ETV Bharat / state

ಬೆಂಗಳೂರು-ಬಾಗಲಕೋಟೆ-ವಿಜಯಪುರ ರೈಲು ಪ್ರಯಾಣದ ಅವಧಿ 10 ಗಂಟೆಗೆ ಇಳಿಸಲು ಚರ್ಚೆ

author img

By ETV Bharat Karnataka Team

Published : Mar 16, 2024, 9:41 AM IST

Etv Bharat
Etv Bharat

ಬೆಂಗಳೂರಿನಿಂದ ವಿಜಯಪುರ, ಬಾಗಲಕೋಟೆ ಮಧ್ಯದ ರೈಲು ಪ್ರಯಾಣದ ಅವಧಿಯನ್ನು 14 ಗಂಟೆಯಿಂದ 10 ಗಂಟೆಗೆ ಇಳಿಸುವ ಕುರಿತು ರೈಲ್ವೆ ಅಧಿಕಾರಿಗಳ ಜೊತೆ ಸಚಿವ ಎಂ ಬಿ ಪಾಟೀಲ್ ಚರ್ಚಿಸಿದರು.

ಬೆಂಗಳೂರು: ರಾಜಧಾನಿಯಿಂದ ವಿಜಯಪುರ ಮತ್ತು ಬಾಗಲಕೋಟೆಗಳಿಗೆ ರೈಲು ಪ್ರಯಾಣಕ್ಕೆ ಈಗ ಸುಮಾರು 14 ಗಂಟೆಗಳ ಕಾಲ ಹಿಡಿಯುತ್ತಿದ್ದು, ಇದನ್ನು 10 ಗಂಟೆಗಳಿಗೆ ಇಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ರೈಲ್ವೆ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡಲಾಗಿದೆ. ಇದರಿಂದಾಗಿ, ವಾಯವ್ಯ ಕರ್ನಾಟಕದ ಜನರು ಬೆಂಗಳೂರಿಗೆ ಬಂದು ಹೋಗಲು ಅನುಕೂಲವಾಗಲಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.

ರೈಲು ಪ್ರಯಾಣವನ್ನು ಅನುಕೂಲಕರ ಮತ್ತು ಸುಖದಾಯಕವನ್ನಾಗಿ ಮಾಡಲು ಹಾಗೂ ಮಂದಗತಿಯಲ್ಲಿ ಸಾಗುತ್ತಿರುವ ವೆಚ್ಚ ಹಂಚಿಕೆಯ 9 ರೈಲು ಯೋಜನೆಗಳ ಸ್ಥಿತಿಗತಿ ಬಗ್ಗೆ ಚರ್ಚಿಸಲು ಖನಿಜ ಭವನದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಮತ್ತು ನೈರುತ್ಯ ರೈಲ್ವೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಬಳಿಕ ಮಾತನಾಡಿದ ಅವರು, ಬೆಂಗಳೂರು-ವಿಜಯಪುರ ನಡುವಿನ 660 ಕಿ.ಮೀ ರೈಲು ಪ್ರಯಾಣಕ್ಕೆ ಈಗ ಸುಮಾರು 14 ಗಂಟೆ ಸಮಯ ಹಿಡಿಯುತ್ತಿದೆ. ಬೆಂಗಳೂರಿಂದ ಹೊರಡುವ ರೈಲುಗಳು ಈಗ ಹುಬ್ಬಳ್ಳಿ ನಿಲ್ದಾಣಕ್ಕೆ ಹೋಗುತ್ತಿದ್ದು, ಅಲ್ಲಿ ಎಂಜಿನ್ ಬದಲಿಸಲು 45 ನಿಮಿಷ ನಿಲ್ಲುತ್ತವೆ. ಬಳಿಕ, ಗದಗದಲ್ಲೂ ಹೀಗೆಯೇ ಸಮಯ ವ್ಯರ್ಥವಾಗುತ್ತಿದೆ. ಆದ್ದರಿಂದ, ರೈಲುಗಳು ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ ಹೋಗುವ ಬದಲು ಹುಬ್ಬಳ್ಳಿ (ದಕ್ಷಿಣ) ನಿಲ್ದಾಣ ಬೈಪಾಸ್ ಮತ್ತು ಗದಗ ಬೈಪಾಸ್ ಮೂಲಕ ಸಾಗುವ ವ್ಯವಸ್ಥೆ ಮಾಡಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಯೋಜನೆ ರೂಪಿಸಬೇಕು ಎಂದು ಸೂಚಿಸಿದರು.

