ETV Bharat / state

ವರ್ಗಾವಣೆ ಇಲ್ಲದೇ ಬೀಡುಬಿಟ್ಟ ಆರೋಪ, ದೂರು ಸಲ್ಲಿಕೆ: SC-ST ಆಯೋಗದಿಂದ 15 ಪೊಲೀಸರಿಗೆ ನೋಟಿಸ್​ - Notice to Police

author img

By ETV Bharat Karnataka Team

Published : Apr 10, 2024, 8:16 AM IST

ಗಂಗಾವತಿ ನಗರ ಪೊಲೀಸ್​  ಠಾಣೆ
ಗಂಗಾವತಿ ನಗರ ಪೊಲೀಸ್​ ಠಾಣೆ

20 ವರ್ಷಗಳಿಂದ ಯಾವುದೇ ವರ್ಗಾವಣೆ ಪಡೆಯದೇ ಇರುವ ಗಂಗಾವತಿ ನಗರದಲ್ಲಿರುವ ಪೊಲೀಸ್​ ಠಾಣಾ ಸಿಬ್ಬಂದಿ ವಿರುದ್ಧ ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗಕ್ಕೆ ದೂರು ಸಲ್ಲಿಕೆ ಆಗಿದೆ.

ಗಂಗಾವತಿ(ಕೊಪ್ಪಳ): ''ಕಳೆದ 20 ವರ್ಷಗಳಿಂದ ಗಂಗಾವತಿ ಉಪ ವಿಭಾಗದಲ್ಲಿ ಕೆಲ ಪೊಲೀಸ್ ಸಿಬ್ಬಂದಿ ಯಾವುದೇ ವರ್ಗಾವಣೆ ಇಲ್ಲದೇ ಬೀಡು ಬಿಟ್ಟಿದ್ದಾರೆ. ಇವರಿಂದ ಕಾನೂನು ದುರುಪಯೋಗವಾಗುವ ಕೆಲಸ ಆಗುತ್ತಿದೆ'' ಎಂದು ಆರೋಪಿಸಿ ಪೊಲೀಸ್ ಇಲಾಖೆಯ 15 ಸಿಬ್ಬಂದಿ ಮೇಲೆ ಪರಿಶಿಷ್ಟ ಜಾತಿ-ಪಂಗಡ ಬುಟ್ಟಕಟ್ಟು ಆಯೋಗಕ್ಕೆ ವ್ಯಕ್ತಿಯೊಬ್ಬರಿಂದ ದೂರು ಸಲ್ಲಿಕೆಯಾಗಿದೆ.

ಸಲ್ಲಿಕೆಯಾದ ದೂರು ಆಧರಿಸಿ ಇದೀಗ ದೂರಿನಲ್ಲಿ ಉಲ್ಲೇಖಿತ ಗಂಗಾವತಿ ನಗರ, ಗಂಗಾವತಿ ಗ್ರಾಮೀಣ, ಕನಕಗಿರಿ ಮತ್ತು ಸಂಚಾರಿ ಪೊಲೀಸ್ ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಿರುವ 15 ಪೊಲೀಸರಿಗೆ ಆಯೋಗವು ನೋಟಿಸ್ ಜಾರಿ ಮಾಡಿದೆ.

ದೂರಿನಲ್ಲಿ ಏನಿದೆ: "ಗಂಗಾವತಿ ನಗರದಲ್ಲಿರುವ ಪೊಲೀಸ್ ಠಾಣೆಗಳಲ್ಲಿನ ಪೊಲೀಸ್ ಅಧಿಕಾರಿಗಳು ಕಳೆದ 20 ವರ್ಷ ಕಾಲ ಯಾವುದೇ ವರ್ಗಾವಣೆ ಇಲ್ಲದೇ ಒಂದೇ ವೃತ್ತದಲ್ಲಿ ಕೆಲಸ ಮಾಡುತ್ತಿದ್ದಾರೆ. ಗಂಗಾವತಿ ಉಪ ವಿಭಾಗದಿಂದ ಒಂದು ಠಾಣೆಯಿಂದ ಮತ್ತೊಂದು ಠಾಣೆಗೆ ಪ್ರಭಾವ ಬೀರಿ ವರ್ಗಾವಣೆ ಮಾಡಿಸಿಕೊಳ್ಳುವ ಮೂಲಕ ಗಂಗಾವತಿಯಲ್ಲಿ ಬಿಡಾರ ಹೂಡಿದ್ದಾರೆ. ಇವರು ತಮ್ಮ ಪ್ರಭಾವ ಬೀರಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸುತ್ತಿದ್ದು, ಚುನಾವಣಾ ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಅಲ್ಲದೇ ಅಕ್ರಮವಾಗಿ ಹಣಕಾಸು ವ್ಯವಹಾರ ಮಾಡುತ್ತಿದ್ದಾರೆ" ಎಂದು ದೂರುದಾರ ಚಂದ್ರಪ್ಪ ನಾಯಕ ಗಂಭೀರವಾಗಿ ಆರೋಪಿಸಿದ್ದಾರೆ.

ಆಯೋಗದಿಂದ ನೋಟಿಸ್: ಆಯೋಗದಲ್ಲಿ ದಾಖಲಾದ ದೂರಿನ ಮೆರೆಗೆ ಆಯೋಗದ ಕಾರ್ಯದರ್ಶಿ, ಇದೀಗ 15 ಜನ ಪೊಲೀಸ್ ಸಿಬ್ಬಂದಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಆಯೋಗಕ್ಕೆ ದತ್ತವಾಗಿರುವ ಅಧಿಕಾರದ ಭಾಗವಾಗಿ ವಿಚಾರಣೆ ಮಾಡಲು ತೀರ್ಮಾನಿಸಿದೆ. "ನೋಟಿಸ್​​ ಜಾರಿಯಾದ ಹತ್ತು ದಿನದೊಳಗೆ ಆಪಾದನೆಗೆ ಸಂಬಂಧಿಸಿದಂತೆ ಮಾಹಿತಿ ನೀಡುವಂತೆ ನೋಟಿಸ್​ನಲ್ಲಿ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಒಂದೊಮ್ಮೆ ಉತ್ತರ ನೀಡದಿದ್ದಲ್ಲಿ ಆಯೋಗಕ್ಕೆ ದತ್ತವಾಗಿರುವ ಅಧಿಕಾರ ಬಳಿಸಿ ಸಿವಿಲ್ ನ್ಯಾಯಾಲಯದಂತೆ ಕ್ರಮ ಕೈಗೊಳ್ಳಲಾಗುವುದು" ಎಂದು ಆಯೋಗ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ: ಅಗತ್ಯ ಭೂಮಿಗಾಗಿ ಲೆನ್ಸ್ ಕಾರ್ಟ್ 'ಎಕ್ಸ್' ಪೋಸ್ಟ್ ; ನಿಮ್ಮ ಅಗತ್ಯ ಪೂರೈಸುವುದಾಗಿ ಸಚಿವರ ಭರವಸೆ - Minister M B Patil

ETV Bharat Logo

Copyright © 2024 Ushodaya Enterprises Pvt. Ltd., All Rights Reserved.