ETV Bharat / state

ಲೋಕಸಭೆ ಚುನಾವಣೆ : ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಮುಖ್ಯ ಚುನಾವಣಾಧಿಕಾರಿ ಸಭೆ

author img

By ETV Bharat Karnataka Team

Published : Mar 17, 2024, 9:22 PM IST

ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ
ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ

ಮುಖ್ಯ ಚುನಾವಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯನ್ನು ನಡೆಸಲಾಯಿತು.

ಬೆಂಗಳೂರು : ಸಾರ್ವತ್ರಿಕ ಚುನಾವಣೆ -2024ರ ಘೋಷಣೆಯ ಹಿನ್ನೆಲೆ ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ಅನುಸರಿಸಬೇಕಾದ ವಿಷಯಗಳ ಕುರಿತು ಭಾನುವಾರ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯನ್ನು ನಡೆಸಲಾಯಿತು.

ಮುಖ್ಯ ಚುನಾವಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಲವು ವಿಷಯಗಳನ್ನು ಪ್ರಸ್ತಾಪಿಸಿದರು. ಮುಖ್ಯವಾಗಿ ಮತಗಟ್ಟೆ ಮಟ್ಟದ ಪಕ್ಷದ ಏಜೆಂಟರುಗಳ ಮುಖಾಂತರ ಪ್ರಸ್ತುತ ನಡೆಯುತ್ತಿರುವ ಚುನಾವಣೆಯ ಮತದಾರರ ಪಟ್ಟಿಯಲ್ಲಿ ಸಾರ್ವಜನಿಕರು ತಮ್ಮ ಹೆಸರು ಇರುವುದನ್ನು ಪರಿಶೀಲಿಸುವಂತೆ ಜಾಗೃತಿ ಮೂಡಿಸಲು ಸಹಕರಿಸಬೇಕು ಎಂದು ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ರಾಜಕೀಯ ಪಕ್ಷಗಳಿಗೆ ಮನವಿ ಮಾಡಿದರು.

ತಳಮಟ್ಟದಲ್ಲಿ ಮತದಾರರ ಮಾಹಿತಿಯನ್ನು ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಚೆನ್ನಾಗಿ ಅರಿತಿರುತ್ತಾರೆ. ತಮ್ಮ ತಮ್ಮ ವ್ಯಾಪ್ತಿಯಲ್ಲಿನ ಮತದಾರರ ಗುರುತಿನ ಚೀಟಿಗಳಲ್ಲಿ ಸಮಸ್ಯೆಗಳಿದ್ದಲ್ಲಿ, ವಿಳಾಸ ಬದಲಾದಲ್ಲಿ ಅಥವಾ ಹೊಸದಾಗಿ ಸೇರಿಸುವುದು ಸೇರಿದಂತೆ ಮತದಾರರಲ್ಲಿ ಜಾಗೃತಿ ಮೂಡಿಸಬೇಕು. ಈಗ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಂಡಲ್ಲಿ ಚುನಾವಣಾ ಸಮಯದಲ್ಲಿ ಸಮಸ್ಯೆಗಳು ಉದ್ಭವಿಸುವುದಿಲ್ಲ. ಈ ಸಮಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.

