ETV Bharat / international

ಅಬುಧಾಬಿ ಹಿಂದೂ ದೇಗುಲ ಜಾಗತಿಕ ಏಕತೆ, ಕೋಮು ಸೌಹಾರ್ದತೆಯ ಪ್ರತೀಕ: ಪ್ರಧಾನಿ ಮೋದಿ

author img

By ETV Bharat Karnataka Team

Published : Feb 15, 2024, 7:10 AM IST

ಪ್ರಧಾನಿ ಮೋದಿ
ಪ್ರಧಾನಿ ಮೋದಿ

ಯುಎಇಯ ಅಬುಧಾಬಿಯಲ್ಲಿ ನಿರ್ಮಾಣವಾಗಿರುವ ಹಿಂದೂ ದೇವಾಲಯವನ್ನು ಉದ್ಘಾಟಿಸಿದ ಪ್ರಧಾನಿ ಮೋದಿ, ಮಂದಿರದ ಆವರಣದಲ್ಲಿನ ಕಲ್ಲಿನ ಮೇಲೆ 'ವಸುಧೈವ ಕುಟುಂಬಕಂ' ಎಂಬ ಸಂದೇಶವನ್ನು ಹುಳಿ, ಸುತ್ತಿಗೆಯಿಂದ ಕೆತ್ತಿದರು.

ಅಬುಧಾಬಿ (ಯುಎಇ): ಅಬುಧಾಬಿಯ ಸ್ವಾಮಿ ನಾರಾಯಣ ದೇಗುಲವು ವಿಶ್ವ ಮಾನವತೆ, ಜಾಗತಿಕ ಕೋಮು ಸೌಹಾರ್ದತೆಯ ಪ್ರತೀಕ. ಯುಎಇ ಸರ್ಕಾರ ಮಾನವ ಇತಿಹಾಸದಲ್ಲಿ 'ಸುವರ್ಣ ಇತಿಹಾಸ'ವನ್ನು ಬರೆದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಈಚೆಗೆ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಅಪಾರ ಸಂತಸ ತಂದಿತ್ತು. ಅದೀಗ ಅಬುಧಾಬಿಯಲ್ಲಿ ದುಪ್ಪಟ್ಟಾಗಿದೆ. ಅರಬ್​ ಸಂಯುಕ್ತ ಸಂಸ್ಥಾನ (ಯುಎಇ)ದಲ್ಲಿ ಹಿಂದು ದೇಗುಲದ ಉದ್ಘಾಟನೆಗೆ ಸಾಕ್ಷಿಯಾದ ನಾನು ವಿಶೇಷ ಅನುಭೂತಿಗೆ ಒಳಗಾಗಿದ್ದೇನೆ ಎಂದು ಹೇಳಿದರು.

ವಿಶ್ವದ ಮೂರನೇ ಅತಿದೊಡ್ಡ ಹಿಂದು ದೇಗುಲ ಉದ್ಘಾಟನೆಯ ಬಳಿಕ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ಅಬುಧಾಬಿಯಲ್ಲಿನ ಹಿಂದೂ ದೇಗುಲ ಮಾನವ ಇತಿಹಾಸದ ಅದ್ಭುತವಾಗಿದೆ. ಜಗತ್ತನ್ನೇ ಸಂಧಿಸುವ ಸಂಕೇತವಾಗಿದೆ. ಮಾನವೀಯತೆಯ ಉತ್ತಮ ಭವಿಷ್ಯದ ದಿನಗಳನ್ನು ಇದು ಸ್ವಾಗತಿಸುತ್ತದೆ ಎಂದು ನಾನು ಭಾವಿಸುತ್ತೇನೆ ಎಂದರು.

ಬಾಪ್ಸ್​ ಮಂದಿರವು ವಿಶ್ವದ ಕೋಮು ಸೌಹಾರ್ದತೆ ಮತ್ತು ಜಾಗತಿಕ ಏಕತೆಯ ಸಂಕೇತವಾಗಲಿದೆ. ಯುನೈಟೆಡ್ ಅರಬ್ ಎಮಿರೇಟ್ಸ್ ಭೂಮಿಯಲ್ಲಿ ಹಿಂದು ದೇಗುಲ ನಿರ್ಮಾಣವಾಗಿದ್ದು, ಮಾನವ ಇತಿಹಾಸದ ಭವ್ಯ ಅಧ್ಯಾಯಕ್ಕೆ ಮುನ್ನುಡಿ ಬರೆದಿದೆ. ಇಂದು ಭವ್ಯವಾದ ದೇವಾಲಯ ಉದ್ಘಾಟನೆಯಾಗುವ ಮೂಲಕ ವರ್ಷಗಳ ಕಠಿಣ ಪರಿಶ್ರಮ ಸಾರ್ಥಕ ರೂಪ ಪಡೆದಿದೆ. ಇದು ಪೂಜಾ ಸ್ಥಳವಾಗದೇ ಕೋಮು ಸೌಹಾರ್ದತೆಯ ಧರ್ಮ ಕೇಂದ್ರವಾಗಲಿದೆ ಎಂದು ಭಾವಿಸುವೆ ಎಂದರು.

