿ ಸಾಕಷ್ಟು ಪ್ರತಿಭಟನೆ, ಹೋರಾಟ ನಡೆದಿವೆ. ಅಲ್ಲದೇ ಬಹುತೇಕ ಪ್ರಮುಖರು ಮನವಿ ಮಾಡಿ ಕೂಡಲೇ ತನಿಖೆ ಪೂರ್ಣಗೊಳಿಸಿ ಎಂದು ಮನವಿ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಆದಷ್ಟು ಶೀಘ್ರವಾಗಿ ತನಿಖೆ ಪೂರ್ಣಗೊಳಿಸುತ್ತೇವೆ ಎಂದರು.

ಕೊಲೆಗೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ. ಈಗಲೇ ಎಲ್ಲವನ್ನೂ ಬಹಿರಂಗ ಪಡಿಸಲು ಆಗಲ್ಲ. ಅಲ್ಲದೇ ನಾವು ಪ್ರೀತಿ, ಪ್ರೇಮದ ವಿಚಾರದ ಬಗ್ಗೆ ತನಿಖೆ ನಡೆಸುತ್ತಿಲ್ಲ. ಕೊಲೆಯ ಬಗ್ಗೆ ಎಲ್ಲಾ ಆಯಾಮಗಳಿಂದ ತನಿಖೆ ನಡೆಸಲಾಗುತ್ತದೆ. ಯಾವುದೇ ಸಂದರ್ಭದಲ್ಲಿ ಕೂಡ ಮಹಿಳೆಯರು ವಿಚಲಿತರಾಗದೇ ಧೈರ್ಯವಾಗಿರಬೇಕು. ಅವಳಿನಗರದಲ್ಲಿ ಮತ್ತಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಜರುಗಿಸುವ ಮೂಲಕ ಭದ್ರತೆ ನೀಡಲಾಗುತ್ತದೆ ಎಂದು ಅಭಯ ನೀಡಿದರು.

ಕಾನೂನು ಸುವ್ಯವಸ್ಥೆ ಬಲಪಡಿಸಲು ಮನವಿ: ಹುಬ್ಬಳ್ಳಿ-ಧಾರವಾಡ ಅವಳಿನಗರದಲ್ಲಿ ನಡೆಯುತ್ತಿರುವ ಕಾನೂನುಬಾಹಿರ ಕೃತ್ಯಗಳಿಗೆ ಕಡಿವಾಣ ಇಲ್ಲವಾಗಿದೆ. ಹಾಡಹಗಲೇ ವಿದ್ಯಾರ್ಥಿನಿಯೋರ್ವಳ ಬರ್ಬರ ಕೊಲೆಯಾಗಿರುವುದನ್ನು ಖಂಡಿಸಿ ಕೂಡಲೇ ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಹುಬ್ಬಳ್ಳಿಯ ಸದ್ಭಾವ ವೇದಿಕೆಯಿಂದ ಪೊಲೀಸ್ ಕಮಿಷನರ್​ಗೆ ಮನವಿ ಸಲ್ಲಿಸಲಾಯಿತು. ಈ ವೇಳೆ ಕೆಎಲ್ಇ ಮುಖ್ಯಸ್ಥ ಶಂಕರಣ್ಣ ಮುನವಳ್ಳಿ, ಸ್ವರ್ಣಾ ಗ್ರೂಪ್ ಆಫ್ ಕಂಪನಿಯ ಮಾಲೀಕರಾದ ವಿ.ಎಸ್.ವಿ ಪ್ರಸಾದ ಹಾಗೂ ಭವರಲಾಲ್ ಆರ್ಯ ಸೇರಿದಂತೆ ಅನೇಕ ಕಾರ್ಯಕರ್ತರಿದ್ದರು.

