ETV Bharat / state

ನನ್ನನ್ನೂ ಹನಿಟ್ರ್ಯಾಪ್ ಬಲೆಗೆ ಸಿಲುಕಿಸಲು ಯತ್ನಿಸಿ ಒಂದು ಗ್ಯಾಂಗ್ ವಿಫಲವಾಯ್ತು: ದೇವರಾಜೇಗೌಡ - devaraje gowda

author img

By ETV Bharat Karnataka Team

Published : May 8, 2024, 9:28 PM IST

ಒಂದು ಗ್ಯಾಂಗ್ ನನ್ನನ್ನು ಹನಿಟ್ರ್ಯಾಪ್ ಮಾಡಲು ಯತ್ನಿಸಿ ವಿಫಲವಾಯ್ತು, ನಾನು ಕೂಡ ಸಂತ್ರಸ್ತ ಎಂದು ಬಿಜೆಪಿ ಮುಖಂಡ ದೇವರಾಜೇಗೌಡ ಹೇಳಿದ್ದಾರೆ.

ದೇವರಾಜೇಗೌಡ
ದೇವರಾಜೇಗೌಡ (ETV Bharat)

ಬೆಂಗಳೂರು: ನನ್ನ ಬೆತ್ತಲೆ ವಿಡಿಯೋ ಮಾಡಲು ಒಂದು ಗ್ಯಾಂಗ್ ಸಿದ್ಧವಾಗಿತ್ತು, ಅದೂ ಸಹ ರಾಜಕೀಯ ಷಡ್ಯಂತ್ರವೇ ಎಂದು ವಕೀಲ ಹಾಗೂ ಬಿಜೆಪಿ ಮುಖಂಡ ದೇವರಾಜೇಗೌಡ ಹೇಳಿದ್ದಾರೆ. ನಗರದ ಪ್ರೆಸ್‌ಕ್ಲಬ್‌ನಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನನ್ನನ್ನು ಹನಿಟ್ರ್ಯಾಪ್ ಮಾಡಲು ಯತ್ನಿಸಿ ಒಂದು ಗ್ಯಾಂಗ್ ವಿಫಲವಾಯ್ತು, ನಾನು ಕೂಡ ಸಂತ್ರಸ್ತ. ಅದರ ಕುರಿತು ಆಗ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೆ. ಪ್ರಜ್ವಲ್ ಪ್ರಕರಣದಲ್ಲಿ ಎಸ್‌ಐಟಿ ತನಿಖೆಗೆ ಕೊಟ್ಟ ನಂತರ ಆ ಎಫ್‌ಐಆರ್ ದಾಖಲಾಯಿತು. ಎಫ್‌ಐಆರ್ ಆದ ನಂತರ ಮತ್ತೆ ಲೈಂಗಿಕ ದೌರ್ಜನ್ಯ ಪ್ರಕರಣವಾಯಿತು ಎಂದರು.

ಪ್ರಜ್ವಲ್ ರೇವಣ್ಣನ ಅಶ್ಲೀಲ ವಿಡಿಯೋ ಪೆನ್‌ಡ್ರೈವ್ ಹಂಚಿಕೆ ಮಾಡಿರುವವರ ವಿರುದ್ಧವೂ ಎಫ್‌ಐಆರ್ ಆಗಿತ್ತು. ಆದರೆ, ಆ ಪ್ರಕರಣ ಎಸ್‌ಐಟಿಗೆ ವರ್ಗಾವಣೆ ಮಾಡಿಲ್ಲ. ಹೀಗಾಗಿ ಪ್ರಕರಣದಲ್ಲಿ ನನ್ನನ್ನು ಸಾಕ್ಷಿಯಾಗಿ ಕರೆಯುವ ಅಗತ್ಯವಿಲ್ಲ. ಆದರೂ, ಅಧಿಕಾರಿಗಳು ನನ್ನಿಂದ ಹೇಳಿಕೆ ಪಡೆದರು. ಒಂದು ಲೈಂಗಿಕ ದೌರ್ಜನ್ಯ ಹಾಗೂ ಎರಡನೆಯದಾಗಿ ಪೆನ್‌ಡ್ರೈವ್ ಹಂಚಿಕೆ ಬಗ್ಗೆ ತನಿಖೆ ಆಗಬೇಕು. ಅಶ್ಲೀಲ ವಿಡಿಯೋ ಬಿಡುಗಡೆ ಬಳಿಕ ಹಲವು ರಾಜಕೀಯ ನಾಯಕರ ರಕ್ಷಣೆಯಾಗುತ್ತಿದೆ ಎಂದು ಆರೋಪಿಸಿದರು.

