ETV Bharat / bharat

ಪಾಕಿಸ್ತಾನವು ಕಾಂಗ್ರೆಸ್​​ ಅಧಿಕಾರಕ್ಕೆ ಬರಬೇಕೆಂದು ಕಾಯುತ್ತಿದೆ: ಪಾಕ್ ನಾಯಕನ​ ಹೇಳಿಕೆ ಉಲ್ಲೇಖಿಸಿ ರಾಹುಲ್ ವಿರುದ್ಧ ಮೋದಿ ವಾಗ್ದಾಳಿ​​​ - Prime Minister Narendra Modi

author img

By ETV Bharat Karnataka Team

Published : May 3, 2024, 11:21 AM IST

Congress  BJP  Pakistani minister Fawad Chaudhary  Gujarat
ಪ್ರಧಾನಿ ನರೇಂದ್ರ ಮೋದಿ (Etv Bharat)

''ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನ ಪಾಕಿಸ್ತಾನದ ಅವಕಾಶವಾದಿಗಳು ಸಂತಷಗೊಳ್ಳಲಿದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್​ ವಿರುದ್ಧ ಕಿಡಿಕಾರಿದ್ದಾರೆ.

ಜುನಾಗಢ (ಗುಜರಾತ್): ಪಾಕಿಸ್ತಾನದ ನಾಯಕರೊಬ್ಬರು ರಾಹುಲ್​​ ಗಾಂಧಿ ಬಗ್ಗೆ ಹೊಗಳಿ ಮಾತನಾಡಿದ ವಿಚಾರವನ್ನು ಪ್ರಸ್ತಾಪಿಸಿರುವ ಪ್ರಧಾನಿ ಮೋದಿ, ಕಾಂಗ್ರೆಸ್​ ವಿರುದ್ಧ ಗುರುವಾರ ಗುಜಾರತ್​ನಲ್ಲಿ ನಡೆದ ಸಭೆಯಲ್ಲಿ ವಾಗ್ದಾಳಿ ನಡೆಸಿದ್ದಾರೆ.

''ಈ ಹಿಂದೆ ಗಡಿಯಾಚೆ ಗುಂಡಿನ ದಾಳಿ ನಡೆಯುತ್ತಿತ್ತು. ಆದರೆ, ಪ್ರತೀಕಾರದ ಗುಂಡಿನ ದಾಳಿಗೆ ನಮ್ಮ ಸೈನಿಕರು ದೆಹಲಿ ಆದೇಶಕ್ಕಾಗಿ ಕಾಯಬೇಕಿತ್ತು. ಸೈನಿಕರು ಕಾರ್ಯಾಚರಣೆಯಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದರು. ಆದರೂ ಕೂಡ ದೆಹಲಿ ಕಟ್ಟುನಿಟ್ಟಿನ ಕ್ರಮಕ್ಕೆ ಅನುಮತಿ ನೀಡಲಿಲ್ಲ. ಕಾಂಗ್ರೆಸ್ ಪಾಕಿಸ್ತಾನಿ ಅವಕಾಶವಾದಿಗಳನ್ನು ನೋಡುತ್ತಿತ್ತು. ಅವರ ಸೂಚನೆಗಳ ಆಧಾರದ ಮೇಲೆ ದೇಶದ ಕುರಿತಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪಾಕಿಸ್ತಾನದ ಅವಕಾಶವಾದಿಗಳ ಜೀವನದಲ್ಲಿ ಮತ್ತೊಮ್ಮೆ ಸಂತೋಷ ಉಂಟುಮಾಡುತ್ತದೆ ಎಂದು ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದರು.

ಪಾಕಿಸ್ತಾನದ ಮಾಜಿ ಸಚಿವ ಫವಾದ್ ಚೌಧರಿ ಅವರು, ವಯನಾಡ್ ಸಂಸದರನ್ನು ಎಕ್ಸ್ ಪೋಸ್ಟ್‌ನಲ್ಲಿ ಕೆಲವು ದಿನಗಳ ಹಿಂದೆ ಹೊಗಳಿದ್ದರು. ಜೊತೆಗೆ ವಯನಾಡ್ ಸಂಸದರ ಭಾಷಣದ ವಿಡಿಯೋವನ್ನು ಟ್ಯಾಗ್ ಮಾಡಿದ್ದ ಫವಾದ್ ಚೌಧರಿ, "ರಾಹುಲ್ ಬೆಂಕಿ" ಎಂದು ಬರೆದುಕೊಂಡಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಬಿಜೆಪಿಯನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್ ನಾಯಕನ ಭಾಷಣವನ್ನು ಫವಾದ್ ಹೊಗಳಿದ ನಂತರ ಕಾಂಗ್ರೆಸ್-ಪಾಕಿಸ್ತಾನ ಸಂಬಂಧಗಳು ಬಹಿರಂಗಗೊಂಡಿವೆ. ಆದರೆ, ನನ್ನ ಹೃದಯದಲ್ಲಿ ನನ್ನ ಭಾರತ, ನನ್ನ ಕುಟುಂಬ ಎಂಬ ಒಂದೇ ಭಾವನೆ ಇದೆ'' ಎಂದು ಮೋದಿ ಹೇಳಿದ್ದಾರೆ.

