ETV Bharat / state

ಪೆಪ್ಪರ್ ಸ್ಪ್ರೇ ಅಪಾಯಕಾರಿ ಆಯುಧ ಎಂದ ಹೈಕೋರ್ಟ್: ಪ್ರಕರಣ ರದ್ದತಿಗೆ ನಿರಾಕರಣೆ - Pepper Spray

author img

By ETV Bharat Karnataka Team

Published : May 7, 2024, 11:19 AM IST

Updated : May 7, 2024, 12:36 PM IST

Karnataka High Court said that pepper spray is also a dangerous weapon
Karnataka High Court said that pepper spray is also a dangerous weapon (ETV Bharat)

2018ರಲ್ಲಿ ಪೀಪಲ್ ವಿರುದ್ಧದ ಸ್ಯಾಂಡೇಜ್ ಪ್ರಕರಣದಲ್ಲಿ ಅಮೆರಿಕ ನ್ಯಾಯಾಲಯವು ಪೆಪ್ಪರ್ ಸ್ಪ್ರೇಯಂತಹ ಹಾನಿಕಾರಕ ರಾಸಾಯನಿಕಗಳನ್ನು 'ಅಪಾಯಕಾರಿ ಆಯುಧ' ಎಂದು ಉಲ್ಲೇಖಿಸಿದೆ ಎಂದು ಹೈಕೋರ್ಟ್​ ತಿಳಿಸಿದೆ.

ಬೆಂಗಳೂರು: ಅಮೆರಿಕ ನ್ಯಾಯಾಲಯದ ಆದೇಶವನ್ನು ಪ್ರಸ್ತಾಪಿಸಿರುವ ಹೈಕೋರ್ಟ್​, ಪೆಪ್ಪರ್​ ಸ್ಪ್ರೇ ಅತ್ಯಂತ ಅಪಾಯಕಾರಿ ಆಯುಧವಾಗಿದೆ ಎಂದು​​ ಸಿ.ಕೃಷ್ಣಯ್ಯ ಚೆಟ್ಟಿ ಆ್ಯಂಡ್ ಸನ್ಸ್ ಕಂಪನಿ (ಸಿಕೆಸಿ ಆ್ಯಂಡ್ ಸನ್ಸ್ ಕಂಪನಿ) ಚಿನ್ನಾಭರಣಗಳ ಮಳಿಗೆ ನಿರ್ದೇಶಕರಲ್ಲಿ ಒಬ್ಬರಾದ ಸಿ.ಗಣೇಶ್ ನಾರಾಯಣ ಮತ್ತವರ ಪತ್ನಿ ವಿದ್ಯಾ ನಟರಾಜ್ ವಿರುದ್ಧದ ಕ್ರಿಮಿನಲ್ ಪ್ರಕರಣದ ತನಿಖೆ ರದ್ದುಗೊಳಿಸಲು ನಿರಾಕರಿಸಿದೆ.

ಪ್ರಕರಣವೇನು?: ಸಿಕೆಸಿ ಆ್ಯಂಡ್ ಸನ್ಸ್ ಕಂಪೆನಿಯ ಪಕ್ಕದ ನಿವೇಶನದ ಮಾಲೀಕ ವಿನೋದ್ ಹಯಗ್ರೀವಾ ಎಂಬವರು ತಮ್ಮ ಜಾಗದಲ್ಲಿ ಅತಿಕ್ರಮ ಪ್ರವೇಶ ಮಾಡದಂತೆ ನ್ಯಾಯಾಲಯದಿಂದ ಮಧ್ಯಂತರ ನಿರ್ಬಂಧಕಾಜ್ಞೆ ಪಡೆದುಕೊಂಡಿದ್ದರು. ಈ ನಡುವೆ 2023ರ ಏಪ್ರಿಲ್ ನಾಲ್ಕರಂದು ಉಂಟಾದ ಗಲಾಟೆ ವೇಳೆ ವಿದ್ಯಾ ಅವರು ಶಿವಾಜಿನಗರದಲ್ಲಿರುವ ಸಿಕೆಸಿ ಆ್ಯಂಡ್ ಸನ್ಸ್ ಮಳಿಗೆಯಲ್ಲಿನ ಭದ್ರತಾ ಸಿಬ್ಬಂದಿ ರಣದೀಪ್​ ದಾಸ್​ ಮೇಲೆ ಪೆಪ್ಪರ್​ ಸ್ಪ್ರೇ ಬಳಕೆ ಮಾಡಿದ್ದರು. ಇದರಿಂದ ದಾಸ್, ವಿದ್ಯಾ ಮತ್ತು ಗಣೇಶ್​​ ವಿರುದ್ಧ ಪ್ರಕರಣ ದಾಖಲಿಸಿದ್ದರು.

