ETV Bharat / state

ಪಂಚ ಸೂತ್ರದ ನೀರಿನ ಉಳಿತಾಯ ಮರುಬಳಕೆಯ ಅಭಿಯಾನದಲ್ಲಿ ಕೈ ಜೋಡಿಸಿ : ಜಲಮಂಡಳಿ ಅಧ್ಯಕ್ಷ - SAVE WATER

author img

By ETV Bharat Karnataka Team

Published : Apr 2, 2024, 9:47 AM IST

ನೀರು ಬಳಸುವ ಗ್ರಾಹಕರ ಜೊತೆ ಸಭೆ
ನೀರು ಬಳಸುವ ಗ್ರಾಹಕರ ಜೊತೆ ಸಭೆ

ಜಲಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್​​ ನೀರು ಉಳಿತಾಯಕ್ಕೆ ಪಂಚ ಸೂತ್ರಗಳನ್ನು ಅಳವಡಿಸಿಕೊಳ್ಳಲು ಕರೆ ನೀಡಿದ್ದಾರೆ.

ಬೆಂಗಳೂರು: ಪಂಚ ಸೂತ್ರಗಳನ್ನು ಅಳವಡಿಸಿಕೊಳ್ಳುವ ಮೂಲಕ ನೀರು ಉಳಿತಾಯ ಮತ್ತು ಮರುಬಳಕೆಯ ಅಭಿಯಾನದಲ್ಲಿ ಕೈ ಜೋಡಿಸಿ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್​​ ಎಂದು ಕರೆ ನೀಡಿದ್ದಾರೆ.

ಸೋಮವಾರ ಜಲಮಂಡಳಿ ಕೇಂದ್ರ ಕಛೇರಿಯಲ್ಲಿ 40 ಲಕ್ಷದಿಂದ 2 ಕೋಟಿ ಲೀಟರ್​ ನೀರು ಬಳಸುವ ಗ್ರಾಹಕರ ಜೊತೆ ಸಭೆ ನಡೆಸಿ ಗ್ರೀನ್ ಸ್ಟಾರ್ ಚಾಲೆಂಜ್ ಪಂಚ ಸೂತ್ರಗಳನ್ನು ಅಳವಡಿಸಿಕೊಳ್ಳುವಂತೆ ಸೂಚನೆ ನೀಡಿದರು.

ನಗರದಲ್ಲಿ ಕುಡಿಯುವ ನೀರಿನ ಕೊರತೆ ಇಲ್ಲ. ಆದರೆ ಅಂತರ್ಜಲ ಕುಸಿತದಿಂದ ದಿನ ಬಳಕೆಯ ನೀರಿನ ಮೇಲೆ ಪರಿಣಾಮ ಬೀರಿದೆ. ಮುಂದಿನ ಎರಡು ತಿಂಗಳುಗಳ ಕಾಲ ನೀರಿನ ಮಿತವ್ಯಯದ ಬಳಕೆಯಿಂದ ಪರಿಸ್ಥಿತಿಯನ್ನು ನಿಭಾಯಿಸಬಹುದಾಗಿದೆ. ಜಲಮಂಡಳಿ ಕೇವಲ ಇಂದಿನ ಪರಿಸ್ಥಿತಿಯನ್ನು ನಿಭಾಯಿಸುತ್ತಿರುವುದು ಅಷ್ಟೇ ಅಲ್ಲದೆ, ಭವಿಷ್ಯದಲ್ಲಿ ಬೆಂಗಳೂರು ನಗರವನ್ನು ವಾಟರ್ ಸರ್ ಪ್ಲಸ್ ಮಾಡುವ ಗುರಿಯನ್ನು ಸಹ ಹೊಂದಿದೆ ಎಂದು ಹೇಳಿದರು.

ನೀರಿನ ಉಳಿತಾಯ ಮಾಡುವಂತಹ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದು, ಸಂಸ್ಕರಿಸಿದ ನೀರಿನ ಬಳಕೆಯನ್ನು ಹೆಚ್ಚಿಸಿಕೊಳ್ಳುವುದು, ಕೊಳವೆ ಬಾವಿಗಳ ಬಳಕೆಯಲ್ಲಿ ತಂತ್ರಜ್ಞಾನದ ಅಳವಡಿಕೆ ಮಾಡಿಕೊಳ್ಳುವುದು, ಮಳೆ ನೀರು ಇಂಗು ಗುಂಡಿಗಳನ್ನು ಅಳವಡಿಸಿಕೊಳ್ಳುವುದು ಹಾಗೂ ಈ ಎಲ್ಲಾ ಹೊಸ ಅನುಷ್ಠಾನಗಳ ಬಗ್ಗೆ ಬಳಕೆದಾರರಿಗೆ ಮಾಹಿತಿಯನ್ನು ಕೊಡುವ ಮೂಲಕ ನೀರಿನ ಉಳಿತಾಯದ ಮಹತ್ವವನ್ನು ಸಾರಬೇಕಿದೆ. ಈ ಪಂಚ ಸೂತ್ರಗಳನ್ನು ಅಳವಡಿಸಿಕೊಳ್ಳಲು ಈಗಾಗಲೇ ಅಪಾರ್ಟ್ಮೆಂಟ್ ಹಾಗೂ ಹೋಟೆಲ್ ಮತ್ತು ರೆಸ್ಟೋರೆಂಟ್​ಗಳು ಮುಂದೆ ಬಂದಿವೆ. ಈ ಚಾಲೆಂಜ್ ಅನ್ನು ಎಲ್ಲ ಗ್ರಾಹಕರು ಕೂಡಾ ಅಳವಡಿಸಿಕೊಳ್ಳುವ ಮೂಲಕ ಬೆಂಗಳೂರು ವಾಟರ್ ಸರ್ ಪ್ಲಸ್ ಅಭಿಯಾನದಲ್ಲಿ ಕೈಜೋಡಿಸಿ ಎಂದು ಕರೆ ನೀಡಿದರು.

