ETV Bharat / state

ಅಭ್ಯರ್ಥಿ ಬಗ್ಗೆ ತಲೆ ಕೆಡಿಸಿಕೊಳ್ಳದೆ ತಾವೇ ಮೋದಿ ಎಂದು ಕೆಲಸ ಮಾಡಿ: ಕಾರ್ಯಕರ್ತರಿಗೆ ವಿಜಯೇಂದ್ರ ಕರೆ

author img

By ETV Bharat Karnataka Team

Published : Feb 23, 2024, 4:14 PM IST

Eಅಭ್ಯರ್ಥಿ ಬಗ್ಗೆ ತಲೆ ಕೆಡಿಸಿಕೊಳ್ಳದೆ ನಾವೇ ಮೋದಿ ಎಂದು ಕೆಲಸ ಮಾಡಿ
ಅಭ್ಯರ್ಥಿ ಬಗ್ಗೆ ತಲೆ ಕೆಡಿಸಿಕೊಳ್ಳದೆ ನಾವೇ ಮೋದಿ ಎಂದು ಕೆಲಸ ಮಾಡಿ

ಲೋಕಸಭೆ ಚುನಾವಣೆಯಲ್ಲಿ ದುರಹಂಕಾರಿ ಕಾಂಗ್ರೆಸ್​ಗೆ ತಕ್ಕ ಪಾಠ ಕಲಿಸಬೇಕು ಎಂದು ಬಿ.ವೈ ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರು: ಪ್ರತಿಯೊಂದು ಚುನಾವಣೆಯೂ ನಮಗೆ ಸವಾಲಾಗಿಯೇ ಇರಲಿದೆ. ಹಿಂದೆ ಯಡಿಯೂರಪ್ಪ ನೇತೃತ್ವದಲ್ಲಿ ಲೋಕಸಭಾ ಚುನಾವಣೆಯಲ್ಲಿ 26 ಸ್ಥಾನ ಗೆದ್ದಿದ್ದೇವೆ. ಈ ಬಾರಿ 28 ಸ್ಥಾನ ಗೆದ್ದು, ದುಷ್ಟ ಭ್ರಷ್ಟ ದುರಹಂಕಾರಿ ಕಾಂಗ್ರೆಸ್​ಗೆ ತಕ್ಕ ಪಾಠ ಕಲಿಸಬೇಕು ಎಂದು ಪಕ್ಷದ ಕಾರ್ಯಕರ್ತರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಕರೆ ನೀಡಿದ್ದಾರೆ.

ಮಲ್ಲೇಶ್ವರದ ಹವ್ಯಕ ಭವನದಲ್ಲಿ ನಡೆದ ಒಬಿಸಿ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕ ರಾಜ್ಯದ ವಿರೋಧಿ ಎಂದು ಸಿಎಂ ಸಿದ್ದರಾಮಯ್ಯ ಬಿಂಬಿಸುತ್ತಿದ್ದಾರೆ. ರಾಜ್ಯದ ಹಿತದೃಷ್ಟಿಯಿಂದ ಇದು ಗಂಡಾಂತರ ತರುವಂತಹ ಘಟನೆಯಾಗಿದೆ. ನೂರು ಸುಳ್ಳು ಹೇಳಿ ಒಂದು ಮದುವೆ ಮಾಡಿದಂತೆ ನೂರು ಸುಳ್ಳು ಹೇಳಿ ಕಾಂಗ್ರೆಸ್​​ನವರು ಅಧಿಕಾರಕ್ಕೆ ಬಂದಿದ್ದಾರೆ. ಎಂಟು ಒಂಬತ್ತು ತಿಂಗಳಲ್ಲಿ ಜನಪ್ರಿಯತೆ ಕಳೆದುಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಸರ್ಕಾರ ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಯಾವುದೇ ಹೊಸ ಯೋಜನೆ ಘೋಷಣೆ ಮಾಡಿಲ್ಲ. ಸರ್ಕಾರದ ಖಜಾನೆಯಲ್ಲಿ ದುಡ್ಡಿಲ್ಲ. ರಾಜ್ಯ ಸರ್ಕಾರಕ್ಕೆ ಎಷ್ಟರಮಟ್ಟಿಗೆ ದಾರಿದ್ರ್ಯ ಬಂದಿದೆ ಅಂದರೆ ದೇವಸ್ಥಾನ ಹುಂಡಿಗೆ ಕೈ ಹಾಕುವ ಪರಿಸ್ಥಿತಿ ಬಂದಿದೆ. ಇಂತಹ ಕೆಟ್ಟ ಪರಿಸ್ಥಿತಿಯನ್ನು ಸರ್ಕಾರಕ್ಕೆ ಕಾಂಗ್ರೆಸ್ ತಂದೊಡ್ಡಿದೆ. ಇನ್ನೂ ನಾಲ್ಕು ವರ್ಷ ಅಧಿಕಾರ ನಡೆಸಿದರೆ ಇವರು ರಾಜ್ಯವನ್ನು ಯಾವ ಪರಿಸ್ಥಿತಿಗೆ ತಗೊಂಡು ಹೋಗ್ತಾರೆ..? ಉಚಿತ ಪ್ರಯಾಣದಿಂದ ಮಹಿಳೆಯರು ಖುಷಿ ಆಗಿದ್ದಾರೆ, ಅದಕ್ಕೆ ನಮ್ಮದೇನು ತಕರಾರು ಇಲ್ಲ. ಆದರೆ ಪುರುಷರು ಸಾಮಾನ್ಯ ಬಸ್​ನಲ್ಲಿ ಸೀಟು ಸಿಗದೆ ಡಬಲ್ ಚಾರ್ಜ್ ಕೊಟ್ಟು ಪ್ರೀಮಿಯಂ ಬಸ್ಸಿನಲ್ಲಿ ಹೋಗುತ್ತಿದ್ದಾರೆ ಎಂದರು.

