ETV Bharat / entertainment

ಸೆಟ್ಟೇರಿತು 'ರಾಮಾಯಣ': ಯಶ್, ರಣ್​ಬೀರ್, ಸಾಯಿಪಲ್ಲವಿ ಸಿನಿಮಾ ಮೇಲೆ ಭಾರಿ ನಿರೀಕ್ಷೆ - Ramayana

author img

By ETV Bharat Karnataka Team

Published : Apr 3, 2024, 12:48 PM IST

Ramayana
ರಾಮಾಯಣ

ಬಹುನಿರೀಕ್ಷಿತ 'ರಾಮಾಯಣ' ಚಿತ್ರೀಕರಣ ನಿನ್ನೆ ಪ್ರಾರಂಭವಾಗಿದೆ.

'ರಾಮಾಯಣ' ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ. ಅಧಿಕೃತವಾಗಿ ಘೋಷಣೆಯಾಗದಿದ್ದರೂ, ಸಿನಿಮಾ ಮೂಡಿಬರುವುದು ಬಹುತೇಕ ಖಚಿತವಾಗಿದೆ. ಶೀಘ್ರದಲ್ಲೇ ಸಿನಿಮಾ ಘೋಷಿಸುವ ತಯಾರಿಯಲ್ಲಿ ಚಿತ್ರತಂಡವಿದೆ ಎಂದು ಹೇಳಲಾಗಿದೆ. ಬಹುನಿರೀಕ್ಷೆಗಳನ್ನು ಹುಟ್ಟುಹಾಕಿರುವ ಹಿಂದೂ ಮಹಾಕಾವ್ಯ 'ರಾಮಾಯಣ' ಆಧಾರಿತ ಚಿತ್ರ ಅಂತಿಮವಾಗಿ ಸೆಟ್ಟೇರಿದೆ.

ಭಗವಾನ್​​​ ಶ್ರೀರಾಮನಾಗಿ ಬಾಲಿವುಡ್​ ಸೂಪರ್​​ ಸ್ಟಾರ್ ರಣ್​​ಬೀರ್ ಕಪೂರ್, ರಾವಣನಾಗಿ ಸ್ಯಾಂಡಲ್​ವುಡ್​ನ ರಾಕಿಂಗ್ ಸ್ಟಾರ್ ಯಶ್ ಹಾಗೂ ಸೀತಾದೇವಿಯಾಗಿ ದಕ್ಷಿಣದ ಟಾಪ್​​ ಹೀರೋಯಿನ್ ಸಾಯಿ ಪಲ್ಲವಿ ಕಾಣಿಸಿಕೊಳ್ಳಲಿದ್ದಾರೆ. ನಿರ್ದೇಶಕ ನಿತೇಶ್ ತಿವಾರಿ ಅವರ ಬಿಗ್​ ಪ್ರಾಜೆಕ್ಟ್ ಅಂತಿಮವಾಗಿ ಸೆಟ್ಟೇರಿದೆ.

ಬಹುತಾರಾಗಣದಲ್ಲಿ ನಿರ್ಮಾಣ ಆಗಲಿರುವ ಈ ಚಿತ್ರ ಸುದೀರ್ಘ ಚರ್ಚೆಗಳ ಬಳಿಕ ಮುಂಬೈನ ಸ್ಟುಡಿಯೋದಲ್ಲಿ ಚಿತ್ರೀಕರಣ ಆರಂಭಿಸಿದೆ. ಕೆಲ ದಿನಗಳ ಕಾಲ ಗುಂಪೊಂದರ ಹಿನ್ನೆಲೆಯಲ್ಲಿ ಚಿತ್ರೀಕರಣ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಈ ಸಿನಿಮಾದ ಉದ್ಘಾಟನಾ ಸಮಾರಂಭಕ್ಕೆ ಯಾವೊಬ್ಬ ತಾರೆಯರೂ ಕೂಡ ಹಾಜರಾಗಿರಲಿಲ್ಲ ಎಂದು ಹೇಳಲಾಗಿದೆ.

