ETV Bharat / state

'ಮೋದಿಗೆ ಹೇಗೆ ಪಾಠ ಕಲಿಸಬೇಕೆಂಬುದನ್ನು ಇಡೀ ದೇಶಕ್ಕೆ ಸಿದ್ದರಾಮಯ್ಯ ತೋರಿಸಿಕೊಟ್ಟಿದ್ದಾರೆ': ಸಚಿವ ಗುಂಡೂರಾವ್​ - Dharwad Congress Campaigning

author img

By ETV Bharat Karnataka Team

Published : May 2, 2024, 9:10 AM IST

Updated : May 2, 2024, 12:30 PM IST

ಸಚಿವ ದಿನೇಶ್ ಗುಂಡೂರಾವ್​
ಸಚಿವ ದಿನೇಶ್ ಗುಂಡೂರಾವ್​

ಧಾರವಾಡದ ನವಲೂರನಲ್ಲಿ ಕಾಂಗ್ರೆಸ್​ ಅಭ್ಯರ್ಥಿ ವಿನೋದ ಅಸೂಟಿ ಪರ ಮತಶಿಕಾರಿ ನಡೆದಿದೆ. ಈ ಕಾರ್ಯಕ್ರಮದಲ್ಲಿ ಸಚಿವ ದಿನೇಶ್ ಗುಂಡೂರಾವ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮತ ಪ್ರಚಾರ ಕಾರ್ಯಕ್ರಮ

ಧಾರವಾಡ: ' ಬರ ಪರಿಹಾರಕ್ಕೆ ಸುಪ್ರೀಂ ಕೋರ್ಟ್​ಗೆ ಹೋಗಿ ನಾವು ಹಕ್ಕು ಪಡೆದಿದ್ದೇವೆ. ಮೋದಿಗೆ ಹೇಗೆ ಪಾಠ ಕಲಿಸಬೇಕಂತ ಇಡೀ ದೇಶಕ್ಕೆ ಸಿದ್ದರಾಮಯ್ಯ ತೋರಿಸಿಕೊಟ್ಟಿದ್ದಾರೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ನವಲೂರನಲ್ಲಿ ನಡೆದ ಕಾಂಗ್ರೆಸ್​ ಅಭ್ಯರ್ಥಿ ವಿನೋದ ಅಸೂಟಿ ಪರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿ, "ಬಿಸಿಯೂಟ ಶುರು ಮಾಡಿದ್ದು ಕಾಂಗ್ರೆಸ್​​​ ಪಕ್ಷ. ಮಕ್ಕಳಿಗೆ ಹಾಲು ಕೊಡುವ ಕ್ಷೀರಭಾಗ್ಯ ಆರಂಭಿಸಿದ್ದು ನಾವು, ಮಕ್ಕಳಿಗೆ ಮೊಟ್ಟೆ, ಬಾಳೆಹಣ್ಣು ಕೊಟ್ಟವರು ನಾವು. ಶೂ ಭಾಗ್ಯ ಕೊಟ್ಟವರೂ ನಾವೇ. ಹಲವಾರು ಕಾರ್ಯಕ್ರಮ ಕೊಟ್ಟಿದ್ದು ಕಾಂಗ್ರೆಸ್ ಪಕ್ಷ' ಎಂದು ಸಮರ್ಥಿಸಿಕೊಂಡರು.

ಮುಂದುವರೆದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಗುಂಡೂರಾವ್​, 'ಒಂದೇ ದೇಶದಲ್ಲಿ ಹತ್ತು ವರ್ಷ ಆಳ್ವಿಕೆ ಮಾಡಿದ್ದೀರಾ. ಮೋದಿ ಅವರು ಅಚ್ಚೇ ದಿನ್​ ಎಂದು ಹೇಳಿದ್ದರು. ಈಗ ಜನರಿಗೆ ಅಚ್ಚೇದಿನ್​ ತಂದು ಕೊಟ್ಟಿದ್ದೇವೆ ಎಂದು ಹೇಳುವ ತಾಕತ್ತು, ಧೈರ್ಯ ಮೋದಿಗೆ, ಅಮಿತ್​ ಶಾಗೆ ಇದೆಯಾ . ಅಮಿತ್ ಶಾ, ಪ್ರಹ್ಲಾದ್​ ಜೋಶಿ ಜನರಿಗೆ ಏನು ಮಾಡಿದ್ದೇವೆ ಎಂಬುದರ ಬಗ್ಗೆ ಮಾತನಾಡುತ್ತಿಲ್ಲ. ಸುಳ್ಳು ಹೇಳುತ್ತಾ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದೀರಿ ನೀವು ಎಂದು ಹರಿಹಾಯ್ದರು.