ಕೇಂದ್ರ ಸರ್ಕಾರ ದೋಷಿಸುವ ನಿರ್ಣಯವನ್ನು ಸದನಲ್ಲಿ ಅಂಗೀಕರಿಸಿದ್ದಾರೆ. ಸಿದ್ದರಾಮಯ್ಯರೇನು ದಡ್ಡರಲ್ಲ, ಅವರೊಬ್ಬರು ಅನುಭವಿ ರಾಜಕಾರಣಿ. ಕಾಂಗ್ರೆಸ್ ವಿಜಯ ನಾಗಲೋಟ ತಡೆಯಲು ಸಾಧ್ಯವಿಲ್ಲ ಅಂದುಕೊಂಡಿದ್ದರು. ಆದರೆ ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶ ಅವರಿಗೆ ನಿದ್ದೆ ಗೆಡಿಸಿದೆ. ಈ ಭೂಮಿಯ ಮೇಲಿರುವ ಅತ್ಯಂತ ಪ್ರಭಾವಿ ಪ್ರಧಾನಿ ನರೇಂದ್ರ ಮೋದಿ ಎನ್ನುವುದನ್ನು ಅವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಅದಕ್ಕಾಗಿ ಮೋದಿಯವರ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಪಕ್ಷದಿಂದ 28ಕ್ಕೆ 28ಕ್ಕೆ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಗೆಲ್ಲಿಸುವ ಕೆಲಸ ಮಾಡುತ್ತೇವೆ. ಯಾವುದೇ ಚುನಾವಣೆ ಆದರೂ ಕೂಡ ಸವಾಲು, ಹಿಂದೆ ಯಡಿಯೂರಪ್ಪರ ನೇತೃತ್ವದಲ್ಲಿ 25+1 ಸ್ಥಾನ ಗೆದ್ದಿದ್ದೆವು. ಭ್ರಷ್ಟ ದುರಹಂಕಾರಿ ಕಾಂಗ್ರೆಸ್​​ಗೆ ತಕ್ಕ ಪಾಠ ಕಲಿಸಬೇಕು. ನಾವೇ ಮೋದಿ ಎಂದು ಚುನಾವಣೆವರೆಗೂ ಹಗಲು ರಾತ್ರಿ ಕೆಲಸ ಮಾಡಬೇಕು. ಯಾರು ಅಭ್ಯರ್ಥಿಗಳು ಎಂದು ತಲೆಕೆಡೆಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ವಿಜಯೇಂದ್ರ ಕರೆ ನೀಡಿದರು.

ಇದನ್ನೂ ಓದಿ: ನೀರಾ ಕುರಿತು ಪರಿಷತ್​ನಲ್ಲಿ ಸ್ವಾರಸ್ಯಕರ ಚರ್ಚೆ: ಪರಸ್ಪರ ಕಾಲೆಳೆದುಕೊಂಡ ಡಿಕೆಶಿ, ಕೋಟ ಶ್ರೀನಿವಾಸ ಪೂಜಾರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.