ETV Bharat / state

'ತೆರಿಗೆ ಹಂಚಿಕೆಯಲ್ಲಿ ಅನ್ಯಾಯ': ಬಜೆಟ್​ನಲ್ಲಿ ಕೇಂದ್ರಕ್ಕೆ ಕುಟುಕಿದ ಸಿಎಂ ಸಿದ್ದರಾಮಯ್ಯ

author img

By ETV Bharat Karnataka Team

Published : Feb 16, 2024, 5:06 PM IST

ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ

ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ತೆರಿಗೆ ಹಂಚಿಕೆಯಲ್ಲಿ ಅನ್ಯಾಯವಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ತಮ್ಮ ಬಜೆಟ್‌ ಭಾಷಣದಲ್ಲಿ ಅಸಮಾಧಾನ ಹೊರಹಾಕಿದರು.

ಬೆಂಗಳೂರು: ರಾಜ್ಯದಲ್ಲಿ ಡಬಲ್‌ ಇಂಜಿನ್‌ ಎಂದು ಹೇಳಿಕೊಳ್ಳುತ್ತಿದ್ದ ಹಿಂದಿನ ಸರ್ಕಾರದ ನಿರ್ಲಕ್ಷ್ಯ ಧೋರಣೆಯಿಂದಾಗಿ ಕೇಂದ್ರದಿಂದ ಒಟ್ಟು 11,495 ಕೋಟಿ ರೂ.ಗಳ ವಿಶೇಷ ಅನುದಾನ ಪಡೆಯುವಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ವಿಫಲವಾಗಿದ್ದು, ತನ್ನ ಅಸಮರ್ಥತೆ ಪ್ರದರ್ಶಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇರವಾಗಿ ದೂಷಿಸಿದ್ದಾರೆ.

ವಿಧಾನಸಭೆಯಲ್ಲಿಂದು 2024-25ನೇ ಸಾಲಿನ ಬಜೆಟ್ ಮಂಡಿಸಿದ ಅವರು, ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ತೆರಿಗೆ ಹಂಚಿಕೆಯಲ್ಲಿ ಆಗುತ್ತಿರುವ ಅನ್ಯಾಯ, ಹಿಂದಿನ ಬಿಜೆಪಿ ಸರ್ಕಾರದ ನಿರ್ಲಕ್ಷ್ಯ ಧೋರಣೆ ವಿರುದ್ಧ ಬಜೆಟ್​ನಲ್ಲಿ ಕಿಡಿಕಾರಿದರು.

ತೆರಿಗೆ ಹಂಚಿಕೆಯಲ್ಲಿ ಉತ್ತರ ಭಾರತದ ಹಿಂದಿ ಭಾಷಿಕ ರಾಜ್ಯಗಳಿಗೆ ಹೆಚ್ಚಿನ ಪಾಲು ನೀಡಿ, ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿರುವ ಬಗ್ಗೆ ಬಹಿರಂಗವಾಗಿ ಟೀಕಿಸುತ್ತಿದ್ದ ಸಿದ್ದರಾಮಯ್ಯ ಇದೀಗ ಮತ್ತೊಂದು ಹೆಜ್ಜೆ ಮುಂದಿ ಟ್ಟಿದ್ದು, ಪ್ರಜಾತಂತ್ರ ಮಾರ್ಗದಲ್ಲಿ ಅಂಕಿಅಂಶಗಳೊಂದಿಗೆ ಕೇಂದ್ರಕ್ಕೆ ಮತ್ತೊಮ್ಮೆ ಮನವಿ ಸಲ್ಲಿಸುವುದಾಗಿ ಘೋಷಿಸಿದ್ದಾರೆ.

