ETV Bharat / state

ವಾಯವ್ಯ ಸಾರಿಗೆ ಸಂಸ್ಥೆಯ ವೇಗದೂತ ಬಸ್‌ಗಳಿಗೆ ಮುಂಗಡ ಬುಕಿಂಗ್ ವ್ಯವಸ್ಥೆ

author img

By ETV Bharat Karnataka Team

Published : Jan 24, 2024, 8:20 AM IST

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ತನ್ನ ಕಡಿಮೆ ದೂರದ ವೇಗದೂತ ಬಸ್‌ಗಳಿಗೆ ಪ್ರಾಯೋಗಿಕವಾಗಿ ಮುಂಗಡ ಬುಕ್ಕಿಂಗ್​​ ವ್ಯವಸ್ಥೆ ಕಲ್ಪಿಸಿದೆ.

ಹುಬ್ಬಳ್ಳಿ: ನೆರೆಜಿಲ್ಲೆಗಳು ಸೇರಿದಂತೆ ಕಡಿಮೆ ದೂರದ ಸ್ಥಳಗಳಿಗೆ ಪ್ರಯಾಣ ಮಾಡುವ ಸಾರ್ವಜನಿಕರಿಗೆ ಮತ್ತಷ್ಟು ಆರಾಮದಾಯಕ ಪ್ರಯಾಣದ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕಡಿಮೆ ದೂರದ ವೇಗದೂತ ಬಸ್‌ಗಳಿಗೆ ಪ್ರಾಯೋಗಿಕವಾಗಿ ಮುಂಗಡ ಬುಕ್ಕಿಂಗ್​​ ವ್ಯವಸ್ಥೆ ಮಾಡಲಾಗಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಭರತ್​ ಎಸ್​. ತಿಳಿಸಿದ್ದಾರೆ.

ಪ್ರಸ್ತುತ ಪ್ರತಿಷ್ಠಿತ ಸಾರಿಗೆಗಳೂ ಸೇರಿದಂತೆ ದೂರ ಮಾರ್ಗದ ವೇಗದೂತ ಸಾರಿಗೆ ಬಸ್‌ಗಳಿಗೆ ಮುಂಗಡ ಬುಕಿಂಗ್​​​ ವ್ಯವಸ್ಥೆ ಇರುತ್ತದೆ. ಅದೇ ರೀತಿ ಅಕ್ಕಪಕ್ಕದ ಜಿಲ್ಲೆಗಳು ಸೇರಿದಂತೆ ಕಡಿಮೆ ದೂರದ ವೇಗದೂತ ಸಾರಿಗೆ ಬಸ್‌ಗಳಿಗೂ ಸಹ ಈ ರೀತಿಯ ಮುಂಗಡ ಬುಕಿಂಗ್ ವ್ಯವಸ್ಥೆ ಒದಗಿಸಿದಲ್ಲಿ ಮುಂಚಿತವಾಗಿ ಯೋಜನೆ ಹಾಕಿಕೊಂಡು ಆರಾಮವಾಗಿ ಪ್ರಯಾಣಿಸಲು ಸಾಧ್ಯವಾಗುತ್ತದೆ ಎಂಬುದಾಗಿ ಸಾರ್ವಜನಿಕರಿಂದ ಬೇಡಿಕೆಗಳು ಬರುತ್ತಿವೆ. ಈ ಹಿನ್ನೆಲೆಯಲ್ಲಿ ಸಂಸ್ಥೆಯ ಕಡಿಮೆ ದೂರದ ವೇಗದೂತ ಸಾರಿಗೆ ಬಸ್‌ಗಳಿಗೆ ಮುಂಗಡ ಬುಕಿಂಗ್ ವ್ಯವಸ್ಥೆ ಕಲ್ಪಿಸಲು ಕ್ರಮ ವಹಿಸಲಾಗಿದೆ.

ಮೊದಲ ಹಂತದಲ್ಲಿ ಪ್ರಾಯೋಗಿಕವಾಗಿ ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ಹುಬ್ಬಳ್ಳಿ-ವಿಜಯಪುರ ನಡುವೆ ಸಂಚರಿಸುವ ವೇಗದೂತ ಸಾರಿಗೆ ಬಸ್‌ಗಳಿಗೆ ಮುಂಗಡ ಬುಕಿಂಗ್ ವ್ಯವಸ್ಥೆ ಒದಗಿಸಲಾಗಿದೆ. ಹುಬ್ಬಳಿಯಿಂದ ವಿಜಯಪುರಕ್ಕೆ ಹೋಗುವ ಬಸ್‌ಗಳು ಹೊಸೂರು ಪ್ರಾದೇಶಿಕ ಬಸ್ ನಿಲ್ದಾಣದಿಂದ ಹೊರಡುತ್ತವೆ. ಬೆಳಿಗ್ಗೆ 7-20, 7-40, 8-01, 8-30, 9-00, 10-00 ಸಂಜೆ 6-16, 6-30 ಹಾಗೂ ರಾತ್ರಿ 8-30ಕ್ಕೆ ಸಂಚಾರ ಆರಂಭಿಸುತ್ತವೆ. ವಿಜಯಪುರದಿಂದ ಹುಬ್ಬಳ್ಳಿಗೆ ಬರುವ ಬಸ್‌ಗಳ ಸಮಯ: ಬೆಳಿಗ್ಗೆ 2-35, 5-45, ಮಧ್ಯಾಹ್ನ 12-50, 13-30, 13-40, ಸಂಜೆ 14-10,14-30, 15-40, 16-15ಕ್ಕೆ.

ಈ ಬಸ್‌ಗಳಿಗೆ www.ksrtc.in ಹಾಗೂ KSRTC Mobile App ಮೂಲಕ ಅಥವಾ ಬಸ್ ನಿಲ್ದಾಣಗಳ ಬುಕ್ಕಿಂಗ್ ಕೌಂಟರ್​ಗಳು ಹಾಗೂ ಫ್ರಾಂಚೈಸಿ ಕೌಂಟರ್​ಗಳಲ್ಲಿ ಮುಂಗಡ ಟಿಕೆಟ್​ಗಳನ್ನು ಪಡೆಯಬಹುದು. ಸಾರ್ವಜನಿಕರ ಪ್ರತಿಕ್ರಿಯೆ ಗಮನಿಸಿ ಇನ್ನುಳಿದ ಮಾರ್ಗಗಳಿಗೆ ವಿಸ್ತರಿಸುವ ಬಗ್ಗೆ ನಿರ್ಧರಿಸಲಾಗುತ್ತದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಹಿರೇಮಗಳೂರು ಕಣ್ಣನ್‌ ಅವರಿಗೆ ನೀಡಿದ ನೋಟಿಸ್ ಹಿಂಪಡೆಯಲು ಸಚಿವ ರಾಮಲಿಂಗಾರೆಡ್ಡಿ ಸೂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.