''ಕಾಂಗ್ರೆಸ್ ಪಕ್ಷವು ಹತಾಶೆಗೊಂಡಿದ್ದು, ಕೃತಕ ಬುದ್ಧಿಮತ್ತೆಯ ಮೂಲಕ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಅವರು ತಮ್ಮೆಲ್ಲ ಶಕ್ತಿ ಬಳಸಿ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಕೆಲಸ ಮಾಡುತ್ತಿಲ್ಲ. ಆದ್ದರಿಂದ ಅವರು ಕೃತಕ ಬುದ್ಧಿಮತ್ತೆಯ ಮೂಲಕ ಸುಳ್ಳುಗಳನ್ನು ಹರಡಲು ಮೋದಿಯ ಮುಖವನ್ನು ಬಳಸುತ್ತಿದ್ದಾರೆ. ಕಾಂಗ್ರೆಸ್ ಹಿಡನ್ ಅಜೆಂಡಾ ಹೊಂದಿದೆ'' ಎಂದು ಆರೋಪಿಸಿದರು.

''ಕಾಂಗ್ರೆಸ್​ ಪಕ್ಷವು ಸಂವಿಧಾನವನ್ನು ತಲೆಯ ಮೇಲೆ ಇಟ್ಟುಕೊಂಡು ಪಂಚಾಯಿತಿಯಿಂದ ಸಂಸತ್ತಿನವರೆಗೆ ದೇಶವನ್ನು ಆಳ್ವಿಕೆ ಮಾಡಿದೆ. ಆದರೆ, ಅವರು ಎಂದಿಗೂ ದೇಶದ ಸಂವಿಧಾನವನ್ನು ಜಾರಿಗೆ ತರಲು ಸಾಧ್ಯವಾಗಲಿಲ್ಲ'' ಎಂದು ಕಿಡಿಕಾರಿದರು. ಮೋದಿ ಅಧಿಕಾರಕ್ಕೆ ಬರುವ ಮೊದಲು, ದೇಶವು ಎರಡು ಸಂವಿಧಾನಗಳನ್ನು ಹೊಂದಿತ್ತು. ದೇಶವು ಒಂದರ ಮೂಲಕ ಕಾರ್ಯನಿರ್ವಹಿಸುತ್ತಿತ್ತು. ಕಾಶ್ಮೀರವು ಇನ್ನೊಂದರ ಮೂಲಕ ಕಾರ್ಯನಿರ್ವಹಿಸುತ್ತಿತ್ತು. ಇದು ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಮಾಡಿದ ಅವಮಾನವಲ್ಲವೇ? ಸಂವಿಧಾನಕ್ಕೆ ಅಪಮಾನ?. ಸರ್ದಾರ್ ಪಟೇಲ್ ಇದ್ದಿದ್ದರೆ ಜೆ-ಕೆಯಲ್ಲಿಯೂ ದೇಶದ ಸಂವಿಧಾನ ಜಾರಿಯಾಗುತ್ತಿತ್ತು. ಈ ಮಣ್ಣಿನ ಮಗ, ಈ ಸೇವಕ ಅಪೂರ್ಣವಾಗಿ ಉಳಿದಿದ್ದನ್ನು ಪೂರ್ಣಗೊಳಿಸಿದ್ದರು. ನಾನು ಆರ್ಟಿಕಲ್ 370 ರದ್ದುಪಡಿಸಿ ಭೂಮಿಯಲ್ಲಿ ಹೂತು ಹಾಕಿದ್ದೇನೆ'' ಎಂದು ಪ್ರಧಾನಿ ಹೇಳಿದರು.

370 ಮರು ಜಾರಿ ಕಾಂಗ್ರೆಸ್​​​​​ ಆಶಯ - ಮೋದಿ ಆರೋಪ: ''ಕಾಂಗ್ರೆಸ್‌ನ ಎರಡನೇ ಅಜೆಂಡಾ ಏನೆಂದ್ರೆ, ಆರ್ಟಿಕಲ್ 370 ಅನ್ನು ಮರುಸ್ಥಾಪಿಸುವುದು ಅಥವಾ ಸಿಎಎ ಅನ್ನು ರದ್ದುಗೊಳಿಸುವುದು ಆಗಿದೆ. ಆದ್ರೆ, ಅದು ಎಂದುಗೂ ಸಾಧ್ಯವಾಗುವುದಿಲ್ಲ. ನಮ್ಮ ನೆರೆಯ ದೇಶಗಳಲ್ಲಿರುವ ಹಿಂದೂ ಧರ್ಮ, ಬೌದ್ಧ ಧರ್ಮ, ಮತ್ತು ಝೋರಾಸ್ಟ್ರಿಯನ್ ಧರ್ಮವನ್ನು ಅನುಸರಿಸಿದವರಿಗೆ ಪೌರತ್ವ ಕಾಯಿದೆ ಅಡಿಯಲ್ಲಿ ಆಶ್ರಯವಿದೆ. ಆದರೆ, ಕಾಂಗ್ರೆಸ್​ಗೆ 370ನೇ ವಿಧಿಯನ್ನು ಮರುಸ್ಥಾಪಿಸಲು ಅಥವಾ ಸಿಎಎ ಅನ್ನು ರದ್ದುಗೊಳಿಸಲು ಆಗುವುದಿಲ್ಲ'' ಎಂದು ಅವರು ಹೇಳಿದರು.

