ETV Bharat / bharat

'ನೀವು ಪ್ರಧಾನಿಯಾಗುವುದನ್ನು ಕಾಂಗ್ರೆಸ್​ ಸಹಿಸಿಕೊಳ್ಳುವುದೇ': ಖರ್ಗೆಗೆ ದೇವೇಗೌಡರ ಪ್ರಶ್ನೆ

author img

By PTI

Published : Feb 8, 2024, 6:05 PM IST

Updated : Feb 8, 2024, 9:09 PM IST

will-congress-tolerate-you-becoming-pm-devegowda-asks-kharge
ಖರ್ಗೆ ಅವರೇ ನೀವು ದೇಶದ ಪ್ರಧಾನಿಯಾದರೆ ಕಾಂಗ್ರೆಸ್​ ಸಹಿಸಿಕೊಳ್ಳುತ್ತದೆಯೇ?: ರಾಜ್ಯಸಭೆಯಲ್ಲಿ ದೇವೇಗೌಡರ ಪ್ರಶ್ನೆ

ಖರ್ಗೆಯವರೇ ನೀವು ದೇಶದ ಪ್ರಧಾನಿಯಾಗಲು ಬಯಸುತ್ತೀರಾ?, ಅದನ್ನು ಕಾಂಗ್ರೆಸ್​ ಸಹಿಸಿಕೊಳ್ಳುವುದೇ ಎಂದು ರಾಜ್ಯಸಭೆಯಲ್ಲಿ ಇಂದು ಮಾಜಿ ಪ್ರಧಾನಿ ಹೆಚ್​​.ಡಿ.ದೇವೇಗೌಡ ಪ್ರಶ್ನಿಸಿದರು.

ಖರ್ಗೆಗೆ ದೇವೇಗೌಡರ ಪ್ರಶ್ನೆ

ನವದೆಹಲಿ: ಕಾಂಗ್ರೆಸ್ಸಿನ ಹೈಕಮಾಂಡ್​ ಸಂಸ್ಕೃತಿ ಬಗ್ಗೆ ತೀಕ್ಷ್ಣವಾಗಿ ಕುಟುಕಿರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಪಕ್ಷದ ರಾಷ್ಟ್ರೀಯ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿಯಾಗುವುದನ್ನು ಪಕ್ಷ ಸಹಿಸಿಕೊಳ್ಳುತ್ತದೆಯೇ ಎಂದು ಪ್ರಶ್ನಿಸಿದ್ದಾರೆ. ತಮ್ಮ ಜೀವನದ ಕೊನೆಗಾಲದಲ್ಲಿ ಗೌಡರು ರಾಜಕೀಯ ನಡೆಯನ್ನೇ ಬದಲಿಸಿದ್ದಾರೆ ಎಂಬ ಖರ್ಗೆ ಟೀಕೆಗೆ, ಅವರು ಈ ರೀತಿ ಮರುಬಾಣ ಬಿಟ್ಟರು.

ರಾಜ್ಯಸಭೆಯಿಂದ ನಿವೃತ್ತಿ ಹೊಂದುತ್ತಿರುವ ಸದಸ್ಯರನ್ನು ಉದ್ದೇಶಿಸಿ ಇಂದು ಸದನದಲ್ಲಿ ಮಾತನಾಡಿದ ದೇವೇಗೌಡರು, ''ಜೆಡಿಎಸ್​ ಪಕ್ಷ ಉಳಿಸುವ ಸಲುವಾಗಿ ಬಿಜೆಪಿಯನ್ನು ಬೆಂಬಲಿಸಿದ್ದೇವೆ. ಯಾಕೆಂದರೆ, ಕೆಲವು ಕಾಂಗ್ರೆಸ್ಸಿಗರು ನಮ್ಮ ಪಕ್ಷವನ್ನು ಮುಗಿಸಲು ಬಯಸಿದ್ದರು. ನಾನು ಖರ್ಗೆಯವರ ನಿಷ್ಠೆ ಮತ್ತು ರಾಜಕೀಯ ಜೀವನದಲ್ಲಿ ಅವರು ನನಗೆ ಮಾಡಿದ ಸಹಾಯ ಗೊತ್ತಿದೆ. ಆದರೆ, ಕಾಂಗ್ರೆಸ್​ ಮತ್ತು ಜೆಡಿಎಸ್​ ಸಮ್ಮಿಶ್ರ ಸರ್ಕಾರದಲ್ಲಿ ಕೇವಲ 13 ತಿಂಗಳಿಗೆ ಕುಮಾರಸ್ವಾಮಿ ಅವರನ್ನು ತೆಗೆದು ಹಾಕಿದವರಾರು?. ಖರ್ಗೆ ಅವರಲ್ಲ, ಕೆಲ ಕಾಂಗ್ರೆಸ್​ ನಾಯಕರು'' ಎಂದು ಕಿಡಿಕಾರಿದರು.

