ETV Bharat / state

ಬಿಜೆಪಿ‌ ಕೇಂದ್ರ ನಾಯಕರ ಕಲಬುರಗಿ ಭೇಟಿ: ಎಂದೂ ಇಲ್ಲದ ಪ್ರೀತಿ ಈಗೇಕೆ ಎಂದು ಖರ್ಗೆ ಪ್ರಶ್ನೆ

author img

By ETV Bharat Karnataka Team

Published : Feb 22, 2024, 10:14 AM IST

Kharge Criticizes BJP
ಬಿಜೆಪಿ ಟೀಕಿಸಿದ ಖರ್ಗೆ

'ಬಿಜೆಪಿ‌ ಕೇಂದ್ರ ನಾಯಕರ ಕಲಬುರಗಿ ಭೇಟಿ' ವಿಚಾರವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಬಿಜೆಪಿ ಟೀಕಿಸಿದ ಖರ್ಗೆ

ಕಲಬುರಗಿ: ಬಿಜೆಪಿಯ ಕೇಂದ್ರ ನಾಯಕರಿಗೆ ಕಲಬುರಗಿ ಜಿಲ್ಲೆ ಮೇಲೆ ಬಹಳ ಪ್ರೀತಿ ಬಂದಿದೆ. ಪದೇ ಪದೆ ಕಲಬುರಗಿಗೆ ಬಂದು ಹೋಗುತ್ತಿದ್ದಾರೆ. ಯಾರನ್ನು ಟಾರ್ಗೆಟ್ ಮಾಡಿದ್ದಾರೋ ಗೊತ್ತಿಲ್ಲ. ಯಾವ ಎಲೆಕ್ಷನ್​​​ನಲ್ಲಿಯೂ ಬರದೇ ಇರುವವರು ಕಳೆದ ಬಾರಿ ಮೂರ್ಮೂರು ಬಾರಿ‌ ಬಂದು ಹೋದರು. ಈ ಸಲವೂ ಪದೇ ಪದೆ ಬರುತ್ತಿದ್ದಾರೆ. ತಮ್ಮ ಪಕ್ಷದ ಕ್ಯಾಂಡಿಡೇಟ್ ಹುಡಕಲು ಬರುತ್ತಿರಬಹುದು ಎಂದು 'ಬಿಜೆಪಿ‌ ಕೇಂದ್ರ ನಾಯಕರ ಕಲಬುರಗಿ ಭೇಟಿ' ವಿಚಾರಕ್ಕೆ ಸಂಬಂಧಿಸಿದಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

'ಜಾಹೀರಾತು ಸರ್ಕಾರ': ಕಲಬುರಗಿಯಲ್ಲಿ ಬುಧವಾರದಂದು ಮಾತನಾಡಿದ ಅವರು, ಕೆಲವರು ಮೋದಿ ಇದ್ದರೆ ಮಾತ್ರವೇ ದೇಶ ನಡೆಯುತ್ತದೆ. ಇಲ್ಲದಿದ್ದರೆ ಇಲ್ಲ ಎಂಬ ಗುಂಗಿನಲ್ಲಿ ಇದ್ದಾರೆ. 70 ವರ್ಷಗಳಿಂದ ಮೋದಿ ಇಲ್ಲದೇ ದೇಶ ನಡೆಯಲಿಲ್ಲವೇ? ಐ.ಕೆ ಗುಜ್ರಾಲ್, ಹೆಚ್‌.ಡಿ ದೇವೇಗೌಡ, ಅಟಲ್‌ ಬಿಹಾರಿ ವಾಜಪೇಯಿ ಸೇರಿದಂತೆ ಅನೇಕ ನಾಯಕರು ದೇಶ ಕಟ್ಟಿದ್ದಾರೆ. ಬಡವರ ಬಗ್ಗೆ ಅನುಕಂಪ ಇರಿಸಿಕೊಂಡು ಆಡಳಿತ ನಡೆಸಿದ್ದಾರೆ. ಆದ್ರೆ ಮೋದಿ ಸರ್ವಾಧಿಕಾರ ಆಡಳಿತ ತರಲು ಬಯಸುತ್ತಿದ್ದಾರೆ. ಅದನ್ನೇ ಮಾಡಿ ತೋರಿಸುತ್ತಿದ್ದಾರೆ. ಇವರದ್ದು ಕೇವಲ ಜಾಹೀರಾತು ಸರ್ಕಾರ ಎಂದು ವಾಗ್ದಾಳಿ ನಡೆಸಿದರು.

ಎಲ್ಲವೂ ಪ್ರಧಾನಿ ನಿಯಂತ್ರಣದಲ್ಲಿದೆ: ಮಾಧ್ಯಮಗಳ ಮಾಲೀಕರನ್ನು ಪ್ರಧಾನಿ ಮೋದಿ ಅವರು ಕಂಟ್ರೋಲ್‌ ಮಾಡುತ್ತಿದ್ದಾರೆ. ನಾನು ಮುಕ್ತವಾಗಿ ಕೆಲ ವಿಚಾರಗಳನ್ನು ಹೇಳಿದರೆ ನೀವು ಪ್ರಸಾರ ಮಾಡುತ್ತೀರಾ? ನನ್ನ ಹೇಳಿಕೆ ಕಳುಹಿಸಿದ ಮೇಲೆ ಎಡಿಟರ್​ಗಳಿಂದ ಕಟ್ ಆಗುತ್ತದೆ. ಮೋದಿ ತಮಗೆ ಬೇಡವಾದ ವಿಷಯ ತೆಗೆದು ಹಾಕಿಸುತ್ತಾರೆ. ಎಲ್ಲವೂ ಅವರ ನಿಯಂತ್ರಣದಲ್ಲಿದೆ ಎಂದು ಪ್ರಧಾನಿ ಮೋದಿ ವಿರುದ್ಧ ಖರ್ಗೆ ವಾಗ್ದಾಳಿ ನಡೆಸಿದ್ರು.