ನೀರು ಬಳಸುವ ಗ್ರಾಹಕರ ಜೊತೆ ಸಭೆ
ನೀರು ಬಳಸುವ ಗ್ರಾಹಕರ ಜೊತೆ ಸಭೆ

ಬಲ್ಕ್ ಬಳಕೆದಾರರು ತಮ್ಮ ಸಮುದಾಯದಲ್ಲಿ ಹೆಚ್ಚು ನೀರು ಬಳಕೆ ಮಾಡುವವರ ಕುರಿತು ಜಾಗೃತಿ ಮೂಡಿಸಬೇಕು. ಅಂತರ್ಜಲ ಮಟ್ಟವನ್ನು ಕಾಯ್ದುಕೊಳ್ಳಲು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಮಳೆ ನೀರು ಇಂಗು ಗುಂಡಿಗಳನ್ನು ನಿರ್ಮಿಸಿಕೊಳ್ಳಲು ಆದ್ಯತೆ ನೀಡಬೇಕು. ಏಪ್ರಿಲ್​ 10 ರ ಒಳಗಾಗಿ ಈ ಪಂಚ ಸೂತ್ರಗಳನ್ನು ಅಳವಡಿಸಿಕೊಳ್ಳಬೇಕು. 10 ರ ನಂತರ ಸರಬರಾಜು ಆಗುತ್ತಿರುವ ನೀರಿನಲ್ಲಿ ಶೇಕಡಾ 10 ರಷ್ಟು ಕಡಿತಗೊಳಿಸಿ, ಅಗತ್ಯವಿರುವ ಕಡೆಗಳಿಗೆ ಕಾವೇರಿ ನೀರನ್ನು ಸರಬರಾಜು ಮಾಡಲಾಗುವುದು ಎಂದು ತಿಳಿಸಿದರು.

ಈಗಾಗಲೇ 133 ಬಿಲ್ಡರ್​​ಗಳೊಂದಿಗೆ ಸಭೆ ನಡೆಸಲಾಗಿದೆ. ಅವರಿಗೆ ಸಂಸ್ಕರಿಸಿದ ನೀರು ಬಳಸುವಂತೆ ಸೂಚಿಸಲಾಗಿದೆ. ಮಿತವಾಗಿ ನೀರು ಬಳಸುವ ಮೂಲಕ ನೀರು ಉಳಿಸಬೇಕು. ಮನೆಯಲ್ಲಿ ಹೆಚ್ಚು ನೀರುವ ಬಳಸುವ ಜಾಗದಲ್ಲಿ ಏರಿಯೆಟರ್​ ಅಳವಡಿಸಬೇಕು, ವಾಷಿಂಗ್‌ಮಿಷನ್ ಒಳಗೆ ಬರುವ ನೀರನ್ನು ಮರುಬಳಕೆ ಮಾಡಬೇಕು. ಒಂದು ಫ್ಲಷ್‌ಗೆ 20 ಲೀಟರ್ ಹೊರಹೋಗುತ್ತಿದ್ದು, ಇದನ್ನು ತಡೆಗಟ್ಟಲು ಫ್ಲಷ್​​ ಬ್ಯಾಗ್​ ಆಳವಡಿಸಬೇಕು. ಸಂಸ್ಕರಿಸಿದ ನೀರು ಬಳಕೆ ಮಾಡಬೇಕು ಎಂದು ಹೇಳಿದರು.

ಸಂಸ್ಕರಿಸಿದ ನೀರನ್ನು ಸ್ವಚ್ಛತೆಗೆ ಕಟ್ಟಡ ಕಾಮಗಾರಿಗಳಿಗೆ ತೋಟಗಾರಿಕೆಗೆ ಸಸ್ಯಗಳ ಆರೈಕೆಗೆ ಬಳಸಬಹುದಾಗಿದೆ. ಈ ಹಿನ್ನೆಲೆಯಲ್ಲಿ ಸಂಸ್ಕರಿಸಿದ ನೀರಿನ ಬಳಕೆಯನ್ನು ಹೆಚ್ಚಿಸಬೇಕು. ಅಲ್ಲದೆ ನೀರು ಬಳಕೆ ಹಾಗೂ ಮರು ಬಳಕೆಯ ಬಗ್ಗೆ ಮನೆಯ ನೆರೆಮನೆಯವರಿಗೂ ಜಾಗೃತಿ ಮೂಡಿಸಬೇಕು ಎಂದರು. ಈ ವೇಳೆ ಜಲಮಂಡಳಿಯ ವತಿಯಿಂದ ಸಭೆಗೆ ಆಗಮಿಸಿದ ಪ್ರತಿನಿಧಿಗಳಿಗೆ ಸಸಿ ವಿತರಿಸಲಾಯಿತು. ಹೆಚ್ಚು ಸಸಿಗಳನ್ನು ನೆಡುವ ಮೂಲಕ ಬ್ರಾಂಡ್ ಬೆಂಗಳೂರು ಮೌಲ್ಯವನ್ನು ಉಳಿಸಬೇಕು ಎಂದು ಪಣ ತೊಡಲಾಯಿತು.

ಇದನ್ನೂ ಓದಿ: ರಾಕಸಕೊಪ್ಪ ಜಲಾಶಯದಲ್ಲಿ ನೀರಿದ್ದರೂ ಬೆಳಗಾವಿಗೆ ಜಲಸಂಕಷ್ಟ - Water Shortage In Belagavi

ETV Bharat Logo

Copyright © 2024 Ushodaya Enterprises Pvt. Ltd., All Rights Reserved.