ಚಿತ್ರದ ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರು ತಮ್ಮ ಹುಟ್ಟುಹಬ್ಬದ ದಿನದಂದೇ ಈ ಬಹುನಿರೀಕ್ಷಿತ ಚಿತ್ರವನ್ನು ಶುರು ಮಾಡಬೇಕೆಂದುಕೊಂಡಿದ್ದರು. ಹಾಗಾಗಿ ನಿನ್ನೆ ಚಿತ್ರ ಸೆಟ್ಟೇರಿದೆ. ಕೆಲ ಜೂನಿಯರ್ ಕಲಾವಿದರ ಶೂಟಿಂಗ್ ನಡೆದಿದೆ. ಚಿಕ್ಕ ಚಿಕ್ಕ ದೃಶ್ಯಗಳನ್ನಷ್ಟೇ ಚಿತ್ರೀಕರಿಸಲಾಗಿದೆ. ಯಶ್ ವಿಚಾರ ಗಮನಿಸಿದ್ರೆ, ಹಲವು ತಿಂಗಳುಗಳ ಚರ್ಚೆಯ ಬಳಿಕ ಈ ಚಿತ್ರಕ್ಕೆ ಒಪ್ಪಿಗೆ ನೀಡಿದ್ದಾರಂತೆ. ಆದ್ರೆ ಈ ಬಗ್ಗೆ ಇನ್ನೂ ಸಂಪೂರ್ಣ ಸ್ಪಷ್ಟತೆ ಸಿಕ್ಕಿಲ್ಲ. ರಾವಣನ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬುದು ಗುಸುಗುಸು. ಆದರೆ ಮೊದಲ ಭಾಗದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಎರಡನೇ ಭಾಗದಲ್ಲಿ ಮಾತ್ರ ಕಾಣಿಸಿಕೊಳ್ಳಲಿದ್ದಾರೆ. ಯಶ್ ತಮ್ಮ ಟಾಕ್ಸಿಕ್ ಸಿನಿಮಾದ ಶೂಟಿಂಗ್ ಮುಗಿಸಿದ ನಂತರ ರಾಮಾಯಣ ತಂಡ ಸೇರಲಿದ್ದಾರೆ. ಈ ಚಿತ್ರವನ್ನು ಮೂರು ಭಾಗಗಳಲ್ಲಿ ನಿರ್ಮಿಸಲಾಗುತ್ತಿದೆ ಎಂದು ಚಿತ್ರಕ್ಕೆ ಸಂಬಂಧಿಸಿದವರು ತಿಳಿಸಿದ್ದಾರೆ.

ಇದನ್ನೂ ಓದಿ: ಮಂಗಳವಾರ ಸೆಟ್ಟೇರಲಿದೆ ರಣ್​ಬೀರ್, ಸಾಯಿಪಲ್ಲವಿ, ಯಶ್ ನಟನೆಯ 'ರಾಮಾಯಣ' - Ramayana

ಇನ್ನು ನಾಯಕ ನಟ ರಣ್​​ಬೀರ್ ಕಪೂರ್ ಇದೇ ಏಪ್ರಿಲ್ ಮಧ್ಯದಲ್ಲಿ ರಾಮಾಯಣ ಸೆಟ್‌ಗೆ ಎಂಟ್ರಿ ಕೊಡಲಿದ್ದಾರೆ. ಸಾಯಿ ಪಲ್ಲವಿ, ಸನ್ನಿ ಡಿಯೋಲ್, ಅರುಣ್ ಗೋವಿಲ್ ಮತ್ತು ಯಶ್ ತಮ್ಮ ಪಾತ್ರಗಳ ಚಿತ್ರೀಕರಣದ ಸಮಯದಲ್ಲಿ ಬಂದು ಸೇರಿಕೊಳ್ಳುತ್ತಾರೆ. ಮೊದಲ ಭಾಗದಲ್ಲಿ ರಾಮನ ಬಾಲ್ಯ, ಸೀತೆಯ ಹುಟ್ಟು ಮತ್ತು ಸೀತೆಯ ಅಪಹರಣವನ್ನು ತೋರಿಸಲಾಗುತ್ತದೆ. ಕೊನೆಯಲ್ಲಿ ರಾವಣನ ಎಂಟ್ರಿಯನ್ನು ತೋರಿಸುವ ಸಾಧ್ಯತೆ ಇದೆ ಎಂದು ಚಿತ್ರಕ್ಕೆ ಸಂಬಂಧಿಸಿದ ಮತ್ತೊಂದು ಮೂಲ ಮಾಹಿತಿ ಹಂಚಿಕೊಂಡಿದೆ.

ಇದನ್ನೂ ಓದಿ: 'ರಾಮಾಯಣ' ಚಿತ್ರಕ್ಕಾಗಿ ಭರ್ಜರಿ ಸಿದ್ಧತೆ: ರಣ್​​ಬೀರ್ ಕಪೂರ್ ಹೆಡ್​ಸ್ಟ್ಯಾಂಡ್ ಫೋಟೋ ವೈರಲ್ - Ranbir Kapoor Headstand

ರಣ್​​ಬೀರ್ ಕಪೂರ್ ರಾಮನ ಪಾತ್ರಕ್ಕಾಗಿ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಪಾತ್ರಕ್ಕೆ ತಕ್ಕಂತೆ ತಮ್ಮ ಜೀವನಶೈಲಿಯನ್ನೂ ಬದಲಾಯಿಸಿಕೊಳ್ಳುತ್ತಿದ್ದಾರಂತೆ. ಮೊದಲ ಭಾಗವನ್ನು 2025ರಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸುತ್ತಿದೆ. ರಾಮನವಮಿಯಂದು ಅಂದರೆ ಏಪ್ರಿಲ್ 17ರಂದು ಚಿತ್ರವನ್ನು ಘೋಷಿಸುವ, ಹೆಚ್ಚಿನ ವಿವರಗಳನ್ನು ಪ್ರಕಟಿಸುವ ಸಾಧ್ಯತೆಯಿದೆ ಎಂದು ಆಪ್ತ ಮೂಲಗಳು ತಿಳಿಸಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.