ಕರ್ನಾಟಕ ರಾಜ್ಯ ದೇಶದಲ್ಲಿ ಅತಿ ಹೆಚ್ಚು ಜಿ.ಎಸ್.ಟಿ ತೆರಿಗೆ ಸಂಗ್ರಹಿಸುವ 2ನೇ ರಾಜ್ಯವಾಗಿದ್ದು, 2022-23ಕ್ಕೆ ಹೋಲಿಸಿದರೆ ಪ್ರಸಕ್ತ ವರ್ಷದಲ್ಲಿ ಜಿ.ಎಸ್.ಟಿ ತೆರಿಗೆ ಸಂಗ್ರಹಣೆಯಲ್ಲಿ ಶೇ.18ರಷ್ಟು ಹೆಚ್ಚಳ ಕಂಡಿದೆ. ಸ್ವಂತ ತೆರಿಗೆ ರಾಜಸ್ವ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.12ರಷ್ಟು ಬೆಳವಣಿಗೆ ಸಾಧಿಸಲಿದೆ. ಗ್ಯಾರಂಟಿ ಯೋಜನೆಗಳಿಂದ ಜನರ ಆದಾಯ ಹೆಚ್ಚಾಗಿ, ರಾಜ್ಯದ ಆರ್ಥಿಕತೆಯನ್ನು ಉತ್ತೇಜಿಸುವಲ್ಲಿ ಸಹಕಾರಿಯಾಗಿರುವುದನ್ನು ಇದು ತೋರಿಸುತ್ತದೆ ಎಂದು ಗ್ಯಾರಂಟಿ ಯೋಜನೆಗಳನ್ನು ಬಲವಾಗಿ ಸಿಎಂ ಸಮರ್ಥಿಸಿಕೊಂಡಿದ್ದಾರೆ.

ಭಾರತ ರತ್ನ ಕರ್ಪೂರಿ ಠಾಕೂರ್ ಹೇಳಿರುವಂತೆ ಕೇಂದ್ರ ಹಾಗೂ ರಾಜ್ಯಗಳ ಸಂಬಂಧ ನೌಕರ ಹಾಗೂ ಯಜಮಾನರ ಸಂಬಂಧಗಳಾಗದೆ ಸಂವಿಧಾನದತ್ತ ಅಧಿಕಾರ ವ್ಯಾಪ್ತಿಯೊಳಗೆ ಸ್ವಾಯತ್ತ ಘಟಕಗಳಾಗಿರಬೇಕು. ರಾಜ್ಯಗಳ ಜೊತೆ ಸಮಾನತೆಯ ಆಧಾರದಲ್ಲಿ ವ್ಯವಹರಿಸಬೇಕು ಎಂಬ ಮಾತನ್ನು ಉಲ್ಲೇಖಿಸಿರುವ ಸಿದ್ದರಾಮಯ್ಯ ಕೇಂದ್ರದ ಏಕಪಕ್ಷೀಯ ಧೋರಣೆ ವಿರುದ್ಧ ಕುಟುಕಿದ್ದಾರೆ.

ಸರಕು ಮತ್ತು ಸೇವಾ ತೆರಿಗೆಯನ್ನು ಪರಿಚಯಿಸುವ ಮೂಲಕ ರಾಜ್ಯಗಳ ತೆರಿಗೆ ಸಂಗ್ರಹಣೆಯು ಶೇ.14ರಷ್ಟು ಬೆಳವಣಿಗೆ ಹೊಂದಲಿದ್ದು, ಒಂದು ವೇಳೆ ಅಂದಾಜಿಗಿಂತ ಕಡಿಮೆ ಸಂಗ್ರಹವಾದಲ್ಲಿ, ಕೇಂದ್ರ ಸರ್ಕಾರದಿಂದ ಪರಿಹಾರ ನೀಡುವುದಾಗಿ ರಾಜ್ಯ ಸರ್ಕಾರಗಳಿಗೆ ಭರವಸೆ ನೀಡಲಾಗಿತ್ತು. ಶೇ.14ರಷ್ಟು ಬೆಳವಣಿಗೆ ದರದಂತೆ 2017 ರಿಂದ 2023-24ರವರೆಗೆ ರಾಜ್ಯದಲ್ಲಿ ಒಟ್ಟು 4,92,296 ಕೋಟಿ ರೂ.ಗಳ ಜಿ.ಎಸ್.ಟಿ ತೆರಿಗೆ ಸಂಗ್ರಹಣೆಯಾಗುತ್ತದೆ ಎಂದು ಅಂದಾಜಿಸಲಾಗಿತ್ತು.

ಆದರೆ ವಾಸ್ತವಿಕವಾಗಿ ರಾಜ್ಯದಲ್ಲಿ 3,26,764 ಕೋಟಿ ರೂ. ಕ್ರೋಢೀಕರಣವಾಗಿದೆ. 1,65,532 ಕೋಟಿ ರೂ ಕೊರತೆಗೆ ಕೇಂದ್ರ ಸರ್ಕಾರವು ರಾಜ್ಯಕ್ಕೆ ಕೇವಲ 1,06,258 ಕೋಟಿ ರೂ. ಪರಿಹಾರವನ್ನು ಮಾತ್ರ ಬಿಡುಗಡೆ ಮಾಡಿದೆ. ಜಿ.ಎಸ್.ಟಿ. ತೆರಿಗೆಯ ಈ ಅವೈಜ್ಞಾನಿಕ ಅನುಷ್ಠಾನದಿಂದ ರಾಜ್ಯಕ್ಕೆ ಕಳೆದ ಏಳು ವರ್ಷಗಳ ಅವಧಿಯಲ್ಲಿ ಒಟ್ಟು 59,274 ಕೋಟಿ ರೂ.ಗಳ ನಷ್ಟವಾಗಿದೆ ಎಂದು ಹೇಳಿದರು.