ಕಚ್ಚತೀವು ವಿಷಯವನ್ನು ಪ್ರಸ್ತಾಪಿಸಿದ ಪ್ರಧಾನಿ ಮೋದಿ ಅವರು, ''ಕಾಂಗ್ರೆಸ್‌ನವರು ವಿಭಜನೆಯ ಮನಸ್ಥಿತಿಯನ್ನು ಪರಂಪರಾಗತವಾಗಿ ಮುಂದುವರಿಸಿಕೊಂಡು ಬಂದಿದ್ದಾರೆ. ಕಾಂಗ್ರೆಸ್ ಸಂಸದರೊಬ್ಬರು ಪ್ರತ್ಯೇಕ ದಕ್ಷಿಣ ಭಾರತಕ್ಕೆ ಒತ್ತಾಯಿಸುತ್ತಿದ್ದಾರೆ. ನೀವು ದೇಶವನ್ನು ಇಷ್ಟು ವಿಂಗಡಿಸಿದ್ದೀರಿ, ಇನ್ನೂ ಎಷ್ಟು ವಿಭಜಿಸುತ್ತೀರಿ? ಇಂಡಿಯಾ ಮೈತ್ರಿಕೂಟದ ಪಾಲುದಾರ ಪಕ್ಷಗಳು ವಿಭಜನೆಯ ಮನಸ್ಥಿತಿಯನ್ನು ಪರಂಪರೆಯಾಗಿ ಸ್ವೀಕರಿಸಿವೆ. ಕಾಂಗ್ರೆಸ್‌ ಅಧಿಕಾರಕ್ಕಾಗಿ ಇಡೀ ದ್ವೀಪವನ್ನು ಹಸ್ತಾಂತರಿಸಿದೆ.

ಕಚ್ಚತೀವು ಪ್ರದೇಶವನ್ನು ಸ್ವಾತಂತ್ರ ಬಂದು 30 ವರ್ಷಗಳ ನಂತರ ಅಕ್ಕಪಕ್ಕದವರಿಗೆ ಅದನ್ನು ತಮ್ಮ ವೈಯಕ್ತಿಕ ಆಸ್ತಿಯಂತೆ ಬಿಟ್ಟುಕೊಟ್ಟರು. ಆ ದ್ವೀಪದಲ್ಲಿ ಜನವಸತಿ ಇಲ್ಲ, ಅದನ್ನು ತೆಗೆದುಕೊಂಡು ಹೋಗಲಿ ಎಂದು ಕಾಂಗ್ರೆಸ್ ನಾಯಕರು ಹೇಳಿಕೆ ನೀಡಿದ್ದರು. ಆ ಸಮಯದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಇರಲಿಲ್ಲ. ಅವರು ಗುಜರಾತ್‌ನ ಹೆಮ್ಮೆಯ ಬಗ್ಗೆ ಕಾಳಜಿ ವಹಿಸುತ್ತಿರಲಿಲ್ಲ. ಜೊತೆಗೆ ನಮ್ಮ ಜುನಾಗಢ್ ಪ್ರದೇಶವು ಪಾಕಿಸ್ತಾನಕ್ಕೆ ಹೋಗುತ್ತಿತ್ತು'' ಎಂದು ಅವರು ಪ್ರತಿಪಾದಿಸಿದರು. ''ಕಾಂಗ್ರೆಸ್​ ಪಕ್ಷದ ಪ್ರಣಾಳಿಕೆಯನ್ನು ಮುಸ್ಲಿಂ ಲೀಗ್‌ನ ಭಾಷೆಯಲ್ಲಿ ಬರೆಯಲಾಗಿದೆ'' ಎಂದು ಪ್ರಧಾನಿ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಕುತೂಹಲಕ್ಕೆ ಬಿತ್ತು ತೆರೆ: ರಾಯಬರೇಲಿ ಕ್ಷೇತ್ರದಿಂದ ಲೋಕಸಭಾ ಕಣಕ್ಕಿಳಿದ ರಾಹುಲ್​ ಗಾಂಧಿ - Rahul Gandhi from Raebareli

ETV Bharat Logo

Copyright © 2024 Ushodaya Enterprises Pvt. Ltd., All Rights Reserved.