ETV Bharat / state

'ಮಠದಲ್ಲಿ ಮತಯಾಚಿಸಿಲ್ಲ, ಪ್ರಕರಣ ಸಂಬಂಧ ಹೈಕೋರ್ಟ್ ಮೆಟ್ಟಿಲೇರಿದ್ದೇನೆ': ಬಿ.ವೈ ರಾಘವೇಂದ್ರ - B Y Raghavendra

author img

By ETV Bharat Karnataka Team

Published : Apr 6, 2024, 2:27 PM IST

ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣದ ಬಗ್ಗೆ ಸಂಸದ ಬಿ.ವೈ. ರಾಘವೇಂದ್ರ ಪ್ರತಿಕ್ರಿಯಿಸಿದ್ದಾರೆ.
MP B Y Raghavendra
ಸಂಸದ ಬಿ.ವೈ. ರಾಘವೇಂದ್ರ

ಸಂಸದ ಬಿ.ವೈ. ರಾಘವೇಂದ್ರ

ಶಿವಮೊಗ್ಗ: ನಾನು ಚಿತ್ರದುರ್ಗದ ಮಠದಲ್ಲಿ ಮತಯಾಚನೆ ಮಾಡಿಲ್ಲ. ನನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ. ಇದರ ವಿರದ್ಧ ನಾನು ಹೈಕೋರ್ಟ್ ಮೆಟ್ಟಿಲೇರಿದ್ದೇನೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ.

ಶಿವಮೊಗ್ಗದಲ್ಲಿಂದು ಮಾತನಾಡಿದ ಅವರು, ಚುನಾವಣೆ ಬರುತ್ತೆ ಹೋಗುತ್ತೆ. ನಾನು ದೇವರನ್ನು ಎಷ್ಟು ನಂಬುತ್ತೇನೋ ಅಷ್ಟೇ ಮಠಾಧೀಶರನ್ನೂ ನಂಬುತ್ತೇನೆ. ಇದು ನಮ್ಮ ಹಿಂದೂಗಳ ಪದ್ಧತಿ. ಚಿತ್ರದುರ್ಗದಲ್ಲಿ ಗುರುಗಳ ಮಠಕ್ಕೆ ಅವರ ಆಶೀರ್ವಾದ ಪಡೆಯಲು ಹೋಗಿದ್ದೆ. ಅಲ್ಲಿ ನಾವು ಯಾವುದೇ ಮತಯಾಚನೆ ಮಾಡಿಲ್ಲ. ಭಾಷಣ ಮಾಡಿ, ಯಾವುದೇ ರೀತಿಯ ದುರುಪಯೋಗಪಡಿಸಿಕೊಂಡಿಲ್ಲ. ಆದರೆ, ಯಾರೋ ದೂರು ಕೊಟ್ಟಿರುವ ಆಧಾರದ ಮೇಲೆ ನನ್ನ ವಿರುದ್ಧ ಪ್ರಕರಣ ದಾಖಲಾಗಿದೆ. ಇದರ ವಿರುದ್ಧ ನಾನು ಹೈಕೋರ್ಟ್ ಮೇಟ್ಟಿಲೇರಿದ್ದೇನೆ ಎಂದು ತಿಳಿಸಿದರು.

ನಾವು ಅಭಿವೃದ್ಧಿ ಮೇಲೆ ಮತಯಾಚಿಸುತ್ತೇವೆ: ನಾವು ನಮ್ಮ ಅಭಿವೃದ್ಧಿಯ ಮೇಲೆ ಮತಯಾಚನೆ ಮಾಡಲಿದ್ದೇವೆ. ಹಿಂದುತ್ವವನ್ನು ವೈಯಕ್ತಿಕವಾಗಿ ಅನ್ಯಾಯವಾಗಿದೆ ಎಂದು ಹೇಳಿ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ, ಅದನ್ನು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ. ಬಿಜೆಪಿ ಅಧಿಕೃತ ಅಭ್ಯರ್ಥಿ ನಾನು. ನಮ್ಮ ಎನ್​​ಡಿಎ ನಾಯಕ ನರೇಂದ್ರ ಮೋದಿ ಅವರನ್ನು ನಾವು ಉಪಯೋಗಿಸಿಕೊಳ್ಳಬೇಕೇ ವಿನಃ ಬೇರೆಯವರು ಉಪಯೋಗಿಸಿಕೊಳ್ಳಲು ಬರಲ್ಲ ಎಂದರು.