15ನೇ ಹಣಕಾಸು ಆಯೋಗ 2020-21ಕ್ಕೆ ಅನ್ವಯವಾಗುವಂತೆ ನೀಡಿದ್ದ ಮಧ್ಯಂತರ ವರದಿಯ ಶಿಫಾರಸ್ಸಿನಿಂದ ರಾಜ್ಯಕ್ಕಾದ ಅನ್ಯಾಯವನ್ನು ಸರಿಪಡಿಸುವಲ್ಲಿ ಹಿಂದಿನ ಸರ್ಕಾರ ವಿಫಲವಾಗಿದ್ದು, ಸರ್ಕಾರ ಕೈಚೆಲ್ಲಿ ಕೂತಿದ್ದರ ಪರಿಣಾಮವಾಗಿ ಅಂತಿಮ ವರದಿಯ ಶಿಫಾರಸ್ಸಿನಲ್ಲಿಯೂ ಸಹ ರಾಜ್ಯಕ್ಕೆ ತೆರಿಗೆ ಹಂಚಿಕೆಯಲ್ಲಿ ಅತಿ ಹೆಚ್ಚು ನಷ್ಟ ಅನುಭವಿಸಬೇಕಾಯಿತು ಎಂದರು.

ರಾಜ್ಯದ ಜಿ.ಎಸ್.ಡಿ.ಪಿ ಲೆಕ್ಕಾಚಾರ ಮಾಡುವ ವಿಧಾನದಲ್ಲಿ ಬದಲಾವಣೆ ಹಾಗೂ 1971ರ ಬದಲು 2011ರ ಜನಗಣತಿ ವರದಿಯ ಬಳಕೆಯಿಂದಾಗಿ ಅಭಿವೃದ್ಧಿಶೀಲ ರಾಜ್ಯಗಳಿಗೆ ಭಾರೀ ನಷ್ಟವುಂಟಾಗಿದೆ. 14ನೇ ಹಣಕಾಸು ಆಯೋಗ ಶಿಫಾರಸ್ಸು ನೀಡಿದ್ದ ಹಂಚಿಕೆಯ ಸೂತ್ರವನ್ನು ಪಾಲಿಸಿದ್ದರೆ ಕರ್ನಾಟಕ ರಾಜ್ಯಕ್ಕೆ 2,77,350 ಕೋಟಿ ರೂ.ಗಳ ತೆರಿಗೆ ಪಾಲು ಸ್ವೀಕೃತವಾಗುತ್ತಿತ್ತು. ಆದರೆ 15ನೇ ಹಣಕಾಸು ಆಯೋಗದ ಶಿಫಾರಸ್ಸಿನಿಂದ ರಾಜ್ಯಕ್ಕೆ 2,15,253 ಕೋಟಿ ರೂ.ಗಳು ಮಾತ್ರ ಹಂಚಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ. 15ನೇ ಹಣಕಾಸು ಆಯೋಗದ ಆರು ವರ್ಷದ ಅವಧಿಯಲ್ಲಿ ಕೇಂದ್ರದಿಂದ ರಾಜ್ಯಗಳಿಗೆ ಹಂಚಿಕೆಯಾಗುವ ಒಟ್ಟು ತೆರಿಗೆ ಹಂಚಿಕೆಯಲ್ಲಿ, ರಾಜ್ಯಕ್ಕೆ 62,098 ಕೋಟಿ ರೂ.ಗಳಷ್ಟು ನಷ್ಟವಾಗಿದೆ ಎಂದು ಸಿದ್ದರಾಮಯ್ಯ ಆರೋಪಿಸಿದರು.