ಈ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಸಿ.ಗಣೇಶ್​ ನಾರಾಯಣ ಮತ್ತು ಅವರ ಪತ್ನಿ ವಿದ್ಯಾ ನಟರಾಜ್​ ಹೈಕೋರ್ಟ್​ ಮೆಟ್ಟಿಲೇರಿದ್ದರು. ಅಂದು ನಡೆದ ಗಲಾಟೆಯಲ್ಲಿ ತನ್ನನ್ನು ರಕ್ಷಣೆ ಮಾಡಿಕೊಳ್ಳುವುದಕ್ಕಾಗಿ ಪೆಪ್ಪರ್ ಸ್ಪ್ರೇ ಬಳಕೆ ಮಾಡಿಕೊಳ್ಳಲಾಗಿದೆ. ಐಪಿಸಿ ಸೆಕ್ಷನ್ 100ರ ಪ್ರಕಾರ ಸ್ವಯಂ ರಕ್ಷಣೆ ಮಾಡಿಕೊಳ್ಳುವುದು ಹಕ್ಕಾಗಿದೆ. ಆದ್ದರಿಂದ ತಮ್ಮ ವಿರುದ್ಧದ ಪ್ರಕರಣ ರದ್ದುಗೊಳಿಸಬೇಕು ಎಂದು ಅರ್ಜಿಯಲ್ಲಿ ಕೋರಿದ್ದರು.

ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಪೀಠ, ಐಪಿಸಿ ಸೆಕ್ಷನ್​ 324ರ ಅಡಿ ತಿಳಿಸಿರುವಂತೆ ಗುಂಡು ಹಾರಿಸುವುದು, ಚೂಪಾದ ವಸ್ತು ಬಳಕೆಯಿಂದ ಸ್ವಯಂ ಪ್ರೇರಣೆಯಿಂದ ಮತ್ತೊಬ್ಬರಿಗೆ ಗಾಯವನ್ನುಂಟು ಮಾಡುವುದು ಅಪರಾಧ ಕೃತ್ಯವಾಗಲಿದೆ. ಪೆಪ್ಪರ್ ಸ್ಪ್ರೇ ಕೂಡ ಒಂದು ಅಪಾಯಕಾರಿ ಆಯುಧ ಎನ್ನುವುದರಲ್ಲಿ ಸಂಶಯವೇ ಇಲ್ಲ. ಪೆಪ್ಪರ್ ಸ್ಪ್ರೇ ಬಳಕೆಗೆ ಸಂಬಂಧಿಸಿದಂತೆ ದೇಶದಲ್ಲಿ ಯಾವುದೇ ಕಾನೂನು ರೂಪಿಸಲಾಗಿಲ್ಲ. ಆದರೆ, 2018ರಲ್ಲಿ ಪೀಪಲ್ ವಿರುದ್ಧದ ಸ್ಯಾಂಡೇಜ್ ಪ್ರಕರಣದಲ್ಲಿ ಅಮೆರಿಕ ನ್ಯಾಯಾಲಯ ಪೆಪ್ಪರ್ ಸ್ಪ್ರೇಯಂತಹ ಹಾನಿಕಾರಕ, ರಾಸಾಯನಿಕಗಳು ಅಪಾಯಕಾರಿ ಆಯುಧ ಎಂದು ತಿಳಿಸಿದೆ.

ಅಲ್ಲದೇ, ಈ ಪ್ರಕರಣದಲ್ಲಿ ಅರ್ಜಿದಾರರ ಜೀವಕ್ಕೆ ಅಪಾಯವಿರುವುದಿಲ್ಲ. ಹೀಗಾಗಿ ಅವರು ಪೆಪ್ಪರ್ ಸ್ಪ್ರೇ ಬಳಕೆ ಮಾಡಿರುವುದು ತಪ್ಪು. ಆದ್ದರಿಂದ ಪ್ರಕರಣ ಸಂಬಂಧ ಕನಿಷ್ಠ ತನಿಖೆ ನಡೆಸುವುದು ಅತ್ಯಗತ್ಯ. ಆದ್ದರಿಂದ ಈ ಹಂತದಲ್ಲಿ ಹೈಕೋರ್ಟ್ ಮಧ್ಯಪ್ರವೇಶ ಮಾಡುವುದು ಸುಪ್ರೀಂ ಕೋರ್ಟ್‌ನ ವಿವಿಧ ತೀರ್ಪುಗಳಿಗೆ ವಿರುದ್ಧವಾಗಲಿದೆ ಎಂದು ತಿಳಿಸಿದ ನ್ಯಾಯಪೀಠ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.

ಇದನ್ನೂ ಓದಿ: ಮತ ಚಲಾವಣೆಗೆ ಅವಕಾಶ ಕೋರಿ ವಿನಯ್ ಕುಲಕರ್ಣಿ ಸಲ್ಲಿಸಿದ್ದ ಅರ್ಜಿ ವಜಾ

Last Updated :May 7, 2024, 12:36 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.