"ರೈತರಿಗೆ ಸಹಾಯ ಮಾಡಲಿಲ್ಲ, ಸಾಲ ಮನ್ನಾ ಮಾಡಲಿಲ್ಲ, ಬರ ಪರಿಹಾರ ಕೊಡುವುದಕ್ಕೂ ಹಿಂದೆ ಮುಂದೆ ನೋಡಿದರು. ಕ್ಷೇತ್ರಕ್ಕೆ ಪ್ರಹ್ಲಾದ್​ ಜೋಶಿ ಕೊಡುಗೆ ಏನು?. ಕರ್ನಾಟಕದ ಬಿಜೆಪಿ ಎಂಪಿಗಳ ಕೊಡುಗೆ ಏನು?. ಅದಾನಿ, ಅಂಬಾನಿಗೆ ಸಹಾಯ ಮಾಡಿದಿರಿ. ಆದರೆ ಈ ದೇಶದ ಜನರಿಗೆ ಏನೂ ಮಾಡಲಿಲ್ಲ. ಕಾಂಗ್ರೆಸ್ ಜನರ ಜೊತೆ ನಿಂತಿದೆ. ಕಾಂಗ್ರೆಸ್​ಗೆ ಶಕ್ತಿ ಕೊಡಬೇಕು. ದೇಶಕ್ಕೆ ಹೊಸ ಸರ್ಕಾರ ಬರಬೇಕು. ಸಂವಿಧಾನ ಉಳಿಯಬೇಕು. ಪ್ರಜಾಪ್ರಭುತ್ವ ಉಳಿಸಬೇಕಿದೆ.‌ ಅದಕ್ಕೆ ಜನಪರವಾದ ಸರ್ಕಾರ ಬರಬೇಕು.‌ ಅದಕ್ಕಾಗಿ ಕಾಂಗ್ರೆಸ್​ನ್ನು ಬೆಂಬಲಿಸಬೇಕು" ಎಂದು ಜನರಲ್ಲಿ ಮನವಿ ಮಾಡಿದರು.

ಬಳಿಕ, ಸಚಿವ ಸಂತೋಷ್​ ಲಾಡ್ ಮಾತನಾಡಿ, "ಈ ಚುನಾವಣೆ ದೇಶದ ಶೋಷಿತ ವರ್ಗಗಳ ಉಳಿವಿನ ಚುನಾವಣೆಯಾಗಿದೆ. ಸಂವಿಧಾನದ ಉಳಿವಿಗಾಗಿ ಇರುವ ಚುನಾವಣೆ ಇದಾಗಿದೆ. ಕಳೆದ 10 ವರ್ಷ ದೇಶವನ್ನು ನರೇಂದ್ರ ಮೋದಿಯವರು ಆಳಿದ್ದಾರೆ. ಒಟ್ಟು 14 ಪ್ರಧಾನಿಗಳು ಆಳಿ ಹೋಗಿದ್ದಾರೆ. ಪ್ರಧಾನಿ ಮೋದಿ ಅಧಿಕಾರಕ್ಕೆ ಬರುವ ಮೊದಲು ಕಪ್ಪು ಹಣವನ್ನು ತರುತ್ತೇವೆ ಎಂದು ಸುಳ್ಳು ಹೇಳಿದರು. ಜನರನ್ನು ನಂಬಿಸಿ ಮತ ಪಡೆದರು. ಆದರೆ ಈಗ ಆ ಬಗ್ಗೆ ಮಾತನಾಡುತ್ತಿಲ್ಲ. ನದಿಗಳ ಜೋಡಣೆ ಮಾಡುತ್ತೇವೆ, 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಹೇಳಿದ್ದರು. ಆದರೆ ಈಗ ಅದರ ಬಗ್ಗೆ ಮಾತನಾಡದೇ ಪಾಕಿಸ್ತಾನ, ಮುಸಲ್ಮಾನ್ ಅಂತ ಮಾತನಾಡುತ್ತಾರೆ" ಎಂದು ಕಿಡಿಕಾರಿದರು.