ರಾಮ-ಸ್ವಾಮಿ ಡಬಲ್​ ಖುಷ್​: ಸಾವಿರಾರು ವರ್ಷಗಳ ಕನಸು 'ಅಯೋಧ್ಯೆ ರಾಮಮಂದಿರ' ಉದ್ಘಾಟನೆಯಿಂದ ನನಸಾಗಿದೆ. ಅದರ ಸಂತಸದ ಹೊನಲು ಇನ್ನೂ ಮಿನುಗುತ್ತಿದೆ. ಈ ವೇಳೆಯೇ ಅಬುಧಾಬಿಯಲ್ಲಿ ಸ್ವಾಮಿ ನಾರಾಯಣ ಮಂದಿರ ಉದ್ಘಾಟನೆಯಾಗಿರುವುದು ಸಂತಸವನ್ನು ಮತ್ತಷ್ಟು ಹೆಚ್ಚಿಸಿದೆ. ಈ ಎರಡೂ ದೇಗುಲಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಿರುವುದು ನನ್ನ ಅದೃಷ್ಟವಾಗಿದೆ ಎಂದು ಪ್ರಧಾನಿ ಹೇಳಿದರು.

ನಾನು ತಾಯಿ ಭಾರತಿ ಪೂಜಾರಿ: ಭವ್ಯ ರಾಮಮಂದಿರ ಉದ್ಘಾಟನೆಯ ಬಳಿಕ ಸ್ನೇಹಿತರಾದ ಬ್ರಹ್ಮವಿಹಾರಿ ಸ್ವಾಮಿ ಅವರು ನನ್ನನ್ನು ಅತಿದೊಡ್ಡ ಪುರೋಹಿತ ಎಂದು ಕರೆದಿದ್ದಾರೆ. ಅಂತಹ ಯೋಗ್ಯತೆ ನನಗೆ ಇದೆಯೋ, ಇಲ್ಲವೋ ಗೊತ್ತಿಲ್ಲ. ಆದರೆ, ನಾನು ನಿಜಕ್ಕೂ ತಾಯಿ ಭಾರತಿಯ ಆರಾಧಕ ಎಂದು ಮೋದಿ ಹೇಳಿದರು.

ಇಲ್ಲಿಯವರೆಗೆ ಬುರ್ಜ್ ಖಲೀಫಾ, ಫ್ಯೂಚರ್ ಮ್ಯೂಸಿಯಂ, ಶೇಖ್ ಜಾಯೆದ್ ಮಸೀದಿ ಮತ್ತು ಹೈಟೆಕ್ ಕಟ್ಟಡಗಳಿಗೆ ಹೆಸರುವಾಸಿಯಾಗಿದ್ದ ಯುಎಇಯಲ್ಲಿ ಮತ್ತೊಂದು ಸಾಂಸ್ಕೃತಿಕ ಅಧ್ಯಾಯ ಆರಂಭವಾಗಿದೆ. ಇದು ಭಾರತ ಮತ್ತು ಯುಎಇಯ ಸಂಬಂಧವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ. ಇಲ್ಲಿನ ಸರ್ಕಾರ ಅನಿವಾಸಿ ಭಾರತೀಯರು ಮಾತ್ರವಲ್ಲ, ಭಾರತದ 140 ಕೋಟಿ ಜನರ ಹೃದಯ ಗೆದ್ದಿದೆ ಎಂದು ಬಣ್ಣಿಸಿದರು.

ಇದನ್ನೂ ಓದಿ: ಅಬುಧಾಬಿಯಲ್ಲಿ ಮೊದಲ ಶಿಲಾಮಯ ಹಿಂದು ದೇವಾಲಯ ಉದ್ಘಾಟಿಸಿದ ಪ್ರಧಾನಿ ಮೋದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.