ETV Bharat / state

ಬೆಂಗಳೂರು: 554 ರೈಲ್ವೆ ನಿಲ್ದಾಣ ಅಭಿವೃದ್ಧಿ ಕಾಮಗಾರಿಗಳಿಗೆ ಪ್ರಧಾನಿ ಮೋದಿ ಚಾಲನೆ

author img

By ETV Bharat Karnataka Team

Published : Feb 23, 2024, 10:58 PM IST

railway station
ರೈಲ್ವೆ ನಿಲ್ದಾಣ

ಬೆಂಗಳೂರು ವಿಭಾಗದಲ್ಲಿ ಅಮೃತ್ ಭಾರತ್ ಯೋಜನೆಯಡಿ 372.13 ಕೋಟಿ ರೂ ವೆಚ್ಚದ 15 ನಿಲ್ದಾಣ ಅಭಿವೃದ್ಧಿ ಕಾಮಗಾರಿಗಳನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ ಎಂದು ಬೆಂಗಳೂರು ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಯೋಗೇಶ್ ಮೋಹನ್ ಮಾಹಿತಿ ನೀಡಿದರು.

ಬೆಂಗಳೂರು: ಅಮೃತ್ ಭಾರತ್ ಯೋಜನೆಯಡಿಯಲ್ಲಿ ಫೆಬ್ರವರಿ 26 ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ 554 ರೈಲ್ವೆ ನಿಲ್ದಾಣಗಳ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕು ಸ್ಥಾಪನೆ ನೆರವೇರಿಸುವರು ಎಂದು ಬೆಂಗಳೂರು ವಿಭಾಗದ ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಯೋಗೇಶ್ ಮೋಹನ್ ಮಾಹಿತಿ ನೀಡಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1585 ರಸ್ತೆ ಮೇಲುಸೇತುವೆ ಪುನರಾಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫೆರೆನ್ಸ್​​ ಮೂಲಕ ಚಾಲನೆ ನೀಡುವರು. ಇದರೊಂದಿಗೆ ಬೆಂಗಳೂರು ವಿಭಾಗ ವ್ಯಾಪ್ತಿ ಒಟ್ಟು 372.13 ಕೋಟಿ ರೂ ವೆಚ್ಚದ 15 ನಿಲ್ದಾಣಗಳನ್ನು ಪುನರಾಭಿವೃದ್ಧಿ ಕಾಮಗಾರಿಗಳನ್ನು ಸಹ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.

ರೈಲ್ವೆ ನಿಲ್ದಾಣಗಳ ಉನ್ನತೀಕರಣಕ್ಕಾಗಿ ಹೊಸ ಯೋಜನೆಯನ್ನು ಪರಿಚಯ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಅದಕ್ಕಾಗಿ ಅಮೃತ್ ಭಾರತ್ ಯೋಜನೆ ಜಾರಿಗೆ ತರಲಾಗಿದೆ. ಇದರಲ್ಲಿ ನಿಲ್ದಾಣಗಳ ಅಭಿವೃದ್ಧಿಗಾಗಿ ದೀರ್ಘಾವಧಿಯ ದೃಷ್ಟಿಕೋನ ಇದೆ ಎಂದು ವಿವರಿಸಿದರು.

ಮೊದಲ ಹಂತದಲ್ಲಿ ಉತ್ತಮ ನಿಲ್ದಾಣ ಪ್ರದೇಶ, ಕಾಯುವ ಸೌಲಭ್ಯ, ಶೌಚಾಲಯದ ಅಭಿವೃದ್ಧಿ, ಅಗತ್ಯವಿರುವ ಲಿಫ್ಟ್ ಮತ್ತು ಎಸ್ಕಲೇಟರ್ ಸ್ಥಾಪನೆ, ಸ್ವಚ್ಛತೆ, ಉಚಿತ ವೈಫೈ, ಒಂದು ನಿಲ್ದಾಣ ಒಂದು ಉತ್ಪನ್ನದಂತಹ ಉಪಕ್ರಮಗಳ ಮೂಲಕ ಸ್ಥಳೀಯ ಉತ್ಪನ್ನಗಳಿಗೆ ಕಿಯೋಸ್ಕ್‌ಗಳನ್ನು ಸ್ಥಾಪಿಸುವುದಾಗಿದೆ. ಉಳಿದಂತೆ ಪ್ರಯಾಣಿಕರ ಮಾಹಿತಿ ವ್ಯವಸ್ಥೆಗಳನ್ನು ಹೆಚ್ಚಿಸುವುದು, ಕಾರ್ಯನಿರ್ವಾಹಕ ಲಾಂಜ್‌ಗಳನ್ನು ಸ್ಥಾಪಿಸುವುದು, ವ್ಯಾಪಾರ ಸ್ಥಳಗಳನ್ನು ಗೊತ್ತುಪಡಿಸುವುದು ಸೇರಿದಂತೆ ದೂರ ದೃಷ್ಟಿಯನ್ನು ಸಂಯೋಜಿಸಿ ಮತ್ತು ಪ್ರತಿ ನಿಲ್ದಾಣದ ಅನನ್ಯ ಅವಶ್ಯಕತೆಗಳನ್ನು ಪೂರೈಸಲಾಗಲಿದೆ ಎಂದರು.