"ಪಾರ್ಲಿಮೆಂಟ್ ದಾಖಲೆಯ ಪ್ರಕಾರ 6,500ಕೋಟಿ ಹಣ ಸ್ವಂತ ಪ್ರಚಾರಕ್ಕೆ ಬಳಕೆಯಾಗಿದೆ. ಬೀಫ್ ಸಾಗಣೆಯಲ್ಲಿ ದೇಶ ಎರಡನೇ ಸ್ಥಾನದಲ್ಲಿದೆ. ಈ ಬಗ್ಗೆ ಬಿಜೆಪಿಗರು ಎದೆ ತಟ್ಟಿಕೊಂಡು ಹೇಳಿಕೊಳ್ಳುತ್ತಾರಾ?. 770 ಡ್ಯಾಂ ಗಳನ್ನು ಕಟ್ಟಿರುವ ಕೀರ್ತಿ ನೆಹರು ಅವರಿಗಿದೆ. ಆದರೆ ಇವರು ಒಂದೇ ಒಂದು ಡ್ಯಾಂ ಕಟ್ಟಿಲ್ಲ. ವಿವಿ ಕಟ್ಟಲು ಆಗಿಲ್ಲ, ಫಸಲ್ ಭೀಮಾ ಯೋಜನೆಯಲ್ಲಿ ಇನ್ಸೂರೆನ್ಸ್​​ ಕಟ್ಟಿರುವ ಹಣ ಸಹ ಬಂದಿಲ್ಲ. ಮಹಿಳೆಯರ ಮಂಗಳ ಸೂತ್ರದ ಬಗ್ಗೆ ಬಿಜೆಪಿ ಮಾತನಾಡಿದಿರಿ. ಕಾಂಗ್ರೆಸ್ ಮಂಗಳಸೂತ್ರ ಕಸಿದು ಬೇರೆಯವರಿಗೆ ಕೊಡುತ್ತೆ ಎಂದಿದ್ದಾರೆ. ಆದರೆ ದೇಶಕ್ಕಾಗಿ ತಮ್ಮ ಸ್ವಂತ ಚಿನ್ನ ಕೊಟ್ಟವರು ಇಂದಿರಾ ಗಾಂಧಿ. ದೇಶಕ್ಕಾಗಿ ತಮ್ಮ ಮಂಗಳಸೂತ್ರ ಕಳೆದುಕೊಂಡವರು ಇಂದಿರಾ ಗಾಂಧಿ".

"ನೆಹರು ಅವರು ಆಗರ್ಭ ಶ್ರೀಮಂತರು ಆಗಲೇ ಅವರ ಬಳಿ 200 ಕೋಟಿ ಆಸ್ತಿ ಇತ್ತು. ಅದರಲ್ಲಿ 196 ಕೋಟಿ ಹಣವನ್ನು ದೇಶಕ್ಕಾಗಿ ಅವರು ದೇಣಿಗೆ ನೀಡಿದರು. ಬಾಯಿ ಬಿಟ್ಟರೆ ಪ್ರಹ್ಲಾದ್ ಜೋಶಿ ಕೇವಲ ತುಷ್ಟೀಕರಣ ಅಂತ ಹೇಳುತ್ತಾರೆ. ಮಹದಾಯಿ ಕಳಸಾ ಬಂಡೂರಿ ಬಗ್ಗೆ ಮಾತನಾಡುತ್ತಿಲ್ಲ ಆದರೆ ಪ್ರಧಾನಿ ರಷ್ಯಾ ಯುಕ್ರೇನ್ ಯುದ್ಧ ನಿಲ್ಲಿಸುತ್ತಾರೆ. ಅಂತವರು ನಮ್ಮ ರೈತರಿಗೆ ಮಹದಾಯಿ ನೀರು ತರಿಸಲಿಲ್ಲ, ಅರಣ್ಯ ಇಲಾಖೆಯ ಕ್ಲಿಯರೆನ್ಸ್ ಕೊಡಲು ಇವರಿಗೆ ಆಗಲಿಲ್ಲ, 34 ವರ್ಷದ ಯುವಕರಿಗೆ ಕೆಲಸ ಸಿಗುತ್ತಿಲ್ಲ. ಇಂತ ವಿಷಯಗಳ ಬಗ್ಗೆ ನಾವು ಚರ್ಚೆ ಎತ್ತಿದ್ದೇವೆ. ಇವುಗಳೆಲ್ಲವನ್ನು ಬಿಟ್ಟು ಬಿಜೆಪಿಗರು ಬೇರೆ ಬೇರೆ ಚರ್ಚೆ ಮಾಡುತ್ತಾರೆ" ಎಂದು ಸಂತೋಷ್​ ಲಾಡ್​ ಹರಿಹಾಯ್ದರು.

ಇದನ್ನೂ ಓದಿ: ಎಸ್​ಇಪಿ, ಟಿಎಸ್​ಪಿ ಹಣ ಬಳಕೆ ಬಗ್ಗೆ ಬಿಜೆಪಿಯವರಿಗೆ ಕೇಳುವ ನೈತಿಕತೆ ಇಲ್ಲ: ಸಿಎಂ ಸಿದ್ದರಾಮಯ್ಯ - Lok Sabha Election 2024

Last Updated :May 2, 2024, 12:30 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.