ಈ ಹಿಂದೆ ಸಂಸದ ಪ್ರಜ್ವಲ್‌ ರೇವಣ್ಣನ ಮಾಜಿ ಕಾರು ಚಾಲಕ ಕಾರ್ತಿಕ್ ಪತ್ನಿ ಮೇಲೆ ಹಲ್ಲೆ ನಡೆದಾಗ ಕೆಲ ತಿಂಗಳುಗಳ ಹಿಂದೆ ಸರ್ಕಾರಕ್ಕೆ ಪತ್ರ ಬರೆದಿದ್ದೆ. ಆದರೆ, ನ್ಯಾಯ ಸಿಗಲಿಲ್ಲ. ಈಗ ಅವರ ಪಕ್ಷದ ನಾಯಕರನ್ನೇ ಮಹಿಳಾ ಆಯೋಗದ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಆದ್ದರಿಂದ ಅವರ ಪತ್ರವನ್ನು ಮುಖ್ಯಮಂತ್ರಿ ಪುರಸ್ಕರಿಸುತ್ತಾರೆ. ಅಶ್ಲೀಲ ವಿಡಿಯೋ ಹಂಚಿಕೆ ಮಾಡಿರುವುದು ಘೋರ ಅಪರಾಧ. ಅವರ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳಬೇಕು ಎಂದರು.

ಇನ್ನು ಹಣಕ್ಕಾಗಿ ದೇವರಾಜೇಗೌಡ ಬಂದಿದ್ದ ಎಂಬ ಶಿವರಾಮೇಗೌಡ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ನಾನು ಅವರಿಗೆ ಕರೆ ಮಾಡಿಲ್ಲ, ಅವರೇ ಕರೆ ಮಾಡಿದ್ದರು. ಕೇಂದ್ರ ಸರ್ಕಾರ ಹಾಗೂ ಹೆಚ್.ಡಿ.ರೇವಣ್ಣ ಕುಟುಂಬವನ್ನು ಹೇಗೆ ಕಟ್ಟಿಹಾಕಬೇಕು ಎಂದು ಶಿವರಾಮೇಗೌಡ ಹೇಳಿದ್ದರು. ಕಾಲ್ ರೆಕಾರ್ಡ್ ಮಾಡಿಕೊಂಡಿದ್ದಕ್ಕೆ ಕ್ಷಮೆ ಕೇಳುತ್ತೇನೆ. ಇದು ದೊಡ್ಡ ಜಾಲ ಇದೆ ಅಂತ ಗೊತ್ತಾದ ಮೇಲೆಯೇ ನಾನು ಕಾಲ್ ರೆಕಾರ್ಡ್ ಮಾಡಿಕೊಂಡಿದ್ದೆ ಎಂದು ತಿರುಗೇಟು ನೀಡಿದರು.

ಕಾರ್ತಿಕ್ ನಿರೀಕ್ಷಣಾ ಜಾಮೀನು ವಜಾ ಆದರು ಬಂಧನ ಯಾಕಿಲ್ಲ?: ನಾನು 4GB ಮೆಮೊರಿ ಕಾರ್ಡ್, ಪೆನ್‌ಡ್ರೈವ್ ಅನ್ನು ದೇವರಾಜೇಗೌಡರಿಗೆ ಕೊಟ್ಟಿದ್ದೆ ಎಂದು ಕಾರ್ತಿಕ್ ಹೇಳಿದ್ದಾನೆ. ಆ 4GB ಕಾರ್ಡನ್ನು ಎಸ್‌ಐಟಿಗೆ ಕೊಟ್ಟಿರುವುದಾಗಿ ಕೂಡ ಹೇಳಿದ್ದಾನೆ. ಅಂತಹ ಕಾರ್ತಿಕ್‌ನನ್ನು ಎಸ್‌ಐಟಿ ಅಧಿಕಾರಿಗಳು ಯಾಕೆ ಬಂಧಿಸುತ್ತಿಲ್ಲ?. ನಿರೀಕ್ಷಣಾ ಜಾಮೀನು ಅರ್ಜಿ ವಜಾ ಆದ ತಕ್ಷಣ ರೇವಣ್ಣರನ್ನು ಬಂಧಿಸಿದ್ದೀರಿ. ಆದರೆ, ಕಾರ್ತಿಕ್ ನಿರೀಕ್ಷಣಾ ಜಾಮೀನು ವಜಾ ಆದರೂ ಯಾಕೆ ಬಂಧಿಸಿಲ್ಲ ಎಂದು ಇದೇ ಸಂದರ್ಭದಲ್ಲಿ ಅವರು ಪ್ರಶ್ನಿಸಿದರು.

ಇದನ್ನೂ ಓದಿ: ಪೆನ್​ಡ್ರೈವ್ ಹಂಚಿದ ಕಿಡಿಗೇಡಿಗಳನ್ನ ಬಂಧಿಸಿ; ಮಹಿಳಾ ಆಯೋಗಕ್ಕೆ ದೂರು ನೀಡಿದ ಜೆಡಿಎಸ್ ಮಹಿಳಾ ಘಟಕದ ನಿಯೋಗ - pen drive case

ETV Bharat Logo

Copyright © 2024 Ushodaya Enterprises Pvt. Ltd., All Rights Reserved.