ETV Bharat / state

ಲೋಕಸಭಾ ಚುನಾವಣೆ ಹೊತ್ತಿನಲ್ಲೂ ಜನಪ್ರಿಯ ಯೋಜನೆಗಳ ಮೊರೆ ಹೋಗದ ಮೋದಿ ಸರ್ಕಾರ

author img

By ETV Bharat Karnataka Team

Published : Feb 1, 2024, 9:39 PM IST

modi-government-has-not-announced-popular-schemes-in-interim-budget
ಲೋಕಸಭಾ ಚುನಾವಣೆ ಹೊತ್ತಿನಲ್ಲೂ ಜನಪ್ರಿಯ ಯೋಜನೆಗಳ ಮೊರೆ ಹೋಗದ ಮೋದಿ ಸರ್ಕಾರ

ಲೋಕಸಭೆ ಚುನಾವಣೆ ಎದುರಾದಾಗ ಕೇಂದ್ರದಲ್ಲಿರುವ ಸರ್ಕಾರ ಮತದಾರರನ್ನು ಓಲೈಸಲು ಜನಪ್ರಿಯ ಯೋಜನೆಗಳ ಮೊರೆ ಹೋಗುವುದು ರಹಸ್ಯವೇನಲ್ಲ. ಆದರೆ, ಮೋದಿ ಸರ್ಕಾರ 17ನೇ ಲೋಕಸಭೆಯ ಕೊನೆಯ ಮಧ್ಯಂತರ ಬಜೆಟ್​ನಲ್ಲಿ ಅಂತಹದ್ದಕ್ಕೆ ಕೈ ಹಾಕಿಲ್ಲ.

ಬೆಂಗಳೂರು: ಲೋಕಸಭೆಯಲ್ಲಿ ಇಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರದ ಮಧ್ಯಂತರ ಬಜೆಟ್ ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ಆತ್ಮವಿಶ್ವಾಸವನ್ನು ಎತ್ತಿ ತೋರಿಸಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ದೇಶದ ಮತದಾರರ ಮುಂದೆ ಹೋಗಲು ಮೋದಿ ಸರ್ಕಾರ, ಹಲವು ಜನಪ್ರಿಯ ಯೋಜನೆಗಳನ್ನು ಪ್ರಕಟಿಸಲಿದೆ ಎಂಬ ನಿರೀಕ್ಷೆ ಸಾರ್ವತ್ರಿಕವಾಗಿತ್ತು. ಆದರೆ, ಇಂದು ಸಂಸತ್ತಿನಲ್ಲಿ ಮಂಡನೆಯಾದ ಕೇಂದ್ರದ ಬಜೆಟ್ ದೇಶದ ಮತದಾರರಿಗೆ ಬಂಪರ್ ಕೊಡುಗೆಗಳನ್ನೇನೂ ಘೋಷಿಸಲಿಲ್ಲ. ಬದಲಿಗೆ ಕೆಲ ತಿಂಗಳ ಲೇಖಾನುದಾನ ಪಡೆಯುವ ಉದ್ದೇಶ ಮಾತ್ರ ತನ್ನದು ಎಂಬ ಸಂದೇಶ ರವಾನಿಸಿದೆ.

ಆ ಮೂಲಕ ಲೋಕಸಭಾ ಚುನಾವಣೆಯಲ್ಲಿ ಸ್ವಯಂಬಲದಿಂದ ಗೆದ್ದು ಅಧಿಕಾರ ಹಿಡಿಯಲು ಮತದಾರರನ್ನು ಓಲೈಸುವ ಅಗತ್ಯ ತನಗಿಲ್ಲ ಎಂಬ ಅಂಶವನ್ನೂ ಮೋದಿ ಸರ್ಕಾರ ದೇಶದ ಮುಂದೆ ಪ್ರಚುರಪಡಿಸಿರುವುದು ತೋರುತ್ತದೆ. ಲೋಕಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿಯುವ ವಿಷಯದಲ್ಲಿ ಆತಂಕವಿದ್ದರೆ ಸರ್ಕಾರ ಮತದಾರರಿಗೆ ಭರಪೂರ ಕೊಡುಗೆಗಳನ್ನು ಕೊಡುವುದು. ಆ ಮೂಲಕ ಅವರನ್ನು ಓಲೈಸುವ ಪ್ರಯತ್ನ ಮಾಡಲಾಗುತ್ತದೆ. ಆದರೆ, ಅಂತಹ ಓಲೈಕೆಯ ಉದ್ದೇಶವೇ ಇಲ್ಲವೆಂದರೆ, ಅದು ಸಂಪೂರ್ಣ ಆತ್ಮವಿಶ್ವಾಸದ ಪ್ರತೀಕ ಎಂದೇ ಹೇಳಲಾಗುತ್ತದೆ.

ಹಾಗೆಂದು ಮೋದಿ ಸರ್ಕಾರ ತನ್ನ ಬಜೆಟ್​ನಲ್ಲಿ ದೇಶದ ಮತದಾರರ ಗಮನ ಸೆಳೆಯುವ ಯತ್ನವನ್ನು ಮಾಡಿಯೇ ಇಲ್ಲವೆಂತಲ್ಲ. ಮೂರು ಲಕ್ಷ ಮಹಿಳೆಯರನ್ನು ಲಕ್ಷಾಧಿಪತಿಗಳನ್ನಾಗಿ ಮಾಡುವ ಕಾರ್ಯಕ್ರಮ, ದೇಶದ ಒಂದು ಕೋಟಿ ಜನರಿಗೆ ಸೂರ್ಯೋದಯ ಯೋಜನೆಯಡಿ ಸೋಲಾರ್ ವಿದ್ಯುತ್ ಒದಗಿಸುವ ಘೋಷಣೆಯು ಗಮನಾರ್ಹವಾಗಿದೆ.