ಈಗಾಗಲೇ ಬೆಂಗಳೂರು-ಹುಬ್ಬಳ್ಳಿ-ಬಾಗಲಕೋಟೆ ನಡುವೆ ಜೋಡಿ ಹಳಿ ಇದೆ. ಬಾಗಲಕೋಟೆ-ವಿಜಯಪುರ ಮಧ್ಯೆ ಆಲಮಟ್ಟಿಯವರೆಗೂ ದ್ವಿಪಥ ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿದ್ದು, ಈ ವರ್ಷದ ಸೆಪ್ಟೆಂಬರ್ ಹೊತ್ತಿಗೆ ಮುಗಿಯಲಿದೆ. ಇಲ್ಲಿ ಆಲಮಟ್ಟಿ-ವಂಡಾಳ್ ಮಧ್ಯೆ 9 ಕಿ.ಮೀ. ಮಾತ್ರ ಕಾಮಗಾರಿ ಬಾಕಿ ಉಳಿದಿದ್ದು, ಇಲ್ಲಿ ಸೇತುವೆ ಕಾಮಗಾರಿ ನಡೆಯಬೇಕಿದೆ. ಇದನ್ನು 2025ರ ಆಗಸ್ಟ್ ವೇಳೆಗೆ ಪೂರ್ಣಗೊಳಿಸಲಾಗುವುದು. ಜೊತೆಗೆ, ಇನ್ನು ಎರಡು ತಿಂಗಳಲ್ಲಿ ಈ ಮಾರ್ಗದಲ್ಲಿ ಬಾಕಿ ಇರುವ ವಿದ್ಯುದೀಕರಣ ಕೂಡ ಮುಗಿಯಲಿದೆ ಎಂದು ವಿವರಿಸಿದರು.

ಇದನ್ನೂ ಓದಿ: ಆರು ತಿಂಗಳಲ್ಲಿ ವಂದೇ ಭಾರತ್ ರೈಲಿನಲ್ಲಿ ಸ್ಲೀಪರ್ ಕೋಚ್: ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್

ಈ ಕ್ರಮಗಳ ಜೊತೆಗೆ ಬೆಂಗಳೂರಿನಿಂದ ವಿಜಯಪುರ, ಬಾಗಲಕೋಟೆಗಳಿಗೆ ವಿಶೇಷ ರೈಲುಗಳನ್ನು ಓಡಿಸಬೇಕಾದ ಅಗತ್ಯವಿದೆ. ಮಿಗಿಲಾಗಿ, ವಿದ್ಯುದೀಕರಣ ಕಾಮಗಾರಿ ಮುಗಿದರೆ ವಿಜಯಪುರ, ಬಾಗಲಕೋಟೆಗಳಿಗೆ 'ವಂದೇ ಭಾರತ್' ಎಕ್ಸಪ್ರೆಸ್ ರೈಲು ಸೇವೆ ಆರಂಭಿಸುವಂತೆ ರೈಲ್ವೆ ಮಂಡಳಿಯನ್ನು ಕೋರಲಾಗುವುದು ಎಂದು ತಿಳಿಸಿದರು.

