ETV Bharat / state

ರಾಕಸಕೊಪ್ಪ ಜಲಾಶಯದಲ್ಲಿ ನೀರಿದ್ದರೂ ಬೆಳಗಾವಿಗೆ ಜಲಸಂಕಷ್ಟ - Water Shortage In Belagavi

author img

By ETV Bharat Karnataka Team

Published : Apr 1, 2024, 7:05 PM IST

Updated : Apr 1, 2024, 7:54 PM IST

ರಾಕಸಕೊಪ್ಪ ಜಲಾಶಯದಲ್ಲಿ ನೀರು ಲಭ್ಯವಿದ್ದರೂ ಬೆಳಗಾವಿ ನಗರಕ್ಕೆ ಸಮರ್ಪಕ‌ವಾಗಿ ನೀರು ಪೂರೈಕೆಯಾಗುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

water-shortage-in-belagavi-although-there-is-water-in-rakasakoppa-reservoir
ರಾಕಸಕೊಪ್ಪ ಜಲಾಶಯದಲ್ಲಿ ನೀರಿದ್ದರೂ ಬೆಳಗಾವಿಗೆ ಜಲಸಂಕಷ್ಟ: ಸಾರ್ವಜನಿಕರ ಆರೋಪವೇನು ?

ರಾಕಸಕೊಪ್ಪ ಜಲಾಶಯದಲ್ಲಿ ನೀರಿದ್ದರೂ ಬೆಳಗಾವಿಗೆ ಜಲಸಂಕಷ್ಟ

ಬೆಳಗಾವಿ: ಜಿಲ್ಲೆಯಾದ್ಯಂತ ತಾಪಮಾನ ತೀವ್ರವಾಗಿ ಏರಿಕೆಯಾಗುತ್ತಿದ್ದು, ನೀರಿನ ಅಭಾವ ಸೃಷ್ಟಿಯಾಗಿದೆ. ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯ ಹಲವು ಪಟ್ಟಣ, ಹಳ್ಳಿಗಳಲ್ಲಿ ಜಲಮೂಲಗಳು ಬತ್ತಿ ಹೋಗಿವೆ. ಇದರಿಂದಾಗಿ ಟ್ಯಾಂಕರ್ ನೀರಿಗೆ ಬೇಡಿಕೆ ಹೆಚ್ಚಾಗಿದೆ. ರಾಕಸಕೊಪ್ಪ ಜಲಾಶಯದಲ್ಲಿ ನೀರು ಲಭ್ಯವಿದ್ದರೂ ನಗರದಲ್ಲಿ ಯಾಕೆ‌ ಸಮರ್ಪಕ‌ ನೀರು ಪೂರೈಕೆಯಾಗುತ್ತಿಲ್ಲ ಎಂದು‌ ಜನರು ಪ್ರಶ್ನಿಸುತ್ತಿದ್ದಾರೆ.

ನಗರದಲ್ಲಿರುವ ಬಹುಮಹಡಿ ಕಟ್ಟಡಗಳು, ಬಹುತೇಕ ಗ್ರಾಮೀಣ ಜನವಸತಿ ಪ್ರದೇಶಗಳು ಕುಡಿಯುವ ನೀರಿಗಾಗಿ ಕೊಳವೆ ಬಾವಿಗಳನ್ನು ಹೆಚ್ಚಾಗಿ ಅವಲಂಬಿಸಿವೆ. ಜಿಲ್ಲೆಯ 350ಕ್ಕೂ ಹೆಚ್ಚು ಹಳ್ಳಿಗಳಿಗೆ ಇಂದಿಗೂ ನೀರಿಗೆ ಕೊಳವೆ ಬಾವಿಗಳೇ ಆಸರೆ. ಅಂತರ್ಜಲ ಮಟ್ಟ ಕುಸಿದಿರುವುದು ಗ್ರಾಮೀಣ ಪ್ರದೇಶದಲ್ಲಿ ನೀರಿನ‌ ಬವಣೆಯನ್ನು ಇನ್ನಷ್ಟು ಹೆಚ್ಚಿಸಿದೆ. ಬೆಳಗಾವಿ ನಗರಕ್ಕೆ ರಾಕಸಕೊಪ್ಪ ಜಲಾಶಯ, ಹಿಡಕಲ್ ಜಲಾಶಯ ನೀರಿನ ಮುಖ್ಯ ಮೂಲಗಳು. ಈ ಜಲಾಶಯಗಳಲ್ಲಿ ಸದ್ಯ ನೀರಿನ‌ ಮಟ್ಟ ಬಿಸಿಲಿನ ತಾಪಮಾನದಿಂದ ತಗ್ಗುತ್ತಿದೆ.