''ನಾನು ಮತ್ತೆ ಈ ಸದನಕ್ಕೆ (ರಾಜ್ಯಸಭೆ) ಬರುವ ಯೋಚನೆ ಮಾಡಿರಲಿಲ್ಲ. ಆದರೆ, ಕರ್ನಾಟಕದಿಂದ ಆಯ್ಕೆ ಮಾಡುವಾಗ ಕಾಂಗ್ರೆಸ್ಸಿನವರು​ ನಾನು ಎರಡನೇ ಅಭ್ಯರ್ಥಿಯಾಗಬೇಕೆಂದು ಕೇಳಿಕೊಂಡಿದ್ದರು. ಅದೇ ಕಾಂಗ್ರೆಸ್ಸಿನ ಕೆಲವರು ನನ್ನನ್ನು ಸೋಲಿಸಲು ಯೋಜಿಸಿದ್ದರು. ಆಗ ಖರ್ಗೆ ಅವರು ದೇವೇಗೌಡರು ಸೋತರೆ, ತಮ್ಮ ನಾಮಪತ್ರ ವಾಪಸ್​ ಪಡೆಯುವುದಾಗಿ ಹೇಳಿದ್ದರು. ಖರ್ಗೆ ಅವರ ಬಗ್ಗೆ ನನಗೆ ಹೆಮ್ಮೆ ಇದೆ'' ಎಂದೂ ಜೆಡಿಎಸ್​ ವರಿಷ್ಠರು ಬಹಿರಂಗ ಪಡಿಸಿದರು.

ಮುಂದುವರೆದು ಮಾತನಾಡಿ, ''ಖರ್ಗೆಯವರೇ ನೀವು ದೇಶದ ಪ್ರಧಾನಿ ಆಗಲು ಬಯಸುತ್ತೀರಾ?, ಅದನ್ನು ಕಾಂಗ್ರೆಸ್​ ಸಹಿಸಿಕೊಳ್ಳುತ್ತದೆಯೇ?. ನನಗೆ ದಯವಿಟ್ಟು ಹೇಳಿ. ನನಗೆ ಕಾಂಗ್ರೆಸ್​ ಬಗ್ಗೆ ಗೊತ್ತಿದೆ'' ಎಂದ ದೇವೇಗೌಡರು, ''ಖರ್ಗೆ 35ರಿಂದ 40 ವರ್ಷಗಳ ಕಾಲ ಶುದ್ಧವಾಗಿ ಕೆಲಸ ಮಾಡಿದ್ದಾರೆ. ಆದರೆ, ಕೆಲವರು ನೀವು (ಖರ್ಗೆ) ಪ್ರಧಾನಿ ಮತ್ತು ನಾಯಕರಾಗಬೇಕೆಂದು ಪ್ರಸ್ತಾಪಿಸಿದಾಗ ಏನಾಯಿತು?. ಅದನ್ನು ಅವರ (ಖರ್ಗೆ) ಸ್ವಂತ ಸ್ನೇಹಿತರೇ ವಿರೋಧಿಸಿದರು'' ಎಂದು ವ್ಯಂಗ್ಯವಾಡಿದರು.