ವೆಚ್ಚ ಹಂಚಿಕೆ ಯೋಜನೆಗಳಿಗೆ ಗಡುವು: ರಾಜ್ಯದಲ್ಲಿ ರೈಲ್ವೆಯೊಂದಿಗೆ ವೆಚ್ಚ ಹಂಚಿಕೆ ಆಧಾರದ ಮೇಲೆ 9 ರೈಲ್ವೆ ಯೋಜನೆಗಳು ಪ್ರಗತಿಯಲ್ಲಿವೆ. ಆದರೆ, ಇವು ಕಾಲಮಿತಿಯಲ್ಲಿ ಪೂರ್ಣಗೊಳ್ಳದೆ ಇರುವುದರಿಂದ ವೆಚ್ಚ ಮಿತಿ ಮೀರುತ್ತಿದೆ. ಆದ್ದರಿಂದ ಇವುಗಳ ವೆಚ್ಚ ಹೆಚ್ಚಾಗದಂತೆ ನೋಡಿಕೊಂಡು, ತ್ವರಿತ ಗತಿಯಲ್ಲಿ ಮುಗಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿದರು.

ಈ ಪೈಕಿ ಮುನಿರಾಬಾದ್-ಮೆಹಬೂಬ್ ನಗರ ಯೋಜನೆಯನ್ನು 2026ರ ಮಾರ್ಚ್ ವೇಳೆಗೆ, ತುಮಕೂರು-ರಾಯದುರ್ಗ ಯೋಜನೆಯನ್ನು 2027ರ ಡಿಸೆಂಬರ್ ಹೊತ್ತಿಗೆ, ಚಿಕ್ಕಮಗಳೂರು-ಬೇಲೂರು ಯೋಜನೆಯನ್ನು 2026ರ ಹೊತ್ತಿಗೆ, ಬಾಗಲಕೋಟೆ-ಕುಡಚಿ ಯೋಜನೆಯನ್ನು 2027ರ ವೇಳೆಗೆ ಮುಗಿಸಬೇಕು. ತುಮಕೂರು-ದಾವಣಗೆರೆ ಯೋಜನೆಗೆ ಸಂಬಂಧಿಸಿದಂತೆ ಭೂಸ್ವಾಧೀನ ಪ್ರಕ್ರಿಯೆ ಮುಗಿದಿದೆ. ಇದರಲ್ಲಿ ರಾಜ್ಯವು ಒಂದು ಪಥದ ಅಭಿವೃದ್ಧಿಗೆ ಮಾತ್ರ ವೆಚ್ಚ ಭರಿಸುತ್ತಿದೆ. ಆದರೆ, ರೈಲ್ವೆ ಇಲಾಖೆಯು ಈಗಾಗಲೇ ಜೋಡಿ ಹಳಿ ಹಾಕಲು ತೀರ್ಮಾನಿಸಿರುವುದು ಒಳ್ಳೆಯ ಬೆಳವಣಿಗೆ. ಇದನ್ನು 2027ಕ್ಕೆ ಮುಗಿಸಬೇಕು. ಇದರಿಂದ ಬಾಗಲಕೋಟೆ ಮತ್ತು ವಿಜಯಪುರ ನಡುವಿನ ನೇರ ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ಸೂಚಿಸಿದರು.

ಗದಗ-ವಾಡಿ ಮಾರ್ಗದಲ್ಲಿ ಬರುವ ಹಳಕಟ್ಟೆ ಎಂಬಲ್ಲಿ ಭೂಸ್ವಾಧೀನ ಸಮಸ್ಯೆ ಎದುರಾಗಿದೆ. ಆರ್​​ಟಿಸಿಯಲ್ಲಿ ಒಬ್ಬರ ಹೆಸರು ಇದ್ದರೆ, ವಾಸ್ತವದಲ್ಲಿ ಆ ಜಾಗದಲ್ಲಿ ಬೇರೆಯವರಾರೋ ಇರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದ್ದು, ಇದನ್ನು ಶೀಘ್ರವೇ ಬಗೆಹರಿಸುವಂತೆ ಸೂಚಿಸಲಾಗಿದೆ ಎಂದರು.

ಇದನ್ನೂ ಓದಿ: ಕಲಬುರಗಿ-ಬೆಂಗಳೂರು, ಮೈಸೂರು-ಚೆನ್ನೈ, ತಿರುವನಂತಪುರ-ಮಂಗಳೂರು ವಂದೇ ಭಾರತ್​ ರೈಲಿಗೆ ಪ್ರಧಾನಿ ಮೋದಿ ಚಾಲನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.