ರಾಕಸಕೊಪ್ಪ ಜಲಾಶಯದಲ್ಲಿ ನೀರಿದ್ದರೂ ಬೆಳಗಾವಿಗೆ ಜಲಸಂಕಷ್ಟ

ಬೇಸಿಗೆ ನಿರ್ವಹಣೆ ಹೆಸರಿನಲ್ಲಿ ನೀರಿನ ಪೂರೈಕೆಯೂ ಕಡಿಮೆಯಾಗಿದೆ. ಹಾಗಾಗಿ, ಬೆಳಗಾವಿ ನಗರದಲ್ಲಿ ನೀರಿನ ಪೂರೈಕೆ ಅಸಮರ್ಪಕವಾಗಿದ್ದು ಜನಜೀವನ ತೊಂದರೆಗೆ ಸಿಲುಕಿದೆ. ಬೆಳಗಾವಿ ಜಿಲ್ಲೆಯ 15 ತಾಲೂಕುಗಳನ್ನು ಬರಪಿಡೀತವೆಂದು ಸರ್ಕಾರ ಘೋಷಿಸಿದೆ. ನೀರಿನ ಸಮಸ್ಯೆ ತೀವ್ರಗೊಂಡಿರುವ 9 ತಾಲೂಕುಗಳ ಸುಮಾರು 50ಕ್ಕೂ ಹೆಚ್ಚು ಹಳ್ಳಿಗಳಿಗೆ ಜಲಕಂಟಕ ಎದುರಾಗಿದ್ದು, ಟ್ಯಾಂಕರ್ ಮೂಲಕ ನೀರು ಪೂರೈಕೆ ಆರಂಭವಾಗಿದೆ.

ಕಳೆದ ವರ್ಷಕ್ಕಿಂತ ರಾಕಸಕೊಪ್ಪ ಜಲಾಶಯದ‌ ನೀರಿನ ಮಟ್ಟ ಎರಡು ಅಡಿ ಹೆಚ್ಚಿದೆ. ಬೆಳಗಾವಿ ನಗರದ ಕುಡಿಯುವ ನೀರಿನ ಮುಖ್ಯ ಮೂಲವಾಗಿರುವ ರಾಕಸಕೊಪ್ಪ ಜಲಾಶಯ ಶುದ್ಧ ನೈಸರ್ಗಿಕ ನೀರನ್ನು ಹೊಂದಿದೆ. ಪಂಪಿಂಗ್‌ ಇಲ್ಲದೇ ಸಹಜವಾಗಿಯೇ ನೀರು 15 ಕಿ.ಮೀ ಹರಿದು ಬೆಳಗಾವಿಗೆ ಬರುತ್ತದೆ. ಅರ್ಧ ಟಿಎಂಸಿ ಸಾಮರ್ಥ್ಯವಿರುವ ರಾಕಸಕೊಪ್ಪ ಜಲಾಶಯದ ಇಂದಿನ ಮಟ್ಟ 2462.15 ಎಂಎಂ. ಕಳೆದ ವರ್ಷ ಈ ವೇಳೆಗೆ ಇದ್ದ ನೀರಿನ ಮಟ್ಟ 2460.15 ಎಂಎಂ. ಅಧಿಕಾರಿಗಳು ಜೂನ್ ಮೊದಲ ವಾರದವರೆಗೂ ನೀರಿಗೆ ಕೊರತೆ ಆಗುವುದಿಲ್ಲ ಎನ್ನುತ್ತಿದ್ದಾರೆ.