15 ನೇ ಹಣಕಾಸು ಆಯೋಗ ಮೊದಲನೆ ವರದಿಯಲ್ಲಿ 2020-21ನೇ ವರ್ಷಕ್ಕೆ 5,495 ಕೋಟಿ ರೂ. ವಿಶೇಷ ಅನುದಾನ ಒದಗಿಸುವಂತೆ ಹಾಗೂ ಅಂತಿಮ ವರದಿಯಲ್ಲಿ ಬೆಂಗಳೂರಿನ ಅಭಿವೃದ್ಧಿಗೆ 6,000 ಕೋಟಿ ರೂ. ರಾಜ್ಯ ಕೇಂದ್ರಿತ ಅನುದಾನವನ್ನು ಶಿಫಾರಸ್ಸು ಮಾಡಿತ್ತು. ಆದರೆ ಈ ಶಿಫಾರಸ್ಸುಗಳನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ ಎಂದರು.

15ನೇ ಹಣಕಾಸು ಆಯೋಗಕ್ಕೆ ಸರಿಯಾದ ವಿಶ್ಲೇಷಣೆಯೊಂದಿಗೆ ಜ್ಞಾಪನಾ ಪತ್ರದ ಮೂಲಕ ಹಕ್ಕೊತ್ತಾಯ ಮಂಡಿಸಿದ್ದರೂ, ರಾಜ್ಯಕ್ಕೆ ನ್ಯಾಯ ಸಿಕ್ಕಿಲ್ಲ. ಈ ಅನ್ಯಾಯ ಮರುಕಳಿಸದಂತೆ ಮುನ್ನೆಚ್ಚರಿಕೆಯ ಕ್ರಮವಾಗಿ ಸಚಿವ ಸಂಪುಟದ ಮಾರ್ಗದರ್ಶನದೊಂದಿಗೆ ವಿಷಯ ತಜ್ಞರನ್ನು ಒಳಗೊಂಡ ತಾಂತ್ರಿಕಕೋಶವನ್ನು ರಚಿಸಿ, ರಾಜ್ಯಕ್ಕೆ ಹೆಚ್ಚು ತೆರಿಗೆ ಪಾಲು ಮತ್ತು ಅನುದಾನಗಳನ್ನು ಪಡೆಯಲು ಒಂದು ಸಮಗ್ರ ಮನವಿ ಪತ್ರ ಸಿದ್ಧಪಡಿಸಿ, ಸಮರ್ಥವಾದ ಮತ್ತು ವೈಜ್ಞಾನಿಕ ವಿಶ್ಲೇಷಣೆಯ ಅಂಕಿ-ಅಂಶಗಳೊಂದಿಗೆ 16ನೇ ಹಣಕಾಸು ಆಯೋಗಕ್ಕೆ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರ ಸೆಸ್‌ ಮತ್ತು ಸರ್‌ಚಾರ್ಜ್‌ಗಳನ್ನು ಹೆಚ್ಚಿಸುತ್ತಿದ್ದು, ಅವುಗಳನ್ನು ರಾಜ್ಯಗಳೊಂದಿಗೆ ಹಂಚಿಕೆ ಮಾಡುತ್ತಿಲ್ಲ. ಕೇಂದ್ರ ಸರ್ಕಾರ ವಿಧಿಸುವ ಸೆಸ್‌ ಮತ್ತು ಸರ್‌ಚಾರ್ಜ್‌ಗಳು 2017-18 ರಿಂದ 2023-24ರ ಅವಧಿಯಲ್ಲಿ ಶೇ.153ರಷ್ಟು ಹೆಚ್ಚಾಗಿದೆ. ಸೆಸ್‌ ಮತ್ತು ಸರ್‌ಚಾರ್ಜ್‌ಗಳನ್ನು ರಾಜ್ಯಗಳೊಂದಿಗೆ ಹಂಚಿಕೆ ಮಾಡಿದ್ದರೆ, ರಾಜ್ಯಗಳಿಗೆ ಒಟ್ಟು 11,34,301 ಕೋಟಿ ರೂ. ಹಂಚಿಕೆಯಾಗುತ್ತಿತ್ತು. ಇದರಿಂದ ಕರ್ನಾಟಕಕ್ಕೆ ಮಾತ್ರ ಏಳು ವರ್ಷಗಳ ಅವಧಿಯಲ್ಲಿ ಒಟ್ಟು 45,322 ಕೋಟಿ ರೂ.ಗಳ ನಷ್ಟ ಉಂಟಾಗಿದೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರದ ಈ ಮೂರು ಬಗೆಯ ಅನ್ಯಾಯಗಳಿಂದ ಹಾಗೂ ನ್ಯಾಯಯುತವಾಗಿ ರಾಜ್ಯಗಳಿಗೆ ಹಣ ಬಿಡುಗಡೆ ಮಾಡದ ಕಾರಣದಿಂದಾಗಿ ದೇಶದ ಎಲ್ಲಾ ರಾಜ್ಯಗಳ ಹಣಕಾಸು ಸಾಮರ್ಥ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ. ಕೇಂದ್ರದಲ್ಲಿ ಆಡಳಿತದಲ್ಲಿರುವ ಪಕ್ಷವೇ, ದೇಶದ ಹಲವು ರಾಜ್ಯಗಳಲ್ಲಿ ಆಡಳಿತದಲ್ಲಿರುವ ಕಾರಣ ಅವರಿಗೆ ಈ ಅನ್ಯಾಯಗಳ ವಿರುದ್ಧ ದನಿಯೆತ್ತಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ರಾಜ್ಯಗಳಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ದನಿಯೆತ್ತಿ, ರಾಜ್ಯಗಳ ಹಕ್ಕಿನ ರಕ್ಷಣೆ ಮಾಡುವ ಹೊಣೆಗಾರಿಕೆ ನಮ್ಮದಾಗಿದೆ ಎಂದು ಘೋಷಿಸಿದ್ದಾರೆ.

