ETV Bharat / sports

ಮಂಧಾನ, ಪೆರ್ರಿ ಅರ್ಧಶತಕಗಳ ವೈಭವ: ಯುಪಿ ವಿರುದ್ಧ ಆರ್​ಸಿಬಿಗೆ 23 ರನ್​ ಗೆಲುವು

author img

By PTI

Published : Mar 5, 2024, 7:20 AM IST

ಮಹಿಳಾ ಐಪಿಎಲ್
ಮಹಿಳಾ ಐಪಿಎಲ್

ಬೆಂಗಳೂರು ಚರಣದ ಕೊನೆಯ ಪಂದ್ಯವನ್ನು ಆರ್​​ಸಿಬಿ ಗೆಲುವಿನ ಮೂಲಕ ಮುಗಿಸಿತು. ಯುಪಿ ವಾರಿಯರ್ಸ್​ ವಿರುದ್ಧ ಲೀಗ್​ನಲ್ಲಿ ಆಡಿದ ಎರಡೂ ಪಂದ್ಯಗಳಲ್ಲಿ ಗೆಲುವು ಸಾಧಿಸಿತು.

ಬೆಂಗಳೂರು: ಮಹಿಳಾ ಐಪಿಎಲ್​ನಲ್ಲಿ ಸತತ 2 ಪಂದ್ಯಗಳಲ್ಲಿ ಸೋತು ನಿರಾಸೆ ಅನುಭವಿಸಿದ್ದ ಅಪಾರ ಅಭಿಮಾನಿಗಳ ಬಳಗದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) ಸೋಮವಾರ ಇಲ್ಲಿ ನಡೆದ ಯುಪಿ ವಾರಿಯರ್ಸ್​ ವಿರುದ್ಧದ ಪಂದ್ಯದಲ್ಲಿ 23 ರನ್​​ಗಳಿಂದ ಗೆದ್ದು, ಮತ್ತೆ ಜಯದ ಹಳಿಗೆ ಮರಳಿತು. ಇದಕ್ಕೆ ಕಾರಣವಾಗಿದ್ದು ನಾಯಕಿ ಸ್ಮೃತಿ ಮಂಧಾನ ಮತ್ತು ಆಲ್‌ರೌಂಡರ್ ಎಲ್ಲಿಸ್ ಪೆರ್ರಿ ಸಿಡಿಲಬ್ಬರದ ಅರ್ಧಶತಕ.

ಸೆಮೀಸ್​ ಹಾದಿಯನ್ನು ಸುಲಭವಾಗಿಸಲು ಪಂದ್ಯ ಗೆಲ್ಲುವ ವಿಶ್ವಾಸದೊಂದಿಗೆ ಕಣಕ್ಕಿಳಿದ ಆರ್​​ಸಿಬಿ ಟೂರ್ನಿಯಲ್ಲಿ ಯುಪಿ ವಾರಿಯರ್ಸ್​ ವಿರುದ್ಧ ಎರಡನೇ ಗೆಲುವು ಗಳಿಸಿತು. ಮುಂಬೈ ಇಂಡಿಯನ್ಸ್​ ಮತ್ತು ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಸೋತ ನಿರಾಸೆಯನ್ನು ಇಲ್ಲಿ ಮರೆಯಿತು. ಆಡಿದ ಐದು ಪಂದ್ಯಗಳಲ್ಲಿ 3ರಲ್ಲಿ ಗೆದ್ದು 2 ಸೋತು ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿ ಮುಂದುವರಿಯಿತು.

ಟಾಪ್​ ಕ್ಲಾಸ್​ ಬ್ಯಾಟಿಂಗ್​: ಮೊದಲು ಬ್ಯಾಟ್​ ಮಾಡಿದ ಆರ್​ಸಿಬಿ ಮಹಿಳೆಯರು ಕ್ರೀಡಾಂಗಣದಲ್ಲಿ ಸೇರಿದ್ದ ಅಭಿಮಾನಿಗಳಿಗೆ ರಸದೌತಣ ನೀಡಿದರು. ಅದರಲ್ಲೂ ನಾಯಕಿ ಸ್ಮೃತಿ ಮಂಧಾನ ತಮ್ಮ ಹಿರಿಮೆಗೆ ತಕ್ಕಂತೆ ಬ್ಯಾಟ್​ ಮಾಡಿ ಯುಪಿ ಮಹಿಳಾ ಬೌಲಿಂಗ್​ ಪಡೆಯನ್ನು ಚೆಂಡಾಡಿದರು. 50 ಎಸೆತಗಳಲ್ಲಿ 10 ಬೌಂಡರಿ, 3 ಸಿಕ್ಸರ್​ಗಳ ಸಮೇತ 80 ರನ್​ ಸಿಡಿಸಿದರು. ಇನ್ನೊಬ್ಬ ಆರಂಭಿಕ ಆಟಗಾರ್ತಿ ಮೇಘನಾ(28) ಜೊತೆಗೂಡಿ ಮೊದಲ ವಿಕೆಟ್​ಗೆ 51 ರನ್​ ಪೇರಿಸಿದರು.

