ETV Bharat / state

ಕಾನೂನುಬಾಹಿರ ಜಾಹೀರಾತು ಫಲಕ: ಕೈಗೊಂಡ ಕ್ರಮಗಳ ಬಗ್ಗೆ ಹೈಕೋರ್ಟ್‌ಗೆ ಬಿಬಿಎಂಪಿ ವರದಿ

author img

By ETV Bharat Karnataka Team

Published : Feb 21, 2024, 7:22 AM IST

bbmp-report-to-high-court-on-action-taken-against-illegal-hoardings
ಕಾನೂನುಬಾಹಿರ ಜಾಹೀರಾತು ಫಲಕ: ಕೈಗೊಂಡ ಕ್ರಮಗಳ ಬಗ್ಗೆ ಹೈಕೋರ್ಟ್‌ಗೆ ಬಿಬಿಎಂಪಿ ವರದಿ

ಕಾನೂನುಬಾಹಿರ ಜಾಹೀರಾತು ಫಲಕಗಳ ವಿರುದ್ಧ ಕೈಗೊಂಡ ಕ್ರಮಗಳ ಕುರಿತು ಬಿಬಿಎಂಪಿ ಹೈಕೋರ್ಟ್‌ಗೆ ವರದಿ ಸಲ್ಲಿಕೆ ಮಾಡಿದೆ.

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾನೂನು ಬಾಹಿರವಾಗಿ ಅಳವಡಿಸಿರುವ ಜಾಹೀರಾತು ಫಲಕಗಳ ತೆರವು ಮಾಡಲು ಹಾಗೂ ಅಕ್ರಮವಾಗಿ ಜಾಹೀರಾತು ಅಳವಡಿಸಿದವರ ವಿರುದ್ಧ ಕೈಗೊಂಡ ಕ್ರಮಗಳ ಸಂಬಂಧ ಹೈಕೋರ್ಟ್‌ಗೆ ಬಿಬಿಎಂಪಿ ವರದಿ ಸಲ್ಲಿಸಿದೆ.

ನಗರದಲ್ಲಿನ ಅನಧಿಕೃತ ಜಾಹೀರಾತು ಫಲಕಗಳ ಹಾವಳಿ ಹೆಚ್ಚಳ ಆಕ್ಷೇಪಿಸಿ ಬೆಂಗಳೂರಿನ ಸರಸ್ವತಿಪುರ ನಿವಾಸಿ ಮಾಯಿಗೇಗೌಡ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ ಮತ್ತು ಟಿ.ಜಿ.ಶಿವಶಂಕರೇಗೌಡ ಅವರಿದ್ದ ನ್ಯಾಯಪೀಠಕ್ಕೆ ಬಿಬಿಎಂಪಿ ವಕೀಲರು ವರದಿ ಸಲ್ಲಿಸಿದರು. ಈ ವರದಿಯನ್ನು ಪರಿಶೀಲಿಸಿ, ಅದರಲ್ಲಿನ ಆಕ್ಷೇಪಣೆಗಳಿದ್ದರೆ ತಿಳಿಸುವಂತೆ ಅರ್ಜಿದಾರರ ಪರ ವಕೀಲರಿಗೆ ತಿಳಿಸಿದ ನ್ಯಾಯಪೀಠ, ವಿಚಾರಣೆ ಮುಂದೂಡಿತು.

ವರದಿಯಲ್ಲಿನ ಅಂಶಗಳು : ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾನೂನು ಬಾಹಿರವಾಗಿ ಅಳವಡಿಸಿರುವ ಜಾಹೀರಾತು ಫಲಕಗಳ ತೆರವು ಮಾಡುವ ನಿಟ್ಟಿನಲ್ಲಿ 2024ರ ಜನವರಿ 19 ರಿಂದ ಫೆಬ್ರವರಿ 10 ರ ವರೆಗೆ ಸಮೀಕ್ಷೆ ನಡೆಸಲಾಗಿದೆ. ಈ ಸಮೀಕ್ಷೆಯಲ್ಲಿ 402 ಜಾಹೀರಾತು ಫಲಕಗಳನ್ನು ಗುರುತಿಸಲಾಗಿದೆ. ಅವುಗಳಲ್ಲಿ 150 ಅಧಿಕೃತ ಹಾಗೂ 251 ಅನಧಿಕೃತವಾಗಿದೆ. 40 ಜಾಹೀರಾತುಗಳ ಅಳವಡಿಕೆ ಕುರಿತಂತೆ ಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿಯಿದೆ.