ಬೆಲೆ ಏರಿಕೆ, ನಿರುದ್ಯೋಗ ಮತ್ತು ಆದಾಯದ ಅಸಮಾನತೆಗಳಿಂದ ರಾಷ್ಟ್ರದ ಜನತೆ ತತ್ತರಿಸಿದ್ದು, ಬಡವರಿಗೆ ನೇರವಾಗಿ ಪ್ರಯೋಜನವಾಗುವ ಕಲ್ಯಾಣ ಯೋಜನೆಗಳಿಗೆ ಆಯವ್ಯಯ ಹಂಚಿಕೆಯನ್ನು ಹೆಚ್ಚಿಸುವುದು ರಾಜ್ಯದ ಕರ್ತವ್ಯವಾಗಿದೆ. ರಾಜಸ್ವ ಕೊರತೆಯಲ್ಲಿ ಹೆಚ್ಚಳವಾದರೂ ಸಹ, ಅಭಿವೃದ್ಧಿಯ ಫಲಗಳು ಬಡಜನತೆಗೆ ತಲುಪುವುದನ್ನು ಖಚಿತಪಡಿಸಿಕೊಳ್ಳಲು ಅಂತಹ ಕಲ್ಯಾಣ ವೆಚ್ಚಗಳು ಅವಶ್ಯಕ. ಸಂಕಷ್ಟದ ಸಮಯದಲ್ಲಿ ಬಡವರು ಮತ್ತು ನಿರ್ಗತಿಕರ ನೆರವಿಗೆ ರಾಜ್ಯ ಸರ್ಕಾರ ಬರದಿದ್ದರೆ ರಾಜಸ್ವ ಹೆಚ್ಚುವರಿ ಸಾಧನೆಯು ಅರ್ಥಹೀನವಾಗಿರುತ್ತದೆ ಎಂದು ಸಿಎಂ ಸಿದ್ಧರಾಮಯ್ಯ ಪ್ರತಿಪಾದಿಸಿದ್ದಾರೆ.

ವಿತ್ತೀಯ ಹೊಣೆಗಾರಿಕೆಯನ್ನು ಪಾಲಿಸಿದ್ದೇವೆ : ನಾವು ರಾಜಸ್ವ ಕೊರತೆಯ ಆಯವ್ಯಯವನ್ನು ಮಂಡಿಸಿದ್ದರೂ ಸಹ, 2024-25ರ ಆಯವ್ಯಯದಲ್ಲಿ ಕಲ್ಯಾಣ ಕಾರ್ಯಕ್ರಮಗಳಿಗೆ 1,20,373 ಕೋಟಿ ರೂ. ಅನುದಾನ ಹಂಚಿಕೆ ಮಾಡಿದ್ದೇವೆ. ಬಂಡವಾಳ ವೆಚ್ಚಕ್ಕೆ ಅನುದಾನದ ಕೊರತೆ ಉಂಟಾಗದಂತೆ, ನಾವು ವಿತ್ತೀಯ ಕೊರತೆಯನ್ನು ಜಿ.ಎಸ್.ಡಿ.ಪಿ.ಯ ಶೇ.3ರೊಳಗೆ ಮತ್ತು ಒಟ್ಟು ಬಾಕಿಯಿರುವ ಹೊಣೆಗಾರಿಕೆಗಳನ್ನು ಜಿ.ಎಸ್.ಡಿ.ಪಿ.ಯ ಶೇ.25ರೊಳಗೆ ಕಾಯ್ದುಕೊಳ್ಳುವ ಮೂಲಕ ವಿತ್ತೀಯ ಹೊಣೆಗಾರಿಕೆಯನ್ನು ಪಾಲಿಸಿದ್ದೇವೆ ಎಂದಿದ್ದಾರೆ.