ನೇಹಾ ಕೊಲೆಗೆ ನ್ಯಾಯ ಕೊಡಿಸಿ: ನೇಹಾ ಹಿರೇಮಠ ಕೊಲೆಯ ಪ್ರಕರಣ ಖಂಡಿಸಿ ಜಯ ಕರ್ನಾಟಕ ಸಂಘಟನೆಯಿಂದ ಚೆನ್ನಮ್ಮ ವೃತ್ತದ ಬಳಿ ಪ್ರತಿಭಟನೆ ನಡೆಸಲಾಯಿತು. ನೇಹಾ ಹಿರೇಮಠ ಕೊಲೆ ಮಾಡಿರುವ ಆರೋಪಿಗೆ ಕೂಡಲೇ ಗಲ್ಲು ಶಿಕ್ಷೆ ವಿಧಿಸಬೇಕು. ಅಲ್ಲದೇ ರಾಜ್ಯದಲ್ಲಿ ಹೆಣ್ಣುಮಕ್ಕಳಿಗೆ ಭದ್ರತೆ ನೀಡುವ ಕಾರ್ಯವನ್ನು ಮಾಡಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ನೂರಾರು ಮಹಿಳೆಯರು ಹಾಗೂ ಜಯಕರ್ನಾಟಕ ಸಂಘಟನೆಯ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಯತ್ನಾಳಗೆ ಕಣ್ಣೀರಿನ ಉತ್ತರ ಕೊಟ್ಟ ದಿಂಗಾಲೇಶ್ವರ ಸ್ವಾಮೀಜಿ: ನೇಹಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ದಿಂಗಾಲೇಶ್ವರ ಸ್ವಾಮೀಜಿ, ''ದೇಶದಲ್ಲಿ ಸರ್ಕಾರ, ಕಾನೂನು, ಸ್ತ್ರೀ ಕುಲ ತಲೆ ತಗ್ಗಿಸುವ ಘಟನೆ ಇದು. ಒಂದು ಕಡೆ ಆ ಮಗು ತೀರಿಹೋಗಿದೆ. ಅದು ಹಾಡಹಗಲೇ ಅದು ಪ್ರತಿಷ್ಠಿತ ಕಾಲೇಜ್‌ನಲ್ಲಿ ನಡೆದಿದೆ. ವಿದ್ಯಾರ್ಥಿಗಳ ಮುಂದೆ ಕೊಲೆಯಾಗಿದೆ. ಇದು ನಾಡಿನ ಕುಲ ಕೋಟಿ ತಲೆತಗ್ಗಿಸುವ ಕೆಲಸ. ಅಲ್ಲಿರೋ ಯಾರೂ ಅವಳ ರಕ್ಷಣೆ ಮಾಡಿಲ್ಲ. ಕುಟುಂಬ ಬಹಳ ನೊಂದಿದೆ, ನಾವು ನೊಂದಿದ್ದೇವೆಂದು ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

ನೇಹಾ ಸಾವಿನ ವಿಚಾರದಲ್ಲಿ ಕಣ್ಣೀರು ಹಾಕಿದ್ದನ್ನು ನಾಟಕೀಯ ಅಂತ ಬಸನಗೌಡ ಯತ್ನಾಳ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಹಿರೇಮಠ ದಂಪತಿಗಳು ಬಹಳ ಬೇಕಾದವರು. ನಾನು ನಿನ್ನೆ ಬಹಳ ದುಃಖಕ್ಕೆ ಒಳಗಾಗಿದ್ದೇನೆ. ಆದ್ರೆ ಕಣ್ಣೀರನ್ನು ನಾಟಕೀಯ ಎನ್ನುವಷ್ಟರ ಮಟ್ಟಿಗೆ ಭೂಮಿಯ ಮೇಲೆ ಪಾಪಿಗಳು ಬದುಕುತ್ತಿದ್ದಾರೆ.‌ ಯಾವ ಕಾಲಕ್ಕೂ ಈ ರೀತಿ ಆಗಬಾರದು'' ಎಂದು ಮತ್ತೆ ಕಣ್ಣೀರು ಹಾಕಿದರು.

ಕುಟುಂಬಕ್ಕೆ ನೋವು ತರುವ ಕೆಲಸ ಮಾಡಬಾರದು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ದಾರಿ ತಪ್ಪಿರುವ ಆತಂಕ ಎದುರಾಗಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ಮತ್ತು ಜನಪ್ರನಿಧಿಗಳು ಬೇಜಬಾಬ್ದಾರಿ ಹೇಳಿಕೆಗಳನ್ನು ನೀಡುವ ಮೂಲಕ ಕುಟುಂಬಕ್ಕೆ ನೋವು ತರುವ ಕೆಲಸ ಮಾಡಬಾರದು. ಬದಲಾಗಿ ಆತ್ಮಸ್ಥೈರ್ಯ ನೀಡುವ ಕೆಲಸ ಮಾಡಬೇಕು ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಶ್ರೀಗಳು ಒತ್ತಾಯಿಸಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತ್ವರಿತ ನ್ಯಾಯಾಲಯ ಮೂಲಕ ಶೀಘ್ರ ನ್ಯಾಯ ಒದಗಿಸುವ ಕಾರ್ಯ ಮಾಡಬೇಕು. ಸರ್ಕಾರ ನಾಡಿನ ಮಹಿಳೆಯರು ನಿರ್ಭೀತಿಯಿಂದ ಬದುಕುವಂತಹ ಕಾನೂನು ರೂಪಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಸಲಹೆ ನೀಡಿದರು.

ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ವಿಧಾನ ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್ ಆರೋಪಿಸಿದರು. ರಾಜ್ಯದಲ್ಲಿ ಕಳೆದ ಮೂರು ದಿನಗಳಲ್ಲಿ 8 ಕೊಲೆಗಳಾಗಿವೆ. ಇಂತಹ ಘಟನೆಗಳಿಂದ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದೆ. ಕಾಲೇಜಿಗೆ ತೆರಳಿದ್ದಾಗ ಹಾಡಹಗಲೇ ಕೊಲೆಯಾಗಿದೆ. ಇದರಿಂದ ಮಕ್ಕಳು ಕಾಲೇಜಿಗೆ ಹೋಗಲು ಭಯಪಡುವ ಪರಿಸ್ಥಿತಿ ನಿರ್ಮಾಣ ಆಗಿದೆ ಎಂದರು.

ಕೊಲೆ ಮಾಡಿದ ಆರೋಪಿ ಮನುಷ್ಯ ಇದ್ದಾನೋ ಅಥವಾ ಮೃಗ ಇದ್ದಾನೋ? ಎಂಬ ಅನುಮಾನ ಕಾಡುತ್ತಿದೆ. ಪ್ರೀತಿ ನಿರಾಕರಿಸಿದಕ್ಕೆ ಈ ರೀತಿಯ ಹತ್ಯೆ ಮಾಡುವುದು ಎಷ್ಟು ಸರಿ. ಇದು ದೊಡ್ಡ ಅಪರಾಧ, ಅವನು ಜಿಹಾದಿ ಮನಸ್ಥಿತಿ ಉಳ್ಳವನಾಗಿದ್ದು, ಆರೋಪಿಗೆ ಗಲ್ಲು ಶಿಕ್ಷೆಗೆ ಗುರಿಪಡಿಸಬೇಕೆಂದು ಒತ್ತಾಯಿಸಿದರು.

ತನಿಖೆಯಲ್ಲಿ ಲೋಪದೋಷಗಳಾಗುತ್ತಿವೆ. ಈ ಕುರಿತು ಬಿಜೆಪಿ ಸರ್ಕಾರ ಗಟ್ಟಿ ನಿಲುವು ತಾಳಿದ್ದು, ಶುಕ್ರವಾರ ರಾತ್ರಿ ಕೇಂದ್ರ ಸಚಿವರು, ರಾಜ್ಯದ ಬಿಜೆಪಿ ಶಾಸಕರು, ರಾಜ್ಯಾಧ್ಯಕ್ಷರು ಸೇರಿದಂತೆ ಪಕ್ಷದ ಮುಖಂಡರ ಜೊತೆಗೆ ವರ್ಚುವಲ್ ಸಭೆ ಮಾಡಿ ರಾಜ್ಯದಲ್ಲಿ ಅರಾಜಕತೆ ಸೃಷ್ಟಿ ಆಗುತ್ತಿದೆ. ಈ ಕುರಿತು ಎಲ್ಲರೂ ಎಚ್ಚರಿಕೆ ವಹಿಸಲು ಸೂಚನೆ ನೀಡಲಾಗಿದೆ. ಮುಂದಿನ ಎರಡು - ಮೂರು ದಿನಗಳಲ್ಲಿ ರಾಜ್ಯಾಧ್ಯಕ್ಷರು ಕೇಂದ್ರದ ಗೃಹ ಸಚಿವರೊಂದಿಗೆ ಮಾತನಾಡಿ, ಸೂಕ್ತ ನಿರ್ಣಯ ಕೈಗೊಳ್ಳುತ್ತಾರೆ ಎಂದರು.

ಓದಿ: ನೇಹಾ ಕೊಲೆ ಪ್ರಕರಣ ರಾಜಕೀಯ ಅಸ್ತ್ರವನ್ನಾಗಿ ಮಾಡಿಕೊಳ್ಳಬೇಡಿ: ಮಠಾಧೀಶರ ಆಗ್ರಹ - Neha murder case

ETV Bharat Logo

Copyright © 2024 Ushodaya Enterprises Pvt. Ltd., All Rights Reserved.