ಬೆಂಗಳೂರು: ಹೆಬ್ಬಾಳ ಮೇಲ್ಸೇತುವೆಗೆ ಹೊಸ ಟ್ರ್ಯಾಕ್ ಸೇರ್ಪಡೆ ಕಾಮಗಾರಿ ಹಿನ್ನೆಲೆಯಲ್ಲಿ ಕೆ.ಆರ್.ಪುರಂ ಕಡೆಯಿಂದ ಮೇಲ್ಸೇತುವೆ ಕಡೆಗೆ ಬರುವ ಎಲ್ಲ ವಾಹನಗಳಿಗೆ ಸಂಚಾರ ನಿರ್ಬಂಧಿಸಲಾಗಿದೆ ಎಂದು ಬೆಂಗಳೂರು ಸಂಚಾರಿ ಪೊಲೀಸರು ತಿಳಿಸಿದ್ದಾರೆ. ಕೆ.ಆರ್.ಪುರಂ - ನಾಗವಾರ ಮಾರ್ಗವಾಗಿ ಬಂದು ಹೆಬ್ಬಾಳ ಮೇಲ್ಸೇತುವೆ ಸಂಪರ್ಕಿಸುವ ಎರಡು ರ್ಯಾಂಪ್ನ ಲಿಂಕ್ ಸ್ಪ್ಯಾನ್ಗಳನ್ನು ತೆಗೆದು ಹಾಕಲಾಗಿದ್ದು, ಇದರಿಂದ ರ್ಯಾಂಪ್ ಮತ್ತು ಮುಖ್ಯ ಟ್ರ್ಯಾಕ್ಗೆ ಸಂಪರ್ಕ ಇಲ್ಲದಿರುವುದರಿಂದ ಕಾಮಗಾರಿ ಮುಕ್ತಾಯಗೊಳ್ಳುವವರೆಗೂ ಸಂಚಾರ ನಿರ್ಬಂಧಿಸಲಾಗಿದೆ.
ಪರ್ಯಾಯ ಮಾರ್ಗಗಳ ವಿವರ:
- ನಾಗವಾರ (ಔಟರ್ ರಿಂಗ್ ರಸ್ತೆ) ಕಡೆಯಿಂದ ನಗರದ ಒಳಗೆ ಮೇಖ್ರಿ ಸರ್ಕಲ್ ಮುಖಾಂತರ ಸಂಚರಿಸುವ ವಾಹನಗಳು ಹೆಬ್ಬಾಳ ಸರ್ಕಲ್ನಲ್ಲಿ ಫ್ಲೈ ಓವರ್ ಕೆಳಗಿನಿಂದ ಬಲ ತಿರುವು ಪಡೆದು ಕೊಡಿಗೇಹಳ್ಳಿ ಜಂಕ್ಷನ್ ಬಳಿ ಯೂಟರ್ನ್ ಪಡೆದು, ಸರ್ವಿಸ್ ರಸ್ತೆಯಿಂದ ಹೆಬ್ಬಾಳ ಫ್ಲೈಓವರ್ನ ರ್ಯಾಂಪ್ ಮೂಲಕ ನಗರದ ಕಡೆಗೆ ಚಲಿಸಬಹುದು.
- ಕೆ.ಆರ್.ಪುರಂ, ನಾಗವಾರ ಕಡೆಯಿಂದ ನಗರದ ಕಡೆಗೆ ಬರುವ ವಾಹನಗಳು ಐಓಸಿ - ಮುಕುಂದ ಥಿಯೇಟರ್ ರಸ್ತೆ / ಲಿಂಗರಾಜಪುರ ಮೇಲ್ಸೇತುವೆ ಮಾರ್ಗ/ ನಾಗವಾರ ಟ್ಯಾನರಿ ರಸ್ತೆ ಮಾರ್ಗವಾಗಿ ನಗರದೊಳಗೆ ಪ್ರವೇಶಿಸಬಹುದು.
- ಹೆಗಡೆನಗರ – ಥಣಿಸಂದ್ರ ಕಡೆಯಿಂದ ಬರುವ ವಾಹನಗಳು ಜಿ.ಕೆ.ವಿಕೆ - ಜಕ್ಕೂರು ರಸ್ತೆ ಮೂಲಕ ಪ್ರವೇಶಿಸಬಹುದು.
- ಕೆ.ಆರ್.ಪುರಂ ಕಡೆಯಿಂದ ಹೆಬ್ಬಾಳ ಮಾರ್ಗವಾಗಿ ಯಶವಂತಪುರ ಕಡೆಗೆ ಚಲಿಸುವ ವಾಹನಗಳು ಹೆಬ್ಬಾಳ ಫ್ಲೈಓವರ್ ಕೆಳಗಡೆ ನೇರವಾಗಿ ಬಿಇಎಲ್ ಸರ್ಕಲ್ ತಲುಪಿ ಎಡ ತಿರುವು ಪಡೆದು ಸದಾಶಿವನಗರ ಜಂಕ್ಷನ್ನಲ್ಲಿ ಬಲತಿರುವು ಪಡೆದು, ಐಐಎಸ್ಸಿ ಮುಂಭಾಗದ ಮೂಲಕ ಚಲಿಸಬಹುದು.
- ಕೆ.ಆರ್.ಪುರಂ, ಹೆಣ್ಣೂರು, ಹೆಚ್ಆರ್ಬಿಆರ್ ಲೇಔಟ್, ಕೆ.ಜಿ.ಹಳ್ಳಿ, ಬಾಣಸವಾಡಿ ಕಡೆಯಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆ ಸಂಚರಿಸುವ ವಾಹನಗಳು ಹೆಣ್ಣೂರು-ಬಾಗಲೂರು ರಸ್ತೆಯ ಮೂಲಕ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪಬಹುದಾಗಿದೆ.
ಇದನ್ನೂ ಓದಿ: ಏರ್ಪೋರ್ಟ್ ರಸ್ತೆಯಲ್ಲಿ ಕ್ಯಾಮರಾ ಕಣ್ಣು; ವೇಗವಾಗಿ ವಾಹನ ಚಲಾಯಿಸಿದ್ರೆ ಬೀಳುತ್ತೆ ದಂಡ - KEMPEGOWDA AIRPORT ROAD