ರಾಜ್ಯದ ಆರ್ಥಿಕತೆಯು 2023-24ನೇ ಸಾಲಿನಲ್ಲಿ ಶೇ.6.6ರಷ್ಟು ಬೆಳವಣಿಗೆಯಾಗಲಿದೆ ಎಂದು ಅಂದಾಜಿಸಲಾಗಿದೆ. ರಾಜ್ಯದ ಈ ಶ್ಲಾಘನೀಯ ಬೆಳವಣಿಗೆಯು, ದೇಶದ ಆರ್ಥಿಕತೆಯನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ ಎಂಬುದನ್ನು ದೃಢಪಡಿಸಿದೆ. ಸೇವಾ ಮತ್ತು ಕೈಗಾರಿಕಾ ವಲಯಗಳು ರಾಜ್ಯದ ಆರ್ಥಿಕ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸಿವೆ. ಕಳೆದ ಸಾಲಿಗೆ ಹೋಲಿಸಿದರೆ, 2023-24ನೇ ಸಾಲಿನಲ್ಲಿ ಸೇವಾ ವಲಯವು ಶೇ.8.7ರಷ್ಟು (ಸ್ಥಿರ ಬೆಲೆಗಳಲ್ಲಿ) ಮತ್ತು ಕೈಗಾರಿಕೆ ವಲಯವು ಶೇ.7.5ರಷ್ಟು (ಸ್ಥಿರ ಬೆಲೆಗಳಲ್ಲಿ) ಬೆಳವಣಿಗೆ ಸಾಧಿಸಿದೆ. ಪ್ರಸಕ್ತ ವರ್ಷದಲ್ಲಿ ಮುಂಗಾರು ವೈಫಲ್ಯದಿಂದ ರಾಜ್ಯ ತೀವ್ರ ಬರಗಾಲ ಎದುರಿಸಬೇಕಾಯಿತು. ಇದರಿಂದಾಗಿ ಕೃಷಿ ಕ್ಷೇತ್ರವು ಶೇ.1.8ರಷ್ಟು (ಸ್ಥಿರ ಬೆಲೆಗಳಲ್ಲಿ) ಋಣಾತ್ಮಕ ಬೆಳವಣಿಗೆ ಹೊಂದಿದೆ.

ಜಾಗತಿಕ ಆರ್ಥಿಕ ಬೆಳವಣಿಗೆಯಲ್ಲಿನ ಕುಸಿತ ಹಾಗೂ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿನ ಬಡ್ಡಿ ದರಗಳ ಹೆಚ್ಚಳದಿಂದ ಪ್ರಸಕ್ತ ವರ್ಷದ ಮೊದಲ ಆರು ತಿಂಗಳುಗಳಲ್ಲಿ ನಮ್ಮ ದೇಶಕ್ಕೆ ವಿದೇಶಿ ನೇರ ಹೂಡಿಕೆಯ ಕುಸಿತದ ನಡುವೆಯೂ, ಸೆಪ್ಟೆಂಬರ್‌ 2023ರ ಅಂತ್ಯದವರೆಗೆ 2.8 ಶತಕೋಟಿ ಅಮೆರಿಕನ್‌ ಡಾಲರ್‌ಗಳಷ್ಟು ವಿದೇಶಿ ಹೂಡಿಕೆಯಾಗಿರುತ್ತದೆ. ಇದು ವಿದೇಶಿ ಬಂಡವಾಳದಾರರಿಗೆ ರಾಜ್ಯವು ಆಕರ್ಷಕ ಹೂಡಿಕೆ ಕೇಂದ್ರವಾಗಿರುವುದನ್ನು ಸಾಬೀತುಪಡಿಸಿದೆ ಎಂದಿದ್ದಾರೆ.

ಇದನ್ನೂ ಓದಿ: ರಾಜ್ಯ ಬಜೆಟ್​ನಲ್ಲಿ ಪ್ರಮುಖ ಇಲಾಖೆಗಳಿಗೆ ಅನುದಾನ ಹಂಚಿಕೆ ಎಷ್ಟು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.