ಪ್ರಸ್ತುತ ಚುನಾವಣೆಯಲ್ಲಿ ಆಯೋಗ ತಂತ್ರಜ್ಞಾನವನ್ನು ಬಳಸಿಕೊಂಡು ಚುನಾವಣೆಗೆ ಸಂಬಂಧಿಸಿದಂತೆ ಹಲವು ಆಪ್ ಗಳನ್ನು ಅಭಿವೃದ್ಧಿಪಡಿಸಿದ್ದು, ಅದರಲ್ಲೂ ಮುಖ್ಯವಾಗಿ ವೋಟರ್ ಹೆಲ್ಪಲೈನ್ ಆಪ್ ಮತದಾರರ ಸ್ನೇಹಿಯಾಗಿದ್ದು, ನಾಗರಿಕರು ಕುಳಿತಲ್ಲಿಯೇ ತಮ್ಮ ಹೆಸರನ್ನು ಪರಿಶೀಲಿಸಬಹುದಾಗಿದೆ. ಸೇರಿಸಬಹುದು ಮತ್ತು ವಿಳಾಸ ಬದಲಾಯಿಸಬಹುದಾಗಿದೆ. ಅದೇ ರೀತಿಯಲ್ಲಿ ಚುನಾವಣಾ ಅಕ್ರಮಗಳನ್ನು ತಡೆಯಲು ಸಿವಿಜಿಲ್ ಆಪ್ ಅತ್ಯಂತ ಪರಿಣಾಮಕಾರಿಯಾಗಿದ್ದು, ಸಾರ್ವಜನಿಕರು ತಮ್ಮ ಐಡೆಂಟಿಟಿಯನ್ನು ಬಿಟ್ಟುಕೊಡದೆ ಆಯೋಗಕ್ಕೆ ಸಾಕ್ಷಿ ಸಮೇತ ದೂರು ಸಲ್ಲಿಸಬಹುದು. ದಿವ್ಯಾಂಗರಿಗಾಗಿ ಸಕ್ಷಮ್ ಆಪ್ ಅಭಿವೃದ್ಧಿಪಡಿಸಲಾಗಿದ್ದು, ಅವರು ತಮಗೆ ಬೇಕಾದ ವಾಹನ ಅಥವಾ ಇತರೆ ಸೌಲಭ್ಯಗಳನ್ನು ಆಪ್ ಮೂಲಕ ಬುಕ್ ಮಾಡಬಹುದಾಗಿದೆ ಎಂದು ತಿಳಿಸಿದರು.

ಸುವಿಧಾ (Suvidha App): ಸುವಿಧಾ ಅಭ್ಯರ್ಥಿಗಳ ಆಪ್ ಎಂಬುದು ಚುನಾವಣಾ ಅವಧಿಯಲ್ಲಿ ಅಭ್ಯರ್ಥಿಗಳಿಗೆ ನಾಮನಿರ್ದೇಶನ ಮತ್ತು ಅನುಮತಿ ಪ್ರಕ್ರಿಯೆಗೆ ಸಹಾಯ ಮಾಡಲು ಆಯೋಗ ಅಭಿವೃದ್ಧಿಪಡಿಸಿದ ಮೊಬೈಲ್ ಅಪ್ಲಿಕೇಶನ್ ಆಗಿದೆ. ಅಪ್ಲಿಕೇಶನ್ Android ವೇದಿಕೆಯಲ್ಲಿ ಲಭ್ಯವಿದೆ. ಸುವಿಧಾ ಅಭ್ಯರ್ಥಿ ಅಪ್ಲಿಕೇಶನ್ ಅನ್ನು ಬಳಸಲು, ಅಭ್ಯರ್ಥಿಗಳು ಖಾತೆಯನ್ನು ರಚಿಸಬೇಕು ಮತ್ತು ಅವರ ರುಜುವಾತುಗಳೊಂದಿಗೆ ಲಾಗ್ ಇನ್ ಮಾಡಬೇಕಾಗುತ್ತದೆ. ಒಮ್ಮೆ ಲಾಗಿನ್ ಆದ ನಂತರ, ಅಭ್ಯರ್ಥಿಗಳು ತಮ್ಮ ನಾಮನಿರ್ದೇಶನ ಮತ್ತು ಅನುಮತಿಯ ಸ್ಥಿತಿಯನ್ನು ವೀಕ್ಷಿಸಬಹುದು.