ಇದೇ ವೇಳೆ, ''ವೈಯಕ್ತಿಕ ಲಾಭಕ್ಕಾಗಿ ನಾನು ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಜಿಗಿದಿಲ್ಲ. ನನ್ನ ಪಕ್ಷವನ್ನು ಮುಗಿಸಲು ಪ್ರಯತ್ನಿಸುವ ಕೆಲವು ಕಾಂಗ್ರೆಸ್ಸಿಗರಿಂದ ರಕ್ಷಿಸಿಕೊಳ್ಳಲು ಬಯಸಿದ್ದೇನೆ. ಹೀಗಾಗಿ ಬಿಜೆಪಿಯನ್ನು ಬೆಂಬಲಿಸುವ ನಿರ್ಧಾರ ತೆಗೆದುಕೊಂಡಿದ್ದೇನೆ. ಅದನ್ನು ಬಿಟ್ಟು ಯಾವುದೇ ವೈಯಕ್ತಿಕ ಲಾಭವಿಲ್ಲ'' ಎಂದು ಸ್ಪಷ್ಪಪಡಿಸಿದರು. ಅಲ್ಲದೇ, ''ನಾನು ಈಗಿನ ಪ್ರಧಾನಿ (ಮೋದಿ)ಯಿಂದ ಪ್ರೀತಿ ಮತ್ತು ಮಮತೆಯನ್ನು ಮಾತ್ರ ಗಳಿಸಿದ್ದೇನೆ, ಮತ್ತೇನಿಲ್ಲ'' ಎಂದರು.

''ನನ್ನ ಮಗನನ್ನು (ಕುಮಾರಸ್ವಾಮಿ) ಕಾಂಗ್ರೆಸ್​ ತೆಗೆದಾಗ, ಅದೇ ದಿನವೇ ನಾನು ಬಿಜೆಪಿಯೊಂದಿಗೆ ಹೋಗಲು ಹೇಳಿದ್ದೆ. ಅಲ್ಲದೇ, ಅವತ್ತೇ ಕಾಂಗ್ರೆಸ್​ ನಿನ್ನನ್ನು ಬೆಳೆಯಲು ಬಿಡಲ್ಲ. ಬಿಜೆಪಿ ಜೊತೆ ಹೋಗು ಎಂದು ತಿಳಿಸಿದ್ದೆ'' ಎಂದು ದೇವೇಗೌಡರು ವಿವರಿಸಿದರು. ಅಷ್ಟೇ ಅಲ್ಲ, ''ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕೂಡ ಕಾಂಗ್ರೆಸ್‌ನ ಕೆಲ ಉನ್ನತ ನಾಯಕರು ಮಾಡಿದ ತಪ್ಪಿಗೆ ನೊಂದಿದ್ದರು. ಹತ್ತು ವರ್ಷಗಳ ಕಾಲ ಈ ದೇಶವನ್ನು ಆಳಿದ, ಸಾಲದ ಸುಳಿಯಿಂದ ದೇಶವನ್ನು ರಕ್ಷಿಸಿದ ಮತ್ತು ಪ್ರಾಮಾಣಿಕವಾಗಿ ದೇಶ ಸೇವೆ ಮಾಡಿದ ವ್ಯಕ್ತಿ ಅವರು. ಆದರೆ, ಲೋಕಸಭೆಯಲ್ಲಿ 2ಜಿ ತರಂಗಾಂತರದ ಚರ್ಚೆಯ ಸಂದರ್ಭದಲ್ಲಿ ತಮ್ಮ ಅಳಲು ತೋಡಿಕೊಂಡಿದ್ದರು'' ಎಂದು ನೆನಪಿಸಿದರು.

ಇದನ್ನೂ ಓದಿ: 'ಗಾಲಿ ಕುರ್ಚಿಯಲ್ಲಿ ಬಂದು ಮತ ಚಲಾಯಿಸಿದ್ದರು': ಮನಮೋಹನ್‌ ಸಿಂಗ್ ಹೊಗಳಿದ ಮೋದಿ

Last Updated :Feb 8, 2024, 9:09 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.