ನಿನ್ನೆ ತೀರ್ಥಹಳ್ಳಿಯ ಸಾಯಿ ಪ್ರಸಾದ್ ಅವರನ್ನು ಎನ್​​​ಐಎ ಅವರು ವಿಚಾರಣೆ ನಡೆಸಿ, ವಾಪಸ್ ಕಳುಹಿಸಿದ್ದಾರೆ.‌ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದಲ್ಲಿ ಹಲವು ಕಡೆ ವಿಚಾರಣೆ ನಡೆಸಲಾಗಿತ್ತು.‌ ಈ ಪ್ರಕರಣದಲ್ಲಿ ಸಾಯಿ ಪ್ರಸಾದ್ ಹೆಸರು ಕೇಳಿ ಬಂದಿತ್ತು. ಮೊಬೈಲ್ ಶಾಪ್​ ಒಂದರಲ್ಲಿ ಸಿಮ್ ಖರೀದಿ ಮಾಡುವಾಗ ನೀಡುವ ದಾಖಲೆಯನ್ನು ಪಡೆದು ದುರುಪಯೋಗಪಡಿಸಲಾಗಿದೆ. ಅಲ್ಲದೇ ಇದೇ ರೀತಿ 8-10 ಜನರ ದಾಖಲೆಯನ್ನು ಪಡೆದು ದುರುಪಯೋಗಪಡಿಸಿಕೊಳ್ಳಲಾಗಿದೆ. ಅಂತಾರಾಷ್ಟ್ರಿಯ ಮಟ್ಟದಲ್ಲಿ ಇಂತಹ ಘಟನೆ ನಡೆಯುತ್ತಿತ್ತು ಎಂದು ಕೇಳಿದ್ವಿ. ಆದ್ರೀಗ ನಮ್ಮ ತೀರ್ಥಹಳ್ಳಿಯಲ್ಲಿ ಇಂತಹ ಘಟನೆ ನಡೆದಿರುವುದು ಗಾಬರಿಯಾಗುವಂತಹ ವಿಚಾರವಾಗಿದೆ. ಇಂತಹ ಘಟನೆಯನ್ನು ನಡೆಯದಂತ ಬಿಗಿ ಕಾನೂನು ಕ್ರಮ ಜರುಗಿಸಬೇಕಿದೆ. ಸೂಕ್ತ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.

ನಮ್ಮದು ನಿರಂತರ ಪ್ರಚಾರ: ನಮ್ಮ ಜಿಲ್ಲೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಬಂದು ಪ್ರಚಾರಕ್ಕೆ ಚಾಲನೆ ನೀಡಿದಾಗಿನಿಂದ, ಕಾರ್ಯಕರ್ತರ ನೆರವಿನಿಂದ ಪ್ರಚಾರ ಚೆನ್ನಾಗಿ ನಡೆಯುತ್ತಿದೆ. ಇಂದು ಬಿಜೆಪಿ ಸಂಸ್ಥಾಪನಾ ದಿನಾಚರಣೆ ನಡೆಸಲಾಯಿತು. ನಾನು ಹೋದ ಹತ್ತು ಬೂತ್​​ಗಳಲ್ಲಿ ನಮ್ಮ ಕಾರ್ಯಕರ್ತರು ಕಿಂಚಿತ್ತೂ ಕದಲಿಲ್ಲ ಎಂದು ತಿಳಿಸಿದರು.

ಇದನ್ನೂ ಓದಿ: ಧಾರ್ಮಿಕ ಸ್ಥಳದಲ್ಲಿ ಚುನಾವಣಾ ಪ್ರಚಾರ: ಎಫ್‌ಐಆರ್ ರದ್ದುಕೋರಿ ಹೈಕೋರ್ಟ್​​ ಮೆಟ್ಟಿಲೇರಿದ ಬಿ.ವೈ.ರಾಘವೇಂದ್ರ - Raghavendra appeals HC

ವಿರೋಧ ಪಕ್ಷದವರಿಗೆ ಅಪಪ್ರಚಾರ ನಡೆಸುವುದೇ ಕೆಲಸವಾಗಿದೆ. ರಾಘಣ್ಣನಿಗೆ, ಚನ್ನಿಯಣ್ಣನಿಗೆ ಬೈಯುವುದೇ ಅವರ ಕೆಲಸ. ನಾನು ಕಳೆದ ನಾಲ್ಕು ಚುನಾವಣೆಯಿಂದಲೂ ಇದನ್ನು ಕೇಳಿಕೊಂಡು ಬಂದಿದ್ದೇನೆ. ನಾವು ಏನು ಮಾಡಿದ್ದೇವೆ, ಮುಂದೆ ಏನು ಮಾಡುತ್ತೇವೆ ಎಂದು ಹೇಳುತ್ತಿದ್ದೇವೆ. ನಮ್ಮ ಪಕ್ಷಕ್ಕೆ ನೀತಿ ನಿಯಮ ಇದೆ. ಕಾಂಗ್ರೆಸ್ ಅಧಿಕೃತ ವಿರೋಧ ಪಕ್ಷದ ಸ್ಥಾನವನ್ನು ಪಡೆದುಕೊಳ್ಳಲು ಆಗಿಲ್ಲ. ಈಗ ಕಾಂಗ್ರೆಸ್​ಗೆ ಗಾಬರಿಯಾಗುತ್ತಿದೆ. ನಿನ್ನೆ ಒಂದು ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಚುನಾವಣೆಯನ್ನು ನಾವು ಮಾಡಿದ ಕೆಲಸದ ಮೇಲೆಯೇ ನಡೆಸುತ್ತೇವೆ ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.