ಅಬ್ಬರದ ಪ್ರಚಾರವನ್ನು ಪಿಎಂ ಮೋದಿ ಕೈಗೊಂಡಿದ್ದಾರೆ. ಪ್ರಚಾರದಲ್ಲಿರುವ ಮೋದಿ ಅವರು 400, 500 ಸೀಟುಗಳನ್ನು ನಾವೇ ಗೆಲ್ಲುತ್ತೇವೆ ಎನ್ನುತ್ತಿದ್ದಾರೆ. ಲೋಕಸಭೆಯಲ್ಲಿ ಇರೋದೇ 543 ಸೀಟು, ಹಾಗಾದ್ರೆ ಬೇರೆಯವರಿಗೆ ಏನೂ ಸಿಗಲ್ಲ. 543 ಸೀಟು ಅವರೇ ಗೆಲ್ಲುತ್ತಾರೆಯೇ? ಪ್ರಜಾಪ್ರಭುತ್ವದಲ್ಲಿ ಇಂತಹ ನಡವಳಿಕೆ ಸರಿಯಲ್ಲ ಎಂದು ಹರಿಹಾಯ್ದರು.

ಕೇಂದ್ರ ಸ್ವಾಯುತ್ತ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಂಡು ಜನರನ್ನು ಹೆದರಿಸಿ, ಬೆದರಿಸಿ ಪಕ್ಷಕ್ಕೆ ಸೆಳೆದುಕೊಂಡರೆ ಪ್ರಜಾಪ್ರಭುತ್ವ ಉಳಿಯುವುದಿಲ್ಲ. ಇದು ಹೀಗೆ ಮುಂದುವರಿದರೆ ಸಂವಿಧಾನ ಮತ್ತು ಜನರಿಗೂ ತೊಂದರೆ ಆಗುತ್ತದೆ. ಸಹಜವಾಗಿ ವಯಸ್ಕರ ಮತದಾನವೂ ಉಳಿಯುವುದಿಲ್ಲ ಎಂದರು.

ಇದನ್ನೂ ಓದಿ: ತಾಯಿ - ಮಕ್ಕಳ ಆರೋಗ್ಯ ರಕ್ಷಣೆಗೆ 2 ನೂತನ ತಂತ್ರಜ್ಞಾನ ಅನುಷ್ಠಾನ

ನಮ್ಮ ಬಳಿ ಇದ್ದವರು ಭ್ರಷ್ಟಾಚಾರಿ ಆಗಿದ್ದವರು, ಅದೇ ಒಮ್ಮೆ ನಿಮ್ಮ ಪಕ್ಷಕ್ಕೆ ಸೇರ್ಪಡೆಯಾದ ಮೇಲೆ ಪ್ರಾಮಾಣಿಕರು, ಪರಿಶುದ್ಧರು ಹೇಗಾಗುತ್ತಾರೆ? ಯಾರು ಎಲ್ಲೇ ಸಿಕ್ಕರೂ ಒಳಗೆ ಹಾಕಿ ಎಂದು ಬೈಯುತ್ತಾರೆ. ಮುಂದೆ ಅವರನ್ನೇ ಕರೆದೊಯ್ದು ರಾಜಕೀಯ ಮಾಡುತ್ತಾರೆ. ಬಿಜೆಪಿಯವರ ಇಂತಹ ದ್ವಂದ್ವ ರಾಜಕಾರಣ ಮೊದಲಿನಿಂದಲೂ ನಡೆದುಕೊಂಡು ಬಂದಿದೆ ಎಂದು ಟೀಕಿಸಿದರು.

ಇದನ್ನೂ ಓದಿ: ಶಂಭು ಗಡಿಯಲ್ಲಿ ಪರಿಸ್ಥಿತಿ ಉದ್ವಿಗ್ನ: 'ದೆಹಲಿ ಚಲೋ' ಪ್ರತಿಭಟನೆ: Photos

ಲೋಕಸಭಾ ಚುನಾವಣೆ ತಯಾರಿ ನಡೆದಿದೆ. ಒಂದೆಡೆ ಪ್ರಚಾರ, ಇನ್ನೊಂದೆಡೆ ಇಂಡಿಯಾ ಮೈತ್ರಿಕೂಟದ ಪ್ರಯತ್ನ ನಡೆದಿದೆ.‌ ಪ್ರತಿದಿನ ಒಂದು ರಾಜ್ಯದಲ್ಲಿ ಮೀಟಿಂಗ್ ಮಾಡುತ್ತಿದ್ದೇನೆ. ಜನರು ಕೂಡಾ ಸ್ಪಂದಿಸುತ್ತಿದ್ದಾರೆ. ನಮ್ಮ ಕಾಂಗ್ರೆಸ್ ಪಾರ್ಟಿ ಬಗ್ಗೆ, ನಮ್ಮ ಸಾಧನೆ ಬಗ್ಗೆ, ಜೊತೆಗೆ ಸರ್ಕಾರದ ವೈಫಲ್ಯಗಳ ಕುರಿತು ಜನರ ಮುಂದೆ ಇಡುತ್ತಿದ್ದೇವೆ ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.