ನಗರ ಸೇವಕ ಶಂಕರ ಪಾಟೀಲ ಮಾತನಾಡಿ, "ಸದ್ಯ ಜಲಾಶಯದಲ್ಲಿ ನೀರು ಲಭ್ಯವಿದ್ದರೂ ಸರಿಯಾಗಿ ಸರಬರಾಜು ಮಾಡಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಮತ್ತೊಂದೆಡೆ ಬೆಳಗಾವಿಯಲ್ಲಿ ಅವ್ಯಾಹತವಾಗಿ ಟ್ಯಾಂಕರ್ ಮಾಫಿಯಾ ತಲೆ ಎತ್ತಿದೆ. ಒಂದೊಂದು ಟ್ಯಾಂಕರ್ ನೀರಿಗೂ ಬೇಕಾಬಿಟ್ಟಿ ದರ ನಿಗದಿಪಡಿಸಲಾಗಿದೆ. ಹಣವಂತರು ಹಣ ಕೊಟ್ಟು ನೀರು ತೆಗೆದುಕೊಳ್ಳಬಹುದು. ಬಡವರು ಎಲ್ಲಿಗೆ ಹೋಗೋದು?. ಒಂದೊಂದೂ ಟ್ಯಾಂಕರ್ ನೀರಿಗೂ 800 ರಿಂದ 1,500 ರೂಪಾಯಿ ಕೊಡಬೇಕು. ಬೆಳಗಾವಿಯಲ್ಲಿ ಎಲ್ಲಿ ನೋಡಿದರಲ್ಲಿಯೂ ಟ್ಯಾಂಕರ್ ನೀರಿನ ದರ್ಬಾರ್ ಸೃಷ್ಟಿಯಾಗಿದೆ. ಟ್ಯಾಂಕರ್ ಮಾಫಿಯಾ ಮೇಲೆ ಜಿಲ್ಲಾಡಳಿತ ಕಂಟ್ರೋಲ್ ಹೊಂದಿಲ್ಲ. ಜಲಾಶಯದಲ್ಲಿ ನೀರಿದೆ, ಅಧಿಕಾರಿಗಳು ನೀರು ಬಿಡುತ್ತಿರುವುದಾಗಿ ಹೇಳುತ್ತಾರೆ. ಆದರೆ, ನೀರು ಎಲ್ಲಿ ಹೋಗ್ತಿದೆ ಎಂಬುದೇ ತಿಳಿಯುತ್ತಿಲ್ಲ. ಎಲ್ ಆ್ಯಂಡ್ ಟಿ ಕಂಪನಿ, ಕೆಯುಡಿಐಎಫ್‌ಸಿ ಅಧಿಕಾರಿಗಳ ನಡುವೆ ಹೊಂದಾಣಿಕೆ ಕೊರತೆಯಿಂದ ಜನರಿಗೆ ಜಲಸಂಕಷ್ಟ ಎದುರಾಗಿದೆ" ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸ್ಥಳೀಯರಾದ ಪ್ರಕಾಶ ಕುರಗುಂದ ಮಾತನಾಡಿ, "ಬೆಳಗಾವಿ ನಗರದಲ್ಲಿ ಹಿಂದಿನ ವರ್ಷಗಳಿಗಿಂತ ಈ ಬಾರಿ ನೀರಿನ ಸಮಸ್ಯೆ ಹೆಚ್ಚಿದೆ. ಜೀವನ ನಡೆಸುವುದೇ ಕಷ್ಟವಾಗಿದೆ. ಮೊದಲೇ ಬರಲಗಾಲವಿದ್ದು, ಗಾಯದ ಮೇಲೆ ಬರೆ ಎಳೆದಂತಾಗಿದೆ. ಇನ್ನು ಟ್ಯಾಂಕರ್ ಮಾಫಿಯಾಗೆ ಕಡಿವಾಣ ಹಾಕಬೇಕು. ರಾಕಸಕೊಪ್ಪ ಮತ್ತು ಹಿಡಕಲ್ ಜಲಾಶಯಗಳಲ್ಲಿ ನೀರು ಲಭ್ಯವಿದ್ದು, ಸಮರ್ಪಕವಾಗಿ ನೀರು ಪೂರೈಸಬೇಕು" ಎಂದು ಆಗ್ರಹಿಸಿದರು.