ಇದನ್ನೂ ಓದಿ: ಈ ಬಾರಿಯ ಬಜೆಟ್​ನಿಂದ ಯುವಕರು, ಬಡವರು, ಮಹಿಳೆಯರು, ರೈತರ ಸಬಲೀಕರಣ: ಪ್ರಧಾನಿ ಮೋದಿ

ಇದೇ ರೀತಿ ರಾಜ್ಯಗಳಿಗೆ ಬಡ್ಡಿ ರಹಿತವಾಗಿ ಎಪ್ಪತ್ತೈದು ಸಾವಿರ ಕೋಟಿ ರೂಪಾಯಿ ಸಾಲ ನೀಡುವುದು ಮತ್ತು ಈ ಸಾಲವನ್ನು ಪಾವತಿಸಲು ಐವತ್ತು ವರ್ಷಗಳ ಕಾಲಾವಕಾಶ ನೀಡುವುದು ಕೂಡಾ ಗಮನಾರ್ಹ. ಆದರೆ, ಇಂತಹ ಯೋಜನೆಗಳು ದೇಶದ ಅಗತ್ಯಕ್ಕನುಗುಣವಾಗಿ ರೂಪಿಸಿದಂತೆ ಕಾಣುತ್ತದೆಯೇ ಹೊರತು, ಮತದಾರರನ್ನು ಓಲೈಸುವ ಶಕ್ತಿ ಅದಕ್ಕೆ ಕಡಿಮೆ. ಯಾಕೆಂದರೆ, ಮತದಾರರಿಗೆ ವೈಯಕ್ತಿಕ ಲಾಭ ತಂದು ಕೊಡುವ ಯೋಜನೆಗಳು ಓಲೈಕೆಯ ಗುಣವನ್ನು ಹೊಂದಿರುತ್ತವೆ.

ಆದರೆ, ಗುರುವಾರದ ಬಜೆಟ್​ನಲ್ಲಿ ಓಲೈಕೆಯ ಅಂಶ ಕಡಿಮೆ. ಹೀಗೆ ಓಲೈಕೆಯ ಅಂಶ ಕಡಿಮೆಯಾಗಿರುವುದಕ್ಕೆ ಮತ್ತೊಮ್ಮೆ ದೇಶದ ಅಧಿಕಾರ ಸೂತ್ರ ಹಿಡಿಯುವ ಮೋದಿ ಸರ್ಕಾರದ ವಿಶ್ವಾಸವೇ ಅದಕ್ಕೆ ಕಾರಣ. ಬಜೆಟ್ ಮಂಡನೆಯಾಗುವ ತನಕ, ಮೋದಿ ಸರ್ಕಾರದ ಬಜೆಟ್ ಹೇಗಿರಬಹುದು ಎಂಬ ಬಗ್ಗೆ ಲೆಕ್ಕಾಚಾರಗಳು ಇದ್ದವು. ಆದಾಯ ತೆರಿಗೆ ಮಿತಿ ಬದಲಿಸುವ ಮೂಲಕ ದೇಶದ ಶ್ರೀಮಂತ, ಮಧ್ಯಮ ವರ್ಗವನ್ನು ಮೋದಿ ಸರ್ಕಾರ ಓಲೈಸಲಿದೆ ಎಂಬುದು ಇದರಲ್ಲಿ ಒಂದಾಗಿತ್ತು.

ಆದರೆ, ಆದಾಯ ತೆರಿಗೆ ಮಿತಿಯಲ್ಲಿ ಕೇಂದ್ರ ಸರ್ಕಾರ ಯಾವ ಬದಲಾವಣೆಯನ್ನೂ ಮಾಡಲಿಲ್ಲ. ಇದೇ ರೀತಿ ದೇಶದ ವಿವಿಧ ಮತದಾರರನ್ನು ತಲುಪಲು ಬೇರೆ, ಬೇರೆ ಜನಪ್ರಿಯ ಯೋಜನೆಗಳನ್ನು ಬಜೆಟ್​ನಲ್ಲಿ ಸೇರಿಸಬಹುದು ಎಂಬ ಮಾತುಗಳು ಕೂಡ ಹುಸಿಯಾಗಿವೆ. ಇದೇ ವೇಳೆ, ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ಬಗ್ಗೆ ಟೀಕೆಗಳನ್ನೂ ಮಾಡಬಹುದು. ಲೋಕಸಭಾ ಚುನಾವಣೆ ಹತ್ತಿರವಾಗುತ್ತಿರುವ ಈ ಹೊತ್ತಿನಲ್ಲಿ ಜನಪ್ರಿಯ ಯೋಜನೆಗಳ ಮೊರೆ ಹೋಗದ ಮೋದಿ ಸರ್ಕಾರದ ಹೆಜ್ಜೆ ಯಾವ ದೃಷ್ಟಿಯಿಂದ ಗಮನಿಸಿದರೂ ಕುತೂಹಲಕಾರಿಯಾಗಿದೆ.

ಇದನ್ನೂ ಓದಿ: 58 ನಿಮಿಷಗಳ ಬಜೆಟ್ ಭಾಷಣ: ಆ ನಾಲ್ಕು ವರ್ಗಗಳ ಮೇಲೆಯೇ ವಿತ್ತ ಸಚಿವರ ಗಮನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.