203 ಜಾಹೀರಾತುಗಳ ಅಳವಡಿಕೆದಾರರ ವಿರುದ್ಧ ನೋಟಿಸ್ ಜಾರಿ ಮಾಡಲಾಗಿದೆ. ಇವುಗಳಲ್ಲಿ 73 ನ್ನು ಅಳವಡಿಕೆದಾರರೇ ಸ್ವಯಂ ಪ್ರೇರಿತವಾಗಿ ತೆರವುಗೊಳಿಸಿದ್ದು, 123 ಅನ್ನು ಬಿಬಿಎಂ ತೆರವುಗೊಳಿಸಿದೆ. 12 ಜಾಹೀರಾತು ಫಲಕಗಳ ತೆರವುಗೊಳಿಸುವ ಕಾರ್ಯ ಬಾಕಿಯಿದೆ ಎಂದು ತಿಳಿಸಲಾಗಿದೆ.

ಇದನ್ನೂ ಓದಿ: ವನ್ಯಜೀವಿಗಳ ಕುರಿತ ವಸ್ತುಗಳಿದ್ದರೆ ಹಿಂದಿರುಗಿಸಲು ಅರಣ್ಯ ಇಲಾಖೆ ನೋಟಿಸ್ : ಹೈಕೋರ್ಟ್ ಮಧ್ಯಂತರ ತಡೆ

ಆದೇಶ ಪಾಲಿಸದ ಅಧಿಕಾರಿಗಳಿಗೆ ನೋಟಿಸ್: ಪಾಲಿಕೆಯಿಂದ ಪೂರ್ವಾನುಮತಿ ಪಡೆಯದೇ ಅನಧೀಕೃತವಾಗಿ ಜಾಹೀರಾತು ಹೋರ್ಡಿಂಗ್ ಹಾಕಿದವರ ವಿರುದ್ಧವಾಗಿ ಎಫ್‌ಐಆರ್ ದಾಖಲಿಸುವ ಮೂಲಕ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುತ್ತಿದೆ. ನಗರದಲ್ಲಿ ವ್ಯಾಪ್ತಿಯಲ್ಲಿ ಅಳವಡಿಕೆಯಾಗಿರುವ ಎಲ್ಲ ಅನಧಿಕೃತ ಹೋರ್ಡಿಂಗ್ ತೆರವುಗೊಳಿಸಲು ಮತ್ತು ತಪ್ಪಿತಸ್ಥರಿಗೆ ದಂಡ ವಿಧಿಸಿ, ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅನಧಿಕೃತ ಜಾಹಿರಾತುಗಳ ಪತ್ತೆ ಹಾಗೂ ತೆರವು ಕಾರ್ಯವು ನಿರಂತರವಾಗಿ ನಡೆಯುತ್ತಿದೆ. ಪ್ರಕರಣ ಸಂಬಂಧ ಈಗಾಗಲೇ ನ್ಯಾಯಾಲಯ ಹೊರಡಿಸಿದ ಆದೇಶವನ್ನು ಪಾಲಿಸದ ಅಧಿಕಾರಿಗಳ ವಿರುದ್ಧವೂ ನೋಟಿಸ್ ಜಾರಿಗೊಳಿಸಲಾಗುತ್ತಿದೆ ಎಂದು ಬಿಬಿಎಂಪಿ ವರದಿಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಬೆಳ್ತಂಗಡಿ ವಿದ್ಯಾರ್ಥಿನಿ ಅತ್ಯಾಚಾರ, ಕೊಲೆ ಪ್ರಕರಣ; ಮರು ತನಿಖೆ ಕೋರಿ ಮೃತಳ ತಂದೆಯಿಂದ ಅರ್ಜಿ, ಸಿಬಿಐಗೆ ನೋಟಿಸ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.