ಮೇಘನಾ ಔಟಾದ ಬಳಿಕ ಬಂದ ಆಸ್ಟ್ರೇಲಿಯಾದ ಸ್ಟಾರ್​ ಆಲ್​ರೌಂಡರ್​ ಎಲ್ಲಿಸ್​ ಪೆರ್ರಿ ತಾವೂ ಕಡಿಮೆ ಇಲ್ಲ ಎಂಬಂತೆ ಬ್ಯಾಟ್​ ಬೀಸಿದರು. 37 ಎಸೆತಗಳಲ್ಲಿ 58 ರನ್​ ಗಳಿಸಿದ ಪೆರ್ರಿ ತಲಾ 4 ಬೌಂಡರಿ, ಸಿಕ್ಸರ್​ ಚಚ್ಚಿದರು. ಇದರಿಂದ ಯುಪಿ ಬೌಲರ್​ಗಳ ರನ್​ ಸರಾಸರಿಯೇ 10 ದಾಟಿತು. ಪೆರ್ರಿ ಬಳಿಕ ಕೊನೆಯಲ್ಲಿ ಬಂದ ರಿಚಾ ಘೋಷ್​ 10 ಎಸೆತಗಳಲ್ಲಿ 21 ರನ್​ ಕಾಣಿಕೆ ನೀಡಿದರು. ಇದರಿಂದ ತಂಡ ಕೇವಲ 3 ವಿಕೆಟ್​​ಗೆ 198 ರನ್​ಗಳ ಬೃಹತ್​ ಮೊತ್ತ ಗಳಿಸಿತು.

ಫಲ ನೀಡದ ಹೋರಾಟ: ಕಠಿಣ ಗುರಿ ಬೆಂಬತ್ತಿದ ಯುಪಿ ಹೋರಾಟ ನಡೆಸಿತಾದರೂ ಗೆಲುವು ದಕ್ಕಿಸಿಕೊಳ್ಳಲು ಸಾಧ್ಯವಾಗಲಿಲ್ಲ. ನಾಯಕಿ ಅಲಿಸ್ಸಾ ಹೀಲಿ (55) ಅರ್ಧಶತಕ ಬಾರಿಸಿದರೆ, ದೀಪ್ತಿ ಶರ್ಮಾ 33, ಪೂನಂ ಕೆಮ್ನರ್​ 31, ಕಿರಣ್​ ನವಿಗ್ರೆ 18 ರನ್​ ಗಳಿಸಿದರು. ಇನ್ನುಳಿದ ಬ್ಯಾಟರ್​ಗಲು ವೈಫಲ್ಯ ಅನುಭವಿಸಿದ್ದರಿಂದ ತಂಡ 8 ವಿಕೆಟ್​ಗೆ 175 ರನ್​ ಗಳಿಸಿ, 23 ರನ್​ಗಳ ಸೋಲು ಅನುಭವಿಸಿತು. ತಂಡ ಆಡಿದ ಐದು ಪಂದ್ಯಗಳಲ್ಲಿ 3 ಸೋಲು 2 ಗೆಲುವು ದಾಖಲಿಸಿ ಪಾಯಿಂಟ್​ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

ಬೆಂಗಳೂರು ಚರಣ ಮುಕ್ತಾಯ: ಮಹಿಳಾ ಐಪಿಎಲ್​ 2 ಚರಣಗಳಲ್ಲಿ ಆಯೋಜಿಸಲಾಗಿದ್ದು, ಬೆಂಗಳೂರಿನ ಮೊದಲ ಚರಣ ಮುಗಿದಿದೆ. ಲೀಗ್​ ಮೊದಲ 11 ಪಂದ್ಯಗಳಿಗೆ ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ ವಹಿಸಿದೆ. ಇನ್ನುಳಿದ 11 ಪಂದ್ಯಗಳು ದೆಹಲಿಯ ಅರುಣ್​ ಜೇಟ್ಲಿ ಮೈದಾನದಲ್ಲಿ ನಡೆಯಲಿವೆ.

ಇನ್ನೂ, ಕಳೆದ ಪಂದ್ಯದಲ್ಲಿ ಗಾಯಗೊಂಡಿದ್ದ ಯುಪಿ ವಾರಿಯರ್ಸ್​ ತಂಡದ ವೃಂದಾ ದಿನೇಶ್ ಗಾಯಗೊಂಡಿದ್ದು, ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಅವರ ಬದಲಿಗೆ ಉಮಾ ಚೆಟ್ರಿ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಕನ್ನಡತಿ ಶ್ರೇಯಾಂಕ್​ ಪಾಟೀಲ್​ ಕೂಡ ಗಾಯಗೊಂಡಿದ್ದು, ಅವರ ಬದಲಿಗೆ ಹಿರಿಯ ಆಟಗಾರ್ತಿ ಏಕ್ತಾ ಬಿಶ್ತ್‌ಗೆ ಅವಕಾಶ ನೀಡಲಾಗಿತ್ತು.

ಇದನ್ನೂ ಓದಿ: ಮಹಿಳಾ ಐಪಿಎಲ್​: ಗುಜರಾತ್​ಗೆ ಸತತ 4ನೇ ಸೋಲು, ಗೆದ್ದು ಅಗ್ರಸ್ಥಾನಕ್ಕೇರಿದ ಡೆಲ್ಲಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.