ಸುವಿಧಾ ಅಪ್ಲಿಕೇಶನ್ ಮೂಲಕ ಅಭ್ಯರ್ಥಿಗಳು ಪ್ರಚಾರಕ್ಕಾಗಿ ಅಗತ್ಯವಿರುವ ಅನುಮತಿಗಳ ಪಟ್ಟಿಯನ್ನು ವೀಕ್ಷಿಸಬಹುದು. ಅವರ ಅನುಮತಿ ಅರ್ಜಿಯ ಸ್ಥಿತಿಯನ್ನು ಟ್ರ್ಯಾಕ್ ಮಾಡಬಹುದಾಗಿದೆ. ಅನುಮತಿ ಫಾರ್ಮ್ ಅನ್ನು ಡೌನ್‌ಲೋಡ್ ಮಾಡುವ ಮತ್ತು ಅದನ್ನು ಆನ್‌ಲೈನ್‌ನಲ್ಲಿ ಸಲ್ಲಿಸಬಹುದು. ಅಭ್ಯರ್ಥಿ ಸಲ್ಲಿಸಿದ ನಾಮಪತ್ರದ ಸ್ಥಿತಿಯನ್ನು ಟ್ರ್ಯಾಕ್ ಮಾಡಬಹುದಾಗಿದೆ.

ನಿಮ್ಮ ಅಭ್ಯರ್ಥಿಯನ್ನು ತಿಳಿದುಕೊಳ್ಳಿ (Know Your Candidate App): “ನಿಮ್ಮ ಅಭ್ಯರ್ಥಿಯನ್ನು ತಿಳಿಯಿರಿ (KYC)” ಅಪ್ಲಿಕೇಶನ್ ಚುನಾವಣಾ ಆಯೋಗ ಅಭಿವೃದ್ಧಿಪಡಿಸಿದ ಮೊಬೈಲ್ ಅಪ್ಲಿಕೇಶನ್ ಆಗಿದೆ. ಇದು ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಅಪರಾಧದ ಪೂರ್ವಾಪರಗಳ ಬಗ್ಗೆ ನಾಗರಿಕರಿಗೆ ತಿಳಿಯಲು ಸಹಾಯ ಮಾಡುತ್ತದೆ. KYC ಅಪ್ಲಿಕೇಶನ್ ಯಾರಿಗೆ ಮತ ಹಾಕಬೇಕು ಎಂಬುದರ ಕುರಿತು ನಿರ್ಧಾರಗಳನ್ನು ತೆಗೆದುಕೊಳ್ಳಲು ನಾಗರಿಕರಿಗೆ ಉಪಯುಕ್ತ ಸಾಧನವಾಗಿದೆ. ಅಪರಾಧ ಚಟುವಟಿಕೆಯ ಇತಿಹಾಸ ಹೊಂದಿರುವ ಅಭ್ಯರ್ಥಿಗಳನ್ನು ಗುರುತಿಸಲು ಮತ್ತು ಅವರಿಗೆ ಮತ ಹಾಕುವುದನ್ನು ತಪ್ಪಿಸಲು ಮತದಾರರಿಗೆ ಇದು ಸಹಾಯ ಮಾಡುತ್ತದೆ. ಚುನಾವಣೆಯಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಉತ್ತೇಜಿಸಲು ಅಪ್ಲಿಕೇಶನ್ ಸಹಾಯ ಮಾಡುತ್ತದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಸಭೆಯಲ್ಲಿ ಭಾಗವಹಿಸಿದ್ದ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ತಮ್ಮ ಅಭಿಪ್ರಾಯ ಸಲಹೆ ಸೂಚನೆಗಳನ್ನು ನೀಡಿದರು. ಸಭೆಯಲ್ಲಿ ಅಪರ ಮುಖ್ಯ ಚುನಾವಣಾಧಿಕಾರಿಗಳಾದ ವೆಂಕಟೇಶ್ ಕುಮಾರ್ ಹಾಗೂ ಕೂರ್ಮಾ ರಾವ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ : ಬೆಂಗಳೂರು: ನೀತಿ ಸಂಹಿತೆ ಜಾರಿ ಬೆನ್ನಲ್ಲೇ ಕಾರಲ್ಲಿ ₹13 ಲಕ್ಷ ಪತ್ತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.