ಶಾಹಪುರದ ಬಸವಣಗಲ್ಲಿ ನಿವಾಸಿ ಶಾಮಸುಂದರ ಜಾಧವ ಮಾತನಾಡಿ, "ನಮ್ಮ ಏರಿಯಾಕ್ಕೆ 15 ದಿನಕ್ಕೊಮ್ಮೆ ನೀರು ಬಿಡುತ್ತಿದ್ದಾರೆ. ಕುಡಿಯಲು ಮತ್ತು ದಿನನಿತ್ಯ ಬಳಸಲು ನೀರಿಗಾಗಿ ಪರಿತಪಿಸುವಂತಾಗಿದೆ" ಎಂದು ಹೇಳಿದರು.

ಎಲ್ ಆ್ಯಂಡ್​ ಟಿ ಕಂಪನಿ ಮ್ಯಾನೇಜರ್ ರವಿಕುಮಾರ 'ಈಟಿವಿ ಭಾರತ'ಕ್ಕೆ ಪ್ರತಿಕ್ರಿಯಿಸಿ, "ತಾಂತ್ರಿಕ ಸಮಸ್ಯೆಯಿಂದ ಕೆಲವು ಕಡೆ ನೀರಿನ ಪೂರೈಕೆ ವ್ಯತ್ಯಯವಾಗಿತ್ತು. ನೀರಿನ ಲಭ್ಯತೆ ಆಧರಿಸಿ ನೀರು ಪೂರೈಕೆ ಪ್ರಮಾಣ ನಿಗದಿಪಡಿಸಿದ್ದೇವೆ. ಇನ್ನು ಅಪಾರ್ಟ್‌ಮೆಂಟ್​ಗಳಿಗೆ ಸಾಕಾಗುವಷ್ಟು ನೀರು ಪೂರೈಸಲು ಸಾಧ್ಯವಿಲ್ಲ. ಯಾಕೆಂದರೆ ಒಂದು ಅಪಾರ್ಟ್‌ಮೆಂಟ್​ಗೆ ಒಂದೇ ಪೈಪ್​ನ ಸಂಪರ್ಕವಿರುತ್ತದೆ. ಅಲ್ಲದೇ ನಮ್ಮ 31 ಟ್ಯಾಂಕರ್​ಗಳು ಕೂಡ ನೀರು ಪೂರೈಕೆ ಮಾಡುತ್ತಿವೆ" ಎಂದು ತಿಳಿಸಿದರು.

ನವಿಲುತೀರ್ಥ ಜಲಾಶಯ:
ಗರಿಷ್ಠ ಮಟ್ಟ: 37.5 ಟಿಎಂಸಿ
ಇಂದಿನ ಮಟ್ಟ: 6.89 ಟಿಎಂಸಿ

ಹಿಡಕಲ್ ಜಲಾಶಯ:
ಗರಿಷ್ಠ ಮಟ್ಟ: 51 ಟಿಎಂಸಿ
ಇಂದಿನ ಮಟ್ಟ: 23.83 ಟಿಎಂಸಿ

ರಾಕಸಕೊಪ್ಪ ಜಲಾಶಯ:
ಗರಿಷ್ಠ ಮಟ್ಟ: 0.69 ಟಿಎಂಸಿ
ಇಂದಿನ ಮಟ್ಟ: 0.2 ಟಿಎಂಸಿ

ಇದನ್ನೂ ಓದಿ: ಶಾಲೆಯಲ್ಲಿ ಉದ್ಯಾನ ನಿರ್ಮಿಸಿ ಬಾನಾಡಿಗಳ ಬಾಯಾರಿಕೆ ತೀರಿಸುತ್ತಿರುವ ಸರ್ಕಾರಿ ಶಾಲಾ ಶಿಕ್ಷಕಿ - garden at school

Last Updated :Apr 1, 2024, 7:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.