ಯೋಜನೆಯ 2ನೇ ಹಂತದಲ್ಲಿ ನಿಲ್ದಾಣ ಮರು ನವೀಕರಿಸುವುದು, ಎರಡೂ ಬದಿಗಳಲ್ಲಿ ನಗರ ಪ್ರದೇಶಗಳ ನಿಲ್ದಾಣಗಳನ್ನು ಸಂಯೋಜಿಸುವುದು, ಮಲ್ಟಿಮೋಡಲ್ ಸಂಪರ್ಕವನ್ನು ಉತ್ತೇಜಿಸುವುದು, ಸಮರ್ಥನೀಯ ಮತ್ತು ಪರಿಸರ ಸ್ನೇಹಿ ಪರಿಹಾರಗಳನ್ನು ಅನುಷ್ಠಾನಗೊಳಿಸುವುದು. ವಿಶಿಷ್ಟ ಚೇತನರಿಗೆ ಸೌಲಭ್ಯಗಳನ್ನು ಒದಗಿಸುವುದು, ಹೊಸ ಟ್ರ್ಯಾಕ್‌ಗಳನ್ನು ಪರಿಚಯಿಸುವುದು, ಟೂರ್ ಯೋಜನೆ, ಅಗತ್ಯವಿರುವ ಪ್ಲಾಜಾಗಳು ಮತ್ತು ಉಳಿದ ಅಭಿವೃದ್ಧಿಗಳ ಕಾರ್ಯಸಾಧ್ಯತೆ ಮತ್ತು ವಿವಿಧ ಹಂತಗಳನ್ನು ಪರಿಗಣಿಸುವುದಾಗಿದೆ. ದೀರ್ಘಾವಯಲ್ಲಿ ನಿಲ್ದಾಣಗಳನ್ನು ಅಚ್ಚುಕಟ್ಟಾಗಿ ವಿನ್ಯಾಸಗೊಳಿಸುವುದು ಕೇಂದ್ರ ಸರ್ಕಾರದ ಅಂತಿಮ ಗುರಿಯಾಗಿದೆ ಎಂದು ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲೆ: ದಕ್ಷಿಣ ಕನ್ನಡ ಜಿಲ್ಲೆಯ ವ್ಯಾಪ್ತಿ ಬರುವ ಕುಕ್ಕೆ ಸುಬ್ರಹ್ಮಣ್ಯ ರೋಡ್​ ರೈಲ್ವೆ ನಿಲ್ದಾಣ ಸೇರಿದಂತೆ ವಿವಿಧೆಡೆ ಕಾರ್ಯಕ್ರಮಗಳಿಗೆ ಪ್ರಧಾನಿ ಮೋದಿ ಅದೇ ದಿನ ಚಾಲನೆ ನೀಡಲಿದ್ದಾರೆ. ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯ ಹಲವಾರು ರೈಲ್ವೆ ನಿಲ್ದಾಣಗಳಲ್ಲಿ ಪ್ಲಾಟ್ ಫಾರ್ಮ್ ಉನ್ನತೀಕರಣ ಸೇರಿದಂತೆ ವಿವಿಧ ಕಾಮಗಾರಿಗಳು ನಡೆಯುತ್ತಿವೆ.

ಇದನ್ನೂ ಓದಿ:ಧರ್ಮಾದಾಯ ತಿದ್ದುಪಡಿ ವಿಧೇಯಕ ಮೇಲ್ಮನೆಯಲ್ಲಿ ತಿರಸ್ಕೃತ: ಸೋಮವಾರ ಮತ್ತೊಮ್ಮೆ ವಿಧೇಯಕ‌ ಮಂಡನೆ ಅನಿವಾರ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.